Advertisement

ಸುರತ್ಕಲ್‌: ಬಸ್‌ ಬೇ ಸ್ಥಳಾಂತರಕ್ಕೆ ನಿರ್ಧಾರ

12:02 PM May 13, 2022 | Team Udayavani |

ಸುರತ್ಕಲ್‌: ಸುರತ್ಕಲ್‌ ಗೋವಿಂದ ದಾಸ ಬಳಿಯ ಜಂಕ್ಷನ್‌ ಅತೀ ಅಪಾಯಕಾರಿ ಎಂದು ಗುರುತಿಸಲ್ಪಟ್ಟಿದ್ದು, ಇದೀಗ ಜಂಕ್ಷನ್‌ನಿಂದ ಬಸ್‌ ಬೇ ಕೊಂಚ ದೂರಕ್ಕೆ ಸ್ಥಳಾಂತರಿಸುವ ನಿರ್ಧಾರ ಮಾಡಲಾಗಿದೆ.

Advertisement

ಗುರುವಾರ ಟ್ರಾಫಿಕ್‌ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತ ಎಂ.ಎ. ನಟರಾಜ್‌ ಅವರು ಸ್ಥಳ ಪರಿಶೀಲನೆ ನಡೆಸಿ ಕೆಲವೊಂದು ಬದಲಾವಣೆ ಮಾಡುವ ಇಂಗಿತ ವ್ಯಕ್ತಪಡಿಸಿದರು.

ಮೇ 8ರಂದು ಸುರತ್ಕಲ್‌ ಲಯನ್ಸ್‌ ಅಧ್ಯಕ್ಷ ರಮೇಶ್‌ ಕುಮಾರ್‌ ಜಂಕ್ಷನ್‌ ನಲ್ಲಿ ನಡೆದ ಅಪಘಾತವೊಂದರಲ್ಲಿ ಮೃತಪಟ್ಟ ಬಳಿಕ ಭಾರೀ ಜನಾಕ್ರೋಶ ವ್ಯಕ್ತವಾಗಿತ್ತು. ರಸ್ತೆ ದಾಟುವ ಸ್ಥಳದಲ್ಲೇ ಬಸ್‌ ನಿಲುಗಡೆಗೆ ಅವಕಾಶ ನೀಡಿದ ಕುರಿತಾಗಿ ಆಕ್ಷೇಪ ವ್ಯಕ್ತವಾಗಿತ್ತು. ಬಸ್‌ ಬೇನಲ್ಲಿ ಇತರ ವಾಹನಗಳು ಟ್ರಾಫಿಕ್‌ ನಿಯಂತ್ರಣ ಉಲ್ಲಂಘಿಸಿ ಆತೀ ವೇಗವಾಗಿ ಓಡಾಡುತ್ತಿದ್ದು, ಅಪಘಾತಕ್ಕೆ ಕಾರಣವಾಗುತ್ತಿತ್ತು. ಹಲವಾರು ಸಾವು ನೋವುಗಳು ಆಗುತ್ತಿರುವ ಈ ಹಿನ್ನೆಲೆಯಲ್ಲಿ ಬಸ್‌ ನಿಲ್ದಾಣವನ್ನು ಕರ್ಣಾಟಕ ಬ್ಯಾಂಕ್‌ ಸಮೀಪ ಸ್ಥಳಾಂತರಕ್ಕೆ ನಿರ್ಧರಿಸಲಾಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಬಸ್‌ ನಿಲ್ದಾಣದವರೆಗೆ ಬ್ಯಾರಿಕೇಡ್‌ ಅಳವಡಿಸಿ ತಾತ್ಕಾಲಿಕ ಸರ್ವಿಸ್‌ ರಸ್ತೆ ನಿರ್ಮಾಣ, ಪಾದಚಾರಿಗಳಿಗೆ ಅನುಕೂಲ, ಗುಡ್ಡೆಕೊಪ್ಲ ತಿರುವನ್ನು ಅಪಘಾತ ಮುಕ್ತ ವಲಯವನ್ನಾಗಿ ಮಾಡಲು ಶ್ರಮ ವಹಿಸಲಾಯಿತು. ಮಂಗಳೂರು ತಾಲೂಕು ನಾಗರಿಕ ಸಮಿತಿ, ಸುರತ್ಕಲ್‌ ನಾಗರಿಕ ಸಲಹಾ ಸಮಿತಿ ಸದಸ್ಯರು ಜಂಕ್ಷನ್‌ನ ಸಮಸ್ಯೆ ಬಗ್ಗೆ ಎಸಿಪಿ ಅವರಿಗೆ ಮಾಹಿತಿ ನೀಡಿ ಸೂಕ್ತ ವ್ಯವಸ್ಥೆಗೆ ಮನವಿ ಮಾಡಿದರು. ಅಲ್ಲದೆ ಬಸ್‌ ನಿಲ್ದಾಣವನ್ನು ಉಚಿತವಾಗಿ ಮಾಡಿಕೊಡುವ ಬಗ್ಗೆ ಸಮಿತಿ ಭರವಸೆ ನೀಡಿತು.ಇದಕ್ಕೆ ಪೂರಕವಾಗಿ ಎಸಿಪಿ ನಟರಾಜ್‌ ಸ್ಪಂದಿಸಿ ಸೂಕ್ತ ಕ್ರಮದ ಭರವಸೆ ನೀಡಿದರು.

