ಮಡಿಕೇರಿ: ಸಂತೆ ಮತ್ತು ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಅಶುಚಿತ್ವದ ವಾತಾವರಣದಲ್ಲಿ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ತಾಲೂಕು ತಹಶೀಲ್ದಾರ್ ದಿಢೀರ್ ನಗರ ಸಂಚಾರ ಮಾಡಿ ವ್ಯಾಪಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ವೀರಾಜಪೇಟೆ ಪಟ್ಟಣದಲ್ಲಿ ನಿಯಮ ಬಾಹಿರವಾಗಿ ಎಲ್ಲೆಂದರಲ್ಲಿ ತೆರೆದ ವಾತಾವರಣದಲ್ಲಿ ಆಹಾರ ಪದಾರ್ಥಗಳು ಮಾರಾಟವಾಗುತ್ತಿವೆ. ಅಸ್ಸಾಂ ನಿಂದ ಕಾರ್ಮಿಕರಾಗಿ ದುಡಿಯಲು ಬಂದವರಲ್ಲಿ ಕೆಲವರು ವ್ಯಾಪಾರಿಗಳಾಗಿ ಮಾರ್ಪಡುತ್ತಿದ್ದು, ಅಸ್ಸಾಮಿಗಳು ಇಷ್ಟ ಪಡುವ ತಿಂಡಿ, ತಿನಿಸುಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ಈ ಆಹಾರ ಪದಾರ್ಥಗಳು ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎನ್ನುವ ದೂರುಗಳು ಕೇಳಿ ಬಂದವು.
ಕೇರಳ ರಾಜ್ಯದ ಕೆಲವು ವ್ಯಾಪಾರಿಗಳು ಕೂಡ ಯಾವುದೇ ನಿಯಮಗಳನ್ನು ಅನುಸರಿಸದೆ ತೂಕ, ಗುಣಮಟ್ಟ, ದರ, ಪ್ಯಾಕಿಂಗ್ ದಿನಾಂಕ ಮತ್ತಿತರ ಮಾಹಿತಿಗಳಿಲ್ಲದ ಪ್ಯಾಕೇಟ್ಗಳಲ್ಲಿ ತಿಂಡಿ, ತಿನಿಸುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಆಕ್ಷೇಪವಿತ್ತು.
ಇದರಿಂದ ಎಚ್ಚೆತ್ತುಕೊಂಡ ತಹಶೀಲ್ದಾರ್ ಅರ್ಚನಾ ಭಟ್ ದಿಢೀರ್ ನಗರ ಸಂಚಾರ ನಡೆಸಿದರು. ರಸ್ತೆ ಬದಿಯ ಎಲ್ಲ ಆಹಾರ ಪದಾರ್ಥಗಳ ಮಾರಾಟಗಾರರಿಗೆ ಮಾರಾಟದ ನಿಯಮಗಳನ್ನು ತಿಳಿಸಿಕೊಟ್ಟರು. ನಿಯಮ ಬಾಹಿರವಾಗಿ ಮಾರಾಟ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ನಿಯಮ ಪಾಲನೆಯೊಂದಿಗೆ ಶುಚಿತ್ವವನ್ನು ಕಾಪಾಡಬೇಕು ಮತ್ತು ಆಹಾರದ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕೆಂದು ತಿಳಿಸಿದರು.