Advertisement

ಮಾತು ಹೃದಯ ಮೆಲ್ಲುವ ಸವಿಬೆಲ್ಲವಾಗಲಿ!

03:13 PM Jul 18, 2021 | Team Udayavani |

ವಿಶ್ವದಲ್ಲಿ ಯಾವ ಜೀವಿಯೂ ಮನುಷ್ಯನಂತೆ ಮಾತನಾಡುವ ಶಕ್ತಿ ಸಾಮರ್ಥ್ಯಗಳನ್ನು ಹೊಂದಿಲ್ಲ ಎಂದಾದ ಮೇಲೆ ಮಾತು ಮನುಷ್ಯನಿಗಿರುವ ಒಂದು ಅಪೂರ್ವ ವರ ಎನ್ನಬಹುದು. ಕೆಲವರು ಹೆಚ್ಚು ಮಾತನಾಡುತ್ತಾರೆ. ಇನ್ನೂ ಕೆಲವರು ಮಿತಭಾಷಿಕರು. ಇಷ್ಟೆಲ್ಲವೂ ಅವರವರ ಮಾನಸಿಕ ಸ್ಥಿತಿಗತಿಗಳ ಆಧಾರದ ಮೇಲೆ ಪ್ರತಿಯೋರ್ವ ವ್ಯಕ್ತಿಯ ಬಾಹ್ಯ ವರ್ತನೆಗಳನ್ನು ಸುಲಭವಾಗಿ ಗುರುತಿಸಬಹುದು.

Advertisement

ಹಾಗಾದರೆ ಮಾತು ಎಂದರೇನು ?:

ವ್ಯಕ್ತಿ-ವ್ಯಕ್ತಿಗಳಲ್ಲಿನ ಭಾವಗಳ ಅನುವಾದವನ್ನು ವ್ಯಕ್ತಪಡಿಸುವ ಸಂವಹನ ಪ್ರಕ್ರಿಯೆಯೇ ಮಾತು. ಮಾತಿನ ಪ್ರಕ್ರಿಯೆಗೆ ಭಾಷೆಗಳ ಅನುಷ್ಠಾನವೇ ಭಾಷಾಕಲಿಕೆ.

ಇಂತಹ ಮಾತು ಸ್ನೇಹದ ಎಳೆಯನ್ನು ನವಿರಾಗಿ ಹೊಸೆಯಬಲ್ಲುದು. ಮಾತು ದ್ವೇಷದ ಕಿಡಿಗಳನ್ನು ಉಗುಳಬಲ್ಲುದು. ಮಾತು ಬದುಕಿನಲ್ಲಿ ಸೋಲು ಕಂಡು ನಿರಾಶರಾದವರಿಗೆ ಸ್ಫೂರ್ತಿಯಾಗಬಲ್ಲುದು. ಮಾತು ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಭರವಸೆ ತುಂಬಬಲ್ಲುದು. ಮಾತು ಕಿಟಕಿಯಾಚೆಗೆ ಕಣ್ಣಿಟ್ಟು ಕುಳಿತ ವೃದ್ಧರ ಕಣ್ಣೀರನೊರೆಸಿ ಬೆಳಕು ಮೂಡಿಸಬಲ್ಲುದು. ಮಾತು ಹೃದಯದಲ್ಲಿ ನೋವುಗಳ ಹೆಚ್ಚುವರಿ ಮೂಟೆ ಹೊತ್ತವರಿಗೆ ಹಂಚಿ ಹಗುರಾಗಿಸಬಲ್ಲುದು. ಮಾತು ಸೃಷ್ಟಿಯಾದ ವೈ ಮನಸ್ಸುಗಳಿಗೆ ನಾಂದಿ ಹಾಡಬಲ್ಲುದು. ಮಾತು ಸಂಗಾತಿಯ ಮನಸ್ಸಿಗೆ ಮುದ ನೀಡಬಲ್ಲುದು. ಮಾತು ಅಪರೂಪಕ್ಕೆ ಹಳೆಯ ಸ್ನೇಹಿತರು ಸಿಕ್ಕರೆ ಜಗತ್ತನ್ನೇ ಮರೆಸಬಲ್ಲುದು. ಮಾತು ಭಾವನಾತ್ಮಕವಾಗಿದ್ದಲ್ಲಿ ಕಣ್ಣೀರು ತರಿಸಬಲ್ಲುದು ಅಬ್ಟಾ .. ಈ ಮಾತಿಗೆ ಏನೆಲ್ಲ ಎಷ್ಟೆಲ್ಲ ಶಕ್ತಿ ಇದೆ ಎಂದು ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಹಾಗಾದರೆ ಈ ಎಲ್ಲ ಮಾತುಗಳು ಹೇಗಿರಬೇಕು ಎನ್ನುವುದನ್ನು  ನೋಡೋಣ ಬನ್ನಿ.

