Advertisement

ಕಾರಣಪುರುಷ ಟಿ. ಮೋಹನದಾಸ ಪೈ

02:36 AM Aug 01, 2022 | Team Udayavani |

ರಾಜಧಾನಿ, ಬೃಹತ್‌ ನಗರಗಳಲ್ಲಷ್ಟೇ ಪತ್ರಿಕಾ ಪ್ರಕಟನೆ ಸಾಧ್ಯ ಎಂದು ಸಾಮಾನ್ಯವಾಗಿ ಎಲ್ಲರೂ ನಂಬಿದ್ದನ್ನು ಹುಸಿ ಮಾಡಿ ಅರುವತ್ತರ ದಶಕದ ಉತ್ತರಾರ್ಧದಲ್ಲಿ ಯೋಜನೆಯ ನೀಲ ನಕ್ಷೆಯನ್ನು ನಿಖರವಾಗಿ ಕಾರ್ಯಗತಗೊಳಿಸಲು ಸೋದರಬಂಧು ಪಿ. ಸತೀಶ್‌ ಯು. ಪೈ ಅವರ ಜತೆಗೆ ರಂಗಕ್ಕಿಳಿದರು.

Advertisement

ರಾಜ್ಯ ರಾಜಧಾನಿ ಮತ್ತಿತರ ದೂರದ ಪ್ರದೇಶಗಳಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆಗಳು ಜಿಲ್ಲೆಯ ಪ್ರಮುಖ ಸ್ಥಳಗಳಿಗೆ ತಲುಪುವುದು ವಿಳಂಬವಾಗಿಯೇ. ಜತೆಗೆ ಜಿಲ್ಲಾ ಕೇಂದ್ರದಿಂದ ಪ್ರಕಟವಾಗುತ್ತಿದ್ದ ಪತ್ರಿಕೆಗಳು ಓದುಗರ ನಿರೀಕ್ಷೆಗಳನ್ನು ಈಡೇರಿಸಲು ಗಮನ ಕೇಂದ್ರೀಕರಿಸದೆ ನಿರಾಸೆ ಉಂಟು ಮಾಡಿದ್ದವು.

