Advertisement

ದೂರದಲ್ಲಿರುವ ತಾಲೂಕು ಹತ್ತಿರವಾಗಲಿದೆ!

10:18 PM Feb 26, 2021 | Team Udayavani |

ಪುತ್ತೂರು: ಪ್ರಸ್ತುತ ದ.ಕ. ಜಿಲ್ಲಾ ಕೇಂದ್ರ ಸ್ಥಾನದಿಂದ ಅತೀ ದೂರದಲ್ಲಿರುವ ಪ್ರದೇಶ ಎಂದರೆ ಸುಳ್ಯ. ಗ್ರಾಮಾಂತರ ತಾಲೂಕುಗಳಿಗೆ ಕೇಂದ್ರವಾಗಿರುವ ಪುತ್ತೂರು ಜಿಲ್ಲೆಯಾದಲ್ಲಿ ಹೊಸ ಜಿಲ್ಲೆಗೆ ಅತೀ ಹತ್ತಿರದ ತಾಲೂಕು ಸುಳ್ಯ ಎಂದೆನಿಸಲಿದೆ.

Advertisement

ಇದು ಹಲವು ದಿಕ್ಕಿನಲ್ಲಿ ಲಾಭದಾಯಕವೂ ಆಗಬಹುದು. ಮುಖ್ಯವಾಗಿ ಜಿಲ್ಲಾ ಕೇಂದ್ರದ ಅನಂತರ ಎರಡನೇ ಹಂತದ ಬೆಳವಣಿಗೆಯ ತಾಲೂಕು ಆಗಿ ಸುಳ್ಯಕ್ಕೆ ಪ್ರಾಶಸ್ತ್ಯ ಸಿಗಲಿದೆ. ಒಂದು ಕಾಲದಲ್ಲಿ ಪುತ್ತೂರಿನ ತಾಲೂಕಿನೊಳಗಿದ್ದ ಸುಳ್ಯವು ಜಿಲ್ಲೆಯ ಮೂಲಕ ಪುತ್ತೂರಿಗೆ ನಿಕಟವಾಗಲಿದೆ.

ತುರ್ತು ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಗಾಗಿ ಸುಳ್ಯಕ್ಕೆ ಜಿಲ್ಲಾ ಪೊಲೀಸರು, ಸಶಸ್ತ್ರಪಡೆಗಳು ಮಂಗಳೂರಿ ನಿಂದಲೇ ಬರಬೇಕಾದ ಪರಿಸ್ಥಿತಿ ಇದೆ. ಅದು ಸಂಚಾರದ ದೃಷ್ಟಿಯಿಂದ, ತ್ವರಿತ ಸ್ಪಂದನೆಯ ದೃಷ್ಟಿಯಿಂದ ಅನನುಕೂಲ ಎಂಬ ಅಭಿಪ್ರಾಯ ಮೊದಲಿನಿಂದಲೇ ಇದೆ. ಕೊಡಗು, ಕಾಸರಗೋಡು ಅಂತಾರಾಜ್ಯ, ಅಂತರ್‌ ಜಿಲ್ಲೆ ಗಡಿ ವ್ಯಾಪ್ತಿ ಹೊಂದಿ ರುವ ಸುಳ್ಯಕ್ಕೆ ಪುತ್ತೂರು ಹೊಸ ಜಿಲ್ಲೆ ಯಾಗುವುದರಿಂದ ಪೊಲೀಸ್‌ ವರಿಷ್ಠಾ ಧಿಕಾರಿ ಕಚೇರಿ ವ್ಯಾಪ್ತಿ  ಪುತ್ತೂರಿಗೆ ವರ್ಗಗೊಂಡು ಸುಳ್ಯಕ್ಕೆ ಹತ್ತಿರವಾಗ ಲಿದೆ. ಇದು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪೂರಕವೂ ಆಗಲಿದೆ.

ಸುಳ್ಯ ತಾಲೂಕು ಪ್ರಾಕೃತಿಕ ಸಂಪತ್ತು ಆವರಿತ ನೆಲೆ. 2011ರ ಜನಗಣತಿ ಪ್ರಕಾರ 1.45 ಲಕ್ಷ ಜನಸಂಖ್ಯೆ ಹೊಂದಿರುವ ಸುಳ್ಯದಲ್ಲಿ 34 ಗ್ರಾಮ ಗಳು, 25 ಗ್ರಾ.ಪಂ.ಗಳಿವೆ. ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ದಾಟಿಕೊಂಡು ದ.ಕ.ಜಿಲ್ಲೆಯ ಕೇಂದ್ರ ಸ್ಥಾನ ಮಂಗಳೂರಿಗೆ ಸಂಪರ್ಕ ಹೊಂದಿದ್ದು, ಪ್ರಮುಖ ಕೆಲಸ ಕಾರ್ಯಗಳಿಗಾಗಿ ಇಷ್ಟೊಂದು ದೂರ ಹೋಗಿ ಬರುವುದೇ ದೊಡ್ಡ ಸಮಸ್ಯೆಯಾಗಿದೆ.

