Advertisement

ಮಾಲಿನ್ಯದ ಬಗ್ಗೆ ಚರ್ಚೆಯಾಗಲಿ ದಿಲ್ಲಿ ಚುನಾವಣೆ

11:18 PM Jan 09, 2020 | mahesh |

ರಾಷ್ಟ್ರ ರಾಜಧಾನಿ ದಿಲ್ಲಿಯ ವಿಧಾನಸಭೆಗೆ ಫೆ.8ರಂದು ಚುನಾವಣೆ ನಡೆಯಲಿದೆ. ಹಲವು ಕಾರಣಗಳಿಗಾಗಿ ದಿಲ್ಲಿಯ ಚುನಾವಣೆ ಗಮನಾರ್ಹವಾಗಿದೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಾರ್ಟಿ ಪಾಲಿಗೆ ಇದು ಅಕ್ಷರಶಃ ಅಗ್ನಿಪರೀಕ್ಷೆಯಂಥ ಚುನಾವಣೆ. 2015ರಲ್ಲಿ 70ರ ಪೈಕಿ 67 ಸ್ಥಾನಗಳನ್ನು ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದ್ದ ಆಪ್‌ ತಾನು “ಒನ್‌ ಎಲೆಕ್ಷನ್‌ ವಂಡರ್‌’ ಅಲ್ಲ ಎಂಬುದನ್ನು ಸಾಬೀತುಪಡಿಸಬೇಕಾಗಿದೆ. ಇದೇ ವೇಳೆ ಬಿಜೆಪಿಯೂ ದಿಲ್ಲಿಯಲ್ಲಿ ಕಠಿನ ಸವಾಲನ್ನು ಎದುರಿಸುತ್ತಿದೆ.

Advertisement

ಬಿಜೆಪಿ ದಿಲ್ಲಿಯ ಅಧಿಕಾರ ಗದ್ದುಗೆಯಿಂದ ದೂರವಾಗಿ ಎರಡು ದಶಕವೇ ಕಳೆಯಿತು. ಮೋದಿಯ ಪ್ರಖರ ಅಲೆಯ ಹೊರತಾಗಿಯೂ ರಾಜಧಾನಿಯಿರುವ ರಾಜ್ಯದಲ್ಲೇ ಅಧಿಕಾರ ಹಿಡಿಯಲು ಸಾಧ್ಯವಾಗುತ್ತಿಲ್ಲ ಎನ್ನುವುದು ಬಿಜೆಪಿ ಪಾಲಿಗೆ ಬಹಳ ಮುಜುಗರ ತರುವ ವಿಚಾರ. ಕಾಂಗ್ರೆಸ್‌ ಕೂಡ ಚುನಾವಣಾ ಕಣದಲ್ಲಿದೆ. ಆದರೆ ಅದರ ಉಪಸ್ಥಿತಿ ಭಾರೀ ಪ್ರಮಾಣದ ಪರಿಣಾಮ ಉಂಟು ಮಾಡಬಹುದು ಎಂಬ ವಿಶ್ವಾಸ ಸ್ವತಹ ಕಾಂಗ್ರೆಸಿಗರಿಗೇ ಇಲ್ಲ. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ 7 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಆಪ್‌ನ್ನು ಮೂರನೇ ಸ್ಥಾನಕ್ಕೆ ತಳ್ಳಿತ್ತು. ಈ ಒಂದು ಅಂಶ ಕಾಂಗ್ರೆಸಿಗರಲ್ಲಿ ಚುನಾವಣೆ ಬಗ್ಗೆ ಕೆಲವು ನಿರೀಕ್ಷೆಗಳನ್ನು ಮೂಡಿಸಿದೆ. ಆದರೂ ಇನ್ನೂ ಇಲ್ಲಿ ಕಾಂಗ್ರೆಸಿನ ಒಳಜಗಳವೇ ಮುಗಿದಿಲ್ಲ. ಅಲ್ಲದೆ ಪಕ್ಷವನ್ನು ಚುನಾವಣೆಯಲ್ಲಿ ಮುನ್ನಡೆಸುವುದು ಯಾರ ಎನ್ನುವುದು ಕೂಡ ಇತ್ಯರ್ಥವಾಗಿಲ್ಲ. ಈ ಎಲ್ಲ ಇಲ್ಲಗಳ ನಡುವೆಯೂ ಕಾಂಗ್ರೆಸ್‌ ಚುನಾವಣೆಯಲ್ಲಿ ಏನಾದರೂ ಪರಿಣಾಮ ಬೀರಲು ಶಕ್ತವಾದರೆ ಅದರಿಂದ ಹಾನಿಯಾಗುವುದು ಆಪ್‌ಗೆ. ಏಕೆಂದರೆ ಈ ಎರಡೂ ಪಕ್ಷಗಳು ವೋಟ್‌ಬ್ಯಾಂಕ್‌ ಒಂದೇ.

