Advertisement

ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಕೆ ಮಾಡಿ

06:12 PM Jan 19, 2022 | Team Udayavani |

ಬೈಲಹೊಂಗಲ: ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್‌ ಪೂರೈಕೆ ಮಾಡಲು ಒತ್ತಾಯಿಸಿ ತಾಲೂಕಿನ ನೇಸರಗಿ ಸುತ್ತಮುತ್ತಲಿನ ಗ್ರಾಮಸ್ಥರು ಮಲ್ಲಾಪುರದಲ್ಲಿರುವ ನೇಸರಗಿ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಕಚೇರಿ ಎದುರು ಅಡುಗೆ ಮಾಡಿ ಮಂಗಳವಾರ ಪ್ರತಿಭಟಿಸಿದರು.

Advertisement

ಗ್ರಾಮದ ಮುಖಂಡರಾದ ಬಾಳಪ್ಪ ಮಾಳಗಿ, ಸೋಮನಗೌಡ ಪಾಟೀಲ, ಜೈ ಭೀಮ್‌ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ರಮೇಶ ರಾಯಪ್ಪಗೋಳ ಮಾತನಾಡಿ, ಹಲವು ವರ್ಷಗಳಿಂದ ಮುರಕೀಭಾವಿ ಪೀಡರ್‌ ನಂ. 4ರ ಮೂಲಕ ಒಳಪಡುವ ಗ್ರಾಮಗಳಲ್ಲಿರುವ ಹೊಲಗಳಿಗೆ ಸರಿಯಾದ ರೀತಿಯಲ್ಲಿ ವಿದ್ಯುತ್‌ ಒದಗಿಸಲಾಗುತ್ತಿದ್ದು, ಇದೀಗ ದಿಢೀರ್‌ ಆಗಿ ಹೆಸ್ಕಾಂ ನಿಗಮವು ವಿದ್ಯುತ್‌ ಪೂರೈಕೆಯಲ್ಲಿ ತೊಂದರೆ ಮಾಡುತ್ತಿರುವುದರಿಂದ ಸರಿಯಾಗಿ ವಿದ್ಯುತ್‌ ಪೂರೈಕೆಯಾಗದೆ ಹೊಲಗಳಲ್ಲಿರುವ ಫಸಲಿಗೆ ತೊಂದರೆಯಾಗುತ್ತಿದೆ.

ರಾತ್ರಿ ವೇಳೆ ವಿದ್ಯುತ್‌ ನೀಡುತ್ತಿರುವುದರಿಂದ ಪ್ರಾಣಾಪಾಯವಾದರೆ ಯಾರು ಹೋಣೆ? ಹೀಗಾಗಿ ಕೂಡಲೇ ಈ ಭಾಗದ ವಿದ್ಯುತ್‌ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ಬೈಲಹೊಂಗಲ ಕೆಇಬಿಯ ಎಇಇಗಳಾದ ಕೆ. ಜೈನ್‌, ಅಣ್ಣಪ್ಪ ಲಮಾಣಿ ಮಾತನಾಡಿ, ಈಗ ಹೊಸದಾಗಿ ಮಾರ್ಗಸೂಚಿ ಮಾಡಲಾಗಿದೆ. ಇದರಿಂದ ಬೇರೆ ಗ್ರಾಮಗಳಿಗೆ ತೊಂದರೆಯಾಗದಂತೆ ಮಾಡಲಾಗಿದ್ದು, ಸದ್ಯ ಕಲ್ಲಿದ್ದಲು ಸಮಸ್ಯೆಯಿದೆ. ಹೀಗಾಗಿ ಸ್ವಲ್ಪ ದಿನ
ಸಹಕರಿಸಿಕೊಂಡು ಹೋಗಬೇಕೆಂದು ಮನವಿ ಮಾಡಿದರು.

