Advertisement

Puttur ಅಡಿಕೆ ಬೆಳೆಗಾರರ ಲೆಕ್ಕಾಚಾರಕ್ಕೆ ಬಿಸಿಲು-ಮಳೆ ಸವಾಲು

01:29 AM Aug 09, 2024 | Team Udayavani |

ಪುತ್ತೂರು: ಕಳೆದ ವರ್ಷವೂ ಫಸಲು ಕಡಿಮೆ, ಈ ವರ್ಷ ಮತ್ತೂ ಕಡಿಮೆ. ಹೀಗಾಗಿ ಅಡಿಕೆಯನ್ನೇ ನಂಬಿದವರಿಗೆ ಆತಂಕ ಮೂಡಿದೆ. ಅಡಿಕೆ ತೋಟದ ಒಟ್ಟು ಚಿತ್ರಣವನ್ನು ಗಮನಿಸಿದರೆ ಬೆಳೆಗಾರನ ಆರ್ಥಿಕ ಲೆಕ್ಕಚಾರವನ್ನು ಈ ಬಾರಿಯ ಬಿಸಿಲು-ಮಳೆ ಮತ್ತು ರೋಗ ಬದಲಾಯಿಸಿರುವುದು ಸ್ಪಷ್ಟ.

Advertisement

ಕೆಲವು ವರ್ಷಗಳಿಂದ ಸಣ್ಣ ಪ್ರಮಾಣದಲ್ಲಿ ದಾಖಲಾಗುತ್ತಲೇ ಇದ್ದ ಈ ಬದಲಾವಣೆ, ಈ ಬಾರಿ ಗಂಭೀರವಾಗಿದೆ ಅನ್ನುವುದು ಅಡಿಕೆ ಕೃಷಿಕರ ಅಭಿಪ್ರಾಯ.

ಹತ್ತಾರು ತೋಟಗಳಿಗೆ ಔಷಧ ಸಿಂಪಡಿಸುವ ಕೆಲಸದ ಜತೆಗೆ ಸಣ್ಣ ಮಟ್ಟಿನ ಅಡಿಕೆ ತೋಟ ಹೊಂದಿರುವ ಸುಳ್ಯದ ವಸಂತ ನಾಯ್ಕ ಹೇಳುವುದೇನೆಂದರೆ, ನಾನು ಅಡಿಕೆ ಮರವನ್ನು ನೆಲದಿಂದ ನಿಂತು ಮಾತ್ರ ನೋಡಿದವನಲ್ಲ. ಹಲವು ವರ್ಷಗಳಿಂದ ಅದರ ತುದಿಗೇರುತ್ತಿರುವವನು. ಈ ಸಲ ಬಿರು ಬಿಸಿಲು ಭಾರೀ ಹೊಡೆತ ನೀಡಿದೆ. ಪ್ರತಿಯೊಂದು ಅಡಿಕೆ ಮರದಲ್ಲಿ ಒಣಗಿದ ಹಿಂಗಾರವೇ ಕಾಣುತ್ತಿದೆ. ಬಿಸಿಲು, ಮಳೆ ಮತ್ತು ಗಾಳಿಯಿಂದ ಅಡಿಕೆ ಫ‌ಸಲು ಶೇ.50 ರಿಂದ 75ರಷ್ಟು ಕುಸಿಯುವ ಸಾಧ್ಯತೆ ಇದೆ!

ಪುತ್ತೂರು, ಸುಳ್ಯ, ಬಂಟ್ವಾಳ, ಕಡಬ, ಬೆಳ್ತಂಗಡಿ ತಾಲೂಕಿನ ಶೇ. 90ರಷ್ಟು ಜನರ ಆದಾಯದ ಮೂಲ ಅಡಿಕೆ. ಹಾಗಾಗಿ ಫಸಲು ನಷ್ಟದ ಪರಿಣಾಮ ಅವರ ಜೀವನದ ಮೇಲೆ ಪರಿಣಾಮ ಬೀರಬಹುದು ಎನ್ನುವುದು ಬೆಳೆಗಾರರ ಅಭಿಪ್ರಾಯ.

ವರ್ಷದಿಂದ ವರ್ಷಕ್ಕೆ ಫಸಲು ಇಳಿಕೆ ಹಾಗೂ ಹೊಸ ಹೊಸ ರೋಗಗಳು ಬರುತ್ತವೆ. ಈ ಬಾರಿ ವಿಪರೀತ ಮಳೆಯಿಂದ ಕೊಳೆ ರೋಗ ಬಂದಿದೆ. ಹಿಂದೆಲ್ಲ ಔಷಧ ಸಿಂಪಡಿಸಿದರೆ ಕೆಲವು ದಿನಗಳೊಳಗೆ ನಿಯಂತ್ರಣಕ್ಕೆ ಬರುತಿತ್ತು. ಈ ಬಾರಿ ಔಷಧ ಸಿಂಪಡಣೆ ಮಾಡಿದರೂ ನಿಯಂತ್ರಣವಾಗುತ್ತಿಲ್ಲ. ಬಿಸಿಲು- ಮಳೆಯಿಂದಾಗಿ ಶೇ.70ಕ್ಕಿಂತ ಅಧಿಕ ಫಸಲು ನಷ್ಟವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಪ್ರಗತಿಪರ ಕೃಷಿಕ ರಮೇಶ್‌ ದೇಲಂಪಾಡಿ.

