Advertisement

ತಮಿಳುನಾಡಿನಲ್ಲಿ ಇನ್ನು ಚಿನ್ನಮ್ಮನ ಆಟ ಶುರು

02:51 PM Mar 20, 2021 | Team Udayavani |

ರಾಜಕೀಯ ಎಂದರೆ ಹಾಗೆಯೇ, ಇವತ್ತು ಸ್ನೇಹಿತರಾಗಿ ದ್ದವರು ಮುಂದಿನ ದಿನಗಳಲ್ಲಿ ಶತ್ರುಗಳಾಗಿ ಮಾರ್ಪಾಡಾ ಗುತ್ತಾರೆ. ಶತ್ರುಗಳಾಗಿದ್ದವರು ಮಿತ್ರರಾಗಿ ಬದಲಾವಣೆ ಹೊಂದುತ್ತಾರೆ. ಸದ್ಯ ಈ ಮಾತು ತಮಿಳುನಾಡಿನ ರಾಜಕೀಯಕ್ಕೆ ಹೊಂದಾಣಿಕೆ ಯಾಗುತ್ತದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ನಾಲ್ಕು ವರ್ಷಗಳ ಅವಧಿಯ ಜೈಲುಶಿಕ್ಷೆ ಪೂರ್ತಿಗೊಳಿಸಿ, 10 ಕೋಟಿ ರೂ. ದಂಡವನ್ನೂ ಪಾವತಿ ಮಾಡಿ ಶಶಿಕಲಾ ನಟರಾಜನ್‌ ಅದ್ಧೂರಿ ಯಾಗಿಯೇ ತಮಿಳುನಾಡಿಗೆ ಎಂಟ್ರಿ ಕೊಟ್ಟಿದ್ದಾರೆ. ಬರೋಬ್ಬರಿ 23 ಗಂಟೆಗಳ ಕಾಲ ರೋಡ್‌ ಶೋ ನಡೆಸಿದ್ದಾರೆ.

Advertisement

ಹಾಗಿದ್ದರೆ ಎಪ್ರಿಲ್‌- ಮೇಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಚಿನ್ನಮ್ಮ ವಹಿಸಲಿರುವ ಪಾತ್ರ ವಾದರೂ ಏನು? ರಾಜಕೀಯ ಮುಖ್ಯವಾಹಿನಿಗೆ ಧುಮುಕುತ್ತಾರೋ ತೆರೆಯಮರೆಯ ಹಿಂದಿನ ಚಟುವಟಿಕೆಗಳ ಮೂಲಕ ತನಗೆ ಬೇಕಾದವರನ್ನು ಆಯ್ಕೆ ಮಾಡಿ ರಾಜ್ಯಭಾರ ನಡೆಸಲಿದ್ದಾರೋ ಎಂಬ ವಿಚಾರ ಸದ್ಯಕ್ಕೆ ನಿಗೂಢವಾಗಿದೆ. ಕರ್ನಾಟಕದಿಂದ ಹೊಸೂರು ಮೂಲಕ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಪ್ರವೇಶದ ಸಂದರ್ಭದಲ್ಲಿ ಶಶಿಕಲಾ ನಟರಾಜನ್‌ ಅವರು ಮಾತನಾಡಿದ ಅಂಶದಲ್ಲಿ ಒಂದು ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ನಾನು ತಮಿಳು ಭಾಷೆ, ಸಂಸ್ಕೃತಿಯನ್ನು ಪ್ರೀತಿಸುತ್ತೇನೆ. ತಮಿಳು ಭಾಷಿಕರನ್ನು ಪ್ರೀತಿಸುತ್ತೇನೆ. ಆದರೆ ನಾನು ಮೌನವಾಗಿರಬೇಕು ಎಂಬ ಹೇರು ವಿಕೆಯ ಒತ್ತಡ ಸಹಿಸಲಾರೆ. ನಾನು ಸಕ್ರೀಯ ರಾಜಕೀಯಕ್ಕೆ ಬರುವೆ-  ಹೀಗೆಂದು ಅವರು ಪ್ರಕಟಿಸಿದ್ದಾರೆ.

