Advertisement

ಪಾಕ್‌ಗೆ ಸ್ಪಷ್ಟ ಸಂದೇಶ

12:30 AM Feb 27, 2019 | Team Udayavani |

ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಡಿ.ಎಸ್‌ ಹೂಡಾ, ಪಾಕ್‌ ವಿರುದ್ಧದ ವಾಯುಪಡೆಯ ಕಾರ್ಯಾಚರಣೆಯ ವಿಷಯದಲ್ಲಿ ಮೋದಿ ಸರ್ಕಾರವನ್ನು ಅಭಿನಂದಿಸಿದ್ದಾರೆ. ಇತ್ತೀಚೆಗಷ್ಟೇ ಹೂಡಾ ಅವರು ಕಾಂಗ್ರೆಸ್‌ನ ರಾಷ್ಟ್ರೀಯ ಭದ್ರತಾ ಕಾರ್ಯಪಡೆಯ ನೇತೃತ್ವ ವಹಿಸಿಕೊಂಡಿದ್ದರು. ಹೀಗಾಗಿ, ಈಗಿನ ಕಾರ್ಯಾಚರಣೆಯ ವಿಷಯದಲ್ಲಿ ಅವರ ಅಭಿಪ್ರಾಯ ಏನಿರಬಹುದು ಎನ್ನುವ ಕುತೂಹಲ ಅನೇಕರಲ್ಲಿತ್ತು. 2016 ಸರ್ಜಿಕಲ್‌ ದಾಳಿಯ ನೇತೃತ್ವ ವಹಿಸಿದ್ದ ಹೂಡಾ ಅವರು ಈಗಿನ ಕಾರ್ಯಾಚರಣೆಯನ್ನೂ “ಅದ್ಭುತ’ ಎಂದು ಬಣ್ಣಿಸಿದ್ದಾರೆ…

Advertisement

ಪಾಕಿಸ್ತಾನದಲ್ಲಿ ಉಗ್ರ ನೆಲೆಗಳ ಮೇಲೆ ಭಾರತದ ವಾಯುಪಡೆ ನಡೆಸಿದ ದಾಳಿಯ ಬಗ್ಗೆ ಏನನ್ನುತ್ತೀರಿ? 
ಇದು ನಿಜಕ್ಕೂ ಅದ್ಭುತ ಕಾರ್ಯಾಚರಣೆ. ಈ ನಿರ್ಧಾರ ಕೈಗೊಂಡ ಭಾರತ ಸರ್ಕಾರಕ್ಕೆ ಮತ್ತು ವಾಯುದಾಳಿಯನ್ನು ಅದ್ಭುತವಾಗಿ ಪ್ಲ್ರಾನ್‌ ಮಾಡಿ ಅನುಷ್ಠಾನಕ್ಕೆ ತಂದ ವಾಯುಪಡೆಗೆ ಅಭಿನಂದನೆಗಳು. ಈ ಕಾರ್ಯಾಚರಣೆ ಭಾರತೀಯ ವಾಯುಪಡೆಯ ವೃತ್ತಿಪರತೆ ಮತ್ತು ಅದರ ಸಾಮರ್ಥ್ಯಕ್ಕೆ ಕನ್ನಡಿ. 

ಪಾಕಿಸ್ತಾನವೀಗ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿರಬಹುದೇ? 
ಪಾಕಿಸ್ತಾನ ಏನೂ ಮಾಡದೇ ಸುಮ್ಮನಿರುತ್ತದೆ ಎಂದು ನಾವು ಭಾವಿಸಬಾರದು. ಹಾಗೆ ಯೋಚಿಸುವುದು ವೃತ್ತಿಪರತೆಯಾಗದು. ಆದರೆ ಆ ದೇಶದಿಂದ ದಾಳಿಯಾಗುವ ಸಾಧ್ಯತೆಯನ್ನು ಊಹಿಸಿ ರಕ್ಷಣಾ ಇಲಾಖೆಯೂ ಸನ್ನದ್ಧವಾಗಿರುತ್ತದೆ. ಒಂದು ವೇಳೆ ಪಾಕಿಸ್ತಾನ ದಾಳಿ ಮಾಡಿದರೆ ಮತ್ತಷ್ಟು ತೀವ್ರವಾಗಿ ಅದಕ್ಕೆ ಉತ್ತರಿಸಲಿದೆ ಭಾರತ. ನಮ್ಮ ನೌಕಾಪಡೆ, ಭೂಸೇನೆ ಮತ್ತು ವಾಯುಪಡೆ ಸರ್ವಸನ್ನದ್ಧವಾಗಿವೆ. 

