Advertisement

ಈಜುಕೊಳದಲ್ಲಿ ಸ್ವಿಮ್ಮಿಂಗ್‌ ಮಾಡಿದರೆ ಚರ್ಮರೋಗ! ಈಜುಗಾರರ ಆಕ್ರೋಶ

10:27 PM Mar 18, 2022 | Team Udayavani |

ಗದಗ: ಉತ್ತರ ಕರ್ನಾಟಕಕ್ಕೆ ಮಾದರಿ ಎಂಬಂತೆ ಅವಳಿ ನಗರದಲ್ಲಿ ನಿರ್ಮಾಣಗೊಂಡಿದ್ದ ಈಜುಗೊಳಗಳು ದುರ್ವಾಸನೆ ಬೀರುತ್ತಿವೆ. ಒಂದು ವರ್ಷದಿಂದ ನೀರು ಶುದ್ಧೀಕರಣ ಯಂತ್ರಗಳು ಕೆಟ್ಟು ನಿಂತಿದ್ದು, ಈಜುಗೊಳದ ನೀರು ಸಂಪೂರ್ಣ ಪಾಚಿಗಟ್ಟಿದೆ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಈಜುಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

ಹಿಂದಿನ ಕಾಂಗ್ರೆಸ್‌ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರಾಗಿದ್ದ ಎಚ್‌.ಕೆ.ಪಾಟೀಲ ಅವರ ಆಸಕ್ತಿಯಿಂದಾಗಿ ನಗರಸಭೆ ಎಸ್‌ಎಫ್‌ಸಿ ಅನುದಾನದಲ್ಲಿ ಬೆಟಗೇರಿಯ ಜಮಾದಾರ ನಗರ, ರಾಜೀವಗಾಂಧಿ ನಗರ ಹಾಗೂ ಜಿಲ್ಲಾ ಕ್ರೀಡಾಂಗಣ ಸೇರಿದಂತೆ 3 ಸುಸಜ್ಜಿತ ಈಜುಗೊಳಗಳನ್ನು ನಿರ್ಮಿಸಲಾಗಿತ್ತು.

ಈ ಪೈಕಿ ಕ್ರೀಡಾಂಗಣದ ಆವರಣದಲ್ಲಿರುವ ಈಜುಗೊಳಕ್ಕೆ ಮಾತ್ರ ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಉಚಿತ, ಸಾರ್ವಜನಿಕರಿಗೆ ಮಾಸಿಕ 1000 ರೂ. ಪಾಸ್‌ ಆಧಾರಿತ ಶುಲ್ಕ ನಿಗದಿಪಡಿಲಾಗಿತ್ತು. ಹೀಗಾಗಿ ವೈದ್ಯರು, ಎಂಜಿನಿಯರ್, ವಿವಿಧ ಇಲಾಖೆಗಳ ಅಧಿಕಾರಿಗಳು, ವ್ಯಾಪಾರಸ್ಥರು ಸೇರಿದಂತೆ ಸೀಮಿತ ವರ್ಗದ 140ಕ್ಕಿಂತ ಹೆಚ್ಚಿನ ಜನರ ಪಾಸ್‌ ಪಡೆಯುತ್ತಿದ್ದರು. ಅದರಿಂದ ಉತ್ತಮ ಆದಾಯವೂ ಬರುತ್ತಿತ್ತು.

ಇನ್ನೆರಡು ಈಜುಗೊಳಗಳಿಗೆ ಪ್ರತಿ ಗಂಟೆಗೆ 40 ರೂ. ನಿಗದಿಪಡಿಸಲಾಗಿತ್ತು. ಅದರಿಂದ ಆದಾಯ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಆದರೆ, ಈ ಎರಡೂ ಈಜುಕೊಳಕ್ಕಿಂತ ನೀರು ನಿರ್ವಹಣೆ, ಸ್ವತ್ಛತೆಗೆ ಕ್ರೀಡಾಂಗಣದ ಕೊಳ ಖ್ಯಾತಿ ಪಡೆದಿತ್ತು. ಆದರೆ, ಸದ್ಯ ಅವುಗಳ ದುರಸ್ಥಿತಿ ನೋಡಿದವರು ಮೂಗು ಮುರಿಯುವಂತಾಗಿದೆ.

