Advertisement

ಗುಡಿಬಂಡೆ: ಅವನತಿಯ ಅಂಚಿನಲ್ಲಿ ಸುರಸದ್ಮಗಿರಿ ಬೆಟ್ಟ

05:44 PM Nov 28, 2021 | Team Udayavani |

ಗುಡಿಬಂಡೆ: ಪಟ್ಟಣದ ಹೃದಯ ಭಾಗದಲ್ಲಿರುವ ಇತಿಹಾಸ ಪ್ರಸಿದ್ದ, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ಸುರಸದ್ಮಗಿರಿ ಬೆಟ್ಟ ಇಂದು ಸೂಕ್ತ ನಿರ್ವಹಣೆ ಇಲ್ಲದೆ ಅವನತಿಯ ಅಂಚಿಗೆ ಬಂದು ತಲುಪಿದೆ.

Advertisement

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿಎತ್ತರದ ಬೆಟ್ಟಗಳಲ್ಲಿ ನಂದಿ ಬೆಟ್ಟ ನಂತರದ ಸ್ಥಾನ ಸುರಸದ್ಮಗಿರಿ ಬೆಟ್ಟ ಹೊಂದಿದ್ದು, 16ನೇ ಶತಮಾನದಲ್ಲಿ ಪಾಳೆಗಾರನಾದ ಹಾವಳಿ ಬೈರೇಗೌಡ ಈ ಬೆಟ್ಟವನ್ನು ನಿರ್ಮಿಸಿದ್ದು, ಬೆಟ್ಟದಲ್ಲಿ ಭವ್ಯವಾದ ಏಳು ಸುತ್ತಿನ ಕೋಟೆ, ವಿಶಿಷ್ಟ ಕಲಾಕೃತಿಗಳನ್ನು ಹೊಂದಿರುವ ಪ್ರವೇಶ ದ್ವಾರಗಳು, ಸ್ವಾಗತ ಕಮಾನುಗಳು, ಕಾವಲು ಗುಮ್ಮಟಗಳು, ಎತ್ತರದ ಬುರಜುಗಳು, ಕಾವಲು ಕೋಣೆಗಳು, ವಿಶ್ರಾಂತಿ ಗೃಹಗಳು, ಕಾರಾಗೃಹಗಳು, ಹತ್ತಕ್ಕೂ ಹೆಚ್ಚು ನೀರಿನ ಕೊಳಗಳು ನಿರ್ಮಾಣ ಮಾಡಿದ್ದು, ಇದರ ಜೊತೆಗೆ ಶ್ರೀ ಪಾರ್ವತಿ ಮತ್ತು ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯವನ್ನು ಸಹ ನಿರ್ಮಾಣ ಮಾಡಿದ್ದಾನೆ.

ಇಂತಹ ಗತೈಹಾಸಿಕ ಸ್ಮಾರಕಗಳುಳ್ಳ ಕೊಟ್ಟೆ ಗಿಡಗಂಟೆಗಳಿಂದ ಆವರಿಸಿ, ಮಳೆಗಾಳಿಗೆ ಮೈಯೊಡ್ಡಿ ಪ್ರವಾಸಿತಾಳವಾಗಿ ಅಭಿವೃದ್ದಿಯಾಗಬೇಕಾಗಿದ್ದ ಸ್ಮಾರಕ ಇಂದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿ, ಬೆಟ್ಟ ಹತ್ತುವ ಮಾರ್ಗವೆಲ್ಲಾ ಗಿಡಗಂಟೆಗಳಿಂದ ಮಾರ್ಗವೆ ಮುಚ್ಚುಹೋದಂತಾಗಿದೆ.

ಇನ್ನು ಇತ್ತೀಚೆಗೆ ಎಡಬಿಡದೆ ಬೀಳುತ್ತಿರುವ ಮಳೆಯಿಂದಾಗಿ ಕೊಟೆಯ ಎತ್ತರದ ಬುರಜುಗಳು ಒಂದೊಂದಾಗಿ ಬಿದ್ದು ನೆಲಕಚ್ಚುತ್ತಿದ್ದರೆ, ಕೋಟೆ ದ್ವಾರಗಳು ಕುಸಿಯುತ್ತಿವೆ, ಈ ಹಿಂದೆ ಪಟ್ಟಣ ಪಂಚಾಯಿತಿಯಲ್ಲಿ ಲಕ್ಷಾಂತರ ರೂಪಾಯಿಗಳು ಖರ್ಚು ಮಾಡಿ ಬೆಟ್ಟದ ಮೇಲೆ ಹಾಕಿದ್ದ ಹೈಮಾಕ್ಸ್ ವಿದ್ಯುತ್ ದೀಪದ ಕಂಬ ಬಿದ್ದು ಹೋಗಿದ್ದರೆ, ಅದಕ್ಕೆ ಅಳವಡಿಸಿದ್ದ ದೀಪಗಳು ಮಾತ್ರ ಕಳ್ಳಕಾಕರ ಪಾಲಾಗಿದೆ.

