Advertisement

ಗೊಂದಲ ನಿವಾರಣೆ ಹೊಣೆ ಸಿದ್ದು ಹೆಗಲಿಗೆ

12:59 AM Jan 09, 2019 | Team Udayavani |

ಬೆಂಗಳೂರು: ನಿಗಮ ಮಂಡಳಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ಉದ್ಭವಿಸಿರುವ ಗೊಂದಲ ನಿವಾರಿಸಲು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಜವಾಬ್ದಾರಿ ನೀಡಿದೆ. ಮಂಗಳವಾರ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ
ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವೆ ನಿಗಮ-ಮಂಡಳಿಗೆ ನೇಮಕ ಮಾಡುವ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ತಿಕ್ಕಾಟ ಆರಂಭವಾಗಿದ್ದು, ಈ ಗೊಂದಲವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರೊಂದಿಗೆ ಚರ್ಚಿಸಿ ಬಗೆ ಹರಿಸುವಂತೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆ.

Advertisement

ಪ್ರಮುಖವಾಗಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸಮ್ಮುಖದಲ್ಲಿ ನಿರ್ಧರಿಸಲಾಗಿದ್ದ ಕಾಂಗ್ರೆಸ್‌ ಶಾಸಕರ ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿಯಲ್ಲಿ ಕೆಲವು ಶಾಸಕರ ಹೆಸರು ತಡೆ ಹಿಡಿಯಲಾಗಿದೆ. ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಅವರ ವಿರೋಧದಿಂದ ಕೆಲವು ನಿಗಮಗಳ ಅಧ್ಯಕ್ಷರ ಹೆಸರು ತಡೆ ಹಿಡಿಯಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದು, ಎರಡೂ ಪಕ್ಷಗಳ ನಾಯಕರು ಬಹಿರಂಗವಾಗಿಯೇ ಮಾತನಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗೊಂದಲದ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗಿ ಕುಮಾರಸ್ವಾಮಿ ಹಾಗೂ ದೇವೇಗೌಡರ ಜತೆ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸುವಂತೆ ಸಿದ್ದರಾಮಯ್ಯ ಅವರಿಗೆ ಹೊಣೆಗಾರಿಕೆ ನೀಡಲಾಯಿತು ಎಂದು ಎಂದು ತಿಳಿದು ಬಂದಿದೆ. ಬಿಡಿಎ, ಬಿಎಂಆರ್‌ಟಿಸಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ಮುಖ್ಯಮಂತ್ರಿಗಳು ಸಹಮತ ವ್ಯಕ್ತಪಡಿಸುವ ವಿಶ್ವಾಸವಿದೆ ಎಂದು ಹೇಳಲಾಗಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಡಾ.ಸುಧಾಕರ್‌ ನೇಮಕ ಕಷ್ಟ ಎಂದು ಹೇಳಲಾಗಿದೆ. ಈ ಬಗ್ಗೆ ಇರುವ ತಾಂತ್ರಿಕ ಅಡ್ಡಿ ಕುರಿತು ಮುಖ್ಯಮಂತ್ರಿಗಳು ಕಾಂಗ್ರೆಸ್‌ ಹೈಕಮಾಂಡ್‌ ಗಮನಕ್ಕೆ ತಂದಿದ್ದರು. ಹೀಗಾಗಿ, ಕೆ.ಸಿ.ವೇಣುಗೋಪಾಲ್‌ ಅವರು ಶಾಸಕ ಸುಧಾಕರ್‌ ಜತೆ ಮಾತನಾಡಿ ಸಮಾಧಾನದಿಂದಿರುವಂತೆ  ಸೂಚಿಸಿದ್ದಾರೆಂದು ತಿಳಿದು ಬಂದಿದೆ.

