Advertisement

ಅಸುರ ಸಂಹಾರಕ ಸುರಾರಿ; ಗೆಲುವಿನ ಹೋರಾಟದಲ್ಲಿ ಹೊಸಬರು

04:33 PM Jan 11, 2023 | Team Udayavani |

“ಸುರಾರಿ’ ಎನ್ನುವ ಟೈಟಲ್‌ ಮೂಲಕ ನವಯುವಕರ ತಂಡವೊಂದು ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರದಲ್ಲಿ ವಿಶಾಲ್‌ ಅಜಯ್‌ ನಿರ್ದೇಶನದ ಜೊತೆಗೆ ನಾಯಕ ನಟನಾಗಿಯೂ ಅಭಿನಯಿಸಿದ್ದಾರೆ. “ಐರಿಷ್‌ ಸ್ಟುಡಿಯೋಸ್‌’ ಬ್ಯಾನರ್‌ನಲ್ಲಿ ಕೆ.ಕೆ ಕೃಷ್ಣ ಬಂಡವಾಳ ಹೂಡಿದ್ದು, ಇತ್ತೀಚಿಗೆ ಚಿತ್ರತಂಡ ತನ್ನ ಚಿತ್ರದ ಟೀಸರ್‌ ಹಾಗೂ ಆಡಿಯೋ ಬಿಡುಗಡೆಗೊಳಿಸಿದೆ.

Advertisement

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಅಜಯ್‌, “ಚಿತ್ರ ಕಥೆ ಮಾಡಿದಾಗ ಮೊದಲು ಬೇರೆ ನಾಯಕನ ಹುಡುಕಾಟದಲ್ಲಿದ್ದೆವು. ಆದರೆ ಯಾರು ಈ ಪಾತ್ರಕ್ಕೆ ಒಪ್ಪಿಗೆ ನೀಡಲಿಲ್ಲ. ಕಾರಣ ಚಿತ್ರಕ್ಕಾಗಿ ತೂಕ ಹೆಚ್ಚಿಸಿ, ಬೊಜ್ಜು ಬರಿಸಿಕೊಳ್ಳಬೇಕಿತ್ತು. ಆ ನಂತರ 100 ದಿನಗಳಲ್ಲಿ ತೂಕ ಇಳಿಸಿ, ಸಿಕ್ಸ್‌ಪ್ಯಾಕ್‌ ಮಾಡಬೇಕಿತ್ತು. ಆದ್ದರಿಂದ ಎಲ್ಲರೂ ನಿರಾಕರಿಸಿದರು. ನಂತರ ನಾನೇ ಚಿತ್ರದ ನಾಯಕನಾದೆ’ ಎಂದರು. ಸುರಾರಿ ಅಂದರೆ ದೇವತೆಗಳ ವೈರಿ, ಅಸುರ ಅನ್ನಬಹುದು. ಈ ಚಿತ್ರದಲ್ಲಿ ಸುರಪಾನವನ್ನು ಸೇವಿಸುವವನು ಸುರಾರಿ ಎಂದು ಹಾಗೂ ಚಿತ್ರದಲ್ಲಿ ಅಸುರತನವಿರುವದ ರಿಂದ ಸುರಾರಿ ಸೂಕ್ತವೆಂದು ಶೀರ್ಷಿಕೆ ಇಟ್ಟಿದ್ದೇವೆ. ನಾಯಕ ತನ್ನೊಳಗಿನ ಅಸುರತನ ಹಾಗೂ ಸಮಾಜದಲ್ಲಿನ ಅಸುರತನದ ವಿರುದ್ಧ ಹೇಗೆ ಹೋರಾಡುತ್ತಾನೆ ಎನ್ನುವುದೇ ಚಿತ್ರದ ಕಥೆ’ ಎಂದು ವಿವರ ನೀಡಿದರು.

ಸಂಗೀತ ನಿರ್ದೇಶಕ ಅನಂತ್‌ ಮಾತನಾಡಿ, “ಚಿತ್ರದಲ್ಲಿ ಆರು ಹಾಡುಗಳಿದ್ದು, ಸನ್ನಿವೇಶಕ್ಕೆ ತಕ್ಕಂತೆ ಹಾಡುಗಳನ್ನು ಮಾಡಿದ್ದೇವೆ. ನಿರ್ದೇಶಕ ಕಂ ನಟ ವಿಶಾಲ್‌ ಅಜಯ್‌ ಚಿತ್ರದಲ್ಲಿ ಬರುವ ಎಲ್ಲಾ ಸಾಹಸ ದೃಶ್ಯಗಳನ್ನು ಯಾವುದೇ ಡ್ನೂಪ್‌ ಇಲ್ಲದೇ ಸ್ವಂತವಾಗಿ ಮಾಡಿದ್ದಾರೆ. ಚಿತ್ರ ನೂತನ ಪ್ರಯೋಗವನ್ನು ಹೊಂದಿದೆ’ ಎಂದರು.

ಗಣೇಶ್‌ ರಾವ್‌, ಮಿಮಿಕ್ರಿ ಗೋಪಿ, ಅರ್ಚನಾ ಸಿಂಗ್‌, ಚಿತ್ರಾಲ್‌ ರಂಗಸ್ವಾಮಿ, ರತನ್ಯಾ, ಓಂ ಪ್ರಕಾಶ್‌ ರಾವ್‌ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ ಸೆನ್ಸಾರ್‌ ಕೂಡಾ ಪಾಸ್‌ ಮಾಡಿದ್ದು, ಫೆಬ್ರವರಿಯಲ್ಲಿ ತೆರೆಗೆ ಬರುವ ಆಲೋಚನೆ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next