Advertisement

118 ಜನವಸತಿ ಪ್ರದೇಶಗಳಲ್ಲಿ ಕರಡು ಕಾರ್ಡ್‌ ವಿತರಣೆ ಆರಂಭ

07:59 PM Oct 12, 2021 | Team Udayavani |

ಮಹಾನಗರ: ಗ್ರಾಮಾಂತರ ಪ್ರದೇಶಗಳಲ್ಲಿ ಡ್ರೋಣ್‌ ಬಳಸಿ ಆಸ್ತಿಗಳ ಅಳತೆ ಮಾಡಿ ಹಕ್ಕು ದಾಖಲೆಗಳನ್ನು ಸಿದ್ಧಪಡಿಸುವ ಸ್ವಮಿತ್ವ ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 118 ಜನವಸತಿ ಪ್ರದೇಶಗಳಲ್ಲಿ ಕರಡು ಕಾರ್ಡ್‌ ವಿತರಣೆ ಆರಂಭಗೊಂಡಿದೆ.

Advertisement

ಜಿಲ್ಲೆಯಲ್ಲಿ ಈವರೆಗೆ 82 ಗ್ರಾಮಗಳ 237 ಜನವಸತಿ (ಹ್ಯಾಮ್ಲೆಟ್‌-ಮಜರೆ) ಪ್ರದೇಶಗಳ ಆಳತೆ ಕಾರ್ಯ ಪೂರ್ಣಗೊಂಡಿದ್ದು, ಇದರಲ್ಲಿ 10,748 ಆಸ್ತಿಗಳನ್ನು ಗುರುತಿಸಲಾಗಿದೆ. 118 ಜನವಸತಿ ಪ್ರದೇಶಗಳಲ್ಲಿ ಸ್ವಾಮಿತ್ವಕ್ಕೆ ಸಂಬಂಧಿಸಿದಂತೆ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು ಆಸ್ತಿ ಮಾಲಕರಿಗೆ ಕರಡು ಕಾರ್ಡ್‌ ವಿತರಿಸಲಾಗುತ್ತಿದೆ. ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿಯವರ ನೇತೃತ್ವದಲ್ಲಿ ರಚಿಸಿರುವ ಸಮಿತಿಯ ಮಾರ್ಗಸೂಚಿಗಳು (ಎಸ್‌ಒಪಿ) ಬಂದ ಬಳಿಕ ಶಾಶ್ವತ ಕಾರ್ಡ್‌ ವಿತರಣೆ ನಡೆಯಲಿದೆ.

ದ.ಕ. ಜಿಲ್ಲೆಯಲ್ಲಿ ಒಟ್ಟು 427 ಗ್ರಾಮಗಳಿದ್ದು, ಇದರಲ್ಲಿ ಸುಮಾರು 67 ಗ್ರಾಮಗಳು ಮಹಾನಗರ ಪಾಲಿಕೆ, ನಗರ ಸಭೆ, ನ.ಪಂ., ಪುರಸಭೆಗಳಡಿಯಲ್ಲಿ ಬರುತ್ತಿದ್ದು, ಇವುಗಳು ಸ್ವಾಮಿತ್ವದಡಿಯಲ್ಲಿ ಬರುವುದಿಲ್ಲ. ಉಳಿದಂತೆ ಸುಮಾರು 360 ಗ್ರಾಮಗಳಲ್ಲಿ ಸ್ವಾಮಿತ್ವ ಯೋಜನೆಗೆ ಒಳಪಡುತ್ತದೆ. ಇದರಲ್ಲಿ ಕೃಷಿ ಭೂಮಿ, ಸಿಂಗಲ್‌ ಮನೆಗಳು ಒಳಪಡುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10ಕ್ಕಿಂತ ಹೆಚ್ಚಿನ ಮನೆಗಳಿರುವ ಪ್ರದೇಶಗಳನ್ನು ಒಂದು ಜನವಸತಿ ಪ್ರದೇಶ (ಮಜರೆ) ಎಂದು ಪರಿಗಣಿಸಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
ಪ್ರಸ್ತುತ ಮಳೆಗಾಲದ ಕಾರಣದಿಂದ ಸ್ಥಗಿತಗೊಂಡಿದ್ದ ಡ್ರೋನ್‌ ಸರ್ವೇ ನವೆಂಬರ್‌ ತಿಂಗಳಿನಿಂದ ಪ್ರಾರಂಭವಾಗಲಿದೆ. ಡ್ರೋನ್‌ ಸರ್ವೇಗೆ ಮಳೆ, ಮೋಡ ಇರಬಾರದು. ವಾತಾವರಣದ ಉಷ್ಟಾಂಶ 27 ಸೆಂಟಿಗ್ರೇಡ್‌ಗಿಂತ ಜಾಸ್ತಿ ಇರಬೇಕು.

