Advertisement

ಕ್ಲೀನ್‌ ಇದ್ಯಾ?: ಬಿಸಿಯೂಟ ಪರೀಕ್ಷೆ ನಡೆಯುತ್ತಾ? 

09:10 AM Aug 22, 2017 | Team Udayavani |

ಹೊಸದಿಲ್ಲಿ: ದೇಶಾದ್ಯಂತ ಸರಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ನೈರ್ಮಲ್ಯ ಪರಿಶೀಲನೆಯನ್ನು ಹೇಗೆ ನಡೆಸಲಾಗುತ್ತಿದೆ ಎಂದು ಸುಪ್ರೀಂಕೋರ್ಟ್‌ ಸೋಮವಾರ ಕೇಂದ್ರ ಹಾಗೂ ಕರ್ನಾಟಕ ಸೇರಿ ಎಲ್ಲ ರಾಜ್ಯ ಸರಕಾರಗಳನ್ನು ಪ್ರಶ್ನಿಸಿದೆ.

Advertisement

ಬಿಸಿಯೂಟದ ನೈರ್ಮಲ್ಯ ಸಹಿತ ವಿವಿಧ ಅಂಶಗಳ ಪರಿಶೀಲನೆಗಾಗಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಎರಡು ಸಮಿತಿಗಳನ್ನು ರಚಿಸುವಂತೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ತಿಳಿಸಬೇಕೆಂದು ಸೂಚಿಸಿ, ಮುಖ್ಯ ನ್ಯಾ| ಜೆ.ಎಸ್‌.ಖೇಹರ್‌ ಮತ್ತು ನ್ಯಾ| ಡಿ.ವೈ.ಚಂದ್ರಚೂಡ್‌ ಅವರಿದ್ದ ಪೀಠವು ವಿಚಾರಣೆಯನ್ನು ಆಗಸ್ಟ್‌ 24ಕ್ಕೆ ಮುಂದೂಡಿದೆ.

2013ರಲ್ಲಿ ಬಿಹಾರದ ಗ್ರಾಮವೊಂದರಲ್ಲಿನ ಪ್ರಾಥಮಿಕ ಶಾಲೆಯಲ್ಲಿ ವಿಷಾಹಾರ ಸೇವಿಸಿ 23 ಮಕ್ಕಳು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಬಿಸಿಯೂಟದ ನೈರ್ಮಲ್ಯ ಕಾಪಾಡಲು ಕ್ರಮ ಕೈಗೊಳ್ಳುವಂತೆ ‘ಅಂತಾರಾಷ್ಟ್ರೀಯ ಮಾನವ ಅಧಿಕಾರ್‌ ನಿಗ್ರಾಣಿ’ ಎಂಬ ಎನ್‌ಜಿಒ ಅದೇ ವರ್ಷ ಸುಪ್ರೀಂಕೋರ್ಟ್‌ನಲ್ಲಿ ಪಿಐಎಲ್‌ ದಾಖಲಿಸಿತ್ತು. ಇದರ ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂ, ಯೋಜನೆ ವಿವರಗಳನ್ನು ವೆಬ್‌ಸೈಟ್‌ಗಳಲ್ಲಿ 3 ತಿಂಗಳೊಳಗೆ ಪ್ರಕಟಿಸುವಂತೆ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿತ್ತು. ಯೋಜನೆಗೆ ಒಳಪಟ್ಟ ಒಟ್ಟೂ ಶಾಲೆಗಳ ಸಂಖ್ಯೆ, ಫ‌ಲಾನುಭವಿ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಸರಬರಾಜು ಮಾಡುವ ಆಹಾರ ಧಾನ್ಯಗಳು, ತರಕಾರಿಗಳು, ಮೊಟ್ಟೆಗಳು ಇನ್ನಿತರ ಪದಾರ್ಥಗಳ ಗುಣಮಟ್ಟದ ಮಾಹಿತಿ ನೀಡಬೇಕೆಂದು ತಿಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next