Advertisement

ಕೋಟಿ ಕೋಟಿ ಯುವಜನರ ಹೃದಯವಾಣಿ

01:15 AM Jan 12, 2021 | Team Udayavani |

ಸ್ವಾಮಿ ವಿವೇಕಾನಂದರನ್ನು ಆತ್ಮೀಯರು ಸಲುಗೆಯಿಂದ ಒಮ್ಮೆ ಪ್ರಶ್ನಿಸಿದ್ದರು. ಸ್ವಾಮೀಜಿ, ಅತ್ಯಂತ ಪ್ರತಿಭಾನ್ವಿತರಾದ ತಾವೇಕೆ ರಾಜಕೀಯ ದಲ್ಲಿ ಧುಮುಕಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಬಾರದು? ಕ್ಷಣಕಾಲ ಮೌನವಾಗಿ ಬಳಿಕ ಸ್ವಾಮೀಜಿ, “ಪಕ್ವವಾಗುವಾಗ ಹಣ್ಣು ತನ್ನಿಂದ ತಾನೇ ಮರ ತನ್ನ ಜತೆ ಇರಿಸಿಕೊಳ್ಳದೆ ಉದುರಿಸಿ ಬಿಡುತ್ತದೆ. ಅದೇ ರೀತಿ ಪರಕೀಯ ಆಡಳಿತದ ಪರಿಸಮಾಪ್ತಿಗೆ ಕಾಲ ತನ್ನಿಂದ ತಾನೇ ಒದಗಿ ಬರುತ್ತದೆ. ತಾನು ಸ್ವಾತಂತ್ರ್ಯೋತ್ತರ ಭಾರತದಲ್ಲಿನ ಪುನರುತ್ಥಾನದ ಅಡಿಗಲ್ಲು ಹಾಕಲು ಉಧ್ಯುಕ್ತನಾಗಿದ್ದೇನೆ’ ಎಂದಿದ್ದರು. ಹೀಗೆ ಆಧ್ಯಾತ್ಮಿಕ ತಳಹದಿಯಲ್ಲಿ, ಯುವಶಕ್ತಿ ಆಧಾರಿತ ಭವ್ಯ ಭಾರತದ ಭದ್ರ ಬುನಾದಿಯ ಚಿಂತನೆ ಅವರ ಮನದಲ್ಲಿ ಸುಳಿಯುತ್ತಿತ್ತು. “ಸಶಕ್ತ ನೂರು ಮಂದಿ ಯುವಜನ‌ರನ್ನು ನೀಡಿ. ಭಾರತದ ಚಿತ್ರಣವನ್ನೇ ಬದಲಿಸಬಲ್ಲ’ ಎಂಬ ಅದಮ್ಯ ಉತ್ಸಾಹದಲ್ಲಿ ಅವರ ಮನಸ್ಸಿತ್ತು.

Advertisement

“ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು’ ಇದು ಕವಿ ಗೋಪಾಲಕೃಷ್ಣ ಅಡಿಗರ ಚಿತ್ತ ಲಹರಿ. ಇದೇ ವೈಚಾರಿಕ ಚಿಂತನೆ ಸ್ವಾಮಿ ವಿವೇಕಾನಂದರ ಬದುಕಿನುದ್ದಕ್ಕೂ ಅವರ ಮಾತು ಮತ್ತು ಬರಹಗಳಲ್ಲಿ ಮಿಂಚುತ್ತಿತ್ತು. “ಇದೀಗ ಉತ್ತಮ ನಾಗು, ಉಪಕಾರಿಯಾಗು’ ಎಂಬ ಅದ್ಭುತ ಅವಳಿ ಶಬ್ಧಗಳು ಸ್ಪುರಿಸುವ ಭಾವ ತರಂಗಗಳು, ಕೊಲಂಬೋದಿಂದ ಆಲ್ಮೋದ ವರೆಗಿನ ಅವರ ಭಾಷಣಗಳಲ್ಲಿ ಪುಟಿಯುತ್ತಿತ್ತು. ಪಶ್ಚಿಮದಲ್ಲೂ ಭಾರತದ ಆಧ್ಯಾತ್ಮಿಕ ಚಿಂತನೆಯ ಔನ್ನತ್ಯವನ್ನು, ಈ ನೆಲದ ಗುರುತ್ವವನ್ನು ಪಸರಿ ಸುವ ಧೀಮಂತಿಕೆಗೆ ಇಡೀ ವಿಶ್ವವೇ ಬೆರಗು ನೋಟದಿಂದ ಸ್ವಾಗತಿಸಿತು; ಗೌರವಿಸಿತು!

