Advertisement

ವೆನಿಲ್ಲಾಗೆ ಬೆಂಬಲ ಬೆಲೆ ಕಷ್ಟ!

11:15 AM Jun 02, 2018 | Team Udayavani |

“ಆ ಮನೆಯಲ್ಲೊಂದು ಒಂಟಿ ಹುಡುಗಿಯ ಕೊಲೆಯಾಗುತ್ತೆ. ಆ ಕಲ್ಲು ಗುಡ್ಡೆ ಬ್ರಿಡ್ಜ್ನ ರೈಲ್ವೆ ಟ್ರಾಕ್‌ ಮೇಲೆ ವ್ಯಕ್ತಿಯೊಬ್ಬನ ಶವ ಬಿದ್ದಿರುತ್ತೆ. ಹಾಗಾದರೆ, ಆ ಹುಡುಗಿ ಕೊಲೆ ಮಾಡಿದ್ದು ಯಾರು, ಆ ರೈಲ್ವೆ ಟ್ರ್ಯಾಕ್‌ ಮೇಲಿನ ಶವ ಯಾರದ್ದು…? ಈ ಪ್ರಶ್ನೆ ಇಟ್ಟುಕೊಂಡೇ ನಿರ್ದೇಶಕರು ಸುಮಾರು ಎರಡು ತಾಸಿನವರೆಗೆ ಮರ್ಡರ್‌ ಮಿಸ್ಟ್ರಿ ಕಥೆ ಹೆಣೆದಿದ್ದಾರೆ. ಇಲ್ಲಿ ಕುತೂಹಲವಿದೆ, ಗಂಭೀರತೆಯೂ ಇದೆ. ಹಾಗಂತ, ಬಹಳ ಕಾಲ ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾತ್ರ ಆಗಿಲ್ಲ.

Advertisement

ಒಂದು ಪತ್ತೆದಾರಿ ಕಾದಂಬರಿ ಓದುವಾಗ, ಯಾವ ಫೀಲ್‌ ಬರುತ್ತೋ, ಅಂಥದ್ದೇ ಫೀಲ್‌ ಇಲ್ಲಿದೆಯಾದರೂ, ಅದಕ್ಕೆ ಇನ್ನಷ್ಟು “ವ್ಯಾಕರಣ’ ಬೇಕಿತ್ತು. ಎಲ್ಲೋ ಒಂದು ಕಡೆ ಚಿತ್ರ ತುಂಬಾ ಗಂಭೀರತೆಗೆ ದೂಡುತ್ತಿದ್ದಂತೆಯೇ, ಇನ್ನೆಲ್ಲೋ ಕಡೆ ಹಾಡೊಂದು ಬಂದು ಗಂಭೀರತೆಗೆ ಕಲ್ಲು ಹಾಕಿ ಬಿಡುತ್ತೆ. ಅದು ಬಿಟ್ಟರೆ, ಸಣ್ಣ ಪುಟ್ಟ ಕಿರಿಕಿರಿ ನಡುವೆ ನೋಡಿಸಿಕೊಂಡು ಹೋಗುವ ಸಣ್ಣದೊಂದು “ತಾಕತ್ತು’ ಚಿತ್ರಕ್ಕಿದೆ. ಇಲ್ಲಿ ಫ್ರೆಶ್‌ ಕಥೆ ಇದೆ ಅಂದುಕೊಳ್ಳುವಂತಿಲ್ಲ. ಆದರೆ, ಫ್ರೆಶ್‌ ಎನಿಸುವ ಪಾತ್ರಗಳಿವೆ.

ಕಥೆಯಲ್ಲಿ ಕೊಂಚ ಗಟ್ಟಿತನ ಇರುವುದರಿಂದ ತೆರೆ ಮೇಲಿನ ಪಾತ್ರಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಒಂದೆರೆಡು ಕೊಲೆಗಳು, ಅದರ ಸುತ್ತ ನಡೆಯುವ ಚುರುಕುತನದ ತನಿಖೆ ಇದೆಲ್ಲಾ ಕನ್ನಡಕ್ಕೆ ಹೊಸದಲ್ಲ. “ವೆನಿಲ್ಲಾ’ ಅದೇ ಹಾದಿಯಲ್ಲಿ ಸಾಗುವ ಚಿತ್ರವಾದರೂ, ಕೆಲವೆಡೆ ಹಲವು ಪ್ರಶ್ನೆಗಳಿಗೆ, ಕೆಲವು ಕುತೂಹಲಕ್ಕೆ ಕಾರಣವಾಗುತ್ತಲೇ, ಅಲ್ಲಲ್ಲೇ ಉತ್ತರ ಕೊಡುವ ಮೂಲಕ ಒಂದೊಂದು ದೃಶ್ಯದಲ್ಲಿ ಸಣ್ಣದೊಂದು ತಿರುವು ಇಟ್ಟು ನೋಡುಗನ ತಾಳ್ಮೆಯನ್ನು ಸಮಾಧಾನಪಡಿಸುವಲ್ಲಿ ಸಫ‌ಲವಾಗುತ್ತೆ.

