ಹೊಸದಿಲ್ಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಶಿಕ್ಷೆ ಪ್ರಮಾಣ ಇಳಿಕೆ ಮಾಡುವ ಅಧಿಕಾರವನ್ನು ನೀಡಬೇಕು ಎಂದು ತಮಿಳ್ನಾಡು ಸರಕಾರದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಇದರ ಜತೆಗೆ ನೀಡಲಾಗಿರುವ ಶಿಕ್ಷೆಯನ್ನು ಮತ್ತೂಮ್ಮೆ ಪರಿಶೀಲಿಸಬೇಕೆಂದು ಸಲ್ಲಿಸಲಾಗಿರುವ ಅರ್ಜಿಯನ್ನೂ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ನ್ಯಾಯಪೀಠ ತಿರಸ್ಕರಿಸಿದೆ. ಮಂಗಳವಾರ ಈ ಬಗ್ಗೆ ತೀರ್ಪು ನೀಡಿದ್ದರೂ ಬುಧವಾರ ಸುಪ್ರೀಂಕೋರ್ಟು ವೆಬ್ಸೈಟ್ನಲ್ಲಿ ಅದನ್ನು ಅಪ್ಲೋಡ್ ಮಾಡಲಾಗಿತ್ತು. ಅರ್ಜಿ ಸಲ್ಲಿಕೆಯಲ್ಲಿ ವಿಳಂಬವಾಗಿರುವ ಹಿನ್ನೆಲೆಯಲ್ಲಿ ನ್ಯಾಯಪೀಠ ಈ ತೀರ್ಮಾನ ತೆಗೆದುಕೊಂಡಿದೆ ಎಂದು ಸುಪ್ರೀಂಕೋರ್ಟು ಹೇಳಿದೆ. 2015ರ ಡಿ.2ರಂದು ಆರೋಪಿಗಳ ಶಿಕ್ಷೆ ಪ್ರಮಾಣ ಇಳಿಕೆ ಮಾಡುವ ಬಗ್ಗೆ ನ್ಯಾಯಾಲಯ ತೀರ್ಪು ನೀಡಿತ್ತು. ಬರೋಬ್ಬರಿ 1 ವರ್ಷದ ಬಳಿಕ ಮೇಲ್ಮನವಿ ಸಲ್ಲಿಸಲಾಗಿದೆ. ಈ ವಿಳಂಬದ ಬಗ್ಗೆ ಸೂಕ್ತ ಕಾರಣಗಳನ್ನು ಅರ್ಜಿದಾರರು ನೀಡಿಲ್ಲ ಎಂದು ನ್ಯಾಯಪೀಠ ಹೇಳಿದೆ.