ಹೊಸದಿಲ್ಲಿ: “ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಿರುವ ಶೇ. 4 ಮೀಸಲು ವ್ಯವಸ್ಥೆ ರದ್ದು ಮಾಡಿದ್ದನ್ನು ಪ್ರಶ್ನೆ ಮಾಡಿ ಕೋರ್ಟ್ನಲ್ಲಿ ಮೊಕದ್ದಮೆ ಹೂಡಲಾಗಿದೆ. ಈ ಹಂತ ದಲ್ಲಿ ಮುಖಂಡರು ಸಾರ್ವ ಜನಿಕವಾಗಿ ಹೇಳಿಕೆ ನೀಡುವುದು ಎಷ್ಟು ಸರಿ?’- ಹೀಗೆಂದು ಸುಪ್ರೀಂ ಕೋರ್ಟ್ನ ನ್ಯಾ| ಕೆ.ಎಂ. ಜೋಸೆಫ್, ನ್ಯಾ| ಬಿ.ವಿ. ನಾಗರತ್ನಾ ಮತ್ತು ನ್ಯಾ| ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ನ್ಯಾಯ ಪೀಠ ಮಂಗಳ ವಾರ ಕಟುವಾಗಿ ಪ್ರಶ್ನಿಸಿದೆ. ಇದಲ್ಲದೆ ಸರಕಾರಿ ಆದೇಶವನ್ನು ಜಾರಿ ಮಾಡದಂತೆ ನೀಡಿರುವ ಮಧ್ಯಾಂತರ ಆದೇಶವನ್ನು ಜು. 25ರ ವರೆಗೆ ವಿಸ್ತರಿಸುವುದಾಗಿಯೂ ಹೇಳಿದೆ.
ಸರಕಾರದ ತೀರ್ಮಾನಕ್ಕೆ ಆಕ್ಷೇಪ ಮಾಡಿ ಸಲ್ಲಿಸಿದ ಅರ್ಜಿಯ ವಿಚಾರಣೆ ಸಂದರ್ಭ ಹಿರಿಯ ನ್ಯಾಯವಾದಿ ದುಷ್ಯಂತ್ ದವೆ ಅವರು, ಕರ್ನಾಟಕದಲ್ಲಿ ಚುನಾವಣ ಪ್ರಚಾರದ ವೇಳೆ ಕೆಲವು ರಾಜಕೀಯ ಮುಖಂಡರು ಮುಸ್ಲಿಂ ಮೀಸಲು ರದ್ದು ಮಾಡಿರುವ ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡು ಮಾತನಾಡಿದ್ದಾರೆ ಎಂದರು.
ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿ ಇರುವಾಗ ಅದರ ಬಗ್ಗೆ ಮಾತ ನಾಡುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ದವೆ ನ್ಯಾಯ ಪೀಠಕ್ಕೆ ಅರಿಕೆ ಮಾಡಿದರು. ಕರ್ನಾಟಕ ಸರಕಾರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆಗ್ರಹ ಪೂರ್ವಕ ವಾದ ಮಂಡನೆ ಸರಿಯಲ್ಲ ಎಂದರು.
ಧರ್ಮ ಆಧಾರಿತ ಮೀಸಲು ನೀಡುವ ವ್ಯವಸ್ಥೆ ವಿರುದ್ಧ ಎಂಬ ವಿಚಾರ ಮಾತ್ರ ಪ್ರಸ್ತಾವವಾಗಿದೆ. ಕೋರ್ಟ್ ಅಂಗಳಕ್ಕೆ ರಾಜಕೀಯ ತರುತ್ತಿಲ್ಲ ಎಂದು ಸಾಲಿಸಿಟರ್ ಜನರಲ್ ಪ್ರತಿಕ್ರಿಯೆ ನೀಡಿದರು.
Related Articles
ಅದಕ್ಕೆ ಅಚ್ಚರಿ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದ ನ್ಯಾ| ಬಿ.ವಿ. ನಾಗರತ್ನಾ, ಪ್ರಕರಣ ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿ ಇರುವ ವೇಳೆ, ಒಂದು ಹಂತದ ಶಿಸ್ತು ಪಾಲನೆ ಅನಿವಾರ್ಯವಾಗುತ್ತದೆ. ಮುಖಂಡರು ಸಾರ್ವ ಜನಿಕ ವಾಗಿ ಹೇಳಿಕೆ ನೀಡು ವುದು ಸರಿಯೇ’ ಎಂದು ಪ್ರಶ್ನಿಸಿದರು.