ಆದರೆ ಅವರು ಯಾವ ದಿನದಿಂದ ಸಕ್ರಿಯ ರಾಜಕಾರಣಕ್ಕೆ ಬರುತ್ತಾರೆ ಎಂಬ ಅಂಶದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಹಾಗಿದ್ದರೆ ಅವರ ಮುಂದಿನ ದಾಳ ಪ್ರಯೋಗ ಏನು? ಒಂದಂತೂ ಸತ್ಯ. ಶಶಿಕಲಾ ನಟರಾಜನ್‌ ನೇರವಾಗಿ ರಾಜಕೀಯಕ್ಕೆ ಧುಮು ಕಿಯೋ, ಎಐಎಡಿಎಂಕೆ ಜತೆಗೆ ಸೇರಿಕೊಂಡೋ, ಅಥವಾ ಅವರ ಸೋದರ  ಸಂಬಂಧಿ, ಶಾಸಕ ಟಿ.ಟಿ.ವಿ.ದಿನಕರನ್‌ ನೇತೃತ್ವದ ಅಮ್ಮಾ ಮಕ್ಕಳ್‌ ಮುನ್ನೇತ್ರ ಕಳಗಂ ಪಕ್ಷದ ಮೂಲಕ ಬಿರುಸಿನ ಪ್ರಚಾರ ಮಾಡಿ ದರೂ ಒಂದಷ್ಟು  ಸ್ಥಾನಗಳನ್ನು ಗಳಿಸಲು ಸಾಧ್ಯವಿದೆ. ಆದರೆ 234 ಕ್ಷೇತ್ರಗಳಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆಯಲು ಈ ಬಾರಿ ಕಷ್ಟವೇ. ಆದರೆ ಅತಂತ್ರ ವಿಧಾನಸಭೆ ಉಂಟಾದರೆ ಆಟ ಆಡುವ ಅವಕಾಶ ಸಿಕ್ಕರೂ ಸಿಗಬಹುದು.

ಚುನಾವಣ ವೇಳಾಪಟ್ಟಿ ಪ್ರಕಟವಾಗುವುದಕ್ಕಿಂತ ಮೊದಲೇ ಎರಡು ಸಮೀಕ್ಷೆಗಳು ನಡೆದಿದ್ದವು. ಅದನ್ನೇ ಮುಂದಿಟ್ಟುಕೊಂಡು ನೋಡುವುದಾದರೆ ಕಾಂಗ್ರೆಸ್‌ ಮತ್ತು ಡಿಎಂಕೆ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ಖಚಿತ. ಆ ಸಮೀಕ್ಷೆಗಳಂತೆ ನಡೆದರೆ ಎಂ.ಕೆ. ಸ್ಟಾಲಿನ್‌ ದ್ರಾವಿಡ ರಾಜ್ಯದ ಮುಖ್ಯಮಂತ್ರಿ.