ಈ ಸಂಧಿ ಕಾಲದಲ್ಲಿ ಮಣಿಪಾಲ ಪ್ರಸ್‌ ಅನ್ನು ಕೇಂದ್ರೀಕರಿಸಿಕೊಂಡು 1969ರ ವರ್ಷಾಂತ್ಯದ ವೇಳೆಗೆ ಉಡುಪಿಯಲ್ಲಿ ಆಯೋಜಿತವಾಗಿದ್ದ ಬೃಹತ್‌ ಧಾರ್ಮಿಕ ಸಮಾವೇಶದ ವರದಿಗಳನ್ನು ವಸ್ತುನಿಷ್ಠವಾಗಿ ಸಂಕಲಿಸಿ, ಸಂಯೋಜಿಸಿ ಪ್ರಾಯೋಗಿಕ ಸಂಚಿಕೆಗಳನ್ನು ಪ್ರಕಟಿಸಿದ್ದು ತಾಜಾ ವಾರ್ತೆಗಳಿಗೆ ಹಪಹಪಿಸುತ್ತಿದ್ದ ಓದುಗ ವರ್ಗದ ಪ್ರೀತಿಗೆ ತಟ್ಟನೆ ಪಾತ್ರವಾಯಿತು. ಬನ್ನಂಜೆ ರಾಮಾಚಾರ್ಯ, ಬನ್ನಂಜೆ ಗೋವಿಂದಾಚಾರ್ಯರ ಅನುಭವ ಸಿದ್ಧಂಶಗಳ ಸಹಕಾರ ಪತ್ರಿಕೋದ್ಯೋಗದಲ್ಲಿ ನೆಲೆ ಕಂಡುಕೊಳ್ಳಲು ಉತ್ಸುಕರಾಗಿದ್ದ ಯುವಕರ ದಂಡನ್ನು ಕಟ್ಟಿಕೊಂಡು 1970ರ ಜನವರಿ 1ರಿಂದ ಟಿ. ಸತೀಶ್‌ ಪೈ ಅವರ ಸಂಪಾದಕತ್ವದಲ್ಲಿ ಉದಯವಾಣಿ ಅಧಿಕೃತ ಪ್ರಕಟನೆ ಆರಂಭಗೊಂಡಿದ್ದಷ್ಟೇ ಅಲ್ಲ, ಆರೇ ತಿಂಗಳುಗಳಲ್ಲಿ  ಓದುಗರ ಅಪಾರ ಪ್ರೀತಿಗೆ ಪಾತ್ರವಾಯಿತು. ಜಿಲ್ಲೆಯ, ಪರಿಸರ ಪ್ರದೇಶದ, ರಾಜ್ಯ ರಾಜಧಾನಿಯ, ದೇಶದ ವಿವಿಧೆ ಡೆಯ ವಾರ್ತಾ ವಿಶೇಷಗಳನ್ನು ಪತ್ರಿಕೆ ಪುಷ್ಕಳವಾಗಿ ಓದುಗರಿಗೆ ಕಬ್ಬಿಣದ ಕಡಲೆಯಾಗದಂಥ ಸರಳ, ಆದರೆ ಗಂಭೀರ ಭಾಷೆಯಲ್ಲಿ ರೂಪುಗೊಂಡು ಓದುಗರ ಮನತಣಿಸುತ್ತ ಬೆಳೆಯುತ್ತಿದ್ದುದಕ್ಕೆ ಮುಖ್ಯ ಕಾರಣ, ಪ್ರೇರಣೆ ಮೋಹನದಾಸ ಪೈ ಎಂದು ನಾನು ಘಂಟಾಘೋಷವಾಗಿ ಹೆಮ್ಮೆಯಿಂದ ಹೇಳಲು ಬಯಸುತ್ತೇನೆ. ಏಕೆಂದರೆ ಪತ್ರಿಕೆಯ ಪ್ರಾಯೋಗಿಕ ಸಂಚಿಕೆಗಳ ಹಂತದಲ್ಲಿಯೇ ಪತ್ರಿಕೆಗೆ ಸೇರಿ ಮೋಹನ ದಾಸ್‌ ಪೈಯವರ ಗರಡಿಯಲ್ಲಿ ಬೆಳೆದವನು ನಾನು.

ಪತ್ರಿಕೆ ಹೀಗೆ ರೂಪುಗೊಳ್ಳಬೇಕು, ವಾರ್ತಾ ಮಾಹಿತಿದಾಹಿ ಓದುಗರ ಜ್ಞಾನ ವೃದ್ಧಿ, ಭಾಷಾ ವೃದ್ಧಿಗೆ ಪೂರಕವಾಗಿ ಪತ್ರಿಕೆ ಇರಬೇಕು, ಪತ್ರಿಕೆ ಸಮುದಾಯಗಳ ನಡುವೆ ಸಾಮರಸ್ಯ ಮೂಡಿಸುವ, ಪ್ರಾದೇಶಿಕ ಅಭಿವೃದ್ಧಿಯತ್ತ ಸಂಬಂಧಿಸಿದ ಗಮನ ಸೆಳೆಯುವುದಕ್ಕೆ ಆದ್ಯತೆ ನೀಡಬೇಕು ಎನ್ನುವುದು ಪೈಯವರ ಮನೀಷೆಯಾಗಿತ್ತು.