ಯಾವ ಮಾತು ಸತ್ಯವಲ್ಲವೋ, ಒಳ್ಳೆಯ ಅಂಶ ಯಾರಿಗೂ ಉಪಯುಕ್ತತೆ ಇಲ್ಲವೋ ಅಂತಹ ಮಾತುಗಳನ್ನು ಆಡದಿರುವುದು ಒಳಿತು ಎನ್ನುತ್ತಾರೆ ತತ್ವಜ್ಞಾನಿ ಸಾಕ್ರೆಟಿಸ್‌. ಹೌದು ಮಾತಿನಲ್ಲಿ ಇನ್ನೊಬ್ಬರನ್ನು ಅಪಹಾಸ್ಯ ಮಾಡುವುದು, ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವುದು ಒಬ್ಬ ವ್ಯಕ್ತಿಯ ಸ್ವಾಭಿಮಾನಕ್ಕೆ ಧಕ್ಕೆ ತರುವ ಸಂಗತಿಯು ಅವರೊಳಗೆ ಹುದುಗಿರುವ ಕೆಳದರ್ಜೆಯ ಗುಣವನ್ನು ಸಾಬೀತುಪಡಿಸುತ್ತದೆ. ಅಂದಹಾಗೆ ಇವುಗಳನ್ನು ಮಾತು ಎನ್ನುವ ಬದಲು ಬಾಯಿಚಪಲ ಎನ್ನ ಬಹುದು. ಇವುಗಳಿಂದ ಯಾರಿಗೂ ಯಾವ ಪ್ರಯೋಜನವೂ ಇಲ್ಲ .

Advertisement

ಆದರೆ ಒಳ್ಳೆಯ ಮಾತುಗಳ ಫಲವತ್ತತೆಯೇ ಬೇರೆ. ನನ್ನ ಬದುಕಿನದೇ ಒಂದು ಉದಾಹರಣೆ ತೆಗೆದುಕೊಂಡರೆ, ನಾನಾಗ 10ನೇ ತರಗತಿ ಓದುತ್ತಿದ್ದೆ. ಆಗಾಗ ನನ್ನೊಳಗೆ ಆಕ್ರಮಿಸಿಕೊಳ್ಳುತ್ತಿದ್ದ ಶ್ರವಣದೋಷದ ನೋವು, ಖನ್ನತೆ ಬಳಲಿಕೆಗಳು ಅಷ್ಟಿಷ್ಟಲ್ಲ .

ಬದುಕಿನ ಬಗೆಗೆ ಆಶಾಭಾವವನ್ನೇ ಕಳೆದುಕೊಂಡಿದ್ದೆ. ರಮೇಶ್‌ ಮಕ್ಕಳ್ಳಿ ಎಂಬ ವಿಜ್ಞಾನ ಗುರುಗಳು ನನ್ನೊಳಗಿನ ನಕಾರಾತ್ಮಕತೆಯನ್ನು ಧನಾತ್ಮಕ ಮಾತುಗಳಿಂದ ಹೊರತೆಗೆದರು.

ಬರವಣಿಗೆಯ ಮೂಲಕ ಜಗತ್ತನ್ನೇ ಗೆಲ್ಲುವ ಶಕ್ತಿಯಿದೆ. ಕವನ, ಕಥನ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು, ನೈಪನ್‌ ಹಾಲ್ಟ… ಎಂಬ ವಿಜ್ಞಾನಿಗೆ ಕೈ, ಕಾಲು, ಕಿವಿ ಬಾಯಿ ಯಾವುದೂ ಇಲ್ಲ. ಆತ ಬೇಕಾದಷ್ಟು ಸಂಶೋಧನ ಗ್ರಂಥ ಬರೆದಿದ್ದಾರೆ. ಬ್ರೇನ್‌ ಮಾತ್ರ ಕೆಲಸ ಮಾಡುತ್ತದೆ. ಹೆದರದಿರು, ಬದುಕಲು ಬೇಕಾದಷ್ಟು ದಾರಿಗಳಿವೆ ಹುಡುಕಬೇಕು ಅಷ್ಟೇ ಎಂದಿದ್ದರು. ಈ ಮಾತು ನನ್ನ ಬದುಕಿನ ಮೇಲೆ ಎಷ್ಟು ಪರಿಣಾಮ ಬೀರಿತೆಂದರೆ ಅದಕ್ಕೆ ನನ್ನ ಇಂದಿನ ಬರವಣಿಗೆಯೇ ಸಾಕ್ಷಿ. ಹೀಗೆ ಮಾತುಗಳು ಪ್ರಾಮಾಣಿಕವಾಗಿದ್ದಲ್ಲಿ, ಸತ್ಯಕ್ಕೆ ಹತ್ತಿರವಾಗಿದ್ದಲ್ಲಿ ನುಡಿದವರಿಗೆ ಸಾರ್ಥಕ ಭಾವ ತಂದುಕೊಟ್ಟರೆ ಆಲಿಸಿದವರಿಗೆ ಮುಂದಿನ ಬದುಕು ಸುಂದರ ಉಡುಗೂರೆಯಾಗುತ್ತದೆ.

