Advertisement

ನಾಡಿನ ವಿವಿಧೆಡೆ ಸಾವಿರಾರು ಭಕ್ತರಿಗೆ ತಪ್ತಮುದ್ರಾಧಾರಣೆ

12:50 AM Jul 11, 2022 | Team Udayavani |

ಉಡುಪಿ/ಮಂಗಳೂರು: ಉಡುಪಿ ಶ್ರೀಕೃಷ್ಣಮಠವೂ ಸೇರಿದಂತೆ ನಾಡಿನ ವಿವಿಧೆಡೆಗಳಲ್ಲಿ ವಿವಿಧ ಮಠಾಧೀಶರು ರವಿವಾರ ಪ್ರಥಮನ ಏಕಾದಶಿಯಂದು ಭಕ್ತರಿಗೆ ತಪ್ತಮುದ್ರಾಧಾರಣೆ ನಡೆಸಿದರು.

Advertisement

ಶ್ರೀಕೃಷ್ಣ ಮಠದಲ್ಲಿ ಬೆಳಗ್ಗೆ  ಮಹಾಪೂಜೆ ಪೂರೈಸಿದ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು, ಅದಮಾರು ಕಿರಿಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಶೀರೂರು ಮಠದ ಶ್ರೀವೇದವರ್ಧನತೀರ್ಥ ಶ್ರೀಪಾದರು ಅಪರಾಹ್ನದವರೆಗೆ ಸಾವಿರಾರು ಭಕ್ತರಿಗೆ ಮುದ್ರಾಧಾರಣೆ ನಡೆಸಿದರು. ಮುದ್ರಾಧಾರಣೆಗಾಗಿ ಬಂದವರ ಸರತಿ ಸಾಲು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಶ್ರೀಕೃಷ್ಣಮಠದ ಮುಂಭಾಗದಲ್ಲಿ ಇತ್ತು.

ಮುದ್ರಾಧಾರಣೆ ಮಾಡುವ ಮುನ್ನ ವೈದಿಕರು ಸುದರ್ಶನ ಹೋಮ ನಡೆಸಿದರು. ಅದರಲ್ಲಿ ಬಿಸಿ ಮಾಡಿದ ಶಂಖ ಚಕ್ರಗಳ ಚಿಹ್ನೆಗಳನ್ನು ಮಠಾಧೀಶರು ಭಕ್ತರ ತೋಳಿನಲ್ಲಿ ಮುದ್ರಿಸಿದರು.

ಅದಮಾರು ಕಿರಿಯ, ಶೀರೂರು, ಕಾಣಿಯೂರು ಶ್ರೀಗಳು ಇದಕ್ಕೂ ಮುನ್ನ ಸ್ವಮಠಗಳಲ್ಲಿ ಮುದ್ರಾಧಾರಣೆ ಮಾಡಿದರು. ಕಾಣಿಯೂರು ಶ್ರೀಗಳು ಅಪರಾಹ್ನ ಕಳತ್ತೂರು ದೇವಸ್ಥಾನ, ಶೀರೂರು ಶ್ರೀಗಳು ಪೆರ್ಡೂರು ದೇವಸ್ಥಾನದಲ್ಲಿ, ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಶನಿವಾರ ಮೂಲಮಠದಲ್ಲಿ ಕಿರಿಯ ಶ್ರೀಗಳಿಗೆ, ರವಿವಾರ ಬೆಂಗಳೂರಿನಲ್ಲಿ ಭಕ್ತರಿಗೆ ತಪ್ತಮುದ್ರಾಧಾರಣೆ ನಡೆಸಿದರು.

ಹಲವು ದೇವಸ್ಥಾನಗಳಲ್ಲಿ ನಿರಂತರ ಭಜನೆ, ಪೂಜಾದಿಗಳು ನಡೆದವು. ಸುಬ್ರಹ್ಮಣ್ಯ ಮಠಾಧೀಶರು ಉಜಿರೆ ಜನಾರ್ದನ ದೇವಸ್ಥಾನ, ಕೆಮ್ಮಾಯಿ ವಿಷ್ಣುಮೂರ್ತಿ ದೇವಸ್ಥಾನ, ಕೆಮ್ಮಿಂಜೆ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ ಮಠದಲ್ಲಿ, ಬಾಳೆಗಾರು ಶ್ರೀಗಳು ಕೊಡವೂರು ಸಮೀಪದ ಕಂಗೂರು ಮಠ, ಪಡುಬಿದ್ರಿ, ಪಾವಂಜೆ ದೇವಸ್ಥಾನ, ಮಂಗಳೂರು ನೆಲ್ಲಿಕಾಯಿ ರಾಘವೇಂದ್ರ ಮಠ, ಬನ್ನಡ್ಕ ರಾಘವೇಂದ್ರ ಮಠ, ಕಾರ್ಕಳ ಅನಂತಶಯನ ದೇವಸ್ಥಾನ, ಗುಡ್ಡೆಯಂಗಡಿ, ಪಲಿಮಾರು ಮೂಲಮಠದಲ್ಲಿ, ಚಿತ್ರಾಪುರ ಮಠಾಧೀಶರು ಸುರತ್ಕಲ್‌ ಸಮೀಪದ ಚಿತ್ರಾಪುರ ಮಠದಲ್ಲಿ, ಗೃಹಸ್ಥರು ಮುದ್ರಾಧಾರಣೆ ನಡೆಸುವ ಏಕೈಕ ಸ್ಥಳವಾದ ಉಪ್ಪಿನಂಗಡಿ ಸಮೀಪದ ಎರ್ಕಿ ಮಠದಲ್ಲಿ ಅರ್ಚಕ ನರಹರಿ ಉಪಾಧ್ಯಾಯರು ಮುದ್ರಾಧಾರಣೆ ನಡೆಸಿದರು.

Advertisement

ಕಾಶೀ ಮಠಾಧೀಶರು ಮತ್ತು ಗೋಕರ್ಣ ಪರ್ತಗಾಳಿ ಮಠಾಧೀಶರು ಮೊಕ್ಕಾಂ ಸ್ಥಳದಲ್ಲಿ ತಪ್ತಮುದ್ರಾಧಾರಣೆ ನಡೆಸಿದರು. ಸೋದೆ ಶ್ರೀಗಳು ಬೆಂಗಳೂರಿನ ಶ್ರೀಕೃಷ್ಣವಾದಿರಾಜ ಮಂದಿರದಲ್ಲಿ, ಪೇಜಾವರ ಶ್ರೀಗಳು ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠ, ಚೆನ್ನೈಯ ಟಿ. ನಗರ ರಾಘವೇಂದ್ರ ಮಠ, ಪಲಿಮಾರು ಉಭಯ ಮಠಾಧೀಶರು ಬೆಂಗಳೂರು ಮಲ್ಲೇಶ್ವರದ ಪಲಿಮಾರು ಮಠ, ಮೈಸೂರು, ಕೆಆರ್‌ ನಗರದಲ್ಲಿ, ಅದಮಾರು ಹಿರಿಯ ಶ್ರೀಗಳು ಬಳ್ಳಾರಿಯಲ್ಲಿ, ಭಂಡಾರಕೇರಿ ಶ್ರೀಗಳು ಹುಬ್ಬಳ್ಳಿ ದೇಶಪಾಂಡೆ ನಗರದ ರಾಘವೇಂದ್ರ ಮಠದಲ್ಲಿ ಮುದ್ರಾಧಾರಣೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next