Advertisement

ಕಸಾಪಾಗೆ ಮಹಿಳೆಯರು ಸ್ಪರ್ಧಿಸಿದರೆ ಬೆಂಬಲ

11:57 AM Nov 22, 2017 | |

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನಕ್ಕೆ ಆಡಳಿತ ತಂತ್ರಗಾರಿಕೆ ಬಲ್ಲ ಸಮರ್ಥ ಮಹಿಳೆಯೊಬ್ಬರು ಸ್ಪರ್ಧಿಸಿದರೆ ಅವರನ್ನು ಬೆಂಬಲಿಸುವುದಾಗಿ 83ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನದ ನಿಯೋಚಿತ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ತಿಳಿಸಿದ್ದಾರೆ.

Advertisement

ಜನದನಿ ಬಳಗ ಕಸಾಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರೊ.ಚಂದ್ರಶೇಖರ ಪಾಟೀಲ ಅವರೊಂದಿಗೆ “ವಾದ-ಸಂವಾದ’ ಕಾರ್ಯಕ್ರಮದಲ್ಲಿ ಸಾಹಿತಿ ಭೈರಮಂಗಲ ರಾಮೇಗೌಡ ಅವರು “ಸಾಹಿತ್ಯ ಪರಿಷತ್ತಿಗೆ 102 ವರ್ಷ ಪೂರ್ಣಗೊಳ್ಳುತ್ತಿದ್ದು, ಮಹಿಳೆಯೊಬ್ಬರು ಅಧ್ಯಕ್ಷರಾಗಬಾರದೇಕೆ’ ಎಂಬ ಪ್ರಶ್ನೆ ಎತ್ತಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಚಂಪಾ ಅವರು, ಕನ್ನಡ ಸಾಹಿತ್ಯ ಪರಿಷತ್ತಿಗೆ ಮಹಿಳೆಯರ ಪಾಲುದಾರಿಕೆಯೂ ಬೇಕು. ಹಾಗೆಂದ ಮಾತ್ರಕ್ಕೆ ಮಹಿಳೆಯೊಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು ಎಂಬ ವಾದಕ್ಕೆ ನನ್ನ ಒಪ್ಪಿಗೆ ಇಲ್ಲ. ಚುನಾವಣೆಯು ನಾವು ಒಪ್ಪಿಕೊಂಡ ಆಯ್ಕೆಯಾಗಿದ್ದು, ಮತದಾನದ ಮೂಲಕ ಆಯ್ಕೆಯಾಗಿ ಬಂದರೆ ಬಲ ಹೆಚ್ಚು. ಮಹಿಳಾ ಲೇಖಕಿಯೊಬ್ಬರು ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದರೆ, ಬೆಂಬಲಿಸುವುದಾಗಿ ಅವರು ಹೇಳಿದರು. 

“ಕಸಾಪ ಅಧ್ಯಕ್ಷರಾಗಿ ಆಯ್ಕೆಯಾಗುವವರು ಸಾಹಿತ್ಯಿಕ ಸಾಧನೆ ಮಾಡಿರಬೇಕು. ಆದರೆ, ಪುಸ್ತಕ ಬರೆಯದಿದ್ದರೂ, ಗೆದ್ದು ಬಂದವರಿದ್ದಾರೆ. ವೈದ್ಯ, ಎಂಜಿನಿಯರ್‌ ಸಂಘಗಳಿಗೆ ಆಯಾ ಕ್ಷೇತ್ರದಲ್ಲಿದ್ದವರಿಗಷ್ಟೇ ಸ್ಥಾನಗಳು ಇರುತ್ತವೆ. ಅದೇ ಮಾದರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೂ ನಿಯಮವಿದ್ದರೆ ಒಳ್ಳೆಯದು. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಮಾತ್ರ ಪರಿಷತ್ತಿಗೆ ಆಯ್ಕೆ ಮಾಡಬೇಕಿದೆ ಎಂದರು. 

ಸಾಹಿತಿ ಡಾ.ಮುಕುಂದರಾಜ್‌, ” ಶಿಕ್ಷಣ ಸಂಸ್ಥೆ, ಖಾಸಗಿ ಆಸ್ಪತ್ರೆಗಳನ್ನು ರಾಷ್ಟ್ರೀಕರಣಗೊಳಿಸಲು ಸರ್ಕಾರವನ್ನು ಒತ್ತಾಯಿಸಲು ಸಮ್ಮೇಳನದಲ್ಲಿ ನಿರ್ಣಯಕೈಗೊಳ್ಳಬೇಕು. ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಬೇಕಾದವರು ಯಾರು? ಸಮ್ಮೇಳನಾಧ್ಯಕ್ಷರ ಕರ್ತವ್ಯವೇನು?