ಒಂದು ಪತ್ರಿಕೆ ತನ್ನ ಓದುಗರ ಜ್ಞಾನ ದಾಹವನ್ನು ತಣಿಸುವುದರ ಜತೆಜತೆಗೆ ಅವರ ಪ್ರದೇಶದ ಅಭಿವೃದ್ಧಿಗೆ ಬೇಕಾದ ಅಗತ್ಯಗಳ ಕುರಿತು ಸಂಬಂಧಿಸಿದ ಸರಕಾರದ ಗಮನ ಸೆಳೆಯುವ ಕಾರ್ಯದಲ್ಲೂ ಸಫ‌ಲವಾಯಿತು.

Advertisement

ಪೈಯವರ ಚಿಂತನಾ ಮೂಸೆಯಲ್ಲಿ ಮೂಡಿ ಸರಕಾರದ ಗಮನವನ್ನು ಸೆಳೆದು ಪ್ರದೇಶಾಭಿವೃದ್ಧಿ, ಗ್ರಾಮೀಣಾಭಿವೃದ್ಧಿಯ ಹರಿಕಾರನಾದ ಪತ್ರಿಕೆಯು ಹಲವಾರು ಕಾರ್ಯ ಯೋಜನೆಗಳಲ್ಲಿ ಕುಗ್ರಾಮ ಗುರುತು ಯೋಜನೆ ಅತ್ಯಂತ ಮಹತ್ವದ್ದು. ಪತ್ರಿಕೆಯ ಸಾಧನೆಗಳೆಲ್ಲದರ ರೂವಾರಿಯಾಗಿ ತೆರೆಮರೆಯಲ್ಲಿ ಮಿಂಚಿದವರು ಮೋಹನದಾಸ ಪೈ. ಅವರಿಗೆ ಹೆಗಲೆಣೆಯಾಗಿ ಸಹಯೋಗ ನೀಡಿದವರು ಟಿ. ಸತೀಶ್‌ ಯು. ಪೈ.

“ಉದಯವಾಣಿ’ ಸಾಹಿತ್ಯ, ಸಂಸ್ಕೃತಿ, ಕಲೆ, ಸಿನೆಮಾ ಇತ್ಯಾದಿ ಯಾವುದೇ ರಂಗದಲ್ಲೂ ಓದುಗರ ಅರಿವಿನ ಭಂಡಾರವನ್ನು ಸಮೃದ್ಧಗೊಳಿಸುವ ಕಾರ್ಯದಲ್ಲಿ ಸದಾ ದುಡಿದವರು. ಹಾಗೆಯೇ ಅಬ್ಬರಿಸಿ, ಬೊಬ್ಬಿಡದೆ ಜನರ ಆಶಯವನ್ನು ಸರಕಾರಕ್ಕೆ ತಲುಪಿಸುವ ಕಾರ್ಯವನ್ನು ಉದಯವಾಣಿ ಮಾಡುತ್ತಾ ಬಂದಿದೆ. ಉದಯವಾಣಿಯ ಇಂಥ ಕಾರ್ಯದ ಶೈಲಿಗೆ ಒಂದು ಉದಾಹರಣೆ ತುರ್ತು ಪರಿಸ್ಥಿತಿ ಜಾರಿಗೊಂಡ ದಿನ. ಸಂಪಾದಕೀಯದ ಟೀಕೆ ಟಿಪ್ಪಣಿಗಳ ಪ್ರಹಾರದ ಬದಲು ಸಂಪಾದಕೀಯ ಅಂಕಣವನ್ನೇ ಖಾಲಿ ಬಿಟ್ಟು ಮೌನ ಪ್ರತಿಭಟನೆ ವ್ಯಕ್ತಪಡಿಸಿದ್ದು.