ದಿಲ್ಲಿ ಚುನಾವಣೆ ಉಳಿದ ರಾಜ್ಯಗಳಿಗಿಂತ ಭಿನ್ನವಾಗಿದೆ. ಇದು ಸಂಪೂರ್ಣವಾಗಿ ನಗರ ಪ್ರದೇಶ. ಒಂದು ರೀತಿಯಲ್ಲಿ ನಗರಪಾಲಿಕೆಯ ಚುನಾವಣೆ ನಡೆದಂತೆ. ಉಳಿದ ರಾಜ್ಯಗಳಂತೆ ಇಲ್ಲಿ ರೈತರ ಸಮಸ್ಯೆ, ಗ್ರಾಮೀಣ ಭಾಗದ ಅಭಿವೃದ್ಧಿ ಇತ್ಯಾದಿ ವಿಚಾರಗಳು ಮುಖ್ಯವಾಗುವುದಿಲ್ಲ. ಹಾಗೆಂದು ದಿಲ್ಲಿಯಲ್ಲಿ ಸಮಸ್ಯೆಗಳು ಇಲ್ಲ ಎಂದಲ್ಲ. ಮೈಲುದ್ದದ ಟ್ರಾಫಿಕ್‌, ಮಹಿಳೆಯರ ಸುರಕ್ಷತೆ, ತ್ಯಾಜ್ಯ ನಿರ್ವಹಣೆ ಹೀಗೆ ನಗರಗಳು ಎದುರಿಸುತ್ತಿರುವ ಹಲವಾರು ಸಮಸ್ಯೆಗಳು ದಿಲ್ಲಿಯಲ್ಲೂ ಇವೆ.

ಇವೆಲ್ಲಕ್ಕಿಂತ ಮುಖ್ಯವಾಗಿರುವುದು ದಿಲ್ಲಿಯ ವಾಯುಮಾಲಿನ್ಯ ಸಮಸ್ಯೆ. ಪ್ರತಿ ವರ್ಷ ಮಳೆಗಾಲ ಮುಗಿದು ಚಳಿಗಾಲ ಕಾಲಿಡಲು ಸನ್ನಾಹವಾಗುತ್ತಿರುವ ಹೊತ್ತಿನಲ್ಲಿ ದಿಲ್ಲಿ ಅಕ್ಷರಶಃ ಗ್ಯಾಸ್‌ ಚೇಂಬರ್‌ ಆಗಿ ಬದಲಾಗುತ್ತದೆ. ವಾಯುಮಾಲಿನ್ಯ ತಾರಕಕ್ಕೇರಿ ಜನರು ಉಸಿರಾಡಲು ಕಷ್ಟಪಡಬೇಕಾಗುತ್ತದೆ. ಶುದ್ಧ ಗಾಳಿ ಎನ್ನುವುದು ದಿಲ್ಲಿ ನಿವಾಸಿಗಳ ಪಾಲಿಗೆ ಮರೀಚಿಕೆಯಾಗಿ ಬಹಳ ಸಮಯವಾಯಿತು. ಪಂಜಾಬ್‌ ಮತ್ತು ಹರ್ಯಾಣದ ರೈತರು ಕೊಯ್ಲು ಮುಗಿದ ಬಳಿಕ ಹೊಲಕ್ಕೆ ಬೆಂಕಿ ಹಾಕಿ ಹುಲ್ಲು ಸುಡುವುದರಿಂದ ದಿಲ್ಲಿಯ ವಾತಾವರಣ ಹದಗೆಡುತ್ತದೆ ಎನ್ನುವ ಆರೋಪ ಸರಿಯಾಗಿದ್ದರೂ ಇದರ ಜೊತೆಗೆ ವಾಯುಮಾಲಿನ್ಯ ಹೆಚ್ಚಳಕ್ಕೆ ದಿಲ್ಲಿಯ ಜನರ ಕೊಡುಗೆಯೂ ಇದೆ ಎನ್ನುವುದು ವಾಸ್ತವ.

