Advertisement

ಬ್ಯಾಂಕ್‌ನಲ್ಲೇ ಆತ್ಮಹತ್ಯೆ ಎಚ್ಚರಿಕೆ

12:15 PM Feb 20, 2018 | Team Udayavani |

ನಂಜನಗೂಡು: ಟ್ರ್ಯಾಕ್ಟರ್‌ಗಾಗಿ ಮಾಡಿದ ಸಾಲಕ್ಕೆ ಜಮೀನು ಹರಾಜು ಮಾಡಲು ಮುಂದಾದ ಬ್ಯಾಂಕ್‌ ಕ್ರಮಕ್ಕೆ ಮನನೊಂದ ರೈತ ಕುಟುಂಬ ವಿಷದ ಬಾಟಲ್‌ ಹಿಡಿದೇ ಬ್ಯಾಂಕ್‌ಗೆ ಧಾವಿಸಿದ ಘಟನೆ ನಗರದ ಹುಲ್ಲಹಳ್ಳಿ ವೃತ್ತದಲ್ಲಿರುವ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದ ಶಾಖೆಯಲ್ಲಿ ನಡೆಯಿತು.

Advertisement

ಎಸ್‌ಬಿಐನಲ್ಲಿ ತಾಲೂಕಿನ ಹಾಡ್ಯ ಗ್ರಾಮದ ಶಿವಣ್ಣ ಎಂಬುವರು ಪಡೆದಿದ್ದ ಸಾಲ ಬಬಡ್ಡಿ ಸೇರಿ ಇದೀಗ 16 ಲಕ್ಷ ರೂ.ತಲುಪಿದ್ದು , ಸಾಲದ ಬಾಕಿಗಾಗಿ  ಬ್ಯಾಂಕ್‌, ಶಿವಣ್ಣನ ಒಡೆತನದ 5 ಏಕರೆ ಜಮೀನು ಹರಾಜು ಹಾಕಲು ಡಿಕ್ರಿ ಪಡೆದು ಮನೆಗೆ ನೋಟಿಸ್‌  ಅಂಟಿಸಿ ಕ್ರಮ ಜರಗಿಸಿತ್ತು ಎನ್ನಲಾಗಿದೆ.

ತನ್ನೆಲ್ಲ ಆಸ್ತಿಯನ್ನು ಹರಾಜು ಮಾಡುವ ವಿಷಯವನ್ನು ಬ್ಯಾಂಕ್‌ ಗ್ರಾಮದಲ್ಲಿ  ಟಾಂ ಟಾಂ ಹೊಡೆಸಿದ್ದಕ್ಕಾಗಿ ಮನನೊಂದ ಶಿವಣ್ಣನ ಕುಟುಂಬ ಬೇರೆ ದಾರಿ ಕಾಣದೆ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾದಾಗ ಗ್ರಾಮದ ರೈತ ಮುಖಂಡ ಶಿವನಾಗಪ್ಪ ಹಾಗೂ ಇತರರು ಅವರನ್ನು ತಡೆದು ಅದೇ ವಿಷದ ಬಾಟಲ್‌ ಸಹಿತ ಸೋಮವಾರ ಪಟ್ಟಣದ ಎಸ್‌ಬಿಐ ಶಾಖೆಗೆ ಆಗಮಿಸಿ ಬ್ಯಾಂಕ್‌ ವ್ಯವಸ್ಥಾಪಕರ ಮೇಜಿನ ಮೇಲೆ ವಿಷದ ಬಾಟಲ್‌ ಇಟ್ಟು ಪ್ರತಿಭಟನೆಗಿಳಿದರು.

ಕೋರ್ಟ್‌ ಆದೇಶದಂತೆ ಕ್ರಮ: ಟ್ರಾಕ್ಟರ್‌ ಮಾಲಿಕರ ಸಂಘದ ಜಿಲ್ಲಾಧ್ಯಕ್ಷ ಸಿದ್ದರಾಜು, ತಾಲೂಕು ಅಧ್ಯಕ್ಷ ಶಿವನಾಗಪ್ಪ ಅವರ ಪಶ್ನೆಗೆ ಉತ್ತರ ನೀಡಲು ತಿಣುಕಾಡಿದ ವ್ಯವಸ್ಥಾಪಕ ರಮಣ, ಸಾಲದ ಮರು ಪಾವತಿಗಾಗಿ ನಾವು ನ್ಯಾಯಾಲಯದ ಮೊರೆ ಹೋಗಿದ್ದು, ಘನ ನ್ಯಾಯಾಲಯದ ತೀರ್ಮಾನದ ಪ್ರಕಾರವೇ ನೋಟಿಸ್‌ ಹಾಗೂ ಟಾಂ ಟಾಂ ಹೊಡೆಸಲಾಗಿದೆ ಎಂದರು.

