Advertisement

ಮನ್ಸೂರ್‌ ಖಾನ್‌ ವಿರುದ್ಧ ಸಮನ್ಸ್‌

07:46 AM Jun 21, 2019 | Team Udayavani |

ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣ ಕುರಿತು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯ (ಇ.ಡಿ) ತಲೆಮರೆಸಿಕೊಂಡಿರುವ ಮೊಹಮ್ಮದ್‌ ಮನ್ಸೂರ್‌ ಖಾನ್‌ ವಿರುದ್ಧ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿದೆ.

Advertisement

ಜೂ.10ರಂದು ಪ್ರಕರಣ ಬಯಲಾಗುತ್ತಿದ್ದಂತೆ ತೆರೆಮರೆಯಲ್ಲಿ ಐಎಂಎ ಸಮೂಹ ಸಂಸ್ಥೆಗಳು ಹಾಗೂ ಮನ್ಸೂರ್‌ ಖಾನ್‌ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದ ಇಡಿ ಅಧಿಕಾರಿಗಳು, ಇದೀಗ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಆತನ ವಿರುದ್ಧ ಲೇವಾದೇವಿ ನಿಯಂತ್ರಣ ಕಾಯ್ದೆ (ಪಿಎಂಎಲ್ಎ) ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೇಮಾ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾದ ಮನ್ಸೂರ್‌ ಖಾನ್‌ ಅವ್ಯವಹಾರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿರುವ ಜಾರಿ ನಿರ್ದೇಶನಾಲಯ, ಜೂ.24ರಂದು ಬೆಳಗ್ಗೆ 11 ಗಂಟೆಗೆ ಇ.ಡಿ ಕಚೇರಿಗೆ ಖುದ್ದು ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿದ್ದು, ಶಿವಾಜಿನಗರದಲ್ಲಿರುವ ಐಎಂಎ ಜ್ಯುವೆಲರ್ಸ್‌ ಸಂಸ್ಥೆ ಕಟ್ಟಡದ ಪ್ರವೇಶ ದ್ವಾರದಲ್ಲಿ ಸಮನ್ಸ್‌ ಅಂಟಿಸಿದ್ದರು. ಕೆಲ ಹೊತ್ತಿನ ಬಳಿಕ ತೆಗೆದಿದ್ದಾರೆ.

ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಆರ್‌.ಎಂ.ಬಸವರಾಜು ಸಮನ್ಸ್‌ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವ ಸಂದರ್ಭದಲ್ಲಿ ಒಂದು ಪಾಸ್‌ಪೋರ್ಟ್‌ ಫೋಟೋ, ಆಧಾರ್‌ಕಾರ್ಡ್‌, ಪಾಸ್‌ಪೋರ್ಟ್‌, ಪಾನ್‌ಕಾರ್ಡ್‌, ಭಾರತೀಯ ಮತ್ತು ವಿದೇಶಿ ಗುರುತಿನ ಚೀಟಿ, ವಿವಿಧ ಬ್ಯಾಂಕ್‌ಗಳಲ್ಲಿರುವ ಖಾತೆಗಳ ವಿವರ, ಪಾಸ್‌ಬುಕ್‌, ಭಾರತ ಮತ್ತು ವಿದೇಶದಲ್ಲಿರುವ ಸ್ಥಿರಾಸ್ತಿ, ಚರಾಸ್ತಿಗೆ ಸೇರಿದ ದಾಖಲೆಗಳು, ಸಂಸ್ಥೆ ಹಾಗೂ ವೈಯಕ್ತಿಕ ಆದಾಯ ತೆರಿಗೆ ಪಾವತಿಗೆ ಸಂಬಂಧಿಸಿದ ದಾಖಲೆಗಳು, ಸಂಸ್ಥೆಗೆ ಸೇರಿದ ಭಾರತ ಮತ್ತು ವಿದೇಶದ ದಾಖಲೆಗಳನ್ನು ಕಡ್ಡಾಯವಾಗಿ ತರಲೇಬೇಕು ಎಂದು ಸಮನ್ಸ್‌ನಲ್ಲಿ ಸೂಚಿಸಿದ್ದಾರೆ.