 ಬಾಲ್‌ಕೋಟ್‌ನಲ್ಲಿ ಕಳೆದ ಎರಡು ದಶಕಗಳಿಂದ ಈ ಕ್ಯಾಂಪ್‌ ಸಕ್ರಿಯವಾಗಿತ್ತು  ಎನ್ನಲಾಗುತ್ತದೆ. ಹಾಗಿದ್ದರೆ, ಹಿಂದೆಯೂ ಭಾರತ ಈ ರೀತಿಯ ಕಾರ್ಯಾಚರಣೆ ನಡೆಸಬಹುದಿತ್ತಲ್ಲವೇ? 
ನಿಜ, ನೀವು ಹೇಳಿದಂತೆ ಈ ಉಗ್ರರ ಕ್ಯಾಂಪ್‌ಗ್ಳೆಲ್ಲ ಅಜಮಾಸು 20 ವರ್ಷದಿಂದ ನಡೆಯುತ್ತಿವೆ. ಈ ಕ್ಯಾಂಪ್‌ಗ್ಳು ಎಷ್ಟು ಒಳಗಿವೆಯೆಂದರೆ ಅವುಗಳ ಮೇಲೆ ದಾಳಿ ಮಾಡಲು ಏರ್‌ಫೋರ್ಸ್‌ಗಷ್ಟೇ ಸಾಧ್ಯವಿತ್ತು. ಹೀಗಾಗಿ ವಾಯುಪಡೆಯನ್ನು ಬಳಸಿಕೊಂಡಿದ್ದು ಉತ್ತಮ ನಿರ್ಧಾರ. ನೋಡಿ, ಬಾಲಕೋಟ್‌ ಪಾಕ್‌ ಆಕ್ರಮಿತ ಕಾಶ್ಮೀರದಲ್ಲೇನೂ ಇಲ್ಲ, ಅದು ಇರುವುದು ಪಾಕಿಸ್ತಾನದಲ್ಲಿ. ಹೀಗಾಗಿ ಪಾಕಿಸ್ತಾನದ ವಾಯು ನೆಲೆಯನ್ನು ದಾಟಿ, ಉಗ್ರರ ಕ್ಯಾಂಪ್‌ ಅನ್ನು ಛಿದ್ರಗೊಳಿಸುವುದು ಚಿಕ್ಕ ವಿಷಯವಲ್ಲ. ಇದೊಂದು ರೀತಿಯಲ್ಲಿ ಪಾಕಿಸ್ತಾನಕ್ಕೆ ಭಾರತ ಕಳುಹಿಸಿರುವ ಸ್ಪಷ್ಟ ಸಂದೇಶ-ನೀವು ನಿಮ್ಮ ಚಟುವಟಿಕೆಯನ್ನು ಮುಂದುವರಿಸಿದರೆ, ಗ, ನಿಮ್ಮ ದೇಶದೊಳಕ್ಕೇ ನುಗ್ಗಿ ಉಗ್ರರ ಕ್ಯಾಂಪ್‌ಗ್ಳನ್ನು ಹೊಡೆದುರುಳಿಸುತ್ತೇವೆ  ಎಂಬ ಬಲಿಷ್ಟ ಸಂದೇಶವನ್ನು ಭಾರತ ಕಳುಹಿಸಿದಂತಾಗಿದೆ.

ಪಾಕ್‌ನಲ್ಲಿ ಕೇವಲ ಜೈಶ್‌ ಅಷ್ಟೇ ಅಲ್ಲದೇ, ಲಷ್ಕರ್‌, ಹಿಜ್ಬುಲ್‌ ಮುಜಾಹಿದ್ದೀನ್‌ ಸೇರಿದಂತೆ ಇನ್ನೂ ಅಸಂಖ್ಯಾತ ಉಗ್ರಸಂಘಟನೆಗಳ ಕ್ಯಾಂಪ್‌ಗ್ಳೂ ಇವೆ. ಹಾಗಿದ್ದರೆ ಅವನ್ನೂ ನಿರ್ನಾಮ ಮಾಡಲಿದೆಯೇ ಭಾರತ? 
ಈಗ ಚೆಂಡು ಪಾಕಿಸ್ತಾನದ ಅಂಗಳದಲ್ಲಿದೆ. ಅದು ಉಗ್ರ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುವುದನ್ನು ನಿಲ್ಲಿಸದಿದ್ದರೆ ಭಾರತ ಪ್ರತಿದಾಳಿ ನಡೆಸಲಿದೆ ಎನ್ನುವುದು ಸ್ಪಷ್ಟ. 