Advertisement

ಕಳೆದ ವರ್ಷದಂತೆ ಈ ವರ್ಷವೂ ಫ‌ಸಲು ಕಡಿಮೆ ಆಗಿದೆ. ಬೇಸಗೆಯಲ್ಲಿ ಎರಡು ಬಾರಿ, ಮಳೆಗಾಲದಲ್ಲಿ ಒಂದು ಬಾರಿ ಔಷಧ ಸಿಂಪಡಿಸಿದ್ದೇನೆ. ನಾಲ್ಕನೇ ಬಾರಿ ಔಷಧ ಸಿಂಪಡಣೆಗೆ ಸಿದ್ಧತೆ ನಡೆದಿದೆ. ದೊಡ್ಡ ದೊಡ್ಡ ಎಳೆ ಅಡಿಕೆ ಕಾಯಿ ಉದುರುತ್ತಿದೆ ಎನ್ನುತ್ತಾರೆ ಪುತ್ತೂರು ತಾಲೂಕಿನ ಗಿಳಿಯಾಲು ಮಹಾಬಲೇಶ್ವರ ಭಟ್‌.

ನನ್ನ ತೋಟದಲ್ಲಿ ಕಳೆದ ಬಾರಿಗಿಂತ ಈ ಬಾರಿ ಶೇ.30ರಷ್ಟು ಫಸಲು ನಷ್ಟ ಆಗಬಹುದು. ಬಹುತೇಕವಾಗಿ ಹಿಂಗಾರ ಒಣಗಿದ್ದು, ಎಳೆ ನಳ್ಳಿ ಕೂಡ ಬಿದ್ದಿದೆ. ಮತ್ತೂಂದೆಡೆ ಅಡಿಕೆ ಧಾರಣೆ ಸ್ಥಿರವಾಗಿಲ್ಲ. ನಿರ್ವಹಣೆ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಕಾರ್ಮಿಕರ ಕೊರತೆಯೂ ಇದೆ. ಹೀಗಾಗಿ ರೋಗಬಾಧೆಯಿಂದ ಕಂಗೆಟ್ಟ ವರಿಗೆ ಈ ಸಮಸ್ಯೆ ದೊಡ್ಡ ಹೊಡೆತ ಮೂಡಿಸಿದೆ ಅನ್ನುತ್ತಾರೆ ಪೆರುವಾಜೆ ಗ್ರಾಮದ ನೀರ್ಕಜೆಯ ಪ್ರಗತಿಪರ ಕೃಷಿಕ ಸುಬ್ರಾಯ ಭಟ್‌.

ಕೊಳರೋಗ, ಬಿಸಿಲಿನ ಬಾಧೆ ದೀರ್ಘ‌ಕಾಲಿಕ ನಷ್ಟ ಉಂಟು ಮಾಡದಿದ್ದರೂ, ಈ ಬಾರಿ ಬೀಸಿದ ಗಾಳಿ ಮಳೆಯಿಂದ ಹಲವು ತೋಟಗಳಲ್ಲಿ ಅಡಿಕೆ ಮರ ನೆಲಕ್ಕುರುಳಿ ಶಾಶ್ವತ ನಷ್ಟ ಉಂಟು ಮಾಡಿದೆ. ಹೆಚ್ಚು ಫಸಲು ತುಂಬಿರುವ ಅಡಿಕೆ ಮರಗಳೇ ಬಿದ್ದಿವೆ. ಅಡಿಕೆ ಸಸಿ ನೆಟ್ಟು ಫಸಲು ಬರಬೇಕಾದರೆ ಮತ್ತೆ ನಾಲ್ಕೈದು ವರ್ಷ ಕಾಯಬೇಕು. ಆ ನಾಲ್ಕು ವರ್ಷಗಳಲ್ಲಿ ಬೆಳೆಗಾರನಿಗೆ ಆದಾಯ ಶೂನ್ಯವಾಗಿರುತ್ತದೆ ಎನ್ನುತ್ತಾರೆ ಕೃಷಿಕ ಹಾಗೂ ಎಂಜಿನಿಯರ್‌ ನರಸಿಂಹ ತೇಜಸ್ವಿ ಕಾನಾವು.

