Advertisement

ಸಿದ್ದರಾಮಯ್ಯ ಬಂದರೆ ಬೆಂಬಲ,ಇಲ್ಲವಾದರೆ ರಾಜಕೀಯ ನಿವೃತ್ತಿ: ಶ್ರೀನಿವಾಸಗೌಡ

08:11 PM Mar 18, 2023 | Team Udayavani |

ಕೋಲಾರ: ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಿದರೆ ರಾಜಕೀಯ ಮಾಡುತ್ತೇನೆ, ಇಲ್ಲವಾದರೆ ಈಗಲೇ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆಂದು ಶಾಸಕ ಕೆ.ಶ್ರೀನಿವಾಸಗೌಡ ಘೋಷಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರ ಜಿಲ್ಲೆಯು ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿಯನ್ನು ಕೊಟ್ಟಿತ್ತು, ಇದೀಗ ಸಿದ್ದರಾಮಯ್ಯ ಮೂಲಕ ಎರಡನೇ ಮುಖ್ಯಮಂತ್ರಿಯನ್ನು ಕೊಡಬೇಕೆಂಬ ಆಸೆ ಇತ್ತು, ಆದರೆ, ಇದೀಗ ಅದು ಕರಗುವಂತಾಗಿದೆ. ಆದರೂ, ಇನ್ನೂ ಅಂತಿಮ ಘೋಷಣೆಯಾಗಿಲ್ಲ, ಕಾದು ನೋಡುತ್ತೇನೆಂಬ ಆಶಾ ಭಾವನೆ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಿಲ್ಲವೆಂದರೂ ತಾವು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದ ಅವರು, ನಾನು ಸಿದ್ದರಾಮಯ್ಯ ಜತೆ ಈ ವಿಚಾರವಾಗಿ ಮಾತನಾಡೋದಿಲ್ಲ. ಬೇಕಾದರೆ ಅವರೇ ಮಾತನಾಡಿಸಲಿ, ನಾನಂತೂ ಸಿದ್ದರಾಮಯ್ಯ ಜತೆ ಮಾತನಾಡೋದಿಲ್ಲ ಎಂದು ಮುನಿಸು ವ್ಯಕ್ತಪಡಿಸಿದರು.

ನನ್ನನು ಕರೆದು ಮಾತಾಡಿದ ಬಳಿಕ ಕ್ಷೇತ್ರ ಬಿಟ್ಟು ಕೊಟ್ಟಿದ್ದೇನೆ. ಇದೀಗ ನನ್ನನ್ನು ಏನೂ ಕೇಳದೆ ಈ ನಿರ್ಧಾರ ತೆಗೆದುಕೊಂಡರೆ ಮಾತನಾಡುವ ಆವಶ್ಯಕತೆ ಇಲ್ಲ.ನಾನು ಅವರಷ್ಟು ದೊಡ್ಡ ಮಟ್ಟದಲ್ಲಿ ರಾಜಕೀಯವಾಗಿ ಬೆಳೆದಿಲ್ಲ, ಅವರ ಜೊತೆ ಮಾತನಾಡುವ ಅವಶ್ಯಕತೆ ಇಲ್ಲ ಎಂದರು.
ಕಾಣದ ಕೈ ಹೈಕಮಾಂಡ್‌ನ‌ಲ್ಲಿ ಕೆಲಸ ಮಾಡಿದೆಯೆಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದರು.

ಕೋಲಾರದ ಹುಲಿ ಮುಂದೆ ಮೈಸೂರುಟಗರು ಆಟ ನಡೆಯೊಲ್ಲ
ಕೋಲಾರದ ಹುಲಿ ಮುಂದೆ ಮೈಸೂರು ಟಗರಿನ ಆಟ ನಡೆಯೋದಿಲ್ಲ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್‌ ಸವಾಲು ಎಸೆದರು.

Advertisement

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿದರೆ ಹಿನ್ನಡೆ ಎಂಬ ಅಂಶವನ್ನು ಆಂಧ್ರಪ್ರದೇಶದ ಖಾಸಗಿ ಏಜೆನ್ಸಿ ಸರ್ವೇ ನಡೆಸಿ ಆ ವರದಿಯನ್ನು ರಾಹುಲ್‌ ಗಾಂಧಿ ಅವರಿಗೆ ತಿಳಿಸಿದ್ದು ರಾಹುಲ್‌ ಗಾಂಧಿ ಸಿದ್ದರಾಮಯ್ಯನವರು ಕೋಲಾರದಲ್ಲಿ ಸ್ಪರ್ಧೆ ಬೇಡ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರು ಮಾತನಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ರಮೇಶ್‌ಕುಮಾರ್‌ ನಡುವೆ ಮ್ಯಾಚ್‌ ಫಿಕ್ಸಿಂಗ್‌ ಆಗಿತ್ತು, ಸಿದ್ದರಾಮಯ್ಯರನ್ನು ಕೋಲಾರದಲ್ಲಿ ರಾಜಕೀಯವಾಗಿ ಮಣ್ಣು ಮಾಡಿ ಡಿ.ಕೆ.ಶಿವಕುಮಾರ್‌ರನ್ನು ಮುಖ್ಯಮಂತ್ರಿ ಮಾಡುವ ಹುನ್ನಾರ ನಡೆದಿತ್ತು. ಆದರೆ, ಇದನ್ನು ಗ್ರಹಿಸಿರುವ ಸಿದ್ದರಾಮಯ್ಯ ಕೋಲಾರ ಸ್ಪರ್ಧೆಯಿಂದ ಹಿಂದಕ್ಕೆ ಸರಿದಿದ್ದಾರೆ, ರಾಹುಲ್‌ ಗಾಂಧಿಗೂ ಈ ಕುರಿತು ಒಳ್ಳೆಯ ವರದಿಯನ್ನೇ ಯಾರೋ ಕೊಟ್ಟಿದ್ದಾರೆಂದು ವಿವರಿಸಿದರು.

ಸಿದ್ದರಾಮಯ್ಯ ಸ್ಪರ್ಧೆ ವಿಚಾರದಲ್ಲಿ ನಾನು ಹಿಂದೆ ನೀಡಿದ್ದ ಹೇಳಿಕೆಗೆ ಈಗಲೂ ಬದ್ಧವಾಗಿದ್ದೇನೆ, ಸಿದ್ದರಾಮಯ್ಯ ನಿಜವಾಗಲೂ ಹುಲಿಯಾಗಿದ್ದರೆ ಕೋಲಾರದ ಹುಲಿ ವರ್ತೂರು ಪ್ರಕಾಶ್‌ ವಿರುದ್ಧ ಸ್ಪರ್ಧಿಸಬೇಕೆಂದು ಪಂಥಾಹ್ವಾನ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next