Advertisement

ಅವರು ಕೇವಲ ಅಲಂಕಾರಿಕ ಅಧ್ಯಕ್ಷರಾಗದೇ ವರ್ಷವಿಡೀ ಕನ್ನಡಕ್ಕಾಗಿ ಕೆಲಸ ಮಾಡಬೇಕು ಎಂದು ಪ್ರತಿಪಾದಿಸಿದರು. ಸಾಹಿತಿ ಡಾ. ಎಲ್‌.ಜಿ.ಮೀರಾ, “ಕನ್ನಡೇತರರಿಗೆ ಕನ್ನಡ ಕಲಿಸುವ ವ್ಯವಸ್ಥೆ ಸದೃಢವಾಗಿಲ್ಲ. ಈ ಕೆಲಸ ತುಂಬಾ ಜರೂರಾಗಿ ಆಗಬೇಕು. ಕನ್ನಡೇತರರು ಕನ್ನಡ ಕಲಿಯುವಂತಹ ವಾತಾವರಣ ಸೃಷ್ಟಿಸಬೇಕು,” ಎಂದು ಮನವಿ ಮಾಡಿಕೊಂಡರು.

ದೂರದರ್ಶನ ಕೇಂದ್ರದ ನಿವೃತ್ತ ಅಧಿಕಾರಿ ಡಾ.ಮಹೇಶ್‌ಜೋಷಿ ಮಾತನಾಡಿ, “ವಿದ್ಯುನ್ಮಾನ ಮಾಧ್ಯಮಗಳಲ್ಲಿನ ನಿರೂಪಕರ ಭಾಷಾ ಉಚ್ಛಾರಣೆ ಕೇಳಿದ್ರೆ ಆತಂಕವಾಗುತ್ತದೆ. ಗಡಿನಾಡ ಭಾಗದಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಬೇಕು’ ಎಂದು ಡಾ. ಮಹೇಶ್‌ ಜೋಷಿ ಸಲಹೆ ನೀಡಿದರು.

ಇದಕ್ಕೆ ಉತ್ತರಿಸಿದ ಚಂಪಾ, “”ಭಾಷಾ ಶುದ್ಧತೆ, ಉಚ್ಛಾರಣೆ ಬಗ್ಗೆ ಹಲವು ತಕರಾರುಗಳಿವೆ. ರಾಜ್ಯದ ನಾನಾ ಭಾಗಗಳಲ್ಲಿ ಬೇರೆ ಬೇರೆ ರೀತಿ ಕನ್ನಡವನ್ನು ಉಚ್ಛಾರಣೆ ಮಾಡಲಾಗುತ್ತದೆ. ಭಾಷೆಯಲ್ಲಿ ಪ್ರಾದೇಶಿಕ ವ್ಯತ್ಯಾಸಗಳಿರುತ್ತವೆ. ಯಾವುದೇ ಜೀವಂತ ಭಾಷೆಗೆ ಏಕರೂಪದ ಆಕಾರಗಳಿರಲಿಲ್ಲ.

ನಾನಾ ಆಕಾರಗಳು ಭಾಷೆಯ ಜೀವಂತ ಲಕ್ಷಣವಿದ್ದಂತೆ. ಶುದ್ಧ ಕನ್ನಡ ಮಾತನಾಡಲೇಬೇಕು ಎಂದು ಆದೇಶ ಹೊರಡಿಸಲು ಆಗುವುದಿಲ್ಲ” ಎಂದು ತಿಳಿಸಿದರು. ಸಾಹಿತಿ ಡಾ. ಬೆಳಕೆರೆ ಲಿಂಗರಾಜಯ್ಯ, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಜನದನಿ ಬಳಗದ ಅಧ್ಯಕ್ಷ ನೇ.ಭ.ರಾಮಲಿಂಗ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಾಮಾಣಿಕವಾಗಿ ಕೆಲಸ ಮಾಡುವೆ: ಚಂಪಾ, “ಸಾಹಿತ್ಯ ಸಮ್ಮೇಳನ ರಾಜಕೀಯ ಸಂಘಟನೆ ಅಥವಾ ಪಕ್ಷವಲ್ಲ’ ಕನ್ನಡ ಬದುಕಿನ ಆಯಾಮಗಳನ್ನು ಚರ್ಚಿಸುವ, ನೋವು, ಒತ್ತಾಸೆಯ ಹಕ್ಕೊತ್ತಾಯ ಮಂಡಿಸುವ ವೇದಿಕೆ. ಮುಂದಿನ ಸಮ್ಮೇಳನದ ವೇಳೆಗೆ ಅನುಷ್ಠಾನಕ್ಕೆ ತರಬಹುದಾದಂತಹ ನಿರ್ಣಯಗಳನ್ನಷ್ಟೇ ತೆಗೆದುಕೊಳ್ಳಲಾಗುವುದು.

ಸಮ್ಮೇಳನಾಧ್ಯಕ್ಷರ ಹೊಣೆ ಅರಿತು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಕನ್ನಡ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಾರ್ಯಸೂಚಿಗಳನ್ನು ಸಿದ್ಧಪಡಿಸಿ, ಪರಿಹರಿಸಲು ಶ್ರಮಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next