ಹಾಗಿದ್ದರೆ ಚಿನ್ನಮ್ಮನ ಮುಂದಿನ ಹೆಜ್ಜೆಗಳು ಯಾವ ಕಡೆಗೆ, ಯಾವ ರೀತಿಯದ್ದು ಎಂಬ ಸುಳಿವು ಸದ್ಯಕ್ಕೆ ಗೊತ್ತಾಗಿಲ್ಲ. ಎಡಪ್ಪಾಡಿ ಕೆ. ಪಳನಿಸ್ವಾಮಿ, ಒ. ಪನ್ನೀರ್‌ಸೆಲ್ವಂ ನೇತೃತ್ವದ ಎಐಎಡಿಎಂಕೆ ಶಶಿಕಲಾ ವಿರುದ್ಧ ಹಲವು ತಂತ್ರಗಳನ್ನು ಪ್ರಯೋಗಿಸಿದ್ದರೂ, ಅವುಗಳು ಠುಸ್‌ ಆಗಿವೆ. ತಮಿಳುನಾಡಿನಾ ದ್ಯಂತ ಹಿಂಸಾ ಕೃತ್ಯಗಳನ್ನು ನಡೆಸಲು ಶಶಿಕಲಾ ಬೆಂಬಲಿ ಗರು ಮುಂದಾಗಿದ್ದಾರೆ ಎಂಬ ದೂರನ್ನು ಪಕ್ಷದ ನಾಯಕರಿಂದ ಕೊಡಿಸಿ, ಅದಕ್ಕೆ ತಮಿಳುನಾಡು ಪೊಲೀಸರ ವತಿಯಿಂದ ಕಾನೂನು ಕೈಗೆತ್ತಿಕೊಂಡರೆ ಕಠಿನ ಕ್ರಮ ಖಚಿತ ಎಂದು ಪ್ರಕಟಿಸಿದ್ದಾರೆ. ಅದಕ್ಕೆ ಪೂರಕವಾಗಿ 2017ರ ಫೆ.14 ರಂದು ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ಪ್ರಕಾರ ತಂಜಾವೂರು ಜಿಲ್ಲಾಡಳಿತ ಶಶಿಕಲಾ ನಿಕಟವರ್ತಿ ಜೆ. ಇಳವರಸಿ, ವಿ.ಎನ್‌. ಸುಧಾಕರನ್‌ಗೆ ಸೇರಿದ 1,291.98 ಎಕ್ರೆ ಪ್ರದೇಶವನ್ನು ಜಪ್ತಿ ಮಾಡಿಕೊಂಡಿದೆ. ಮೇಲ್ನೋಟಕ್ಕೆ ಇದು ಹಳೆಯ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪನ್ನು ಜಾರಿ ಮಾಡಿದ್ದು ಹೌದು. ಆದರೆ ಸಂದೇಶವೇನು? ಎಐ ಎಡಿಎಂಕೆಯಿಂದ ಅವರನ್ನು ಉಚ್ಚಾಟಿಸ ಲಾಗಿದ್ದರೂ, ದಿ| ಜಯರಾಂ ಜಯಲಲಿತಾ ಅವರ ಆಪ್ತ ಸ್ನೇಹಿತೆ ಬೆಂಗಳೂರಿನಿಂದ ತಮಿಳುನಾಡಿಗೆ ತೆರಳುವ ಸಂದರ್ಭದಲ್ಲಿ

Advertisement

ಕಾರ್‌ಗೆ ಪಕ್ಷದ ಧ್ವಜವನ್ನು ಹಾಕಿದ್ದರು. ಪಳನಿಸ್ವಾಮಿ, ಪನ್ನೀರ್‌ ಸೆಲ್ವಂ ಕೈ ಕೈ ಹಿಸುಕಿಕೊಂಡರಷ್ಟೇ ಅಲ್ಲದೆ ಇನ್ನೇನೂ ಮಾಡಲು ಸಾಧ್ಯವಾಗದೆ ಇದ್ದುಬಿಟ್ಟರು.

2021ರ ಚುನಾವಣೆಯಲ್ಲಿ ಜಯಲಲಿತಾ ಮತ್ತು ಕರುಣಾನಿಧಿ ಇಲ್ಲ. ಹೀಗಾಗಿ ಎಐಎಡಿಎಂಕೆ, ಡಿಎಂಕೆ –  ಎರಡೂ ಪಕ್ಷಗಳಿಗೆ ಹೊಸ ನಾಯಕತ್ವ. ಡಿಎಂಕೆಗಾದರೆ ಎಂ.ಕೆ. ಸ್ಟಾಲಿನ್‌ ನಾಯಕತ್ವ ಇದೆ. ಅಪ್ಪನ ಗರಡಿಯಲ್ಲಿ ರಾಜಕೀಯದ ಒಳಸುಳಿಗಳನ್ನು ಅರಿತವರು ಸ್ಟಾಲಿನ್‌. ಜತೆಗೆ ಕೇಂದ್ರ ನಾಯಕತ್ವದ ಜತೆಗೆ ಸೌಹಾರ್ದ ಸಂಬಂಧ ಹೊಂದಿರುವವರೂ ಹೌದು. ಇನ್ನು ಆಡಳಿತಾರೂಡ ಎಐಎಡಿಎಂಕೆಯಲ್ಲಿ ಛಾಪು ಮೂಡಿಸುವ ನಾಯಕರೇ ಇಲ್ಲ. ಹಾಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಪಕ್ಷ ನಿಷ್ಠರು ಹೌದಾದರೂ, ಜಯಲಲಿತಾ ಅಥವಾ ಎಂ.ಕೆ.ಸ್ಟಾಲಿನ್‌ ಬಿರುಸು ಇದೆ ಎನ್ನಲು ಸ್ವಲ್ಪ ಕಷ್ಟವೇ ಆದೀತು.

