Advertisement

ಸುಳ್ಯ ಕಾಳ್ಗಿಚ್ಚು ತೀವ್ರ: ನಿಯಂತ್ರಣಕ್ಕೆ ಹರಸಾಹಸ, ಆತಂಕ

11:32 PM Mar 13, 2023 | Team Udayavani |

ಸುಳ್ಯ : ತಾಲೂಕಿನ ಮಡಪ್ಪಾಡಿ ಭಾಗದಲ್ಲಿ ಉಂಟಾಗಿರುವ ಕಾಳ್ಗಿಚ್ಚಿನ ನಿಯಂತ್ರಣ ತ್ರಾಸದಾಯಕ ವಾಗಿದ್ದು, ಅರಣ್ಯ ಸಿಬಂದಿ ಹಾಗೂ ಸ್ಥಳೀಯರಿಗೆ ಬೆಂಕಿ ನಂದಿಸಲು ತೀವ್ರ ಹರಸಾಹಸ ಪಡುತ್ತಿದ್ದಾರೆ.

Advertisement

ಮಡಪ್ಪಾಡಿ ಸಮೀಪದ ಶೀರಡ್ಕ, ಹಾಡಿಕಲ್ಲು ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಕಾಳ್ಗಿಚ್ಚು ಉಂಟಾಗಿತ್ತು. ಅರಣ್ಯ ಇಲಾಖೆಯ ತಂಡ ಸ್ಥಳದಲ್ಲಿ ಬೀಡುಬಿಟ್ಟು ಕಾಳ್ಗಿಚ್ಚು ನಂದಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

ರವಿವಾರ ಶೀರಡ್ಕ ಭಾಗದಲ್ಲಿ ಕಾಳ್ಗಿಚ್ಚು ಹಬ್ಬಿದ್ದು, ಬೆಂಕಿಯ ಕೆನ್ನಾಲಿಗೆ ಮತ್ತು ಹೊಗೆ ಏಳುವುದು ಮಡಪ್ಪಾಡಿಗೆ ಕಾಣಿಸಿತ್ತು. ಸೋಮವಾರವೂ ಬೆಂಕಿಯ ತೀವ್ರತೆ ಮುಂದುವರಿದಿದೆ.

ಹಾಡಿಕಲ್ಲು ಭಾಗದಲ್ಲಿ ಬೆಂಕಿಯ ತೀವ್ರತೆ ಹೆಚ್ಚಿದ್ದು, ಕಾರ್ಯಾಚರಣೆ ಯನ್ನು ಸಮರ್ಪಕವಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಅಗ್ನಿಶಾಮಕ ದಳದ ವಾಹನ ತೆರಳಲು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಸಿಬಂದಿ ಹಾಗೂ ಸ್ಥಳೀಯರು ಜತೆಗೂಡಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ.

ನಿಯಂತ್ರಣ ಕಷ್ಟಸಾಧ್ಯವಾಗುತ್ತಿದ್ದು, ಬೆಂಕಿ ವ್ಯಾಪಕವಾಗಿ ಹಬ್ಬುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಡಪ್ಪಾಡಿ ಭಾಗದಲ್ಲಿ ಬೆಂಕಿ ನಂದಿಸುವುದರ ಜತೆಗೆ ಬೆಂಕಿ ಮತ್ತಷ್ಟು ವಿಸ್ತರಿಸದಂತೆ ಬ್ಲೋವರ್‌ ಮುಖಾಂತರ ತರಗೆಲೆಗಳನ್ನು ಬದಿಗೆ ಸೇರಿಸಲಾಯಿತು ಎಂದು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರು ಮಾಹಿತಿ ನೀಡಿದ್ದಾರೆ.