Advertisement

ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದ ಯುದ್ಧ ಸಾಮರ್ಥ್ಯ, ಶಸ್ತ್ರಾಸ್ತ್ರಗಳು, ಯುದ್ದೋಪಕರಣಗಳ ಸ್ಥಿತಿ ಹೇಗಿದೆ? 
ನೋಡಿ ಭಾರತೀಯ ವಾಯುಪಡೆ, ನೌಕಾದಳ ಮತ್ತು ಸೇನೆಯ ಸಾಮರ್ಥ್ಯ, ಶಸ್ತ್ರಾಸ್ತ್ರಗಳ ಗುಣಮಟ್ಟ  ಪಾಕಿಸ್ತಾನಕ್ಕಿಂತ ಎಷ್ಟೋ ಅಧಿಕವಿದೆ ಮತ್ತು ಉತ್ತಮವಾಗಿದೆ. ಶಸ್ತ್ರಾಸ್ತ್ರಗಳ ವಿಚಾರದಲ್ಲಿ ನಾವು ಅವರಿಗಿಂತ ತುಂಬಾ ಮುಂದಿದ್ದೇವೆ. 

ಹಾಗಿದ್ದರೆ ಸಾಮಾನ್ಯ ಜನರು ಪಾಕಿಸ್ತಾನ ಏನೋ ಮಾಡಬಹುದು ಎಂದು ಹೆದರುವ ಅಗತ್ಯವಿಲ್ಲ  ಎಂದಾಯಿತು.  
ಖಂಡಿತ, ನಾನೂ ಭಾರತೀಯರಿಗೆಲ್ಲ ಇದನ್ನೇ ಹೇಳುತ್ತೇನೆ. ಪಾಕಿಸ್ತಾನ ಏನೋ ಮಾಡಿಬಿಡಬಹುದು ಎಂದು ಕಳವಳಗೊಳ್ಳುವ ಅಗತ್ಯವಿಲ್ಲ. ಪಾಕಿಸ್ತಾನ ಎದುರೊಡ್ಡಬಹುದಾದ ಎಲ್ಲಾ ಸವಾಲುಗಳನ್ನೂ ಎದುರಿಸಲು ಭಾರತೀಯ ಸೇನೆ  ಸನ್ನದ್ಧವಾಗಿದೆ. 

ನೀವು ಪಾಕಿಸ್ತಾನದ ವಿರುದ್ಧದ ಮೊದಲ ಸರ್ಜಿಕಲ್‌ ಸ್ಟ್ರೈಕ್‌ನ ನೇತೃತ್ವ ವಹಿಸಿಕೊಂಡವರು. ಈಗಿನ ವಾಯುಪಡೆಯ ಸಾಧನೆಯು ನಿಮಗೆ ಆ ದಿನದ ನೆನಪು ಮಾಡಿಕೊಟ್ಟಿತೇ? 
ಖಂಡಿತ. ಆಗಲೂ ಕೂಡ ಈಗಿನಂತೆಯೇ ದೇಶದಲ್ಲಿ ಸಂತಸದ ವಾತಾವರಣವಿತ್ತು. 

ಈ ರೀತಿಯ ಕಾರ್ಯಾಚರಣೆಗಳಿಗೆ ರಾಜಕೀಯ ಇಚ್ಛಾಶಕ್ತಿಯೂ ಮುಖ್ಯವೆಂದು ನಿಮಗನಿಸುತ್ತದಾ? 
ಹೌದು, ಕೊನೆಯ ನಿರ್ಧಾರ ರಾಜಕೀಯ ನಾಯಕತ್ವದ್ದೇ ಆಗಿರುತ್ತದೆ. ಹೀಗಾಗಿ, ಈ ವಿಷಯದಲ್ಲಿ  ಎಲ್ಲರನ್ನೂ ಅಭಿನಂದಿಸಲೇಬೇಕು.

Advertisement

Udayavani is now on Telegram. Click here to join our channel and stay updated with the latest news.

Next