ಚಿಕಾಗೋದಿಂದ 1893 ನ.2ರಂದು ತನ್ನ ಪ್ರೀತಿಯ ಅಳಸಿಂಗ್‌ ಪೆರುಮಾಳ್‌ ಅವರಿಗೆ ಬರೆದ ಪತ್ರದ ಕೊನೆಯ ಸಾಲು ಹೀಗಿದೆ “ಬಡವರೆಂದು ನೀವು ಯೋಚಿಸಬೇಡಿ. ಹಣವಲ್ಲ ಶಕ್ತಿ; ಒಳ್ಳೆಯತನ, ಪಾವಿತ್ರ್ಯಇವು ಶಕ್ತಿ. ಜಗದ ಎಲ್ಲ ಕಡೆಯಲ್ಲೂ ಇರುವುದು ಹೀಗೆ ಎಂಬುದನ್ನು ನೋಡಿ. ಇದು ಮತ, ಧರ್ಮ, ದೇಶ, ಭಾಷೆಯ ಗಡಿ ದಾಟಿ, ವಿಶ್ವ ಧರ್ಮದ ಮಹಾನ್‌ ಚಿಂತನೆಯ ಆಧಾರ. ಶಿಕ್ಷಣವೆಂದರೆ ಮೊದಲೇ ಮನುಷ್ಯನಲ್ಲಿ ಇರುವ ಪರಿಪೂರ್ಣತೆಯನ್ನು ಪ್ರಕಾಶ ಪಡಿಸು ವುದು; ಧರ್ಮವೆಂದರೆ ಆಗಲೇ ಮಾನವನಲ್ಲಿ ಅಡಗಿರುವ ಬ್ರಹ್ಮತ್ವವನ್ನು ಪ್ರಕಾಶ ಪಡಿಸು ವುದು..’ ಹೀಗೆ ವಿವೇಕಾನಂದರು ತಮ್ಮ ಮನದ ಮಾತನ್ನು ಪತ್ರದಲ್ಲಿ ಪ್ರಚುರ ಪಡಿಸಿದ್ದರು.

ನಮ್ಮಲ್ಲಿನ “ಆತ್ಮನಿರ್ಭರ ಭಾರತ’ ಕಟ್ಟುವ ಸುಯೋಗ್ಯ ಭಾರತದ ಯುವಜನರ ಮೇಲಿದೆ.  ವ್ಯಕ್ತಿತ್ವ ನಿರ್ಮಾಣದ ಪಥದಲ್ಲಿ ಮಹಾನ್‌ ಶಿಲ್ಪಿ ಎನಿಸುವವರು ಸ್ವಾಮಿ ವಿವೇಕಾನಂದರು.