ಮಂಗಳೂರು ತಾಲೂಕು ನಾಗರಿಕ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಪುಷ್ಪರಾಜ್‌ ಕುಡುಂಬೂರು, ಪುಷ್ಪರಾಜ್‌ ಶೆಟ್ಟಿ ಮಧ್ಯ, ಸುರತ್ಕಲ್‌ ನಾಗರಿಕ ಸಲಹಾ ಸಮಿತಿಯ ಸಂಚಾಲಕ ಡಾ| ರಾಜ್‌ಮೋಹನ್‌ ರಾವ್‌, ಪ್ರಧಾನ ಕಾರ್ಯದರ್ಶಿ ಸತೀಶ್‌ ಸದಾನಂದ್‌, ರಾಘವೇಂದ್ರ ಟಿ.ಎನ್., ವೇಣು ಸುರತ್ಕಲ್‌, ಟ್ರಾಫಿಕ್‌ ಇನ್‌ಸ್ಪೆಕ್ಟರ್‌ ಯೋಗೀಶ್‌ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ಟ್ರಾಫಿಕ್‌ ಪೊಲೀಸ್‌ ಸಿಬಂದಿ ವಿರುದ್ಧ ಜನರ ಅಸಮಾಧಾನ

Advertisement

ಸಾವಿರಾರು ವಿದ್ಯಾರ್ಥಿಗಳು, ವಾಹನ ಓಡಾಡುವ ಇಲ್ಲಿನ ಜಂಕ್ಷನ್‌ಗಳಲ್ಲಿ ಕೆಲವೊಂದು ಟ್ರಾಫಿಕ್‌ ಪೊಲೀಸ್‌ ಸಿಬಂದಿ ಕರ್ತವ್ಯದ ವೇಳೆ ಮೊಬೈಲ್‌ನಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಟ್ರಾಫಿಕ್‌ ನಿಯಂತ್ರಿಸುವ ಬದಲು ಫೋಟೋ ತೆಗೆದು ಕೇಸು ದಾಖಲಿಸುವುದರಲ್ಲಿ ಆಸಕ್ತಿ ವಹಿಸುತ್ತಿದ್ದಾರೆ, ಹೊರತು ವಾಹನ ನಿಲ್ಲಿಸಿ ವಯೋವೃದ್ಧರು, ಮಕ್ಕಳು, ಮಹಿಳೆಯರು, ಪಾದಚಾರಿಗಳಿಗೆ ದಾಟಲು ನೆರವು ನೀಡುತ್ತಿಲ್ಲ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next