Advertisement

ಸುಮಾರು ವರ್ಷಗಳ ಹಿಂದೆ ಅಧಿಕಾರಿಗಳು ತಾಲೂಕಿನ ಇತಿಹಾಸ ಪ್ರಸಿದ್ದ ಸ್ಥಳಗಳನ್ನು, ಸ್ಮಾರಕಗಳನ್ನು ರಕ್ಷಿಸಬೇಕೆಂಬ ಇಚ್ಚೆಯಿಂದ ಹದಿನೈದು ದಿನಕ್ಕೊಮ್ಮೆ ಅಥವಾ ತಿಂಗಳಿಗೆ ಒಂದು ಬಾರಿ ಬೆಟ್ಟದಲ್ಲಿ ಅನವಶ್ಯಕವಾಗಿ ಬೆಳೆದ ಗಿಡ ಗಂಟೆಗಳನ್ನು ಮತ್ತು ಬೆಟ್ಟದ ಮೇಲಿನ ತ್ಯಾಜ್ಯವನ್ನು ತೆರವುಗೊಳಿಸುತ್ತಿದ್ದರು, ಆದರೆ ಈಗಿನ ಪಟ್ಟಣ ಪಂಚಾಯಿತಿ ಮತ್ತು ತಾಲೂಕಿನ ಅಧಿಕಾರಿಗಳು ಮಾತ್ರ ಅತ್ತ ತಲೆ ಹಾಕುವುದೇ ಕಷ್ಟವಾಗಿ ಪರಿಣಮಿಸಿದೆ.

ವಾರಾಂತ್ಯದಲ್ಲಿ ಪ್ರವಾಸಿಗರ ದಂಡು: ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ರಸ್ತೆ ದುರಸ್ತಿಯಾಗಿರುವುದರಿಂದ ಪ್ರವಾಸಿಗರ ವಾಹನಗಳಿಗೆ ನಿರ್ಬಂದ ಇರುವುದರಿಂದ, ಹತ್ತಲು ಕಷ್ಟಸಾದ್ಯವಾದ ಕಾರಣದ, ನಂದಿ ನಂತರದ ಬೆಂಗಳೂರಿನಿಂದ ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದಂತೆ ಇರುವ ಅವುಲಬೆಟ್ಟ, ಅಮಾನಿಬೈರಸಾಗರ, ಸುರಸದ್ಮಗಿರಿ ಬೆಟ್ಟ, ಎಲ್ಲೋಡು ಶ್ರೀ ಲಕ್ಷ್ಮೀಆದಿನಾರಾಯಣಸ್ವಾಮಿ ಬೆಟ್ಟಗಳಿಗೆ ಪ್ರವಾಸಿಗರ ದಂಡು ಹೆಚ್ಚಿನ ರೀತಿಯಲ್ಲಿ ಬರುತ್ತಿದ್ದು, ಆದರೆ ಸುರಸದ್ಮಗಿರಿ ಬೆಟ್ಟ ಮಾತ್ರ ನಿರ್ವಹಣೆಯ ಕೊರತೆಯಿಂದ ಅವನತಿಯ ಅಂಚಿಗೆ ಸಿಲುಕುತ್ತಿದೆ.

ಭರವಸೆಗಳ ಮಹಾಪೂರಾ: ಸುರಸದ್ಮಗಿರಿ ಬೆಟ್ಟದ ಅಭಿವೃದ್ಧಿಗಾಗಿ ಸರ್ಕಾರದಿಂದ ಈ ವರ್ಷ ಇಷ್ಟು ಕೋಟಿ, ಆ ವರ್ಷ ಇಷ್ಟು ಕೋಟಿ ಬಿಡಿಗಡೆಯಾಗಿದೆ, ಇನ್ನೇನು ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿಯಾಗೆ ಬಿಟ್ಟಿತು ಎಂದು ಭರವಸೆಗಳು ಮಾತ್ರ ಸುಮಾರು ದಶಕಗಳಿಂದ ಸಾರ್ವಜನಿಕರು ಕೇಳುತ್ತಿದ್ದಾರೆಯೇ ಹೊರತು, ಕನಿಷ್ಟ ಪಕ್ಷ ಬೆಟ್ಟದ ಮೇಲೆ ಇರುವ ದೇವಾಲಯಕ್ಕೆ ನಿತ್ಯ ಪೂಜೆ ಮಾಡಲು ಪೂಜಾ ಸಾಮಾನು ಕೊಳ್ಳಲು ಸಹ ಹಣ ಬಿಡುಗಡೆಯಾಗಿಲ್ಲ.

ಇತಿಹಾಸ ಪ್ರಸಿದ್ದ ಸುರಸದ್ಮಗಿರಿ ಬೆಟ್ಟ ಕಣ್ಮರೆಯಾಗುವುದಕ್ಕೆ ಮೊದಲೇ ಸ್ಥಳಿಯ ಅಧಿಕಾರಿಗಳಾಗಲಿ ಅಥವಾ ಪ್ರವಾಸೋದ್ಯಮ ಇಲಾಖಾ ಅಧಿಕಾರಿಗಳಾಗಲಿ ಅಥವಾ ಮುಜರಾಯಿ ಇಲಾಖಾ ಅಧಿಕಾರಿಗಳಾಗಲಿ ಎಚ್ಚರಗೊಂಡು ಸ್ಮಾರಕಗಳ ರಕ್ಷಣೆಗೆ ಮುಂದಾಗಬೇಕೆಂದು ಸಾರ್ವಜನಿಕರ ಆಶಯವಾಗಿದೆ.

-ವರದಿ: ನವೀನ್ ಕುಮಾರ್.ಎನ್

Advertisement

Udayavani is now on Telegram. Click here to join our channel and stay updated with the latest news.

Next