ಶಶಿಕಲಾ ನಟರಾಜನ್‌ ನಡೆಸಿದ್ದ ರೋಡ್‌ ಶೋಗೆ ಸಿಕ್ಕಿದ ಜನಬೆಂಬಲ ನೋಡಿ, ಓದಿ ತಿಳಿದ  ಪಳನಿಸ್ವಾಮಿ, ಪನ್ನೀರ್‌ ಸೆಲ್ವಂ ನಾಯಕತ್ವ ನಡುಗಿ ಹೋಗಿದ್ದಂತೂ ಹೌದು. ಅದಕ್ಕಾಗಿಯೇ ಶಶಿಕಲಾ ವಿರುದ್ಧ ಕಟುವಾಗಿ ಮಾತನಾಡುತ್ತಿದ್ದ ಮುಖಂಡರೆಲ್ಲ ದನಿ ತಗ್ಗಿಸಿದ್ದಾರೆ. ಆದರೆ ಶಶಿಕಲಾರ ಸೋದರ ಸಂಬಂಧಿ, ಶಾಸಕ ಟಿ.ಟಿ.ವಿ. ದಿನಕರನ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದಿನಕರನ್‌ ಇಲ್ಲದೆ, ಚಿನ್ನಮ್ಮ ಎಐಎಡಿಎಂಕೆ ಬರುವ ಸಾಧ್ಯತೆ ಖಂಡಿತವಾಗಿಯೂ ಇಲ್ಲ. ಮುಖ್ಯಮಂತ್ರಿ ಪಳನಿಸ್ವಾಮಿ ಜಯಲಲಿತಾ ಇರುವಾಗಲೇ ದಿನಕರನ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದರು. ಅವರು ಮತ್ತೆ ಪಕ್ಷಕ್ಕೆ ಬಂದರೂ ಸ್ವೀಕರಿಸಲಾರೆವು ಎಂದಿದ್ದಾರೆ. ಕಾನೂನು ಸಚಿವ ವಿ. ಷಣ್ಮುಗಂ ಚಿನ್ನಮ್ಮ ದಿನಕರನ್‌ ಅವರಿಂದ ದೂರ ಇರುವಂತೆ ಸಲಹೆ ನೀಡಿದ್ದಾರೆ.

ಅಂದ ಹಾಗೆ ಶಶಿಕಲಾ ನಟರಾಜನ್‌ ದಕ್ಷಿಣ ತಮಿಳುನಾಡಿನಲ್ಲಿ ಪ್ರಭಾವಶಾಲಿ ಯಾಗಿರುವ ತೇವರ್‌ ಸಮುದಾಯಕ್ಕೆ ಸೇರಿದವರು. ಹೀಗಾಗಿ ಅವರ ವಿರುದ್ಧ ಏನು ಪ್ರಕರಣಗಳು ಇದ್ದರೂ ಅದು ಪರಿಣಾಮ ಕಾರಿಯಾಗದು. ಸದ್ಯ ಕೋರ್ಟ್‌ ತೀರ್ಪಿನ ಅನ್ವಯ ಅವರು ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸಬಾರದು. ಹೀಗಾಗಿ ಅವರು 2026ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ದೃಷ್ಟಿಯನ್ನಿರಿಸಿಕೊಂಡು ದೃಢ, ಆದರೆ ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸಿದ್ದಾರೆ ಎನ್ನುವುದು ಮೇಲ್ನೋಟಕ್ಕೇ ಸ್ಪಷ್ಟ. ಹೀಗಾಗಿ ಅವರು ತಾತ್ಕಾಲಿಕ ಲಾಭ ತಂದುಕೊಡುವ ಮಾರ್ಗ ಗಳಿಗೆ ಸದ್ಯಕ್ಕೆ ಮೊರೆ ಹೋಗಲಾರರು.