ಇಂತಹ ಚಿತ್ರಗಳಿಗೆ ನಿರೂಪಣೆ ಬಹಳ ಮುಖ್ಯ. ಅದರ ಬಗ್ಗೆ ಮಾತಾಡುವಂತಿಲ್ಲ. ಆದರೆ, ಅದಕ್ಕೆ ಪೂರಕವಾದಂತಹ “ಲಾಜಿಕ್‌’ ಕೂಡ ಅಷ್ಟೇ ಮುಖ್ಯ. ಆದರೆ, ಇಲ್ಲಿರುವ ಕೆಲ ದೃಶ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸಾಕಷ್ಟು “ಲಾಜಿಕ್‌ ಎರರ್‌’ ಕಾಣಸಿಗುತ್ತವೆ. ಅವನ್ನೆಲ್ಲಾ ಪಕ್ಕಕ್ಕಿಟ್ಟು ನೋಡಿದರೂ, ಕೆಲವೆಡೆ ಇಷ್ಟ, ಹಲವೆಡೆ ಕಷ್ಟ ಎನಿಸದೇ ಇರದು. ಆಳವಾದ ಪ್ರೀತಿ, ಅನಿರೀಕ್ಷಿತ ಘಟನೆಗಳು, ಅಲ್ಲೊಂದು ಮಾಫಿಯಾ, ಸಿನಿಮಾದುದ್ದಕ್ಕೂ ಕಂಡುಬರುವ ತರಹೇವಾರಿ ಪಾತ್ರಗಳು ಚಿತ್ರದ ಏರಿಳಿತವನ್ನು ನಿಭಾಯಿಸಲು ಹರಸಾಹಸ ಮಾಡಿವೆ.

ಒಂದು ಮರ್ಡರ್‌ ಮಿಸ್ಟ್ರಿ ಕಥೆಯಲ್ಲಿ ಇರಬೇಕಾದ ಎಲ್ಲಾ ಅಂಶಗಳು, ಸೂಕ್ಷ್ಮ ಸಂಗತಿಗಳು ಇಲ್ಲಿವೆಯಾದರೂ, ಸಿನಿಮಾದುದ್ದಕ್ಕೂ ಅದನ್ನು ಬಿಗಿಹಿಡಿತದಲ್ಲಿಟ್ಟುಕೊಳ್ಳಲು ನಿರ್ದೇಶಕರು ಹಿಂದೇಟು ಹಾಕಿದ್ದಾರೆ. ಹಾಗಾಗಿ ಆ ಪ್ರಯತ್ನ ಇಲ್ಲಿ ಹೆಚ್ಚಾಗಿ ವಕೌìಟ್‌ ಆಗಿಲ್ಲ. ಬಹುಶಃ ಅದನ್ನು ಸರಿಪಡಿಸಿಕೊಂಡಿದ್ದರೆ, ನೋಡುಗನಿಗೆ “ವೆನಿಲ್ಲಾ ಬಂಪರ್‌ ಬೆಳೆ’ ಎನ್ನಬಹುದಿತ್ತು. ಆದರೂ ಒಂದು ಮರ್ಡರ್‌ ಮಿಸ್ಟ್ರಿಯನ್ನು ಹೇಗೆಲ್ಲಾ ತೋರಿಸಬಹುದು, ಎಷ್ಟೆಲ್ಲಾ ಕುತೂಹಲಕ್ಕೆ ಕಾರಣಪಡಿಸಬಹುದು ಎಂಬುದಕ್ಕಾದರು ಒಮ್ಮೆ “ವೆನಿಲ್ಲಾ’ ನೋಡಲ್ಲಡ್ಡಿಯಿಲ್ಲ.