Advertisement

ಬಿದಿರು, ಕೆಲವು ಮರಗಳಿಗೆ ಬೆಂಕಿ ಹಬ್ಬಿದೆ. ಒಣ ಹುಲ್ಲು, ತರಗೆಲೆ ಗಳಿಂದಾಗಿ ಬೆಂಕಿ ತೀವ್ರವಾಗಿ ಹರಡು ತ್ತಿದೆ. ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯಲ್ಲಿ ಕಾಳ್ಗಿಚ್ಚು ತೀವ್ರವಾಗಿದೆ. ಕೆಲವರ ರಬ್ಬರ್‌ ತೋಟದ ಸಮೀಪದ ವರೆಗೂ ಬೆಂಕಿ ಹಬ್ಬಿದ್ದು, ಸ್ಥಳಿಯರಲ್ಲಿ ಆತಂಕ ಎದುರಾಗಿದೆ.

ಮರ್ಕಂಜದ ಮೈರಾಜೆ ಕಾಡಿಗೆ ಎರಡು-ಮೂರು ದಿನಗಳ ಹಿಂದೆ ಬೆಂಕಿ ಬಿದ್ದಿದ್ದು, ಅದು ನಿಯಂತ್ರಣಕ್ಕೆ ಬರುವ ಮೊದಲೇ ಸಮೀಪದ ಅಜ್ಜಿಕಲ್ಲು -ಕುಧ್ಕುಳಿ ಭಾಗದ ಗುಡ್ಡದಲ್ಲಿ ಬೆಂಕಿ ಅನಾಹುತ ಉಂಟಾಗಿದೆ. ರವಿವಾರ ರಾತ್ರಿ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.

ಅರಣ್ಯ ಪ್ರದೇಶದಲ್ಲಿ ಬೆಂಕಿಯ ತೀವ್ರತೆ ಹೆಚ್ಚಿರುವುದರಿಂದ ಪೂರ್ಣ ವಾಗಿ ಶಮನಗೊಳ್ಳುವ ವರೆಗೆ ಎಷ್ಟು ವಿಸ್ತೀರ್ಣದಲ್ಲಿ ಅರಣ್ಯ ಹಾನಿಗೀಡಾಗಿದೆ ಎಂಬ ಮಾಹಿತಿ ಸಂಗ್ರಹಿಸುವುದು ಕಷ್ಟಸಾಧ್ಯ ಎನ್ನುತ್ತಾರೆ ಅಧಿಕಾರಿಗಳು.

ಕಡಬದ ನಿಡ್ಡೋ, ಹೇರದಲ್ಲೂ ಬೆಂಕಿ
ಸುಬ್ರಹ್ಮಣ್ಯ: ಕಡಬ ತಾಲೂಕಿನ ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯ ಹೇರ, ನಿಡ್ಡೋ ಅರಣ್ಯ ಪ್ರದೇಶದಲ್ಲೂ ಬೆಂಕಿ ಅನಾಹುತ ಉಂಟಾಗಿದೆ.

ರವಿವಾರ ಬೆಂಕಿ ಅನಾಹುತದ ಬಗ್ಗೆ ತಿಳಿದುಬಂದಿದೆ ಎನ್ನಲಾಗಿದೆ. ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯ ನಿಡ್ಡೋ, ಕಾನಾವು ಭಾಗದಲ್ಲಿ ಬೆಂಕಿ ತರಗೆಲೆ, ಪೊದೆಗಳಲ್ಲಿ ಹೊತ್ತಿ ಉರಿಯುತ್ತಿದೆ. ಹೇರ ಪ್ರದೇಶದಲ್ಲೂ ವ್ಯಾಪಕವಾಗಿದೆ. ನಿಡ್ಡೋದಲ್ಲಿ ಪುತ್ತೂರು ಅಗ್ನಿಶಾಮಕ ದಳದ ಸಹಕಾರದೊಂದಿಗೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೇರ ಭಾಗದಲ್ಲಿ ಅರಣ್ಯ ಸಿಬಂದಿ, ಸ್ಥಳೀಯರ ಸಹಕಾರದಲ್ಲಿ ಬೆಂಕಿ ನಂದಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next