ಎಪ್ರಿಲ್‌-ಮೇ ಚುನಾವಣೆಯಲ್ಲಿ ಶಶಿಕಲಾ ನಟರಾಜನ್‌ ಅವರಿಗೆ ನಿರೀಕ್ಷಿತ ಗೆಲುವು, ಅನುಕೂಲ ಆಗಬಹುದು ಅಥವಾ ಆಗದೆಯೂ ಇರಬಹುದು. ಆದರೆ ಅವರು ಮತ ವಿಭಜನೆ ಯಲ್ಲಿ ಪ್ರಭಾವ ಬೀರುವುದು ಖಚಿತ. ತಮಿಳುನಾಡಿನಲ್ಲಿ ಪುರಚ್ಚಿ ತಲೈವಿ ನಾಯಕಿ ಎಂದರೆ ದಿ| ಜಯಲಲಿತಾ ಅವರೇ. ಹೀಗಾಗಿ ಚಿನ್ನಮ್ಮ ಬೆಂಗಳೂರಿನಿಂದ ಚೆನ್ನೈಗೆ ಆಗಮಿಸಿದ್ದು ಆಪ್ತ ಸ್ನೇಹಿ ತೆಯ ಕಾರ್‌ನಲ್ಲಿ. ಅವರು ಮತ್ತೂಮ್ಮೆ ಎಐಎಡಿಎಂಕೆಯನ್ನು ಕೈವಶ ಮಾಡುವುದು ಖಚಿತವೇ. ಅನಂತರ ಏನಾಗಲಿದೆ ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ ತಾನೆ?

ಬಿಜೆಪಿ ಮತ್ತು ಸದ್ಯ ಅಧಿಕಾರದಲ್ಲಿರುವ ಎಐಎಡಿಎಂಕೆ ನಡುವಿನ ಮೈತ್ರಿಕೂಟದ ಬಗ್ಗೆ ಹೊಂಚ ದೃಷ್ಟಿ ಹಾಯಿಸೋಣ. 234 ಸ್ಥಾನಗಳ ವಿಧಾನಸಭೆಯಲ್ಲಿ ಬಿಜೆಪಿ ಒಂದೇ ಒಂದು ಸ್ಥಾನ ಹೊಂದಿಲ್ಲ. ಎಐಎಡಿಎಂಕೆ 123, ಡಿಎಂಕೆ 97, ಕಾಂಗ್ರೆಸ್‌ 7, ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ 1, ಸ್ವತಂತ್ರ 1, ನಾಮನಿರ್ದೇಶಿತ ಸದಸ್ಯ 1, ಸ್ಪೀಕರ್‌ 1, ತೆರವಾಗಿರುವ ಸ್ಥಾನಗಳು 4. ಎಪ್ರಿಲ್‌- ಮೇ ವಿಧಾನಸಭೆ ಚುನಾವಣೆಯಲ್ಲಿ ಒಂದಷ್ಟು ಸ್ಥಾನಗಳನ್ನು ಗೆಲ್ಲಬೇಕು ಎಂದು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಕರ್ನಾಟಕದ ಮಾಜಿ ಸಚಿವ ಸಿ.ಟಿ. ರವಿ ಆ ರಾಜ್ಯದಲ್ಲಿ ಚುನಾವಣ ಉಸ್ತುವಾರಿ ಹೊತ್ತಿದ್ದಾರೆ ಮತ್ತು ಹಲವಾರು ಕಾರ್ಯಕ್ರಮ ಗಳನ್ನು, ರ್ಯಾಲಿಗಳನ್ನು ಆಯೋಜಿಸಿದ್ದಾರೆ. ಅದು ಮತಗಳಾಗಿ ಪ್ರಾಪ್ತವಾದೀತೋ ಎಂದು ಈಗ ಹೇಳಲು ಕಷ್ಟ.