ಇದನ್ನೂ ಓದಿ:ಆಯುಧ ಪೂಜೆಯಂದು ಸರ್ಕಾರಿ ಬಸ್ಸುಗಳ  ಪೂಜೆಗೆ ಸಚಿವ ಶ್ರೀರಾಮುಲು ಸೂಚನೆ

ಸ್ವಮಿತ್ವ ಯೋಜನೆಯಲ್ಲಿ ರಾಜ್ಯದಲ್ಲಿ ಆರಂಭಿಕ ಹಂತದಲ್ಲಿ ದ.ಕ. ಸಹಿತ 16 ಜಿಲ್ಲೆಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ 90 ಗ್ರಾಮಗಳನ್ನು ಆಯ್ಕೆ ಮಾಡಿ 2019ರ ಸೆಪ್ಟಂಬರ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಕಂದಾಯ ಇಲಾಖೆಯ ಭೂಮಾಪಕರು, ಗ್ರಾ.ಪಂ. ಅಧಿಕಾರಿಗಳು ಜಂಟಿಯಾಗಿ ಗ್ರಾಮಗಳ ಜನವಸತಿ ಪ್ರದೇಶದ ಪ್ರತೀ ಆಸ್ತಿಯನ್ನು ಸಂಬಂಧಿತ ಭೂಮಾಲಕರ ಸಮ್ಮುಖದಲ್ಲಿ ಪರಿಶೀಲಿಸಿ ಗುರುತು ಮಾಡುತ್ತಾರೆ. ಡ್ರೋನ್‌ ಸರ್ವೇಯಲ್ಲಿ ಸೆರೆ ಹಿಡಿದ ಚಿತ್ರಗಳನ್ನು ಸಂಸ್ಕರಿಸಿ ಗುರುತಿಸಲಾದ ಆಸ್ತಿಗಳ ನಕಾಶೆ ತಯಾರಿಸಲಾಗುತ್ತದೆ. ಗ್ರಾ.ಪಂ.ಗಳಲ್ಲಿ ನಮೂದಾಗಿರುವ ದಾಖಲಾತಿಗಳ ಜತೆ ಹೊಂದಾಣಿಕೆ ಮಾಡಿ ಪರಿಶೀಲನೆ ನಡೆಸಲಾಗುತ್ತದೆ. ಬಳಿಕ ಗ್ರಾಮಸ್ಥರ ಜತೆ ಸಭೆ ನಡೆಸಿ ತಕರಾರುಗಳಿದ್ದರೆ ಇತ್ಯರ್ಥ ಪಡಿಸಿ ಸರಕಾರದ ದಾಖಲಾತಿಗೆ ರವಾನಿಸ ಲಾಗುತ್ತದೆ. ಆಗ ಹೆಸರು, ಇನ್ನಿತರ ತಿದ್ದುಪಡಿಗೂ ಅವಕಾಶವಿರುತ್ತದೆ. ಅಂತಿಮ ವಾಗಿ ಆಸ್ತಿ ಮಾಲಕರಿಗೆ ಪ್ರಾಪರ್ಟಿ ಕಾರ್ಡ್‌ ನೀಡಲಾಗುತ್ತದೆ.

Advertisement

ಸರ್ವೇ ನಂಬರ್‌ ಸಮಸ್ಯೆ
ರಾಜ್ಯದಲ್ಲಿ ಈ ಹಿಂದೆ ಮದ್ರಾಸ್‌ ಪ್ರಾಂತಕ್ಕೆ ಒಳಪಟ್ಟಿದ್ದª ದ.ಕ., ಉಡುಪಿ ಜಿಲ್ಲೆಗಳಲ್ಲಿ ಭೂದಾಖಲೆಗಳು ಸರ್ವೇ ನಂಬರ್‌ ಸ್ವರೂಪದಲ್ಲಿದೆ. ಉಳಿದ ಜಿಲ್ಲೆಗಳಲ್ಲಿ ಗ್ರಾಮ ಠಾಣಾ ಸ್ವರೂಪದಲ್ಲಿದೆ. ಆದುದರಿಂದ ದ.ಕ. ಜಿಲ್ಲೆಯಲ್ಲಿ ಸ್ವಾಮಿತ್ವ ಯೋಜನೆಯಡಿ ಭೂದಾಖಲೆಗಳು° ಸರಕಾರದಿಂದ ರಚಿಸಲಾಗಿರುವ ಸಮಿತಿ ಮಾರ್ಗ ಸೂಚಿಯನ್ವಯ ಸಿದ್ಧಗೊಳಿಸಲಾಗುತ್ತದೆ.

2022 ಮಾರ್ಚ್ ಸರ್ವೇಕಾರ್ಯ ಪೂರ್ಣ
ಮುಂದಿನ ವರ್ಷದ ಮಾರ್ಚ್‌ನೊಳಗೆ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಮಾರ್ಕಿಂಗ್‌, ಡ್ರೋನ್‌ ಸರ್ವೇ ಕಾರ್ಯ ಪೂರ್ಣಗೊಳಿಸುವ ಗುರಿ ಇರಿಸಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮಕ್ಕೆ ಓರ್ವರಂತೆ ಸರ್ವೇಯರ್‌ಗಳನ್ನು ನೇಮಿಸಿ ಎಲ್ಲ ಪ್ರಕ್ರಿಯೆಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲಾಗುವುದು. ಪ್ರಸ್ತುತ ಪ್ರಕ್ರಿಯೆ ಪೂರ್ಣಗೊಂಡಿರುವ ಆಸ್ತಿಗಳ ಕರಡು ಪ್ರಾಪರ್ಟಿ ಕಾರ್ಡ್‌ ವಿತರಿಸಲಾಗುತ್ತಿದ್ದು, ಸರಕಾರದ ಎಸ್‌ಒಪಿ ಬಂದ ಬಳಿಕ ಅಂತಿಮ ಕಾರ್ಡ್‌ ನೀಡಲಾಗುವುದು.
-ನಿರಂಜನ್‌, ಭೂಮಾಪನ ಇಲಾಖೆಯ ಉಪ ನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next