ಮುಖ್ಯವಾಗಿ ದಿಲ್ಲಿಯ ನಿಯಂತ್ರಣಕ್ಕೆ ಸಿಗದ ವಾಹನಗಳ ಸಂಖ್ಯೆ, ಮಾಲಿನ್ಯದ ಎಲ್ಲ ಮಾನದಂಡಗಳನ್ನು ದಾಟಿರುವ ನರ್ಮದಾ ನದಿ ಈ ಎಲ್ಲ ಸಮಸ್ಯೆಗಳತ್ತವೂ ರಾಜಕೀಯ ಪಕ್ಷಗಳು ಗಮನ ಹರಿಸಬೇಕಾದ ಅಗತ್ಯವಿದೆ. ಉಚಿತ ವಿದ್ಯುತ್‌, ನೀರು, ಪ್ರಯಾಣ ಸೌಲಭ್ಯ ಇವೆಲ್ಲ ತತ್‌ಕ್ಷಣಕ್ಕೆ ಒಂದಿಷ್ಟು ಮತಗಳನ್ನು ಗಳಿಸಿಕೊಡುವ ಮಾರ್ಗಗಳೇ ಹೊರತು ಒಂದು ರಾಜ್ಯವನ್ನು ದೂರಗಾಮಿ ನೆಲೆಯಲ್ಲಿ ಸುಸ್ಥಿರವಾಗಿ ಕಟ್ಟುವ ಕ್ರಮವಲ್ಲ. ದುರದೃಷ್ಟವೆಂದರೆ ಮೂರೂ ಪಕ್ಷಗಳು ಇಷ್ಟರ ತನಕ ವಾಯುಮಾಲಿನ್ಯವಾಗಲಿ, ವಾಹನಗಳ ಸಂಖ್ಯೆಯನ್ನು ನಿಯಂತ್ರಿಸುವ ಬಗ್ಗೆಯಾಗಲಿ ಗಂಭೀರವಾದ ಮಾತುಗಳನ್ನು ಆಡುತ್ತಿಲ್ಲ. ಎಲ್ಲ ಪಕ್ಷಗಳು ಇನ್ನೂ ಅದೇ ಪುಕ್ಕಟೆ ಕೊಡುಗೆಗಳ ಗುಂಗಿನಲ್ಲೇ ಇವೆ. ಚುನಾವಣೆಯಲ್ಲಿ ನಿಜವಾಗಿ ಚರ್ಚೆಯಾಗಬೇಕಿರುವುದು ಜನರ ಭವಿಷ್ಯವನ್ನು ಉಜ್ವಲಗೊಳಿಸುವ ವಿಚಾರಗಳ ಕುರಿತಾಗಿಯೇ ಹೊರತು ತತ್‌ಕ್ಷಣಕ್ಕೆ ಸಿಗುವ ಸೌಲಭ್ಯಗಳ ಕುರಿತಾಗಿ ಅಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next