ನವದೆಹಲಿ: ಭಾರತೀಯ ಜನತಾ ಪಕ್ಷದ ಮುಖಂಡ ತಜೀಂದರ್ ಸಿಂಗ್ ಬಗ್ಗಾ ಅವರನ್ನು ಜುಲೈ 5ರವರೆಗೆ ಬಂಧಿಸದಂತೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಇದರಿಂದ ಬಗ್ಗಾಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಇದನ್ನೂ ಓದಿ:ದ್ವೇಷ ಹೆಚ್ಚಳ…ಸಿಂಗಾಪುರದಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಿಡುಗಡೆಗೆ ನಿಷೇಧ
ಮೇ 6ರಂದು ದೆಹಲಿಯ ಜನಕ್ ಪುರಿ ನಿವಾಸದಿಂದ ದೆಹಲಿ ಬಿಜೆಪಿ ವಕ್ತಾರ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದರು. ಆಮ್ ಆದ್ಮಿ ಪಕ್ಷದ ಮುಖಂಡ, ಮೊಹಾಲಿ ನಿವಾಸಿ ಸನ್ನಿ ಅಹ್ಲುವಾಲಿಯಾ ದೂರು ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಬಗ್ಗಾ ವಿರುದ್ಧ ಪ್ರಚೋದನಕಾರಿ ಹೇಳಿಕೆ, ದ್ವೇಷಕ್ಕೆ ಪ್ರೇರಣೆ ಹಾಗೂ ಕ್ರಿಮಿನಲ್ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿದ್ದರು.
ಈ ಬೆಳವಣಿಗೆ ನಂತರ ದೆಹಲಿ, ಹರ್ಯಾಣ, ಪಂಜಾಬ್ ಮೂರು ರಾಜ್ಯಗಳ ಪೊಲೀಸರ ಹೈಡ್ರಾಮಾ ನಡೆದಿತ್ತು. ಪಂಜಾಬ್, ಹರ್ಯಾಣ ಪೊಲೀಸರು ದೆಹಲಿಗೆ ಆಗಮಿಸಿ, ಸ್ಥಳೀಯ ಪೊಲೀಸರ ನೆರವಿನೊಂದಿಗೆ ಬಗ್ಗಾ ಅವರನ್ನು ಬಂಧಿಸಿ ಪಂಜಾಬ್ ಗೆ ಕರೆದೊಯ್ಯಲಾಗಿತ್ತು.
ತಜೀಂದರ್ ಸಿಂಗ್ ಬಗ್ಗಾ ಅವರ ಬಂಧನಕ್ಕೆ ಬಿಜೆಪಿ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಇದೊಂದು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದರು. ಕೇಜ್ರಿವಾಲ್ ಹಿಟ್ಲರ್ ರೀತಿ ವರ್ತಿಸುತ್ತಿದ್ದು, ಇದಕ್ಕೆ ತಕ್ಕ ಬೆಲೆ ತೆರಬೇಕಾದಿತು ಎಂದು ಎಚ್ಚರಿಸಿತ್ತು.
ಶನಿವಾರ ತಡರಾತ್ರಿ ಬಗ್ಗಾ ಬಂಧನ ಕುರಿತ ಅರ್ಜಿಯ ತುರ್ತು ವಿಚಾರಣೆ ನಡೆಸಿದ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮುಂದಿನ ವಿಚಾರಣೆವರೆಗೆ ಬಂಧಿಸದಂತೆ ಆದೇಶ ನೀಡಿತ್ತು. ಬಳಿಕ ಮೊಹಾಲಿ ಕೋರ್ಟ್ ಬಗ್ಗಾ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಏತನ್ಮಧ್ಯೆ ಪ್ರಕರಣದ ಕುರಿತು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಜುಲೈ 6ರವರೆಗೆ ಬಂಧಿಸದಂತೆ ಮಧ್ಯಂತರ ಆದೇಶ ನೀಡಿದೆ.