Advertisement

ಸುಜನಾ ಸುಳ್ಯಗೆ ಯಕ್ಷ ಪ್ರಶಸ್ತಿ

12:30 AM Mar 15, 2019 | |

ಯಕ್ಷರಂಗದ ಸವ್ಯಸಾಚಿ ಸುಜನಾ ಸುಳ್ಯ ಮೊಗಸಾಲೆ ಶಾರದಮ್ಮ ಯಕ್ಷ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಾ.17ರಂದು ಮಂಗಳೂರಿನ ರಮಣಶ್ರೀ ಕನ್ವೆನ್‌ಷನಲ್‌ ಹಾಲ್‌ನಲ್ಲಿ ನಡೆಯುವ ಆರಾಧನಾ ಚಾರಿಟೇಬಲ್‌ ಟ್ರಸ್ಟ್‌ ಆರಾಧನಾ ಸಂಭ್ರಮದಲ್ಲಿ ಈ ಪ್ರಶಸ್ತಿಯನ್ನು ಅವರಿಗೆ ಪ್ರದಾನಿಸಲಾಗುವುದು. ಯಕ್ಷಗಾನ ಕಲಾವಿದ ಕೋಳ್ಯೂರು ಗೋಪಾಲಕೃಷ್ಣ ಭಟ್ಟರ ಮಾತೃಶ್ರೀ ಮೊಗಸಾಲೆ ಶಾರದಮ್ಮ ಸ್ಮರಣಾರ್ಥ ನೀಡುವ ಯಕ್ಷ ಪ್ರಶಸ್ತಿ ಇದಾಗಿದೆ. 

Advertisement

ಹೈದ್ರಾಬಾದ್‌ನ ನಾಟಕ ಮಂಡಳಿಯಲ್ಲಿ 2 ವರ್ಷ ನಟನಾಗಿ ದುಡಿದ ಇವರು ಆನಂತರ ಮಾವ ಕಾವು ಶ್ರೀನಿವಾಸ ರಾಯರ ಪ್ರೇರಣೆಯಂತೆ ಯಕ್ಷಗಾನ ಕಲಾವಿದರಾಗಿ ಮೇಳದಲ್ಲಿ ಸೇರ್ಪಡೆಗೊಂಡರು. ಬೆಳ್ಳಂಬೆಟ್ಟು ಶಾಸ್ತಾವೇಶ್ವರ ಮೇಳದಲ್ಲಿ ಪ್ರಥಮ ಗೆಜ್ಜೆಕಟ್ಟಿದ ಸುಜನಾ ಅವರು ಬಳಿಕ ವೇಣೂರು,ಇರಾ, ಧರ್ಮಸ್ಥಳ, ಕುದ್ರೋಳಿ, ಕೂಡ್ಲು, ಆದಿ ಸುಬ್ರಹ್ಮಣ್ಯ, ಸುಂಕದಕಟ್ಟೆ, ಮಾಡಾವು, ಪುತ್ತೂರು, ಕಟೀಲು ಯಕ್ಷಗಾನ ಮೇಳಗಳಲ್ಲಿ ಒಟ್ಟು 38 ವರ್ಷ ಕಲಾಸೇವೆಗೈದರು. ಅತಿಕಾಯ, ಗಜೇಂದ್ರ, ಭಸ್ಮಾಸುರ, ರಕ್ತಬೀಜ, ಅರ್ಜುನ, ದಕ್ಷ, ಜಮದಗ್ನಿ ಮೊದಲಾದ ಗಂಭೀರ ಪಾತ್ರಗಳಿಗೆ ಜೀವತುಂಬಿದಲ್ಲದೆ ಜತೆಯಲ್ಲಿ ಹಾಸ್ಯ , ಸ್ತ್ರೀ ಪಾತ್ರಗಳಲ್ಲೂ ಮಿಂಚಿದ್ದರು. ತಾಳಮದ್ದಳೆ ಕೂಟದಲ್ಲಿ ಅರ್ಥಧಾರಿಯಾಗಿ ವಾಕ್ಚಾತುರ್ಯ ಮೆರೆದಿದ್ದರು. ಭಾಗವತರಾಗಿ ,ಮೃದಂಗ, ಚಂಡೆವಾದಕರಾಗಿ, ರಂಗ ವಿನ್ಯಾಸಗಾರರಾಗಿ ನಾಟ್ಯ ಗುರುವಾಗಿ ವೇಷಧಾರಿಯಾಗಿ ಹೀಗೆ ತಮ್ಮನ್ನು ತೊಡಗಿಸಿಕೊಂಡು ಅಗ್ರಮಾನ್ಯ ಕಲಾವಿದರೆನಿಸಿಕೊಂಡರು. ಪುತ್ರ ಜೀವನ್‌ ರಾಂ ಸುಳ್ಯ ಪ್ರಾರಂಭಿಸಿದ ರಂಗಮನೆಯಲ್ಲಿ ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ 60ಕ್ಕೂ ಹೆಚ್ಚು ಮಕ್ಕಳು ಯಕ್ಷಗಾನದ ನಾಟ್ಯ ಮತ್ತು ಹಿಮ್ಮೇಳನ ಕಲಿಯುತ್ತಿದ್ದಾರೆ. ಆ ಮಕ್ಕಳಿಗೆಲ್ಲಾ ಈ ಅಜ್ಜ ಅಚ್ಚುಮೆಚ್ಚು. ಮನೆಗೆ ಬಂದ ಯಾರೇ ಆಗಲಿ ಅವರಿಗೆ ಆತಿಥ್ಯ ನೀಡದೆ ಇವರು ಕಳುಹಿಸುವುದಿಲ್ಲ.ಮಧ್ಯೆ ಸ್ವಲ್ಪಕಾಲ ಅನಾರೋಗ್ಯ ಪೀಡಿತರಾಗಿದ್ದ ಸುಜನಾ ಅವರಿಗೆ ಈ ರಂಗಮನೆಯೇ ಪುನಶ್ಚೇತನ ನೀಡಿತ್ತು. 

ಗಂಗಾಧರ ಮಟ್ಟಿ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next