ವಿಶ್ವ ಪರ್ಯಟನ ಮುಗಿಸಿ ಮರಳಿ ಭಾರತಕ್ಕೆ ಕಾಲಿರಿಸಿದಾಗ ತಲೆಬಾಗಿ ನಮಿಸಿ, ಈ ಪವಿತ್ರ ನೆಲ ಚುಂಬಿಸಿದ ಅದಮ್ಯ ರಾಷ್ಟ್ರಭಕ್ತಿ ಇವರದು. ದೀನದಲಿತರ, ನೊಂದವರ ಬಾಳಿಗೆ ಸಾಂತ್ವನದ ತಂಪೆರೆಯುವುದೇ ನಿಜವಾದ ದೇಶ ಸೇವೆ ಎಂದು ಎಚ್ಚರಿಸಿದ ಮಹಾನ್‌ ಚೇತನ  ವಿವೇಕಾ ನಂದರು. ಮಹಾನ್‌ ಕಾರ್ಯಗಳು ಮಹಾ ತ್ಯಾಗದಿಂದ ಸಿದ್ಧಿಸುವುದು. ಕೆಚ್ಚೆದೆ, ಉದಾರ ಮನಸ್ಸಿನ, ಶೀಲವಂತರಾದ ನನ್ನ ಹುಡುಗರೇ; ನಮ್ಮ ಆದರ್ಶವನ್ನು ಕಾರ್ಯರೂಪಕ್ಕೆ ತನ್ನಿ’ ಸೊಂಟ ಕಟ್ಟಿ ಸಿದ್ಧರಾಗಿ ಹೆಗಲು ಕೊಡಿ, ದೇವರು ನಿಮ್ಮೆಲ್ಲರನ್ನೂ ಆಶೀರ್ವದಿಸಲಿ, ಏಳಿ! ಎದ್ದೇಳಿ! ದೀರ್ಘ‌ ನಿದ್ರೆ ಕಳೆಯುತ್ತಿದೆ. ಉದಯ ಸನ್ನಿಹಿತವಾಗುತ್ತಿದೆ;  ಅಲೆ ಮೇಲೆದ್ದಿದೆ. ಅದರ ರಭಸವನು ತಡೆಯಲು ಯಾರಿಗೂ ಶಕ್ತಿ ಸಾಲದು. ಯಾವುದಕ್ಕೂ ಅಂಜಬೇಡಿ, ಅಂಜಿ ಕೆಯೇ ಮಹಾಪಾಪ. ಇದು ಪತ್ರ ಮುಖೇನ 1894 ಮೇ 28ರಂದು ಎಚ್ಚರಿಸಿದ ಸ್ವಾಮಿ ವಿವೇಕಾನಂದರ ಆಂಗ್ಲಭಾಷಾ ತರ್ಜುಮೆ.

Advertisement

ಸ್ವಾಮಿ ವಿವೇಕಾನಂದರು ಬದುಕಿದುದು ಕೇವಲ 39 ವರ್ಷಗಳು! ಆದರೆ ಶ್ರೀ ರಾಮಕೃಷ್ಣ ಪರಮಹಂಸರ  ಪದತಲದಲ್ಲಿ ಎಲ್ಲವನ್ನೂ ಸಮರ್ಪಿಸಿ, ಸರ್ವಶಕ್ತಿಯನ್ನೂ ಆರ್ಜಿಸಿಕೊಂಡ ಮಹಾನ್‌ ವಿಭೂತಿ ಪುರುಷ. ಗಂಗೆಯ ತಟದಲ್ಲಿ, ಬೇಲೂರು ಮಠದಲ್ಲಿ, ಕನ್ಯಾಕುಮಾರಿ ಯಲ್ಲಿ- ಹೀಗೆ ಅವರು ನಡೆದಾಡಿದ ಪಾವನ ತಾಣಗಳಲ್ಲಿ ಸಂಚರಿಸಿದಾಗ ಆಗುವ ಕಂಪನದ ಸ್ವಾನುಭವ ಶಬ್ದಗಳಿಗೆ ನಿಲುಕದಂತಹದು.