ಸಿಎಂ ಭೇಟಿಗೆ ಯತ್ನ: ಈ ವಿಚಾರದಲ್ಲಿ ಉಂಟಾಗಿರುವ ಗೊಂದಲ ಸರಿಪಡಿಸಲು ವೇಣುಗೋಪಾಲ್‌ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ನೇರವಾಗಿ ಭೇಟಿ ಮಾಡಿ ಮಾತುಕತೆ ನಡೆಸುವ ಪ್ರಯತ್ನ ನಡೆಸಿದ್ದರು. ಆದರೆ, ಮುಖ್ಯಮಂತ್ರಿಗಳು ಜೆಡಿಎಲ್‌ಪಿ ಸಭೆಯಲ್ಲಿ ನಿರತರಾಗಿದ್ದರಿಂದ ಭೇಟಿ ಸಾಧ್ಯವಾಗದೇ ದೆಹಲಿಗೆ ವಾಪಸ್‌ ತೆರಳಿದರು. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ. ಪಾಟೀಲ್‌ ಪಾಲ್ಗೊಂಡಿದ್ದರು.  

ಕಾಂಗ್ರೆಸ್‌ನಲ್ಲಿ ಮತ್ತೆ ಬಿರುಗಾಳಿ
ಕಲಬುರಗಿ: ಸಮ್ಮಿಶ್ರ ಸರ್ಕಾರದಲ್ಲಿ ಇತ್ತೀಚೆಗೆ ನಡೆದ ಸಂಪುಟ ವಿಸ್ತರಣೆ ಹಾಗೂ ನಂತರ ನಿಗಮ ಮಂಡಳಿ ನೇಮಕ ವಿಚಾರದಲ್ಲಿಯೂ ಅವಿಭಜಿತ ಜಿಲ್ಲೆ ಶಾಸಕರಿಗೆ ನಿರೀಕ್ಷಿತ ನಿಗಮ ಮಂಡಳಿ ಸ್ಥಾನ ದೊರೆಯದಿರುವುದು ಕಾಂಗ್ರೆಸ್‌ನಲ್ಲಿ ಮತ್ತೆ ಅಸಮಾಧಾನಕ್ಕೆ ಎಡೆ ಮಾಡಿಕೊಟ್ಟಿದೆ. ಜೇವರ್ಗಿ ಶಾಸಕ ಡಾ.ಅಜಯಸಿಂಗ್‌ ಅವರಿಗೆ ದೆಹಲಿ ಪ್ರತಿನಿಧಿ ಹಾಗೂ ಯಾದಗಿರಿ ಜಿಲ್ಲೆಯ ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಯೋಜನಾ ಆಯೋಗದ ಉಪಾಧ್ಯಕ್ಷ ಪಟ್ಟ ದೊರೆಯದೆ ಅವಿಭಜಿತ ಕಲಬುರಗಿ ಜಿಲ್ಲೆಯ ಕಾಂಗ್ರೆಸ್‌ ಪಾಳಯದಲ್ಲಿ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತವಾಗಿದೆ.