ದುರಸ್ತಿಯಾಗದ ಫಿಲ್ಟರ್ಸ್‌: ಕೋವಿಡ್‌ ನಿಯಮಾವಳಿ ಪ್ರಕಾರ ಕಳೆದ ಎರಡು ವರ್ಷಗಳಿಂದೀಚೆಗೆ ಇಲ್ಲಿನ ಈಜುಗೊಳಗಳ ಬಾಗಿಲು ಮುಚ್ಚಿದ್ದೇ ಹೆಚ್ಚು. ಈ ವೇಳೆ
ನೀರು ಶುದ್ಧೀಕರಣ ಯಂತ್ರಗಳು ಸರಿಯಾಗಿ ನಿರ್ವಹಣೆಯಿಲ್ಲದೇ ಮೂರೂ ಈಜುಗೊಳಗಳ ನೀರು ಪಾಚಿಗಟ್ಟಿವೆ. ಅದರಲ್ಲೂ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಗೊಳದ ನಾಲ್ಕು ಶುದ್ಧೀಕರಣದ ಯಂತ್ರಗಳು ಹಲವು ತಿಂಗಳುಗಳ ಕಾಲ ಚಾಲನೆಯಾಗಿಲ್ಲ. ನಿಂತಲ್ಲೇ ಯಂತ್ರಗಳು ಕೆಟ್ಟು ನಿಂತಿವೆ ಎನ್ನಲಾಗಿದೆ.

Advertisement

ಚರ್ಮ ರೋಗ ಉಲ್ಬಣ: ಈ ನಡುವೆ ಜಿಲ್ಲಾಧಿಕಾರಿಗಳು ಕೋವಿಡ್‌ ನಿಯಮಾವಳಿಯಲ್ಲಿ ಸಡಿಲಿಕೆ ಮಾಡಿದ್ದರಿಂದ ಈಜುಗೊಳಗಳಿಗೆ ಅನುಮತಿಸಿದ ಪರಿಣಾಮ ಪುನಾರಂಭಗೊಂಡು ಎರಡ್ಮೂರು ತಿಂಗಳು ಕಳೆದಿವೆ. ಆದರೂ, ನೀರು ಶುದ್ಧೀಕರಿಸಿಲ್ಲ. ಪರಿಣಾಮ ಆಕಾಶ ನೀಲಿ ಬಣ್ಣದಿಂದ ಕೂಡಿರುತ್ತಿದ್ದ ನೀರು ದಿನದಿಂದ ದಿನಕ್ಕೆ ಹಸಿರು ಬಣ್ಣಕ್ಕೆ ತಿರುಗಿತು. ನೀರು ಪಾಚಿ ಹಿಡಿದಂತಾಗಿದ್ದು, ನರ್ಜ್‌ ನಂತಹ ಕೀಟಗಳು ಉತ್ಪತ್ತಿಯಾಗಿ ದುರ್ವಾಸನೆ ಬೀರುತ್ತಿದೆ. ಕೊಳದಲ್ಲಿ ಈಜಿದವರಿಗೆ ಮೈ ತುರಿಕೆಯಾಗಿ, ಚರ್ಮರೋಗಗಳಿಗೆ ಕಾರಣವಾಗುತ್ತಿದೆ ಎಂಬುದು ಈಜುಗಾರರಾದ ಬಿ.ಆರ್‌.ಹೊಸಮನಿ, ಬಿ.ಯು. ಅಂಗಡಿ, ಎಂ.ಟಿ.ಫತ್ತೇಪುರ, ಪುಟ್ಟರಾಜ ಹಿರೇಮಠ ಮತ್ತಿತರರ ದೂರು.

ಕ್ರೀಡಾಂಗಣದ ಈಜು ಕೊಳದ ನೀರಿನ ಸಮಸ್ಯೆ ಬಗ್ಗೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಜರುಗಿಸುತ್ತಿಲ್ಲ. ಒಮ್ಮೆ ಬೆಂಗಳೂರಿನಿಂದ ಮತ್ತೂಮ್ಮೆ ಹುಬ್ಬಳ್ಳಿಯಿಂದ ತಂತ್ರಜ್ಞರನ್ನು ಕರೆಸಿ ಸರಿಪಡಿಸುತ್ತೇವೆ ಎನ್ನುತ್ತಲೇ ತಿಂಗಳು ಕಳೆಯಿತು ಎಂಬುದು ಈಜುಗಾರರ ಬೇಸರದ ನುಡಿ.