ಅದಕ್ಕೆ ಧ್ವನಿಗೂಡಿಸಿದ ನ್ಯಾ| ಕೆ.ಎಂ. ಜೋಸೆಫ್ ಅವರು, ಪಶ್ಚಿಮ ಬಂಗಾಲದಲ್ಲಿ ಮುಖ್ಯಮಂತ್ರಿಯಾಗಿದ್ದವರು 1971ರಲ್ಲಿ ಪಡಿತರ ವಿಚಾರಕ್ಕೆ ಸಂಬಂಧಿಸಿದ ವಿಚಾರ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆ ಯುವ ವೇಳೆ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಗುರಿಯಾಗಿದ್ದರು ಎಂದು ಹೇಳಿದರು.
ಇದೇ ವೇಳೆ, ಕರ್ನಾಟಕ ಸರಕಾರದ ಆದೇಶ ಜಾರಿ ಮಾಡದಂತೆ ಸದ್ಯ ನೀಡಲಾಗಿರುವ ಮಧ್ಯಾಂತರ ಆದೇಶ ವನ್ನು ಜು. 25ರ ವರೆಗೆ ವಿಸ್ತರಿಸಿ ಆದೇಶ ನೀಡುವುದಾಗಿಯೂ ಕೂಡ ನ್ಯಾಯಪೀಠ ಹೇಳಿತು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಲಿಂಗ ವಿವಾಹ ಪ್ರಕರಣದ ವಿಚಾರಣೆಯಲ್ಲಿ ಕೇಂದ್ರವನ್ನು ಪ್ರತಿ ನಿಧಿಸಲು ಮತ್ತೊಂದು ಕೋರ್ಟ್ ಹಾಲ್ಗೆ ತೆರಳಬೇಕಾದ್ದರಿಂದ ಪ್ರಕರಣ ವನ್ನು ಮುಂದೂಡಿ ನ್ಯಾಯಪೀಠ ಆದೇಶ ನೀಡಿತು.
ಶಾಗೆ ಸಿದ್ದರಾಮಯ್ಯ ತರಾಟೆ
ಮುಸ್ಲಿಂ ಮೀಸಲಾತಿ ರದ್ದತಿ ಆದೇಶದ ಬಗ್ಗೆ ನೀಡಿರುವ ಬೇಜವಾ ಬ್ದಾರಿ ಹೇಳಿಕೆಗೆ ಸುಪ್ರೀಂ ಕೋರ್ಟ್ ಅಮಿತ್ ಶಾ ಅವರಿಗೆ ತಪರಾಕಿ ನೀಡಿದೆ. ಪ್ರಕರಣ ವಿಚಾರಣೆಯಲ್ಲಿ ಇರು ವಾಗ ನ್ಯಾಯಾಲಯದ ಪಾವಿತ್ರ್ಯ ಪಾಲಿಸ ಬೇಕಾಗುತ್ತದೆ. ಈ ರೀತಿಯ ರಾಜ ಕೀಯ ಹೇಳಿಕೆ ಸಲ್ಲದು ಎಂದು ನ್ಯಾಯ ಪೀಠ ಸೂಚಿಸಿರುವುದು ಸರಿಯಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಸಾಲಿಸಿಟರ್ ಜನರಲ್ ಇಲ್ಲವೇ ವಕೀಲರು ತಮ್ಮ ಅಭಿ ಪ್ರಾಯ ವ್ಯಕ್ತಪಡಿಸಲಿ. ಮೂರನೇ ವ್ಯಕ್ತಿ ಇದಕ್ಕೆ ಏಕೆ ಪ್ರತಿಕ್ರಿಯಿಸಬೇಕು ಎಂದು ನ್ಯಾಯಪೀಠ ಪ್ರಶ್ನಿಸಿದೆ. ಕೇಂದ್ರ ಸಚಿವರು ಇನ್ನು ಮುಂದೆಯಾದರೂ ಎಚ್ಚರಿಕೆಯಿಂದ ಹೇಳಿಕೆ ನೀಡುತ್ತಾರೆಂದು ಭಾವಿಸಿದ್ದೇನೆ ಎಂದಿದ್ದಾರೆ.