ವಿಪರೀತ ಬಿಸಿಲಿನ ಬೇಗೆಯಿಂದ ಅಡಿಕೆ ತೋಟಕ್ಕೆ ಹಾನಿಯಾಗಿರುವುದು ಈ ವರ್ಷದ ಹೆಚ್ಚುವರಿ ಸಮಸ್ಯೆ. ನನ್ನ ತೋಟಕ್ಕೆ ಟ್ಯಾಂಕರ್‌ ಮೂಲಕ ನೀರು ಹಾಯಿಸಬೇಕಾದ ಪರಿಸ್ಥಿತಿ ಬಂದದ್ದು ಇದೇ ಮೊದಲು. ಆದರೆ ಸಮಗ್ರ ಕೃಷಿ ಪದ್ಧತಿ, ಸಾವಯುವ ಗೊಬ್ಬರ ಬಳಕೆ, ನಿರ್ವಹಣೆಗೆ ಆದ್ಯತೆ ನೀಡಿದ ಕಾರಣ ನನ್ನ ತೋಟದಲ್ಲಿ ನಷ್ಟದ ಪ್ರಮಾಣ ಕಡಿಮೆ ಅನ್ನುತ್ತಾರೆ ಪ್ರತಿಪರ ಕೃಷಿಕ ಸುರೇಶ್‌ ಭಟ್‌ ಬಲ್ನಾಡು.

ಮದ್ದು ಸಿಂಪಡಣೆಗೂ ಮಳೆ ತೊಡಕು
ವಿಪರೀತ ಮಳೆಯ ಪರಿಣಾಮ ಕೆಲವು ತೋಟಗಳಲ್ಲಿ ಮೊದಲನೇ ಅವಧಿಯ ಔಷಧ ಸಿಂಪಡಣೆ ಸಾಧ್ಯವಾಗಿಲ್ಲ.
ಕೆಲವೆಡೆ ಎರಡನೇ ಅವಧಿಯ ಮದ್ದು ಸಿಂಪಡಣೆ ಬಾಕಿಯಿದೆ. ಹೀಗಾಗಿ ಕೊಳೆ ನಿಯಂತ್ರಣ ವಿಪರೀತವಾಗಿ ಹಬ್ಬುವ ಸಾಧ್ಯತೆ ಇದ್ದು, ಒಮ್ಮೆ ಮಳೆ ನಿಂತರೆ ಸಾಕು ಎನ್ನುತ್ತಾರೆ ರೈತರು.

ತೀವ್ರ ಬಿಸಿಲಿನಿಂದ ಕರಟಿದ್ದ ಹಿಂಗಾರದಿಂದ ಬಸವಳಿದಿದ್ದ ಅಡಿಕೆ ತೋಟದಲ್ಲಿ ಈಗ ಮಳೆ ಕಾರಣದಿಂದ ಕೊಳೆರೋಗ ಕಾಣಿಸಿಕೊಂಡಿರುವ ಬಗ್ಗೆ ಬೆಳೆಗಾರರಿಂದ ಇಲಾಖೆಗೆ ದೂರು ಬರುತ್ತಿದೆ. ನಷ್ಟದ ಅಂದಾಜು ಮಾಡಲು ರೋಗದ ತೀವ್ರತೆಯನ್ನು ಗಮನಿಸಬೇಕು. ಅದಕ್ಕಾಗಿ ಕೆಲವು ದಿನಗಳು ಬೇಕು.
ಸುಹನಾ,
ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ , ಸುಳ್ಯ

ಈ ಬಾರಿಯ ಬಿಸಿಲು
42 ಡಿಗ್ರಿ ಸೆಲ್ಸಿಯಸ್
ಅಡಿಕೆ ತೋಟಗಳು 35ರಿಂದ 36 ಡಿಗ್ರಿ ಸೆಲ್ಸಿಯಸ್ ತನಕದ ಉಷ್ಣಾಂಶವನ್ನು ತಾಳಿ ಕೊಳ್ಳುವ ಸಾಮರ್ಥ್ಯ ಹೊಂದಿವೆ. ಈ ಬಾರಿಯ ಬೇಸಗೆಯ ಬಿಸಿ 42 ಡಿಗ್ರಿಸೆಲ್ಸಿಯಸ್ ದಾಟಿತ್ತು. ಇದರಿಂದ ಹಿಂಗಾರ ಕರಟಿ ಹೋಗಿತ್ತು. ಕೆಲವು ಅಡಿಕೆ ಮರಗಳ ಬುಡದಲ್ಲಿ ಎಳೆಯ ನಳ್ಳಿಗಳು ರಾಶಿ ಬಿದ್ದಿತ್ತು. ಕಾಯಿ ಅಡಿಕೆ ಈಗ ಕೊಳೆರೋಗಕ್ಕೆ ತುತ್ತಾಗು ತ್ತಿದೆ ಅನ್ನುವ ಅಭಿಪ್ರಾಯ ಬೆಳೆಗಾರರದ್ದು.

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next