ಇನ್ನೆರಡು ಕೊಳ ಕೇಳುವವರೇ ಇಲ
ಬೆಟಗೇರಿಯ ಜಾಮದಾರ ನಗರ ಮತ್ತು ರಾಜೀವಗಾಂಧಿ ನಗರ ಈಜುಗೋಳಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಕೆಲ ತಿಗಳಿಂದ ಈಜುಗೊಳಗಳು ಸ್ವಚ್ಛತೆಯನ್ನೇ ಕಂಡಿಲ್ಲ. ಬೇಸಿಗೆ ದಿನಗಳು ಆರಂಭಗೊಂಡು ಬಿಸಿಲಿನ ತಾಪ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಖಾಸಗಿ ಸ್ವಿಮ್ಮಿಂಗ್‌ ಫೂಲ್‌ನತ್ತ ಮುಖ ಮಾಡುವಂತಾಗಿದ್ದು ವಿಪರ್ಯಾಸ.

ಅವಳಿ ನಗರದಲ್ಲಿ ಸ್ವಿಮ್ಮಿಂಗ್‌ ಫೂಲ್‌ಗ‌ಳ ನಿರ್ಮಾಣಕ್ಕಾಗಿ ಹತ್ತಾರು ಕೋಟಿ ರೂ. ಖರ್ಚು ಮಾಡಿದ್ದಾರೆ. ಆದರೆ, ಅವು ನಿರ್ವಹಣೆ ಇಲ್ಲದೇ ಸಾರ್ವಜನಿಕರ ಬಳಕೆಗೆ ಯೋಗ್ಯವಿಲ್ಲದ ಸ್ಥಿತಿಗೆ ಬಂದಿವೆ. ದೊಡ್ಡ ಮೊತ್ತದ ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಿದ್ದು ಯಾವ ಪುರುಷಾರ್ಥಕ್ಕಾಗಿ ಎಂಬುದು ಪ್ರಶ್ನೆಯಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಎಲ್ಲ ಈಜುಗೊಳಗಳನ್ನು ದುರಸ್ತಿಪಡಿಸಿ ಬೇಸಿಗೆಯಲ್ಲಿ ಅನುಕೂಲ ಮಾಡಿಕೊಡಬೇಕು.
ಶೇಖಣ್ಣ ಕವಳಿಕಾಯಿ, ಅಶೋಕ ಬರಗುಂಡಿ, ಸಾಮಾಜಿಕ ಚಿಂತಕರು

ಕ್ರೀಡಾಂಗಣದ ಈಜುಗೊಳವನ್ನು ಕ್ರೀಡಾ ಇಲಾಖೆಯಿಂದ ನಿರ್ವಹಣೆ ಮಾಡುತ್ತಿದ್ದು, ಸಿಬ್ಬಂದಿಯ ಮೂರು ತಿಂಗಳ ಬಾಕಿ ವೇತನ ನೀಡಿದ್ದೇವೆ. ಹದಗೆಟ್ಟಿದ್ದ ನಾಲ್ಕೂ ಪ್ಯೂರಿಫೈರ್‌ಗಳನ್ನು ದುರಸ್ತಿಗೊಳಿಸಲಾಗಿದೆ. ಫೂಲ್‌ ಸ್ವಚ್ಛಗೊಳಿಸಲು ಹುಬ್ಬಳ್ಳಿ ಮೂಲದವರಿಗೆ ಗುತ್ತಿಗೆ ನೀಡಿದ್ದೇವೆ. ನಾಲ್ಕೈದು ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ.
ಡಾ|ಶರಣು ಗೋಗೇರಿ, ಪ್ರಭಾರಿ ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ

ಕೋವಿಡ್‌ ಕಾರಣದಿಂದ ನಗರಸಭೆ ವ್ಯಾಪ್ತಿಯ ಈಜುಗೊಳಗಳು ಬಂದ್‌ ಆಗಿದ್ದವು. ಹೀಗಾಗಿ ನಿರ್ವಹಣೆಯಾಗಿಲ್ಲ. ಮುಂದಿನ ಒಂದು ವಾರದಲ್ಲಿ ಮೂರೂ ಈಜುಗೊಳಗಳ ಪುನಾರಂಭಕ್ಕೆ ಕ್ರಮ ವಹಿಸುತ್ತೇವೆ.
ಉಷಾ ಮಹೇಶ ದಾಸರ,
ನಗರಸಭೆ ಅಧ್ಯಕ್ಷ

ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next