Advertisement

ಅವಿನಾಶ್‌ ಮತ್ತು ಅನಗ ಬಾಲ್ಯದ ಗೆಳೆಯರು. ಒಂದು ಹಂತದಲ್ಲಿ ಅನಗ ಬೇರೆ ಊರಿಗೆ ಶಿಫ್ಟ್ ಆಗುತ್ತಾಳೆ. ಆಕೆ ಶಿಫ್ಟ್ ಆದ ಊರಿಗೇ ಹನ್ನೆರೆಡು ವರ್ಷಗಳ ಬಳಿಕ ಅವಿನಾಶ್‌ ಕುಟುಂಬವೂ ಹೋಗುತ್ತೆ. ಆಕಸ್ಮಿಕವಾಗಿ ಅವರಿಬ್ಬರ ಭೇಟಿಯಾಗುತ್ತೆ, ಪ್ರೀತಿಯೂ ಚಿಗುರುತ್ತೆ. ಇನ್ನೇನು ಇಬ್ಬರೂ ಡ್ಯುಯೆಟ್‌ ಹಾಡಬೇಕೆನ್ನುವಷ್ಟರಲ್ಲಿ ಒಂದು ಕೊಲೆ ನಡೆಯುತ್ತೆ. ಅದಕ್ಕೊಂದು ತನಿಖೆ ಶುರುವಾಗುತ್ತೆ. ಆ ಕೊಲೆ ಯಾಕಾಯ್ತು ಅನ್ನೋದೇ ಚಿತ್ರದ ಸಾರಾಂಶ. ಅದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ, “ವೆನಿಲ್ಲಾ’ ರುಚಿ ಮಾಡಬಹುದು!

ಮೊದಲ ಚಿತ್ರವಾದರೂ ಅವಿನಾಶ್‌ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಚಿತ್ರದ ಮತ್ತೂಂದು ವಿಶೇಷತೆ ಅಂದರೆ, ರವಿಶಂಕರ್‌ಗೌಡ ಪಾತ್ರ. ಇದುವರೆಗೆ ಹಾಸ್ಯ ಪಾತ್ರಗಳಲ್ಲೇ ಕಾಣಿಸುತ್ತಿದ್ದ ಅವರಿಲ್ಲಿ, ಇಮೇಜ್‌ ಬದಲಿಸಿಕೊಳ್ಳುವಂತಹ ಪಾತ್ರ ಮಾಡಿದ್ದಾರೆ. ಒಬ್ಬ ದಕ್ಷ ಪೊಲೀಸ್‌ ಅಧಿಕಾರಿಯಾಗಿ ತನಿಖೆ ನಡೆಸುವ ಶೈಲಿಯಲ್ಲಿ ಗಮನಸೆಳೆಯುತ್ತಾರೆ. ಸ್ವಾತಿಕೊಂಡೆ “ಕ್ಯಾಪ್ನ ಫೋಬಿಯಾ’ ರೋಗಿ ಹೇಗೆಲ್ಲಾ ಭಯಪಡುತ್ತಾಳೆ, ಎಷ್ಟೆಲ್ಲಾ ದ್ವೇಷಿಸುತ್ತಾಳೆ ಎಂಬುದನ್ನಿಲ್ಲಿ ತೋರಿಸುವ ಮೂಲಕ ಇಷ್ಟವಾಗುತ್ತಾರೆ.

ಪಾವನಾ, ರೆಹಮಾನ್‌, ಬಿ.ಸುರೇಶ ಪಾತ್ರಗಳಲ್ಲಿ ಸೂಕ್ಷ್ಮತೆ ಇದೆ. ಇಡೀ ಕಥೆಯ ಆಧಾರ ಈ ಮೂರು ಪಾತ್ರಗಳು. ಮೂವರು ಸಲೀಸಾಗಿ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಅನುಮಾನಸ್ಪದವಾಗಿ ಕಾಣುವ ಪಾತ್ರಗಳಲ್ಲಿ ನಟಿಸಿರುವ ಕಲಾವಿದರ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ. ಬಿ.ಜೆ.ಭರತ್‌ ಸಂಗೀತದಲ್ಲಿ ಒಂದು ಹಾಡು ಪರವಾಗಿಲ್ಲ. ಇಂತಹ ಚಿತ್ರಕ್ಕೆ ಹಿನ್ನೆಲೆ ಸಂಗೀತ ಜೀವಾಳ. ಅದಿಲ್ಲಿ ಸಾಂಗವಾಗಿ ನೆರವೇರಿದೆ. ಕಿರಣ್‌ ಹಂಪಾಪುರ ಛಾಯಾಗ್ರಹಣದಲ್ಲಿ “ವೆನಿಲ್ಲಾ’ ಫ‌ಸಲು ಸೊಗಸಾಗಿದೆ.

ಚಿತ್ರ: ವೆನಿಲ್ಲಾ
ನಿರ್ಮಾಣ: ಎಸ್‌.ಜಯರಾಮು
ನಿರ್ದೇಶನ: ಜಯತೀರ್ಥ
ತಾರಾಗಣ: ಅವಿನಾಶ್‌, ಸ್ವಾತಿಕೊಂಡೆ, ಪಾವನಾ, ರೆಹಮಾನ್‌, ರವಿಶಂಕರ್‌ಗೌಡ, ಬಿ.ಸುರೇಶ, ಗಿರಿ, ನಂದ ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next