Advertisement

ನಳಿನ್‌ಗೆ ಗರಿಷ್ಠ ಲೀಡ್‌ ಕೊಟ್ಟ ಸುಳ್ಯ

05:52 PM May 24, 2019 | Team Udayavani |

ಸುಳ್ಯ: ಲೋಕಸಭಾ ಚುಣಾವಣ ಫಲಿತಾಂಶಕ್ಕೆ ಸಂಬಂಧಿಸಿ ಸುಳ್ಯ ವಿಧಾನಸಭಾ ಕ್ಷೇತ್ರ ಹಲವು ಕಾರಣಗಳಿಗೆ ಜಿಲ್ಲೆಯಲ್ಲಿ ಅಗ್ರಸ್ಥಾನ ಪಡೆದಿದೆ. ಲೋಕಸಭಾ ಚುನಾವಣೆಯಲ್ಲಿ ದಾಖಲಾದ ಮತದಾನ ಪ್ರಮಾಣ, ಗೆದ್ದ ಅಭ್ಯರ್ಥಿಯ ಮುನ್ನಡೆಯ ಅಂತರ, ಗರಿಷ್ಠ ಸಂಸದರನ್ನು ಕೊಟ್ಟ ಕ್ಷೇತ್ರ ಎನ್ನುವ ಎಲ್ಲ ಕಾರಣಗಳಿಂದ ಸುಳ್ಯ ಈ ಬಾರಿ ಗಮನ ಸೆಳೆದಿದೆ.

Advertisement

ಹಿನ್ನಡೆಯಲ್ಲಿ ಟಾಪರ್‌
ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ಸುಳ್ಯದಲ್ಲಿ ಅತಿ ಹೆಚ್ಚು ಮತದಾನವಾಗಿತ್ತು. ಶೇ. 84.21ರಷ್ಟು ಮತ ಚಲಾವಣೆಗೊಂಡಿದ್ದವು. ಮತ ಎಣಿಕೆ ಬಳಿಕ ವಿಜೇತ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ಅವರಿಗೆ ಜಿಲ್ಲೆಯಲ್ಲೇ 47,159 ಅತಿ ಹೆಚ್ಚು ಮತಗಳ ಲೀಡ್‌ ದೊರಕಿದ್ದು ಸುಳ್ಯದಲ್ಲೇ. ಪರಾಜಿತ ಅಭ್ಯರ್ಥಿ ಮಿಥುನ್‌ ರೈ ಅತಿ ಕಡಿಮೆ ಮತಗಳನ್ನು ಪಡೆದ ಕ್ಷೇತ್ರವೂ ಸುಳ್ಯವೇ ಆಗಿದೆ.

ಮತ್ತೆ ಮೂವರು ಸಂಸದರು!
ಕ್ಷೇತ್ರದ ಮೂವರು ಈ ಬಾರಿಯೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇದೂ ಒಂದು ದಾಖಲೆಯೇ. ಸುಳ್ಯ ವಿಧಾನಸಭಾ ಕ್ಷೇತ್ರದ ಪಾಲ್ತಾಡಿ ಗ್ರಾಮದ ಕುಂಜಾಡಿ ನಿವಾಸಿ ನಳಿನ್‌ ಕುಮಾರ್‌ ಕಟೀಲು (ದ.ಕ.), ಮಂಡೆಕೋಲು ಗ್ರಾಮದ ದೇವರಗುಂಡ ನಿವಾಸಿ ಡಿ.ವಿ. ಸದಾನಂದ ಗೌಡ (ಬೆಂಗಳೂರು- ಉತ್ತರ) ಚಾರ್ವಾಕ ಗ್ರಾಮದ ಕರಂದ್ಲಾಜೆ ನಿವಾಸಿ ಶೋಭಾ ಕರಂದ್ಲಾಜೆ (ಉಡುಪಿ – ಚಿಕ್ಕಮಗಳೂರು) ಸಂಸದರಾಗಿದ್ದಾರೆ.