ಮೋಹನಾಂತರಂಗ
ಹೌದು ಅವರಿದ್ದದ್ದೇ ಹಾಗೆ. ಅವರ ಚಿಂತನೆಗಳು ಅವರು ಕಲ್ಪಿಸಿದಂತೆಯೇ ಮೂಡಿ ಬರಬೇಕೆನ್ನುವ ಸಾತ್ವಿಕ ಹಠ. ಅವರ ಪರಿಕಲ್ಪನೆಗಳು ತದ್ವತ್ತಾಗಿ ರೂಪುಗೊಂಡಾಗ ಒಂದು ಮುಗುಳ್ನಗೆಯ ಹೂವು. ಅವರ ಉದ್ದೇಶವನ್ನು ಅರ್ಥ ಮಾಡಿಕೊಂಡು ಅದನ್ನು ಕಾರ್ಯರೂಪಕ್ಕಿಳಿಸಲು ಶ್ರಮಿಸಿದವರಿಗೆ ಧನ್ಯತಾಭಾವ.

ಹಾಂ! ಅವರೇ ಟಿ. ಮೋಹನದಾಸ ಪೈ. ಇತರರು ದುಸ್ಸಾಹಸವೆಂದು ಮುಖ ಕಿವಿಚಿದ್ದನ್ನು ಸಮೋಚಿತ ಕಾರ್ಯಸೂಚಿ ಹಿಡಿದು ಅದನ್ನು ಲೀಲಾಜಾಲವೆಂಬಂತೆ ಆಗಗೊಳಿಸುತ್ತಿದ್ದ ಸಮರ್ಥ. ಈಗ ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಸಂಸ್ಥೆಯೆಂದು ಹೆಸರುಗೊಂಡಿರುವ ಉದಯವಾಣಿ ಪತ್ರಿಕಾ ಸಮೂಹ ಅವರ ಕಾಣೆR. ಟಿ. ಸತೀಶ್‌ ಯು. ಪೈ ಅವರ ಸಂಪಾದಕತ್ವದಲ್ಲಿ 1970ರಲ್ಲಿ ಅಧಿಕೃತ ಪತ್ರಿಕೆ, ತುಷಾರ, ತರಂಗ, ರೂಪತಾರಾ ಅವರ ಪರಿಕಲ್ಪನೆಯ ಕುಂಡದಲ್ಲಿ ಅಂಕುರವಾಗಿ ಅರಳಿದ ಕುಸುಮಗಳು.

ಪತ್ರಿಕೆಯ ಆರಂಭದ ವರ್ಷಗಳಲ್ಲಿ ಮೋಹನದಾಸ್‌ ಪೈ ಅವರು ಸತೀಶ್‌ ಪೈ ಅವರ ಜತೆಗೂಡಿ ಹಗಲು-ರಾತ್ರಿಯೆನ್ನದೆ ಸಂಪಾದಕೀಯ ವಿಭಾಗಕ್ಕೆ ಬಂದು ಪ್ರತ್ಯೇಕ ಆಸನಗಳ ಗೋಜಿಗೆ ಹೋಗದೆ ತೆರವಿದ್ದ ಕುರ್ಚಿಗಳಲ್ಲೇ ಕುಳಿತು ಸಂಪಾದಕ ಬಳಗದವರ ಜತೆ ಚರ್ಚಿಸುತ್ತಿದ್ದರು. ಬಜೆಟ್‌ ಇರಲಿ, ಸಾಹಿತ್ಯ ಸಮ್ಮೇಳನ ಇರಲಿ, ಕಮ್ಮಟಗಳಿರಲಿ, ಸಮಷ್ಟಿ ಹಿತದ್ದಿರಲಿ – ಯಾವುದೇ ವಿಷಯದ ಕುರಿತು ಅವರದ್ದು ನಿಖರ, ನಿಶಿತ, ಜನಪರ ನಿಲುವು. ಅವರ ಸಾಧನೆ, ಚಿಂತನೆ ಪತ್ರಿಕಾ ಸಂಸ್ಥೆ ಸಮೂಹಕ್ಕೆ, ಅವರ ಪ್ರಕಟನೆಗಳಲ್ಲಿ ದುಡಿದವರಿಗೆ, ದುಡಿಯುತ್ತಿರುವವರಿಗೆ, ಮುಂದೆ ಸಂಸ್ಥೆಗೆ ಸೇರ್ಪಡೆಗೊಳ್ಳುವವರಿಗೆ ಮಾರ್ಗದರ್ಶಿ.

