Advertisement

ಸಿಜೆಐ ನೇಮಕ ಪ್ರಶ್ನಿಸಿದ್ದ ಅರ್ಜಿ ವಜಾ

06:00 AM Sep 27, 2018 | |

ನವದೆಹಲಿ: ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಅವರನ್ನು ಮುಂದಿನ ಮುಖ್ಯ ನ್ಯಾಯಮೂರ್ತಿ(ಸಿಜೆಐ)ಯನ್ನಾಗಿ ನೇಮಕ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ವಜಾ ಮಾಡಿದೆ. ಈ ಅರ್ಜಿಗೆ ಯಾವುದೇ ಮೌಲ್ಯ ಇಲ್ಲ ಎಂದು ಹೇಳಿರುವ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್‌ ಮತ್ತು ಡಿ.ವೈ. ಚಂದ್ರಚೂಡ್‌ ಅವರನ್ನೊಳಗೊಂಡ ನ್ಯಾಯಪೀಠ, ಸಿಜೆಐ ನೇಮಕ ವಿಚಾರದಲ್ಲಿ ಮಧ್ಯಪ್ರವೇಶಿಸುವ ಹಂತ ಇದಲ್ಲ ಎಂದೂ ಹೇಳಿದೆ. 

Advertisement

ನ್ಯಾ.ಗೊಗೋಯ್‌ ಅವರನ್ನು ನೂತನ ಸಿಜೆಐ ಆಗಿ ನೇಮಕ ಮಾಡಿದ್ದನ್ನು ಪ್ರಶ್ನಿಸಿ ವಕೀಲರಾದ ಆರ್‌.ಪಿ.ಲುಥಾ ಮತ್ತು ಸತ್ಯವೀರ್‌ ಶರ್ಮಾ ಎಂಬುವರು ಅರ್ಜಿ ಸಲ್ಲಿಸಿದ್ದರು. ಜನವರಿ 12ರಂದು ಸುಪ್ರೀಂ ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳಾದ ನ್ಯಾ.ಚೆಲಮೇಶ್ವರ್‌(ಈಗ ನಿವೃತ್ತ), ರಂಜನ್‌ ಗೊಗೋಯ್‌, ಮದನ್‌ ಬಿ. ಲೋಕೂರ್‌ ಮತ್ತು ಕುರಿಯನ್‌ ಜೋಸೆಫ್ ಅವರು ಮಾಡಿದ್ದ ಸುದ್ದಿಗೋಷ್ಠಿಯನ್ನು ಪ್ರಸ್ತಾಪಿಸಿ ಈ ಅರ್ಜಿ ಸಲ್ಲಿಸಲಾಗಿತ್ತು. ನಾಲ್ವರು ನ್ಯಾಯಮೂರ್ತಿಗಳ ವರ್ತನೆಯು ದೇಶದ ನ್ಯಾಯಾಂಗ ವ್ಯವಸ್ಥೆಯ ವಿಧ್ವಂಸದ ಕೃತ್ಯಕ್ಕಿಂತ ಕಡಿಮೆಯೇನಲ್ಲ. ನ್ಯಾಯಾಂಗದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳ ಹೆಸರಿನಲ್ಲಿ ದೇಶಾದ್ಯಂತ  ಸಾರ್ವಜನಿಕ ಪ್ರಕ್ಷುಬ್ಧತೆ ಸೃಷ್ಟಿಸಲು ಈ ಜಡ್ಜ್ಗಳು ಪ್ರಯತ್ನಿಸಿದ್ದರು. ಹೀಗಾಗಿ, ಈ ನ್ಯಾಯಮೂರ್ತಿಗಳ ಪೈಕಿ ಒಬ್ಬರಾದ ನ್ಯಾ. ಗೊಗೋಯ್‌ ಅವರನ್ನು ಸಿಜೆಐ ಆಗಿ ನೇಮಕ ಮಾಡಬಾರದು ಎಂದು ಅರ್ಜಿದಾರರು ಮನವಿ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next