ಕೆಲವೊಂದು ವರದಿಗಳ ಪ್ರಕಾರ ಬಿಜೆಪಿಯ ವರಿಷ್ಠರು ಶಶಿಕಲಾ ಮತ್ತು ಟಿ.ಟಿ.ವಿ. ದಿನಕರನ್‌ ಮತ್ತೆ ಎಐಎಡಿಎಂಕೆಗೆ ಸೇರಬೇಕು. ಈ ಮೂಲಕ, ಕಾಂಗ್ರೆಸ್‌- ಡಿಎಂಕೆ ಮೈತ್ರಿಕೂಟಕ್ಕೆ ಪ್ರಬಲ ಪ್ರತಿಸ್ಪರ್ಧಿ ರಾಜಕೀಯ ಒಕ್ಕೂಟ ರಚಿಸಲು ಅವರನ್ನು ಮತ್ತೆ ಪಕ್ಷ ಸೇರ್ಪಡೆ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಿದ್ದಾರೆ. ಇದೇ ವಿಚಾರಕ್ಕೆ ದಿನಕರನ್‌ ಒಂದೆರಡು ಬಾರಿ ಹೊಸದಿಲ್ಲಿಗೆ ಹೋಗಿದ್ದರಂತೆ. ಈಗಾಗಲೇ ಉಲ್ಲೇಖೀಸಿರುವಂತೆ ಶಶಿಕಲಾ ದೃಢವಾದ, ಆದರೆ  ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಕೆಲವೊಂದು ಪ್ರಕರಣಗಳು ಇನ್ನೂ ತನಿಖೆ, ವಿಚಾರಣೆ ಹಂತದಲ್ಲಿ ಇರುವಾಗ ಬಿಜೆಪಿ ಜತೆಗೆ ಮೈತ್ರಿಯೋ, ವಿರೋಧವನ್ನೋ ಚಿನ್ನಮ್ಮ ಮಾಡಲು ತಯಾರಿಲ್ಲ. ಮೈತ್ರಿ ಮಾಡಿಕೊಂಡರೆ, ಮುಂದಿನ ದಿನಗಳಲ್ಲಿ ಮುರಿಯಲು ಕಷ್ಟವಾಗಬಹುದು ಮತ್ತು ಸದ್ಯ ಬಿಜೆಪಿ ಎಐಎಡಿಎಂಕೆ ಜತೆಗೆ ಇದೆ. ಹೀಗಾಗಿ ಎಚ್ಚರಿಕೆಯ ಸಮಾನ ಅಂತರ ಇರಿಸಲು ಮುಂದಾಗಿದ್ದಾರೆ ಎನ್ನುವುದು ಚಿನ್ನಮ್ಮ ಆಪ್ತರ ಪ್ರತಿಪಾದನೆ. ಎಐಎಡಿಎಂಕೆಯಲ್ಲಿ ಈಗಲೂ ಶಶಿಕಲಾ ಬೆಂಬಲಿಗರು ಇದ್ದಾರೆ. ಅವರು ಪಳನಿಸ್ವಾಮಿ, ಪನ್ನೀರ್‌ ಸೆಲ್ವಂ ನಾಯಕತ್ವ ತೊರೆದು ಬರಲು ಚಿನ್ನಮ್ಮ ಕಾಯುತ್ತಿದ್ದಾರೆ. ಚುನಾವಣ ಆಯೋಗ ಫೆ.15ರ ಬಳಿಕ ದಿನಾಂಕ ಪ್ರಕಟ ಮಾಡುವ ಸಾಧ್ಯತೆಗಳು ಇವೆ.

ಹೀಗಾಗಿ ಸರ್ಕಸ್‌ಗೆ ವೇದಿಕೆ ಸಿದ್ಧವಾಗಿದೆ. ಆದರೆ ರಿಂಗ್‌ ಮಾಸ್ಟರ್‌ ವೇದಿಕೆಗೆ ಬಾರದೆ, ಕೌಶಲ ಪ್ರದರ್ಶಿಸುತ್ತಾರೆಯೋ, ನೋಡಬೇಕಾಗಿದೆ.

 

ಸದಾಶಿವ ಕೆ.

Advertisement

Udayavani is now on Telegram. Click here to join our channel and stay updated with the latest news.

Next