Advertisement

‘ಹಳೆ ಸ್ಕೂಟರ್‌ನಲ್ಲಿ ದೇಶ ಸುತ್ತಿದ್ದು ಅದ್ಭುತ ಅನುಭವ’

11:32 AM Jul 22, 2018 | Team Udayavani |

ಮಹಾನಗರ: ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕನ್ಯಾಕುಮಾರಿಯಿಂದ ಲೇ ಲಢಾಕ್‌ನ ಕಾಡುಂಗ್ಲದ ವರೆಗೆ ಹಳೆಯ ಲ್ಯಾಂಬ್ರೆಟ್ಟಾ ಮತ್ತು ಲ್ಯಾಂಬಿ ಸ್ಕೂಟರ್‌ನಲ್ಲಿ ಪ್ರಯಾಣ ಬೆಳೆಸಿದ ಮಂಗಳೂರಿನ ಹೊಸಬೆಟ್ಟು ನಿವಾಸಿ ಗಿರೀಶ್‌ ವೆಂಕಟರಮಣ ಮತ್ತು ಶೇಡಿಗುರಿಯ ಸೂರಜ್‌ ಹೆನ್ರಿ ಅವರು ಇದೀಗ ಮಂಗಳೂರಿಗೆ ಆಗಮಿಸಿದ್ದಾರೆ.

Advertisement

ನಗರದ ಪ್ರಸ್‌ಕ್ಲಬ್‌ನಲ್ಲಿ ಮಂಗಳೂರು ಕ್ಲಾಸಿಕ್‌ ಸ್ಕೂಟರ್‌ ಕ್ಲಬ್‌ ವತಿಯಿಂದ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಪ್ರಯಾಣದ ಅನುಭವವನ್ನು ಹಂಚಿಕೊಂಡ ಗಿರೀಶ್‌ ವೆಂಕಟರಮಣ ಅವರು, ಹಳೆ ಸ್ಕೂಟರ್‌ನಲ್ಲಿ ದೇಶ ಸುತ್ತಿದ್ದು ಅದ್ಭುತ ಅನುಭವ. ಮಂಗಳೂರಿನಿಂದ ಕನ್ಯಾಕುಮಾರಿಯ ವರೆಗೆ ಸ್ಕೂಟರ್‌ ಜತೆ ರೈಲಿನಲ್ಲಿ ತೆರಳಿ ಅಲ್ಲಿಂದ ಜೂ. 28ರಂದು ಸ್ಕೂಟರ್‌ ಸವಾರಿ ಆರಂಭಿಸಿದೆವು. ಮಧುರೈ ಮೂಲಕ ಬೆಂಗಳೂರಿಗೆ ಜೂ. 30ರಂದು ತಲುಪಿದ್ದು, ಇಲ್ಲಿಂದ ಜು. 1ಕ್ಕೆ ಬೆಳಗ್ಗೆ ಹೊರಟು ಬಳ್ಳಾರಿ, ಹೈದರಾಬಾದ್‌, ನಾಗಪುರ, ದಿಲ್ಲಿ, ಚಂಡೀಗಢ, ಪಠಾಣ್‌ ಕೋಟ್‌, ಕಾರ್ಗಿಲ್‌, ಜಮ್ಮು- ಕಾಶ್ಮೀರ ಮೂಲಕ ಲೇ ಲಢಾಕ್‌ನ ಕಾಡುಂಗ್ಲಕ್ಕೆ ಜು. 17ಕ್ಕೆ ನಮ್ಮ ಯಾತ್ರೆ ಸಮಾಪನಗೊಂಡಿದೆ ಎಂದರು.

ಯಾತ್ರೆಯಲ್ಲಿ ಒಳ್ಳೆಯ ಅನುಭವ ನಮಗಾಗಿದೆ. ಸ್ಕೂಟರ್‌ನಲ್ಲಿ ಸವಾರಿ ಮಾಡುವುದು ಸುಲಭವಲ್ಲ. ಆದರೂ ಒಂದು ಬಾರಿಯೂ ಅಪಘಾತವಾಗಲಿ, ಸ್ಕೂಟರ್‌ ಕೆಟ್ಟು ಹೋಗುವುದಾಗಲಿ ಆಗಲಿಲ್ಲ. ಒಟ್ಟಾರೆ 4,672 ಕಿ.ಮೀ. ಪ್ರಯಾಣ ಮಾಡಿದ್ದು, ಲಢಾಕ್‌ನ ಸಮುದ್ರ ಮಟ್ಟದಿಂದ 18,380 ಅಡಿ ಎತ್ತರದ ದುರ್ಗಮ ರಸ್ತೆಯಲ್ಲಿ ಸಾಗಿರುವುದು ವಿಶೇಷ ಎಂದರು. ಇದೇ ವೇಳೆ ಮತ್ತೊಬ್ಬ ಬೈಕ್‌ ಸವಾರ ಸೂರಜ್‌ ಹೆನ್ರಿ, ಮಿಥುನ್‌ ದೇವಾಡಿಗ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next