Advertisement
ಯಾರ ಪಾದ ಸ್ವರ್ಶದಿಂದ ಮೂರು ಸಾಗರಗಳೂ ಪುನೀತರಾಗಿವೆಯೋ ಅಂತಹ ಭಾರತ ಭೂಷಿರ ಮಂದಿರ ಸುಂದರಿಯಾಗಿ ವಿರಾಜಮಾನಳಾಗಿರುವ ಕನ್ಯಾಕುಮಾರಿಯ ಎದುರು ನಿಂತ ಸಂತರೊಬ್ಬರ ಹೃದಯಾಳದಿಂದ ಬಂದ ಪ್ರಾರ್ಥನೆ ಇದು!
Related Articles
Advertisement
ವೀರ ಸನ್ಯಾಸಿಯಾಗಿ ವಿದೇಶಕ್ಕೆ ತೆರಳಿ ವಿಶ್ವವಿಜೇತರಾಗಿ ಸ್ವದೇಶಕ್ಕೆ ಮರಳಿದ ಸ್ವಾಮಿ ವಿವೇಕಾನಂದರು ಮದರಾಸಿನಲ್ಲಿ ದೇಶಬಾಂಧವರನ್ನುದ್ದೇಶಿಸಿ ಮಾಡಿದ ನನ್ನ ಸಮರ ನೀತಿ ಎಂಬ ಭಾಷಣದಲ್ಲಿ ಮೇಲಿನ ವ್ಯಾಖ್ಯಾನಕ್ಕೆ ಸ್ವಲ್ಪ ವಿವರವಾದ ವಿಶ್ಲೇಷಣೆ ದೊರಕುತ್ತದೆ. ಈ ಭಾಷಣದಲ್ಲಿ ದೇಶಪ್ರೇಮದ ಬಗ್ಗೆ ತಮಗಿರುವ ಆದರ್ಶದ ಬಗ್ಗೆ ವಿವರಿಸುತ್ತಾ ಸ್ವಾಮೀಜಿ ದೇಶಭಕ್ತರು ಹಾಗೂ ಸಮಾಜ ಸುಧಾರಕರು ಮೊದಲು ಹೃದವಂತರಾಗಬೇಕು ಎನ್ನುತ್ತಾರೆ.
ದೇಶದ ಜನರು ಹಸಿವಿನಿಂದ ನರಳುತ್ತಿರುವುದನ್ನು ಕಂಡು, ಅಜ್ಞಾನದ ಅಂಧಕಾರದಲ್ಲಿ ಒದ್ದಾಡುತ್ತಿರುವುದನ್ನು ನೋಡಿ ನಮ್ಮ ಹೃದಯ ಮಿಡಿಯುತ್ತಿದೆಯೇ? ಈ ಬಗೆಗಿನ ಚಿಂತೆ ನಮ್ಮನ್ನು ಸದಾ ಕಾಡುತ್ತಿದೆಯೇ? ನಿದ್ರೆಗೆಡುವಂತೆ ಮಾಡಿದೆಯೇ? ಹಾಗಿದ್ದರೆ ಅದು ದೇಶಪ್ರೇಮದ ಮೊದಲ ಮೆಟ್ಟಿಲು! ಮೊಟ್ಟಮೊದಲ ಮೆಟ್ಟಿಲು! ಎಂದು ಸ್ವಾಮೀಜಿ ಹೇಳುತ್ತಾರೆ. ಅಂಥ ಹೃದಯವೇ ಅಂದು ಕನ್ಯಾಕುಮಾರೇಶ್ವರಿ ಎದುರು ನಿಂತು ತನ್ನ ದೇಶಬಾಂಧವರ ಅಭ್ಯುದಯಕ್ಕಾಗಿ ಬೇಡಿದ್ದು. ಒಮ್ಮೆಯಂತೂ ಸ್ವಾಮೀಜಿ ಹಾಗೂ ಅವರ ಸೋದರ ಸನ್ಯಾಸಿಗಳ ಮಧ್ಯೆ ಸೇವೆ ಹಾಗೂ ಸಾûಾತ್ಕಾರ ವಿಷಯ ಕುರಿತಾದ ವಾಗ್ವಾದ ತೀವ್ರ ಸ್ವರೂಪ ಪಡೆದಲಾಗಲಂತೂ ತನ್ನ ದೇಶಬಾಂಧವರ ಉದ್ಧಾರವಾಗುವುದಾದರೆ ತಾನು ಸಾವಿರ ಸಲಬೇಕಾದರೂ ನರಕಕ್ಕೆ ಸಂತೋಷದಿಂದಲೇ ಹೋಗುತ್ತೇನೆಂದು ಸ್ವಾಮೀಜಿ ತೀಕ್ಷ್ಣವಾಗಿ ಹೇಳಿದ್ದರು.