ಭೌಗೋಳಿಕವಾಗಿ ಅತ್ಯಂತ ಹೆಚ್ಚು ಸೇತುವೆ, ರಸ್ತೆ ಬೇಡಿಕೆ ಇಲ್ಲಿನದು. ಹಲವು ಮೂಲಸೌಕರ್ಯಗಳ ಈಡೇರಿಕೆಯ ಕೂಗಿಗೆ ದಶಕಗಳೇ ಕಳೆದಿವೆ. ವಿದ್ಯುತ್‌, ಒಳಚರಂಡಿ, ಸೇತುವೆ, ರಸ್ತೆ, ಸಂಚಾರ ಠಾಣೆ, ತಾಲೂಕು ಕ್ರೀಡಾಂಗಣ ಹೀಗೆ ಮೂಲ ಸೌಕರ್ಯಗಳ ಬೇಡಿಕೆಯ ಪಟ್ಟಿಯೇ ಸಾಕಷ್ಟು ಉದ್ದವಿದೆ.

Advertisement

ಎರಡು ಜಿಲ್ಲೆಯ ಸಂಪರ್ಕ ಊರು :

ಸುಳ್ಯವು ಎರಡು ಜಿಲ್ಲೆಗೆ ಸಂಪರ್ಕ ಹೊಂದಿರುವ ತಾಲೂಕು. ಕೊಡಗು, ಕೇರಳ ರಾಜ್ಯದ ಕಾಸರಗೋಡು ಸುಳ್ಯದ ಗಡಿ ಭಾಗದ ಜಿಲ್ಲೆಗಳು. ಈ ಎರಡು ಜಿಲ್ಲೆಗಳು ಶೈಕ್ಷಣಿಕ, ಆರೋಗ್ಯ, ಕೃಷಿ ವ್ಯವಹಾರಗಳಿಗಾಗಿ ಸುಳ್ಯವನ್ನು ಆಶ್ರಯಿ ಸಿದೆ. ಅಂತಾರಾಜ್ಯ, ಅಂತರ್‌ ಜಿಲ್ಲೆಯ ಗಡಿ ಹೊಂದಿದೆ. ಈ ಕಾರಣಗಳಿಂದ ಕಾಣಿಯೂರು, ಕಾಞಂ ಗಾಡು ರೈಲ್ವೇ ಮಾರ್ಗ ನಿರ್ಮಾಣದ ಕೂಗು ಇದ್ದು, ಹೊಸ ಜಿಲ್ಲೆ ರಚನೆಯಿಂದ ಒತ್ತಡಕ್ಕೆ ಇನ್ನಷ್ಟು ಬಲ ದೊರೆಯಲಿದೆ.

ಆಸ್ಪತ್ರೆಗಳಿಗೆ, ಉನ್ನತ ವ್ಯಾಸಂಗಕ್ಕೆ ಸಂಬಂಧಿಸಿ ಸುಳ್ಯವು ಪುತ್ತೂರನ್ನು ಆಶ್ರಯಿಸಿದೆ. ಕಂದಾಯ ಇಲಾಖೆಗೆ ಸಂಬಂಧಿಸಿ ಉಪವಿಭಾಗ, ರಕ್ಷಕ ವಿಭಾಗದ ಎಎಸ್ಪಿ, ಅಂಚೆ, ಕೆಎಸ್‌ಆರ್‌ಟಿಸಿ ವಿಭಾಗ ಕಚೇರಿಗೆ ಪುತ್ತೂರು ಕೇಂದ್ರ ನೆಲೆ. ಈ ಎಲ್ಲ ಕಾರಣಗಳಿಂದ ಪುತ್ತೂರು ಜಿಲ್ಲೆಯಾದಲ್ಲಿ ಎಲ್ಲ ರಂಗಗಳಲ್ಲಿ ಸುಳ್ಯಕ್ಕೆ ಸಿಗುವ ಮನ್ನಣೆ ಹೆಚ್ಚಾಗಲಿದೆ.