ಡಿ. 22ರಂದು ಸಂಪುಟ ಪುನಾರಚನೆ ವೇಳೆ ಶಾಸಕ ಡಾ.ಅಜಯಸಿಂಗ್‌ ಅವರಿಗೆ ಸಚಿವ ಸ್ಥಾನ ನಿರೀಕ್ಷಿಸಲಾಗಿತ್ತು. ಕೊನೆ ಘಳಿಗೆಯಲ್ಲಿ ಕೈ ತಪ್ಪಿದ್ದರಿಂದ ಸಂಸದ ಡಾ.ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಡಾ. ಅಜಯಸಿಂಗ್‌ಗೆ ಸರ್ಕಾರದ ದೆಹಲಿ ಪ್ರತಿನಿಧಿ ಹುದ್ದೆ ನೀಡಿ ಸಂಪುಟ ಸ್ಥಾನಮಾನ ನೀಡುವ ಭರವಸೆ ನೀಡಿದ್ದರು. ದರ್ಶನಾಪುರ ಅವರಿಗೆ ಯೋಜನಾ
ಆಯೋಗ ಉಪಾಧ್ಯಕ್ಷರಾಗಿ ನೇಮಿಸುವುದಾಗಿ ತಿಳಿಸಿ ಸಮಾಧಾನಪಡಿಸಿದ್ದರು. ಆದರೆ ಈಗ ಸರ್ಕಾರ ಪ್ರಕಟಿಸಿರುವ ನಿಗಮ ಮಂಡಳಿಗಳ ಪಟ್ಟಿಯಲ್ಲಿ ಶರಣಬಸಪ್ಪ ದರ್ಶನಾಪುರ ಮತ್ತು ಅಜಯಸಿಂಗ್‌ ಅವರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ. ಇದೇ ಕಾರಣದಿಂದ ಪಕ್ಷದ ನಾಯಕರ ವಿರುದ್ಧ ಕಾರ್ಯಕರ್ತರ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಾಗಿದೆ. ನೆರೆಯ ಬೀದರ, ವಿಜಯಪುರ ಜಿಲ್ಲೆಗಳಲ್ಲಿ ಮೂವರು ಸಚಿವರಿದ್ದಾರೆ. ಆದರೆ ರಾಜಕೀಯವಾಗಿ ಕಲಬುರಗಿ ಮತ್ತು ಯಾದಗಿರಿ ಪ್ರಬಲವಾಗಿದ್ದರೂ ಸೂಕ್ತ ಸ್ಥಾನಮಾನ ಸಿಗದೇ ಇರುವುದು ಮುಂದಿನ ದಿನ ಗಳಲ್ಲಿ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.

Advertisement

ಹೈಕಮಾಂಡ್‌ ನಿರ್ದೇಶನದ ಮೇರೆಗೆ ನಿಗಮ ಮಂಡಳಿ ನೇಮಕವಾಗಿದೆ. ಇಂದಲ್ಲ ನಾಳೆ ಸೂಕ್ತ ಸ್ಥಾನಮಾನ ದೊರಕುತ್ತದೆ. ದೆಹಲಿ ವಿಶೇಷ ಪ್ರತಿನಿಧಿ ಕಾರ್ಯಭಾರ ವಹಿಸಿದರೆ ನಿರ್ವಹಿಸುತ್ತೇನೆ. ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧನಾಗಿದ್ದೇನೆ.
 ●ಡಾ.ಅಜಯಸಿಂಗ್‌, ಶಾಸಕ, ಜೇವರ್ಗಿ

ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನವನ್ನು ತಮಗೆ ನೀಡಬೇಕೆಂಬುದು ಹೈಕಮಾಂಡ್‌ ತೀರ್ಮಾನ. ಹೀಗಾಗಿ ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಿಗಮ-ಮಂಡಳಿ ನೇಮಕ ಸಂಬಂಧಪಟ್ಟಂತೆ ಕಾಂಗ್ರೆಸ್‌ -ಜೆಡಿಎಸ್‌ ನಾಯಕರು ವ್ಯತಿರಿಕ್ತ ಹೇಳಿಕೆ ನೀಡುತ್ತಿರುವುದು ಸಮಂಜಸವಲ್ಲ. ಸಮ್ಮಿಶ್ರ ಸರ್ಕಾರವೆಂದ ಮೇಲೆ ಭಿನ್ನಾಭಿಪ್ರಾಯ ಸಹಜ. ಅದನ್ನು ನಾಯಕರೇ ಬಗೆಹರಿಸಿಕೊಳ್ಳಬೇಕು. 
ಶರಣಬಸಪ್ಪಗೌಡ ದರ್ಶನಾಪುರ, ಶಾಸಕ, ಶಹಾಪುರ
 

Advertisement

Udayavani is now on Telegram. Click here to join our channel and stay updated with the latest news.

Next