ಎಸ್‌ಐಟಿಗೆ ಇ.ಡಿ ಸಾಥ್‌: ಪ್ರಕರಣದಲ್ಲಿ ಮಧ್ಯಪ್ರವೇಶಿಸಿರುವ ಜಾರಿ ನಿರ್ದೇಶನಾಲಯ, ತನಿಖೆಯಲ್ಲಿ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಸಾಥ್‌ ನೀಡಿದ್ದು, ಜಂಟಿ ಕಾರ್ಯಾಚರಣೆ ನಡೆಸುತ್ತಿವೆ. ಗುರುವಾರ ಬೆಳಗ್ಗೆ ಬೀಗ ಮುದ್ರೆ ಹಾಕಿದ್ದ ಶಿವಾಜಿನಗರದ ಐಎಂಎ ಜ್ಯುವೆಲರ್ಸ್‌ ಪ್ರವೇಶ ದ್ವಾರವನ್ನು ತೆರೆದ ಡಿಸಿಪಿ ಗಿರೀಶ್‌, ಎಸಿಪಿ ಬಾಲರಾಜ್‌, ರವಿಶಂಕರ್‌ ನೇತೃತ್ವದ ಎಸ್‌ಐಟಿ ತಂಡ ಹಾಗೂ ಇಡಿಯ ಸಹಾಯಕ ನಿರ್ದೇಶಕ ಬಸವರಾಜು ಅವರ ನೇತೃತ್ವದ ತಂಡ ತಡರಾತ್ರಿವರೆಗೂ ಜ್ಯುವೆಲರ್ಸ್‌ನಲ್ಲಿರುವ ಕೆಜಿಗಟ್ಟಲೇ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ಲಾಕರ್‌ನಲ್ಲಿರುವ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಆರೇಳು ಟ್ರಂಕ್‌ಗಳಲ್ಲಿ ಅವುಗಳನ್ನು ತೆಗೆದುಕೊಂಡು ಹೋಗಿದೆ.

ಕೆಲ ತಿಂಗಳ ಹಿಂದೆಯೇ ದೇಶ ಬಿಟ್ಟು ತೆರಳಲು ಸಿದ್ದತೆ ನಡೆಸಿದ್ದ ಮನ್ಸೂರ್‌ ಖಾನ್‌, ಜೂನ್‌ ಮೊದಲ ವಾರದಲ್ಲೇ ಚಿನ್ನಾಭರಣ ಮಳಿಗೆಯಲ್ಲಿರುವ ಚಿನ್ನಾಭರಣಗಳನ್ನು ಬೇರೆಡೆ ಸಾಗಾಟ ಮಾಡಿದ್ದಾನೆ ಎಂದು ಹೇಳಲಾಗಿದೆ. ಈ ಅವಧಿಯಲ್ಲಿ ಅಂಗಡಿಯಿಂದ ಅನುಮಾನಸ್ಪದವಾಗಿ ಕೆಲ ಬಾಕ್ಸ್‌ಗಳನ್ನು ಹೊರಗಡೆ ಕೊಂಡೊಯ್ಯಲಾಗಿದೆ. ಈ ದೃಶ್ಯ ಅಲ್ಲಿರುವ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಪ್ರಧಾನಿ ನರೇಂದ್ರ ಮೋದಿಗೆ ಪತ್ರ:

ಐಎಂಎ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ ಲಕ್ಷಾಂತರ ರೂ. ಕಳೆದುಕೊಂಡಿ ರುವ ಸಂತ್ರಸ್ತರಿಗೆ ನ್ಯಾಯ ಕೊಡಿಸಿ, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಹಜರತ್‌ ಟಿಪ್ಪುಸುಲ್ತಾನ್‌ ಅಮನ್‌ ಫೆಡರೇಷನ್‌ನ ಬೆಂಗಳೂರು ಅಧ್ಯಕ್ಷ ಮುರ್ತುಜಾ ಖಾನ್‌ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್‌, ಜಂಟಿ ನಿರ್ದೇಶಕ ಅಮಿತ್‌ ನಾರಾ ಅವರಿಗೆ ಪತ್ರ ಬರೆದಿರುವ ಮುರ್ತುಜಾ ಖಾನ್‌, ಅಧಿಕ ಬಡ್ಡಿ ಹಾಗೂ ಲಾಂಭಾಂಶ ಕೊಡುವುದಾಗಿ 13 ವರ್ಷಗಳಿಂದ ಮೊಹಮ್ಮದ್‌ ಮನ್ಸೂರ್‌ ಖಾನ್‌ ಶಿವಾಜಿನಗರದಲ್ಲಿರುವ ಐಎಂಎಂ ಸಂಸ್ಥೆ ಮೂಲಕ ಸಾವಿರಾರು ಮಂದಿಯಿಂದ 1,600 ಕೋಟಿ ರೂ.ಗೂ ಅಧಿಕ ಹಣ ಸಂಗ್ರಹಿಸಿದ್ದಾನೆ. ಆದರೆ, ಇದೀಗ ಹಣ ಹಿಂದಿರುಗಿಸದೆ ಆರೋಪಿ ಜೂನ್‌ 10ರಿಂದ ತಲೆಮರೆಸಿಕೊಂಡಿದ್ದು, ಹೂಡಿಕೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಸಂಬಂಧ ಆರೋಪಿಯ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದುವರೆಗೂ 40 ಸಾವಿರಕ್ಕೂ ಅಧಿಕ ದೂರುಗಳು ದಾಖಲಾಗಿವೆ. ಹೀಗಾಗಿ ಸಂಘಟನೆಯ ಮನವಿಯನ್ನು ಪರಿಗಣಿಸಿ ಹೂಡಿಕೆ ಮಾಡಿರುವ 2.25 ಲಕ್ಷ ಮಂದಿಗೆ ನ್ಯಾಯ ಕೊಡಿಸಬೇಕು ಎಂದು ಮುರ್ತುಜಾ ಖಾನ್‌ ಪತ್ರದಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next