ಉದಯವಾಣಿ ಪ್ರಾರಂಭದಿಂದ 12 ವರ್ಷಗಳ ಪರ್ಯಂತ ಕೇಂದ್ರ ವಾರ್ತಾ ಇಲಾಖೆ ಏರ್ಪಡಿಸುತ್ತಿದ್ದ ಮುದ್ರಣ, ವಿನ್ಯಾಸ, ಸುದ್ದಿ ಪ್ರಾಧಾನ್ಯ ಕುರಿತ ಸ್ಪರ್ಧೆಯಲ್ಲಿ ಪ್ರಥಮ ಇಲ್ಲವೇ ದ್ವಿತೀಯ ಸ್ಥಾನಿಯಾಗಿರುತ್ತಿತ್ತು. ಅದಕ್ಕೆ ಕಾರಣ ಮೋಹನದಾಸ ಪೈ ಅವರು ಇತರ ಪತ್ರಿಕೆಯ ಇತರ ಅಂಗಗಳ ಜತೆ ಮುದ್ರಣ ಯಂತ್ರಗಳ ಬಗೆಗೂ ವಹಿಸುತ್ತಿದ್ದ ಕಾಳಜಿ. ಅತ್ಯುತ್ತಮ ಯಂತ್ರಗಳನ್ನು ಸತೀಶ್‌ ಪೈ ಅವರ ಜತೆಗೂಡಿ ಹೋಗಿ ಪರಾಮರ್ಶಿಸಿ ತರಿಸುತ್ತಿದ್ದದ್ದು.

ಪತ್ರಿಕೆಯ ಪರಿಭಾಷೆ ಪ್ರಾದೇಶಿಕತೆಯಿಂದ ಮುಕ್ತವಾಗಿ ಸಾರ್ವತ್ರಿಕವಾಗಬೇಕು. ಜನಹಿತದ, ರಾಷ್ಟ್ರ ಹಿತದ ವಿಷಯಗಳನ್ನು ಟಾಂಟಾಂ ಮಾಡದೆಯೆ ಯಾರಿಗೆ ಮುಟ್ಟ ಬೇಕೋ ಅವರಿಗೆ ತಣ್ಣಗೆ ಚುರುಕು ಮುಟ್ಟಿಸಬೇಕು ಎನ್ನುವುದು ಅವರ ಮನೀಷೆಯಾಗಿತ್ತು. ಅವರದನ್ನು ಸಾಧಿಸಿದರು ಕೂಡ ತುರ್ತು ಪರಿಸ್ಥಿತಿ ವೇಳೆ ಸಂಪಾದಕೀಯ ಸ್ಥಳವನ್ನು ಖಾಲಿ ಬಿಟ್ಟು ಪತ್ರಿಕೆ ಮುದ್ರಿಸಿದ್ದು ಒಂದು ಉದಾಹರಣೆ ಮಾತ್ರ. ನೆರೆ ಪ್ರಕೋಪದಂತಹ ಸಂಕಷ್ಟ ಸಮಯದಲ್ಲಿ ನಿಧಿ ಸಂಚಯಿಸಿ ಆಳುವ ಸರಕಾರದ ಪರಿಹಾರ ನಿಧಿಗೆ ಓದುಗರ ಪರವಾಗಿ ಅರ್ಪಿಸಿದ್ದು ಪತ್ರಿಕೆಯ ಮಾನವೀಯ ನಡೆಗಳಲ್ಲೊಂದು.

-ಎನ್‌. ಗುರುರಾಜ್‌,
ವಿಶ್ರಾಂತ ಸಂಪಾದಕರು

 

Advertisement

Udayavani is now on Telegram. Click here to join our channel and stay updated with the latest news.

Next