ಸನಿಹದಲ್ಲಿ ಕಾಂಗ್ರೆಸ್‌
2019ರ ಚುನಾವಣೆಯಲ್ಲಿ ಶೇ. 84.21ರಷ್ಟು ಮತದಾನವಾಗಿತ್ತು. 2,00,579 ಮತದಾರರ ಪೈಕಿ 1,78,912 ಮಂದಿ ಮತ ಚಲಾಯಿಸಿದ್ದರು. 1,00,948 ಮಹಿಳಾ ಮತದಾರರ ಪೈಕಿ 94,557 ಮಂದಿ ಹಾಗೂ 99,631 ಪುರುಷ ಮತದಾರರ ಪೈಕಿ 84,355 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು. ಬಿಜೆಪಿ ಇಲ್ಲಿ 1,05,109 ಮತಗಳಿಸಿದರೆ, ಕಾಂಗ್ರೆಸ್‌ 57,950 ಮತ ಗಳಿಸಿತ್ತು. ಇಲ್ಲಿ ಬಿಜೆಪಿ 47,159 ಮತ ಮುನ್ನಡೆ ಗಳಿಸಿತ್ತು. ಅಂದರೆ ಇಲ್ಲಿ ಕಾಂಗ್ರೆಸ್‌ ಬಿಜೆಪಿ ಕಾಯ್ದುಕೊಂಡ ಮುನ್ನಡೆ ಮತಗಳಿಗಿಂತ 10,791 ಮತಗಳನ್ನಷ್ಟೇ ಹೆಚ್ಚು ಪಡೆಯಲು ಶಕ್ತವಾಗಿದೆ.

ಈ ಹಿಂದಿನ ಎಲ್ಲ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಭಾರೀ ಮುನ್ನಡೆ ಪಡೆದಿದ್ದರೆ, ಕಾಂಗ್ರೆಸ್‌ ಭಾರೀ ಹಿನ್ನಡೆ ಅನುಭವಿಸಿದೆ. ಬಿಜೆಪಿಗೆ ಪವರ್‌ ಬ್ಯಾಂಕ್‌ ಎಂದೇ ಜನಜನಿತವಾಗಿರುವ ಸುಳ್ಯ ವಿಧಾನಸಭಾ ಕ್ಷೇತ್ರ ಅದನ್ನು ಮಗದೊಮ್ಮೆ ಸಾಬೀತುಪಡಿಸಿದೆ. ಈ ಬಾರಿ ಇದು ಬಿಜೆಪಿ ಈ ತನಕದ ಚುನಾವಣೆಯಲ್ಲಿ ಪಡೆದ ಗರಿಷ್ಠ ಮುನ್ನಡೆ ಮತವಿದು ಮತ್ತು ದ.ಕ. ಜಿಲ್ಲೆಯಲ್ಲಿನ ಗರಿಷ್ಠ ಅಂತರವೂ ಹೌದು.

Advertisement

ದೇವಾಲಯಗಳಿಗೆ ಸಂಸದ ನಳಿನ್‌ ಭೇಟಿ
ಪುತ್ತೂರು: ಮೂರನೇ ಬಾರಿಗೆ ದ.ಕ. ಜಿಲ್ಲಾ ಸಂಸದರಾಗಿ ಆಯ್ಕೆಯಾದ ನಳಿನ್‌ ಕುಮಾರ್‌ ಕಟೀಲು ಶುಕ್ರವಾರ ನಗರಕ್ಕೆ ಆಗಮಿಸಿ ವಿವಿಧ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ನೂರಾರು ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ನಳಿನ್‌ ಕುಮಾರ್‌ ಕಟೀಲು ಅವರನ್ನು ಸ್ವಾಗತಿಸಿ ಅವರ ಜತೆ ದೇವಾಲಯಗಳಿಗೆ ತೆರಳಿ, ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಸಂಸದರನ್ನು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ ಸ್ವಾಗತಿಸಿದರು. ಬಳಿಕ ಶ್ರೀ ಲಕ್ಷ್ಮೀವೆಂಕಟರಮಣ ದೇವಾಲಯ, ಮಹಾಮ್ಮಾಯ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಅನಂತರ ಪಕ್ಷದ ಕಚೇರಿಯಲ್ಲಿ ನಡೆದ ಅಭಿನಂದನ ಸಭೆಯಲ್ಲಿ ಭಾಗವಹಿಸಿದರು.

ದ.ಕ.ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್‌, ಲೋಕಸಭಾ ಚುನಾವಣೆಯ ಜಿಲ್ಲಾ ಸಂಚಾಲಕ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಪುತ್ತೂರು ನಗರ ಮಂಡಲ ಅಧ್ಯಕ್ಷ ಜೀವಂಧರ್‌ ಜೈನ್‌, ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ವಿದ್ಯಾಗೌರಿ ಸಹಿತ ಸ್ಥಳೀಯ ಜನಪ್ರತಿನಿಧಿಗಳು, ಪಕ್ಷ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next