Advertisement
ಸರ್ಕಾರ ದರ ನಿಗದಿ ಮಾಡಿ ಹೊರಡಿಸಿರುವ ಆದೇಶವನ್ನು ರಾಜ್ಯದ ಕಬ್ಬು ಬೆಳೆಗಾರರು ಒಪ್ಪುತ್ತಾರೆಯೇ ಎಂಬ ಅನುಮಾನ ಕಾಡುತ್ತಿದೆ. ಈ ಆದೇಶದ ಹಿಂದೆ ಸಕ್ಕರೆ ಕಾರ್ಖಾನೆಗಳ ಲಾಬಿ ಇದೆ. ಪ್ರಭಾವಿಗಳ ಒತ್ತಡ ಇದೆ ಎಂಬ ಅನುಮಾನವನ್ನು ರೈತ ಮುಖಂಡರು ವ್ಯಕ್ತಪಡಿಸಿರುವುದು ಇದಕ್ಕೆ ಪುಷ್ಟಿ ನೀಡಿದೆ. ರಾಜ್ಯದ 73 ಸಕ್ಕರೆ ಕಾರ್ಖಾನೆಗಳಿಗೆ ಕಳೆದ ಸಾಲಿನಲ್ಲಿ ಕಬ್ಬಿನಿಂದ ಸಕ್ಕರೆ ಉತ್ಪಾದಿಸಿದ ಇಳುವರಿ ಆಧಾರದ ಮೇಲೆ ಸರ್ಕಾರ ಎಫ್ಆರ್ಪಿ ದರ ನಿಗದಿ ಮಾಡಿ ಆದೇಶ ಹೊರಡಿಸಿದ ನಂತರ ಕಬ್ಬು ಬೆಳೆಗಾರರು ಹಾಗೂ ರಾಜ್ಯ ರೈತ ಸಂಘದ ಸದಸ್ಯರು ಸರ್ಕಾರದ ಈ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
Advertisement
ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ಚಿಕ್ಕೋಡಿಯ ಅರಿಹಂತ ಶುಗರ್ಸ್ ಗೆ 3,462 ರೂ., ಅಥಣಿ ಶುಗರ್ಸ್ 3,355 ರೂ., ಬೆಳಗಾವಿ ಶುಗರ್ಸ್ 3,526 ರೂ., ಚಿಕ್ಕೋಡಿಯ ಚಿದಾನಂದ ಬಸವಪ್ರಭು ಕೋರೆ ಕಾರ್ಖಾನೆಗೆ 3,523 ರೂ., ರಾಮದುರ್ಗದ ಖಾನಪೇಟೆಯ ಇಐಡಿ ಪ್ಯಾರಿ ಕಾರ್ಖಾನೆಗೆ 3,636 ರೂ., ಘಟಪ್ರಭಾ ಎಸ್ ಎಸ್ಕೆ ಕಾರ್ಖಾನೆ 3,355 ರೂ., ಗೋಕಾಕ ಶುಗರ್ಸ್ ಲಿಮಿಟೆಡ್ 3,492 ರೂ., ನಿಪ್ಪಾಣಿಯ ಹಾಲಸಿದ್ದನಾಥ ಕಾರ್ಖಾನೆ 3526 ರೂ., ಸವದತ್ತಿಯ ಹರ್ಷ ಶುಗರ್ಸ್ 3,270 ರೂ., ಹುಕ್ಕೇರಿಯ ಹಿರಣ್ಯಕೇಶಿ ಕಾರ್ಖಾನೆ 3,459 ರೂ., ಸವದತ್ತಿಯ ರೇಣುಕಾ ಶುಗರ್ಸ್ 3,660 ರೂ, ಸೇರಿದಂತೆ ಜಿಲ್ಲೆಯ 27 ಸಕ್ಕರೆ ಕಾರ್ಖಾನೆಗಳಿಗೆ ಗರಿಷ್ಠ 3590 ರೂ. ದರ ನಿಗದಿ ಮಾಡಲಾಗಿದೆ.
ಬಾಗಲಕೋಟೆ ಜಿಲ್ಲೆಯ 12 ಸಕ್ಕರೆ ಕಾರ್ಖಾನೆಗಳಿಗೆ 3400 ರೂ.ದಿಂದ 3600 ರೂ. ವರೆಗೆ ದರ ನಿಗದಿ ಮಾಡಿದರೆ, ವಿಜಯಪುರ ಜಿಲ್ಲೆಯ ಒಂಬತ್ತು ಸಕ್ಕರೆ ಕಾರ್ಖಾನೆಗಳಿಗೆ 2821 ರೂ.ದಿಂದ 3477 ರೂ. ದರ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ. ಬೀದರ ಜಿಲ್ಲೆಯ ಆರು ಸಕ್ಕರೆ ಕಾರ್ಖಾನೆಗಳಿಗೆ 2821 ರೂ.ದಿಂದ 3184 ರೂ., ಮಂಡ್ಯ ಜಿಲ್ಲೆಯ ನಾಲ್ಕು ಸಕ್ಕರೆ ಕಾರ್ಖಾನೆಗಳಿಗೆ 2821 ರೂ., ಕಲಬುರಗಿಯ ನಾಲ್ಕು ಕಾರ್ಖಾನೆಗಳಿಗೆ 2989 ರೂ.ದಿಂದ 3358 ರೂ. ದರ ನಿಗದಿ ಮಾಡಲಾಗಿದೆ. ಆದರೆ ಈ ಯಾವ ಜಿಲ್ಲೆಯಲ್ಲೂ ಸರ್ಕಾರದ ಈ ಆದೇಶಕ್ಕೆ ಸಹಮತ ವ್ಯಕ್ತವಾಗಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.