ಇದೀಗ ನಮ್ಮ ಮುಂದೆ  ಭೌತಿಕವಾಗಿ ಸ್ವಾಮೀ ವಿವೇಕಾನಂದರು ಇಲ್ಲ. ಆದರೆ ಕೋಟಿ ಕೋಟಿ ಯುವಜನರ ಹೃದಯ ವೀಣೆಯನ್ನು ಮೀಟಬಲ್ಲ ಇವರ ಅದ್ಭುತ, ನಿರರ್ಗಳ, ಧೀಮಂತವಾಣಿ ಹಿಂದೂ ಮಹಾಸಾಗರದ ಅಲೆಗಳಂತೆ ಸದಾ ಪುಟಿಯುತ್ತಲೇ ಇದೆ. ಆ ಮಹಾನ್‌  ಕಾರ್ಯದ ಆಹ್ವಾನವನ್ನು ಕೇಳುವ ಕಿವಿ ಅಂತೆಯೇ ಸಶಕ್ತಿಯ ಪೂರಕ ಯುವ ಸ್ಪಂದನಕ್ಕೆ ಅವರ ಜನ್ಮದಿನ ಪ್ರೇರಕವಾಗಲಿ.

187 ಪೌಂಡು ಮಾತ್ರ! :

“ಮೈ ಬ್ರದರ್ ಆ್ಯಂಡ್‌ ಸಿಸ್ಟರ್ ಆಫ್ ಅಮೆರಿಕ’ ಎಂದು ಚಿಕಾಗೋದಲ್ಲಿ 1893, ಸೆ.11ರಂದು ಸ್ವಾಮಿ ವಿವೇಕಾನಂದರು ಹೇಳಿದ ಮಾತು ಜಗತ್‌ ಪ್ರಸಿದ್ದ.  ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿಳಿಯುವಾಗ ಕೇವಲ 187 ಪೌಂಡು ಹಣ ಮಾತ್ರ ಹಣ ಹೊಂದಿದ್ದರು. ಅದರಲ್ಲೂ ಶಿಕಾಗೊದಂತಹ ದುಬಾರಿ ನಗರದಲ್ಲಿ ಅದು ನೀರಿನಂತೆ ಕರಗುತ್ತಾ ಹೋಯಿತು. ಇದ್ದುದನ್ನು ಹೊಂದಿಸಿಕೊಳ್ಳಲು ಅವರು ಸಮೀಪದ ಬೋಸ್ಟನ್‌ಗೆ ಕಡಿಮೆ ಖರ್ಚು ಎಂಬ ಕಾರಣಕ್ಕೆ ತೆರಳಿದರು.

ಅಲ್ಲಿ ಯಾವುದೋ ಮುದುಕಿಯ ಮನೆಯಲ್ಲಿ ಆಶ್ರಯ ಪಡೆದರು. ಅಂತಹ ಸಂದರ್ಭದಲ್ಲಿ ಅವರು ಅಳಸಿಂಗ ಪೆರುಮಾಳ್‌ಗೆ ಪತ್ರ ಬರೆದು, ಇಲ್ಲಿ ಹಣವಿಲ್ಲದೇ ಹಸಿವಿನಿಂದ ಒದ್ದಾಡುತ್ತಿದ್ದೇನೆ. ಇಷ್ಟು ದೂರ ಬಂದು ಸುಮ್ಮನೆ ಹಿಂತಿರುಗಲು ನಾನು ಸಿದ್ಧವಿಲ್ಲ. ಇನ್ನೊಂದು ಆರು ತಿಂಗಳು ಇರಲು ಸಾಕಾಗುವಷ್ಟು ಹಣ ಕಳುಹಿಸು. ನಾನಿಲ್ಲಿ ಹಸಿವು, ಚಳಿಯಿಂದ ಸತ್ತರೆ ನನ್ನ ಕೆಲಸವನ್ನು ನೀನು ಮುಂದುವರೆಸು ಎಂದಿದ್ದರು ಆ ಸಂತ.  ನೂರಾರು ಸಂಕಟಗಳನ್ನು ಗೆದ್ದು ಸಾಧಕ ವಿವೇಕಾನಂದರಾದರು.

 

-  ಡಾ| ಪಿ.ಅನಂತಕೃಷ್ಣ ಭಟ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next