ಪ್ರತಿಭಟನಾಕಾರರು ಇದಕ್ಕೆ ಒಪ್ಪದೆ ಬೇಡಿಕೆ ಈಡೇರುವವರೆಗೆ ಎಲ್ಲ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ ಸ್ಥಳದಲ್ಲಿಯೇ ಉಪ್ಪಿಟ್ಟು, ಬಜಿ, ಚಹಾ ತಯಾರಿಸಿ ಅಲೊಪಹಾರ ಸೇವಿಸಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಕಲ್ಲಿದ್ದಲು ಸಮಸ್ಯೆ ಸರಕಾರ ಮಟ್ಟದಲ್ಲಿದ್ದು, ಅದರ ಪರಿಹಾರವಾದರೆ ವಿದ್ಯುತ್‌ ಸಮಸ್ಯೆ ಬಗೆಹರಿಯುತ್ತದೆ. ಜನರು ಸಹಕಾರ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದರು.

ನಾಗರಿಕರ ಮನವಿಗೆ ಸ್ಪಂದಿಸಿದ ಹೆಸ್ಕಾಂ ಅಧಿಕಾರಿಗಳಾದ ಕೆ.ಜೈನ್‌, ಅಣ್ಣಪ್ಪ ಲಮಾಣಿ, ವಸಂತಗೌಡಾ ಪಾಟೀಲ ಮಾತನಾಡಿ, ರೈತರ ಪಂಪ್‌ ಸೆಟ್‌ಗಳಿಗೆ ಹಗಲಿನ ವೇಳೆಯಲ್ಲಿ 7 ತಾಸು ವಿದ್ಯುತ್‌ ಪೂರೈಕೆ ಮಾಡಲಾಗುವುದೆಂದು ಭರವಸೆ ನೀಡಿದರು. ಇದರಿಂದ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು. ಮುಂಜಾನೆಯಿಂದ ಸಂಜೆಯವರೆಗೆ ಪ್ರತಿಭಟನೆ ನಡೆದಿರುವುದರಿಂದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿತ್ತು.

Advertisement

ಕೆಂಚಪ್ಪ ಕಳ್ಳಿಬಡ್ಡಿ, ಸುರೇಶ ಕೆಳಗೇರಿ, ಬಿ.ಎಫ್‌. ಕೊಳದೂರ, ಬಾಳಪ್ಪ ಹಸಬಿ, ಸದೆಪ್ಪ ಮೂಲಿಮನಿ, ಸಿದ್ದಪ್ಪ ಮಾಳನ್ನವರ, ಪ್ರಭು ಗಲಬಿ, ಸುಜಾತ ತುಬಾಕಿ, ಪುಂಡಲಿಕ ಮದನಭಾವಿ, ಗುರುಬಸು ಶಿಂತ್ರಿ, ಮಲ್ಲಿಕಾರ್ಜುನ ಕಲ್ಲೋಳಿ, ನಿಂಗಪ್ಪ ತಳವಾರ, ದೇಮಣ್ಣ ಗುಜನಟ್ಟಿ,ಚನಗೌಡ ಪಾಟೀಲ, ಯಮನಪ್ಪ ಪೂಜೇರಿ, ಫಕೀರಪ್ಪ ತೋಟಗಿ, ಸಲೀಂ ನಧಾಪ್‌, ಮಕಬುಲ್‌ ಬೇಪಾರಿ, ಅಡಿವೆಪ್ಪ ಚಿಗರಿ, ಯಲ್ಲಪ್ಪ ಪೂಜೇರಿ, ಅಡಿವೆಪ್ಪ ಮಾಳನ್ನವರ, ಎಸ್‌. ಎಂ. ಪಾಟೀಲ, ಸೋಮಶೇಖರ ಮಾಳನ್ನವರ, ಸೋಮನಟ್ಟಿ, ಮಾಸ್ತಮರಡಿ, ಮಲ್ಲಾಪುರ ಮತ್ತಿತರ ಗ್ರಾಮಗಳ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next