ಪುತ್ತೂರಿನೊಂದಿಗೆ ಸೇರಿತ್ತು! :

1952ರಿಂದ ಪ್ರಥಮ ಪಂಚ ವಾರ್ಷಿಕ ಯೋಜನೆ ಮೂಲಕ ಸುಳ್ಯ ಪರಿಶೀಲನಾರ್ಥವಾಗಿ ಬ್ಲಾಕ್‌ ಮಟ್ಟದ ಅಭಿವೃದ್ಧಿ ಕಾರ್ಯಗಳಿಗೆ ಒಳಪಟ್ಟು ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಚಾಲನೆ ಸಿಕ್ಕಿತ್ತು. 1962ರಲ್ಲಿ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗಿ, ಪುತ್ತೂರಿನ ದ್ವಿಸದಸ್ಯ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿತ್ತು. 1961ರಿಂದ ಪುತ್ತೂರಿನಿಂದ ಪ್ರತ್ಯೇಕಗೊಂಡು ಸುಳ್ಯ ತಾಲೂಕು ರೂಪುಗೊಳ್ಳಲು ಆರಂಭಿಸಿದ ಪ್ರಯತ್ನ 1965ರಲ್ಲಿ ಯಶ ಕಂಡಿತ್ತು. 1965ರಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಿದ್ದ ನಿಜಲಿಂಗಪ್ಪ ಅವರು ಸುಳ್ಯ ತಾ| ಬೇಡಿಕೆ ಕಡತಕ್ಕೆ ಸಹಿ ಹಾಕಿದರು. 1965 ಡಿ. 17ರಂದು ಸುಳ್ಯದ ಬಿಡಿಒ ಕಚೇರಿ ಮುಂಭಾಗದಲ್ಲಿ ನೂರಾರು ಜನರು ಸೇರಿದ್ದ ಚಪ್ಪರದಡಿಯಲ್ಲಿ ನಿಜಲಿಂಗಪ್ಪ ಅವರು ಹೊಸ ತಾಲೂಕು ಉದ್ಘಾಟಿಸಿದ್ದರು.

 

ಪುತ್ತೂರು ಜಿಲ್ಲೆಯಾಗಬೇಕು ಎಂಬ ಬೇಡಿಕೆ ಇದ್ದು ಈ ಬಗ್ಗೆ ಸರಕಾರದ ಹಂತದಲ್ಲಿ ಈ ತನಕ ಆಗಿರುವ ಪ್ರಗತಿಯನ್ನು ಪರಿಶೀಲಿಸುತ್ತೇನೆ. “ಪುತ್ತೂರು ಜಿಲ್ಲೆಯಾಗಲಿ-ಇದು ಜನಾಗ್ರಹ’ ಉದಯವಾಣಿ ಸುದಿನ ಹಮ್ಮಿಕೊಂಡಿರುವ ಅಭಿಯಾನಕ್ಕೆ ಸಂಬಂಧಿಸಿ, ಕೆಲವು ವರ್ಷಗಳಿಂದ ಈ ಬಗ್ಗೆ ಬೇಡಿಕೆ ಇದೆ. ಜಿಲ್ಲೆಯಾಗಿ ರೂಪಿಸಲು ಈಗಾಗಲೇ ಸರಕಾರದ ಹಂತದಲ್ಲಿ ಆಗಿರುವ ಬೆಳವಣಿಗೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ಮಾಹಿತಿ ಪಡೆಯುತ್ತೇನೆ. ಅದರ ಸಾಧ್ಯತೆಗಳ ಬಗ್ಗೆ ಪರಿಶೀಲಿಸುತ್ತೇನೆ. ಜಿಲ್ಲೆ ರಚನೆಯ ಬಗ್ಗೆ ನೀಡಬೇಕಾದ ಸಹಕಾರ, ಆಗಬೇಕಾದ ಮೂಲ ಸೌಕರ್ಯ, ಪ್ರಗತಿ ಕಾರ್ಯಗಳ ಬಗ್ಗೆಯೂ ಸ್ಥಳೀಯ ಶಾಸಕರ ಜತೆಗೆ ಚರ್ಚಿಸಿ ಮಾಹಿತಿ ಪಡೆಯುತ್ತೇನೆ. ಎಸ್‌.ಅಂಗಾರ, ಸಚಿವರು,  ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಖಾತೆ

Advertisement

Udayavani is now on Telegram. Click here to join our channel and stay updated with the latest news.

Next