ಎಫ್ಆರ್ಪಿ ಎಂಬುದು ನಾಮಕೆವಾಸ್ಥೆ ಆದೇಶ. ಇದು ಸಂಪೂರ್ಣ ಅವೈಜ್ಞಾನಿಕ. ನಾವು ಪ್ರತಿಟನ್ ಕಬ್ಬಿಗೆ ಕನಿಷ್ಟ 3500 ರೂ. ದರ ನಿಗದಿ ಮಾಡಬೇಕೆಂದು ಕೇಳುತ್ತಿದ್ದೇವೆ. ಇದರಿಂದ ಇಳುವರಿ ಆಧಾರದ ಮೇಲೆ ಪ್ರತಿಟನ್ ಕಬ್ಬಿಗೆ 3800 ರೂ. ದಿಂದ 4200 ರೂ. ದರ ಸಿಗುತ್ತದೆ. ಈಗ ಸರ್ಕಾರ ಮಾಡಿರುವ ಆದೇಶದಿಂದ ಎಲ್ಲ ವೆಚ್ಚ ಕಡಿತಗೊಳಿಸಿ ಕೊನೆಗೆ ರೈತರಿಗೆ ಪ್ರತಿ ಟನ್ ಕಬ್ಬಿಗೆ 2400ದಿಂದ 2600 ರೂ. ದರ ಸಿಗುತ್ತದೆ. ಈ ನ್ಯಾಯ ಸರಿಯಿಲ್ಲ. zಸಿದಗೌಡ ಮೋದಗಿ, ಕಬ್ಬು ನಿಯಂತ್ರಣ ಮಂಡಳಿ ಸದಸ್ಯ
ಇಳುವರಿಯಲ್ಲಿ ಮೋಸ
ಸಕ್ಕರೆ ಕಾರ್ಖಾನೆಗಳು ಸಕ್ಕರೆ ಇಳುವರಿಯಲ್ಲಿ ವಂಚನೆ ಮಾಡುತ್ತಿವೆ. ಪ್ರತಿಶತ ಒಂದರಷ್ಟು ಇಳುವರಿ ಕಡಿಮೆ ತೋರಿಸಿ ಹಣ ಲೂಟಿ ಮಾಡುತ್ತಿವೆ. ಯಾವುದೇ ಒಂದು ಕಾರ್ಖಾನೆ ಕನಿಷ್ಟ 10 ಲಕ್ಷ ಟನ್ ಕಬ್ಬು ಅರಿದರೆ ಅವರಿಗೆ 3ರಿಂದ 4 ಕೋಟಿ ಉಳಿತಾಯವಾಗಲಿದೆ. ಇದು ರೈತರಿಗೆ ಗೊತ್ತಾಗುವುದಿಲ್ಲ. ಈ ರೀತಿ ಇಳುವರಿಯಲ್ಲಿ ವ್ಯತ್ಯಾಸ ತೋರಿಸುವುದು ಮೊದಲಿಂದಲೂ ನಡೆದಿದೆ ಎನ್ನುತ್ತಾರೆ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರ ಶಾಂತಕುಮಾರ. ರಾಜ್ಯದಲ್ಲಿ 73 ಸಕ್ಕರೆ ಕಾರ್ಖಾನೆಗಳ ಪೈಕಿ 38 ಕಾರ್ಖಾನೆಗಳು ರಾಜಕಾರಣಿ ಗಳ ಹಿಡಿತದಲ್ಲಿವೆ. ಕಾನೂನು ಮಾಡುವವರು ಇವರೇ. ಇದಕ್ಕೆ ವಿರೋಧ ಮಾಡುವವರು ಇವರೇ. ಇವರಿಬ್ಬರ ಮಧ್ಯೆ ರೈತರು ಸಾಯುತ್ತಿದ್ದಾರೆ. ಪ್ರತಿಭಟನೆ ಮಾಡಿದರೆ ಇಲ್ಲಿ ನಮ್ಮ ಕಬ್ಬು ತೆಗೆದುಕೊಳ್ಳುವದಿಲ್ಲ ಎಂಬ ಭಯ ರೈತರನ್ನು ಕಾಡುತ್ತಿದೆ. ಹೀಗಾಗಿ ಯಾವ ರೈತರೂ ಕಾರ್ಖಾನೆಗಳ ವಿರುದ್ಧ ನಿಲ್ಲುತ್ತಿಲ್ಲ ಎಂಬುದು ಮುಖಂಡರ ನೋವು
ಉತ್ತರ ಪ್ರದೇಶ, ಗುಜರಾತ್ನಲ್ಲಿ ಎಫ್ ಆರ್ಪಿ ಪ್ರಕಾರ ಪ್ರತಿ ಟನ್ ಕಬ್ಬಿಗೆ 3,800 ರಿಂದ 4500 ರೂ. ನಿಗದಿ ಮಾಡಿ ದ್ದಾರೆ. ನಮ್ಮಲ್ಲಿ ಏಕೆ ಈ ದರವಿಲ್ಲ? –ಕುರಬೂರ ಶಾಂತಕುಮಾರ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ
●ಕೇಶವ ಆದಿ