ಮಹಾನಗರ: ನಗರದ ಪ್ರಮುಖ ಪಾರ್ಕ್ಗಳಲ್ಲಿ ಒಂದಾಗಿರುವ ಮಾತ್ರವಲ್ಲದೆ ನಿರ್ವಹಣೆ ಯಲ್ಲಿಯೂ ಹಿಂದೆ ಉಳಿದಿದ್ದ ಠಾಗೋರ್ ಪಾರ್ಕ್ಗೆ ಇದೀಗ ಹೊಸ ರೂಪ ಸಿಗುತ್ತಿದೆ.
ಠಾಗೋರ್ ಪಾರ್ಕ್ ನಗರದ ಹಳೆಯ ಪಾರ್ಕ್ ಗಳಲ್ಲಿ ಒಂದಾಗಿದ್ದು, ಇತ್ತೀಚಿನ ದಿನಗಳಲ್ಲಿ ಸರಿಯಾಗಿ ನಿರ್ವಹಣೆ ಮಾಡದೆ, ಕಸ- ಕಡ್ಡಿ, ತ್ಯಾಜ್ಯಗಳನ್ನು ತೆರವುಗೊಳಿಸದೆ ಕಳಾಹೀನವಾಗಿತ್ತು. ಪಾರ್ಕ್ ನಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾಗಿರುವ ಸ್ವಾತಂತ್ರ್ಯ ಸಮರ ವೀರ ಕೆದಂಬಾಡಿ ರಾಮಯ್ಯಗೌಡ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮ ನ. 19ರಂದು ನಡೆಯಲಿದ್ದು, ಇದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ| ನಿರ್ಮಲಾನಂದನಾಥ ಸ್ವಾಮೀಜಿ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪಾರ್ಕ್ ಅನ್ನು ಸಜ್ಜುಗೊಳಿಸುವ ಕೆಲ ಸ ಕೆಲವು ದಿನಗಳಿಂದ ಭರದಿಂದ ಸಾಗಿದೆ.
ಸದ್ಯ 20-30 ಮಂದಿ ಕಾರ್ಮಿ ಕರು ವಿವಿಧ ಕೆಲಸದಲ್ಲಿ ತೊಡಗಿಸಿ ಕೊಂಡಿದ್ದಾರೆ. ಆವರಣ, ಕಬ್ಬಿಣದ ಬೇಲಿ, ಕಲ್ಲು-ಬೆಂಚುಗಳಿಗೆ ಪೈಂಟ್ ಮಾಡುವುದು, ಗಾರ್ಡ್ನ್ ನಲ್ಲಿರುವ ಗಿಡಗಳನ್ನು ಕತ್ತರಿಸಿ ಸಿಂಗಾರ ಗೊಳಿಸುವುದು, ಕಳೆ ಗಿಡಗಳನ್ನು ತೆರವುಗೊಳಿಸುವುದು, ಹಸಿರು ಲಾನ್ ಹೊಸದಾಗಿ ಅಳವಡಿಸುವುದು, ಹೊಸ ವಿದ್ಯುತ್ ದೀಪಗಳ ಅಳವಡಿಕೆ, ಕಲ್ಲು ಬೆಂಚುಗಳನ್ನು ತೊಳೆದು ಸ್ವಚ್ಛ ಮಾಡುವುದು ಮೊದಲಾದ ಕೆಲಸಗಳನ್ನು ಪಾಲಿಕೆ ವತಿಯಿಂದ ಮಾಡಲಾಗುತ್ತಿದೆ.
ಇಲ್ಲಿನ ದೀಪ ಸ್ತಂಭಕ್ಕೂ ಸುಣ್ಣ ಬಣ್ಣ ಬಳಿದು ಆಕರ್ಷಕವಾಗಿ ಕಾಣುವಂತೆ ಮಾಡಲಾಗುತ್ತಿದೆ. ಪಾರ್ಕ್ನಲ್ಲಿ ಅಳವಡಿಸಲಾಗಿರುವ ಮಕ್ಕಳಾಟದ ಸಲಕರಣೆಯನ್ನು ಸಜ್ಜುಗೊಳಿಸಲಾಗು ತ್ತಿದೆ. ಉಯ್ನಾಲೆ, ಜಾರುಬಂಡಿ ಮೊದಲಾದವುಗಳಿಗೂ ಬಣ್ಣ ಬಳಿಯಲಾಗಿದೆ.
Related Articles
ನಿರ್ವಹಣೆಯೂ ಆಗಬೇಕು
ಕಾರ್ಯಕ್ರಮದ ಉದ್ದೇಶದಿಂದ ಒಂದು ಬಾರಿ ಸ್ವಚ್ಛಗೊಳಿಸಿ, ಸುಣ್ಣ ಬಣ್ಣ ಬಳಿದು ಸಿಂಗರಿಸುವುದು. ಬಳಿಕ ಹಿಂದಿನಂತೆ ನಿರ್ವಹಣೆ ಮಾಡದಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿಯೂ ಪಾರ್ಕ್ನ ನಿರ್ವಹಣೆ ನಿರಂತರವಾಗಿ ನಡೆಯಬೇಕು. ಆ ಮೂಲಕ ಪಾರ್ಕ್ನಲ್ಲಿ ಪ್ರತಿಷ್ಠಾಪಿಸಲಾಗಿರುವ ರಾಮಯ್ಯಗೌಡರ ಪ್ರತಿಮೆಗೆ ಗೌರವ ಸಲ್ಲಿಸುವ ಕೆಲಸವಾಗಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುವ ತಾಣವಾಗುವುದರಿಂದ ನಿರ್ವಹಣೆ ಅಗತ್ಯವಾಗಿ ನಡೆಯಬೇಕಿದೆ.
ಅಭಿವೃದ್ಧಿ ಕಾಮಗಾರಿಗೆ ಚಾಲನೆ: ಠಾಗೋರ್ ಪಾರ್ಕ್ ನಲ್ಲಿ ಕೆದಂಬಾಡಿ ರಾಮಯ್ಯಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿರುವುದರಿಂದ ಪಾರ್ಕ್ನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಪಾರ್ಕ್ ಮತ್ತೆ ಹೊಸ ರೂಪದೊಂದಿಗೆ ಕಂಗೊಳಿಸಲಿದೆ. –ಜಯಾನಂದ ಅಂಚನ್, ಮೇಯರ್