ಆಪ್ತ ಸಲಹೆ, ಸೂಚನೆಯ ಮಾತುಗಳು ಎಲ್ಲರ ಜೀವನದಲ್ಲೂ ಅವಶ್ಯ ಇರುತ್ತದೆ. ಯಾಕೆಂದರೆ ಬದುಕಿನ ದಾರಿ ಯಾವತ್ತೂ ಹೂವಿನಿಂದ ತುಂಬಿರುವುದಿಲ್ಲ. ಆಗೊಮ್ಮೆ-ಈಗೊಮ್ಮೆ ಕಾಲಿಗೆ ಸಿಕ್ಕಿಕೊಂಡ ಮುಳ್ಳುಗಳನ್ನು ಒಬ್ಬರಿಗೊಬ್ಬರು ಅನುವಾಗಿ ಹೊರ ತೆಗೆಯಬೇಕಾಗುತ್ತದೆ. ಜತೆಗೆ ನಾವಿದ್ದೇವೆ ಎಂಬ ಸಣ್ಣ ಭರವಸೆಯ ಮಾತು ಎದುರಿಗಿರುವ ಬೆಟ್ಟದಷ್ಟಿರುವ ಕಷ್ಟವನ್ನು ಮರೆಸುತ್ತದೆ.

ದಿನ ಕೊನೆಯ ಸಂಜೆಯಲ್ಲಿ ನಮ್ಮವರೊಂದಿಗೆ ಒಂದಷ್ಟು ಹರಟುತ್ತ ಚಹಾ ಹೀರೋಣ. ಯಾರು ಸಿಕ್ಕರೂ ಅವರೊಂದಿಗೆ ನಗುನಗುತ್ತಾ ಮಾತನಾಡೋಣ. ಉತ್ತಮ ಬಾಂದವ್ಯಕ್ಕೆ ಮಾತುಗಳೇ ಸೇತುವೆ. ಅದೇ ಮಾತುಗಳು ಸಮಯ ಸಂದಭೋìಚಿತವಾಗಿ ವಿವೇಚನೆ ಚಿಂತನೆಗಳಿಗೆ ಒಳಪಟ್ಟಿರಲಿ. ಆ ಮಾತುಗಳಲ್ಲಿ ಭಾವಗಳು ಉಸಿರಾಡಲಿ, ನಾವಾಡುವ ಮಾತುಗಳು ನಮ್ಮ ವ್ಯಕ್ತಿತ್ವದ ಕನ್ನಡಿಯಾಗಿರುತ್ತವೆ ಮತ್ತು ವ್ಯಕ್ತಿಯ ಸಾಮಾಜಿಕ ಸ್ತರದ ಮೇಲೆ ತನ್ನ ಪ್ರಭಾವಳಿಯನ್ನುಂಟುಮಾಡುತ್ತದೆ ಎನ್ನುವುದನ್ನು ಮರೆಯದಿರೋಣ.

ಬಸವಣ್ಣನವರು ಮಾತಿನ ಮಹತ್ವವನ್ನು ವಚನದಲ್ಲಿ ಮನೋಜ್ಞವಾಗಿ ಕಟ್ಟಿಕೊಟ್ಟಿರುವಂತೆ ಮಾತು ಸ್ವತ್ಛ ಮುತ್ತಿನ ಹಾರದಂತೆಯೂ, ಪ್ರಕಾಶಮಾನವಾದ ಬೆಲೆಯುಳ್ಳ ಮಾಣಿಕ್ಯದಂತೆಯೂ, ಸ್ಪಟಿಕದ ಸಲಾಕೆಯಂತೆಯೂ, ಲಿಂಗವೇ ಮೆಚ್ಚಿ ಅಹುದಹುದು ಎನ್ನುವಂತೆ ಮಾತುಗಳು ಬದುಕ ಚಾವಡಿಗೆ ಬೆಳಕಾಗಲಿ ಮಾತುಗಳು ಎಂದೂ ಕೃತಕವಾಗದೆ ಹೃದಯ ಮೆಲ್ಲುವ ಸವಿ ಬೆಲ್ಲವಾಗಲಿ !

 

ಮಧು ಕಾರಗಿ

ಬಿಇಎಂಎಸ್‌ ಕಾಲೇಜು, ಬ್ಯಾಡಗಿ

Advertisement

Udayavani is now on Telegram. Click here to join our channel and stay updated with the latest news.

Next