Advertisement

ಸಮಸ್ಯೆ ಎದುರಾದರೆ ತಹಶೀಲ್ದಾರರೇ ಹೊಣೆ; ಡಾ|ಪಿ.ಸಿ. ಜಾಫರ್‌

06:30 PM Nov 26, 2022 | Team Udayavani |

ಚಿತ್ರದುರ್ಗ: ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅಧಿಕಾರಿಗಳು ಬಹಳ ಎಚ್ಚರಿಕೆ ವಹಿಸಬೇಕು. ತಹಶೀಲ್ದಾರ್‌ ಗಳು ತೀವ್ರ ಕಟ್ಟೆಚ್ಚರ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ| ಪಿ.ಸಿ. ಜಾಫರ್‌ ಸೂಚನೆ ನೀಡಿದರು.

Advertisement

ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಶುಕ್ರವಾರ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ನಾವು ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿದ್ದೇವೆ. ಹೀಗಾಗಿ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಎಲ್ಲರ ನಿಗಾ ಇರುತ್ತದೆ. ಮಹತ್ವದ ಈ ಜವಾಬ್ದಾರಿಯನ್ನು ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರ ಮೇಲೆ ಹಾಕಿ ಕೂರುವಂತಿಲ್ಲ. ಸಮಸ್ಯೆ ಎದುರಾದಲ್ಲಿ, ಹೊಣೆ ತಹಶೀಲ್ದಾರರೇ ಹೊರಬೇಕಾಗುತ್ತದೆ ಎಂಬ ಅರಿವು ಇರಲಿ ಎಂದು ಎಚ್ಚರಿಸಿದರು.

ಮತದಾರರ ಹೆಸರನ್ನು ಪಟ್ಟಿಯಿಂದ ಹೆಸರು ಡಿಲೀಟ್‌ ಮಾಡುವಾಗ, ಎಲ್ಲ ನಿಯಮಗಳನ್ನು ಪಾಲಿಸಲಾಗಿದೆಯೇ, ಮಾರ್ಗಸೂಚಿಯನ್ನು ಅನುಸರಿಸಲಾಗಿದೆಯೇ ಎಂಬುದನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಬೂತ್‌ ಮಟ್ಟದ ಅಧಿಕಾರಿಗಳು ಡಿಲೀಟ್‌ ಮಾಡುವವರ ಪಟ್ಟಿ ಕೊಟ್ಟ ಕೂಡಲೆ ತೆಗೆದುಹಾಕುವಂತಿಲ್ಲ, ಪ್ರತಿಯೊಂದಕ್ಕೂ ಕೂಡ ದಾಖಲೆಗಳಿರಬೇಕು. ಮತದಾರರು ಆ ಸ್ಥಳದಲ್ಲಿ, ಕ್ಷೇತ್ರದಲ್ಲಿ ಇದ್ದಾರೆಯೇ ಇಲ್ಲವೋ ಎಂಬುದನ್ನು ಮತ್ತೂಮ್ಮೆ ಪರಿಶೀಲಿಸಿ, ಬಳಿಕ ನಿರ್ಧಾರ ಕೈಗೊಳ್ಳಬೇಕು ಎಂದರು.

ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ ಮುಂತಾದ ಪ್ರಕ್ರಿಯೆಗಳನ್ನು ಕೈಗೊಳ್ಳಲು ಅವಕಾಶಗಳಿರುತ್ತವೆ. ಚುನಾವಣೆ ಘೋಷಣೆಯಾದ ಬಳಿಕ ಪರಿಶೀಲನೆ ಮಾಡಿಕೊಂಡು ಕೂರುವುದಲ್ಲ. ಬೇರೆ ಬೇರೆ ಜಿಲ್ಲೆಗಳಿಂದ ಅಭ್ಯರ್ಥಿಗಳು ಬಂದು ಚುನಾವಣೆಗೆ ಸ್ಪ ರ್ಧಿಸುವ ಸಂಭವವಿರುತ್ತದೆ. ಹೀಗಾಗಿ ಅ ಧಿಕಾರಿಗಳು, ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಜಿಲ್ಲೆಯಲ್ಲಿ ಈ ಬಾರಿ ಅಂದಾಜು 40 ಸಾವಿರ ಯುವ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸಲು ಗುರಿ ನಿಗದಿಪಡಿಸಲಾಗುವುದು. ಅಧಿಕಾರಿಗಳು ಜಿಲ್ಲೆಯ ಪ್ರತಿ ಕಾಲೇಜು, ವಸತಿ ನಿಲಯಗಳು, ಸೇರಿದಂತೆ ಎಲ್ಲ ಬಗೆಯ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು, ಅಲ್ಲಿನ ಅರ್ಹ ವಿದ್ಯಾರ್ಥಿಗಳ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು. ವಿಕಲಚೇತನರ ಹಲವು ಸಂಘ ಸಂಸ್ಥೆಗಳಿರುತ್ತವೆ, ಇವರ ನೆರವನ್ನು ಪಡೆದು ವಿಕಲಚೇತನರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಯತ್ನಿಸಬೇಕು ಎಂದು ಡಾ| ಪಿ.ಸಿ.ಜಾಫರ್‌ ಹೇಳಿದರು.

Advertisement

ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಯುವ ಮತದಾರರು, ವಿಕಲಚೇತನರು, ತೃತೀಯ ಲಿಂಗಿಗಳು, ಸಮಾಜದ ಮುಖ್ಯವಾಹಿನಿಯಿಂದ ಹೊರಗಿರುವವರನ್ನು ಮತದಾರರ ಪಟ್ಟಿಗೆ ಸೇರಿಸಲು ನಾವು ವಿಶೇಷ ಕ್ರಮ ಕೈಗೊಂಡಿದ್ದೇವೆ. ಬೂತ್‌ ಮಟ್ಟದ ಅಧಿಕಾರಿಗಳು ಮನೆ ಮನೆ ಭೇಟಿ ನೀಡಿ, ಅರ್ಹರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ನಾವು ಎಲ್ಲ ಕಾಲೇಜುಗಳ ಪ್ರಾಚಾರ್ಯರೊಂದಿಗೆ ಸಭೆ ನಡೆಸಿ, ಅವರಿಗೆ ವಿದ್ಯಾರ್ಥಿಗಳಿಂದ ನಮೂನೆ 06 ಹಾಗೂ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ, ಸಲ್ಲಿಸುವಂತೆ ಸೂಚನೆ ನೀಡಿದ್ದು, ಅದರಂತೆ ಸುಮಾರು 15 ಸಾವಿರ ವಿದ್ಯಾರ್ಥಿಗಳಿಂದ ದಾಖಲೆ ಪಡೆದು, ಸೇರ್ಪಡೆಗೆ ಕ್ರಮ ವಹಿಸಲಾಗಿದೆ. ಎಪಿಕ್‌ ಕಾರ್ಡ್‌ ಹಾಗೂ ಆಧಾರ್‌ ಲಿಂಕ್‌ ಕಾರ್ಯ ಸುಮಾರು ಶೇ.81 ರಷ್ಟು ಆಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ನಡೆಸಲು ತಾಲೂಕುವಾರು ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು. ಜಿಪಂ ಸಿಇಒ ಎಂ.ಎಸ್‌. ದಿವಾಕರ್‌, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಗಾಧಿಕಾರಿ ಚಂದ್ರಯ್ಯ, ಜಿಪಂ ಉಪಕಾರ್ಯದರ್ಶಿ ಡಾ|ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಗಾಯಿತ್ರಿ ಮತ್ತಿತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next