ಸರ್ಕಾರವೇ ಬೇರೆ ಬ್ಯಾಂಕ್‌ ಬೇರೆ: ನಾಲ್ಕೈದು ವರ್ಷಗಳಿಂದ ತಾಲೂಕಲ್ಲಿ ಬರ ವ್ಯಾಪಿಸಿಕೊಂಡಿದ್ದು, ರೈತ ಬೆಳೆ ತೆಗಯಲಾಗಿಲ್ಲ ಹಾಗಾಗಿ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರೈತ ಸಾಲದ ತಿರುವಳಿಗಾಗಿ ಕೃಷಿ ಜಮೀನಿನ ಹರಾಜು ಬೇಡ ಎಂದು ವಿಧಾನ ಸಭೆಯಲ್ಲೇ ಹೇಳಿದ್ದಾರೆ ಎಂದಾಗ, ಪೊಲೀಸರ ಸಮ್ಮುಖದಲ್ಲಿ ಉತ್ತರಿಸಿದ ಬ್ಯಾಂಕ್‌ ಮ್ಯಾನೇಜರ್‌ ಸರ್ಕಾರ ಬೇರೆ -ನಾವು ಬೇರೆ ನಮಗೆ ಮೇಲಿನ ಅಧಿಕಾರಿಗಳ ಸೂಚನೆಯಷ್ಟೇ ಮುಖ್ಯ ಎಂದರು.

Advertisement

ಇವರ ಮಾತು ಕೇಳಿದ ರೈತ ನಾಯಕರು ಹಾಗಾದರೆ ಇಲ್ಲೇ  ಸಾಲಗಾರ ಶಿವಣ್ಣ. ಆತನ ಪತ್ನಿ  ಶಿವಮಲ್ಲಮ್ಮ ಪುತ್ರಿಯರಾದ ಇನ್ನೂ ವ್ಯಾಸಂಗ ಮಾಡುತ್ತಿರುವ ತ್ರಿವೇಣಿ, ಪ್ರತಿಮಾ , ಭಾಗ್ಯ ಹಾಗೂ ಪುತ್ರ ಶಿವು ವಿಷ ಕುಡಿದು ಆತ್ಮಹತ್ಯೆ ದಾರಿ ತುಳಿಯುತ್ತಾರೆ ಅವರೆಲ್ಲರ ಜೀವಕ್ಕೆ ನೀವು ಹಾಗೂ ಬ್ಯಾಂಕ್‌ ಜವಾಬ್ದಾರರು  ಎಂದು ಆಕ್ರೋಶದಿಂದ ನುಡಿದರು.

ಸಭೆ ನಡೆಸಿ ತೀರ್ಮಾನ: ಆಗ ಮಧ್ಯ ಪ್ರವೇಶಿದ ಪೊಲೀಸರು ಈ ಆತುರದ ನಿರ್ಧಾರ ಬೇಡ. ವವ್ಯಸ್ಥಾಪಕರೇ ಎನಾದರೂ ಪರಿಹಾರ ಸೂಚಿಸಿ ಎಂದಾಗ ಬೇರೆ ದಾರಿ ಕಾಣದ ವ್ಯವಸ್ಥಾಪಕ ರಮಣ ತಮ್ಮ ಶಾಖೆಯ ವಕೀಲರನ್ನು ಸಂಪರ್ಕಿಸಿ  ಸಂಜೆ 7 ಗಂಟೆಗೆ ಸಾಲಗಾರರು ಹಾಗೂ ರೈತ ನಾಯಕರೊಡನೆ ಬ್ಯಾಂಕ್‌ ವಕೀಲರನ್ನು ಭೇಟಿ ಮಾಡಿ ಪರಿಹಾರದ ಮಾರ್ಗ ಹುಡುಕಲಾಗುವುದು ಎಂದು ತಿಳಿಸಿದರು.

ಜಮೀನು ಹರಾಜಿಗೆ ಅವಕಾಶ ನೀಡಲ್ಲ: ರೈತರ ಸಾಲದ ತೀರಿಸಲು ಸಮಯ ನೀಡಬೇಕು ಎಂದರಲ್ಲದೆ, ತಮ್ಮ ಸಂಘಟನೆ ಮುಂದೆ ನಿಂತು ಸಾಲದ ವ್ಯವಹಾರವನ್ನು ಬಗೆಹರಿಸಿ ಕೊಡುತ್ತೇವೆ, ಬೆಳೆಯೇ ಇಲ್ಲದೆ ಸಾಲ ತೀರಿಸುವ ಪರಿ ಹೇಗೆ ಎಂದರಲ್ಲದೆ, ಯಾವುದೇ ಕಾರಣಕ್ಕೂ ಯಾವ ರೈತರ ಜಮೀನು ಹರಾಜಾಗಲು ಅವಕಾಶ ನೀಡಲಾಗದು ಎಂದರು.

ಶಿವಣ್ಣ ನ ಕುಟುಂಬ ಇಂದು ನಡೆಸಿದ ಪ್ರತಿಭಟನೆಗೆ ಟ್ರ್ಯಾಕ್ಟರ್‌ ಮಾಲಿಕರ ಸಂಘದ ಜಿಲ್ಲಾಧ್ಯಕ್ಷ ಸಿದ್ದರಾಜು, ತಾಲೂಕು ಅಧ್ಯಕ್ಷ ಶಿವಣ್ಣ  ಹಾಗೂ ಹಗಿನವಾಳು ಸುರೇಶ, ಚಿಕ್ಕಣ್ಣ, ಕಡಜೆಟ್ಟಿ ಮಹೇಶ, ಹುರಾದ ಕುಮಾರ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next