ಹಾಗಾದರೆ ಕೇವಲ ಹೃದಯವಂತರಾಗಿ ದೇಶದ ದುಃಸ್ಥಿತಿ ಕಂಡು ಮರುಕಪಟ್ಟರೆ ಸಾಕೇನು? ಹುಂ, ಸ್ವಾಮೀಜಿ ಮುಂದುವರೆದು ತಿಳಿಸುತ್ತಾರೆ, ಕೇವಲ ಹೃದಯವಂತರಾಗಿದ್ದು ಕೊರಗುವುದರಲ್ಲೇ ಕಾಲಹರಣ ಮಾಡಿದರೆ ಪ್ರಯೋಜನವಿಲ್ಲ. ಏನಾದರು ಉಪಯುಕ್ತವಾದ ಅನುಷ್ಠಾನ ಯೋಗ್ಯ ಮಾರ್ಗ ಹುಡುಕಬೇಕು. ಕೇವಲ ನಿಂದನೆಯಲ್ಲಿ ತೊಡಗದೆ ದೇಶದ ಉನ್ನತಿಗಾಗಿ ಕೆಲಸ ಮಾಡಬೇಕೆಂದರು. ಅದರಂತೆಯೇ ವ್ಯಕ್ತಿಯನ್ನು ಲೌಕಿಕ, ಬೌದ್ಧಿಕ ಹಾಗೂ ಅಧ್ಯಾತ್ಮಿಕವಾಗಿ ಉನ್ನತಕ್ಕೇರಿಸುವ ವಿದ್ಯೆಯನ್ನು ಪ್ರತಿಯೊಬ್ಬರಿಗೂ ನೀಡಿ ಭಾರತವನ್ನು ಮೇಲೇತ್ತಬೇಕೆಂದರಿತ ಸ್ವಾಮೀಜಿ. ಇದಕ್ಕಾಗಿ ಸೇವೆ ಹಾಗೂ ತ್ಯಾಗವೆಂಬ ಆದರ್ಶಗಳಿರುವ ಸನ್ಯಾಸಿಗಳ ಸಂಘ ಕಟ್ಟಿದರು. ಕಾರ್ಯ ಬೆಳೆಸಿದರು. ಹೀಗೆ ನುಡಿದಂತೆ ನಡೆದರು; ನಡೆದು ಹಾದಿ ತೋರಿದರು.
ಹೃದಯವಂತಿಕೆ ಹಾಗೂ ಭಾವನೆಯನ್ನು ಕಾರ್ಯಗತಗೊಳಿಸುವ ದಕ್ಷತೆ ಇವೆರಡರೊಟ್ಟಿಗೆ ಪರ್ವತದಂತಹ ಅಡ್ಡಿ ಆತಂಕಗಳು ಎದುರಾದರೂ ಎದುರಿಸಿ ನಿಲ್ಲಬಲ್ಲ ಬಹುಮುಖ್ಯವಾದ ಇಚ್ಛಾಶಕ್ತಿಯೂ ಬೇಕಾಗುತ್ತದೆ ಎನ್ನುತ್ತಾರೆ ಸ್ವಾಮೀಜಿ. ಸಮಸ್ತ ಜಗತ್ತೇ ಕತ್ತಿ ಹಿರಿದು ಎದುರಾಗಿ ನಿಂತರೂ ಹೆಸರು ಕೀರ್ತಿ ಅಳಿದು ಹೋದರೂ ಸಂಪತ್ತೆಲ್ಲವೂ ಸೂರೆ ಹೋದರೂ ಹಿಡಿದ ಕೆಲಸವನ್ನು ಬಿಡದೆ ಸಾಧಿಸುವ ಛಲವಿರಬೇಕೆಂದು ಸ್ವಾಮೀಜಿ ಹೇಳುತ್ತಾರೆ. ಹೀಗಿದ್ದಲ್ಲಿ ಆತನ ವಿಚಾರಧಾರೆಗಳು ಶಿಲೆಯ ಗೋಡೆಗಳನ್ನೂ ತೂರಿ ಜಗತ್ತಿನಾದ್ಯಂತ ತರಂಗಗಳಾಗಿ ಹರಡಿ ನೂರಾರು ವರ್ಷಗಳವರೆಗೂ ಸ್ಪಂದಿಸುತ್ತವೆ. ಮತ್ತೂಬ್ಬರ ಮೆದುಳು ಹೊಕ್ಕು ಕಾರ್ಯ ಮಾಡಿಸುತ್ತದೆ ಎನ್ನುತ್ತಾರೆ ಸ್ವಾಮೀಜಿ.
ಹೀಗೆ ಈ ಹೃದಯವಂತಿಕೆ, ಕಾರ್ಯ ದಕ್ಷತೆ ಹಾಗೂ ಪ್ರಖರ ಇಚ್ಛಾಶಕ್ತಿಯ ಮೂರ್ತರೂಪವಾಗಿ ಬದುಕಿದ ಸ್ವಾಮೀಜಿಯ ವಿಚಾರಧಾರೆಗಳು ಅವರ ದೇಹತ್ಯಾಗದ ಅನಂತರವೂ ಸಾವಿರಾರು ಹೃದಯಗಳನ್ನು ಹೊಕ್ಕಿ ಅನೇಕ ಸ್ವಾತಂತ್ರ್ಯ ಸೇನಾನಿಗಳನ್ನು, ಸಮಾಜ ಸುಧಾರಕರನ್ನು, ಅಧ್ಯಾತ್ಮ ಪುರುಷರನ್ನು ಆಯಾ ಕಾಲದಲ್ಲಿ ಸೃಷ್ಟಿಸುತ್ತಿದೆ. ಸೇವಾಕಾರ್ಯಗಳ ಸಾಗರವನ್ನೇ ಎಬ್ಬಿಸಿದೆ. ಕನ್ಯಾಕುಮಾರಿ ಎದುರಿನ ಅಂದಿನ ಪ್ರಾರ್ಥನೆ ಇಂದಿಗೂ ಫಲ ಕೊಡುತ್ತಿದೆ. ಸ್ವಾಮೀಜಿಯ ದೇಶಭಕ್ತಿಯ ದೇಶಪ್ರೇಮದ ಪ್ರಖರತೆ ಅಂತಹುದು. ಹಾಗಾಗಿಯೆ ಆತ ಬರೀ ಸಂತನಲ್ಲ ಪ್ರಖರ ದೇಶಭಕ್ತ ಸಂತ.
ಚೈತನ್ಯ ಕುಡಿನಲ್ಲಿ