Advertisement

ಭತ್ತಕ್ಕೆ ಮಬ್ಬು ತಂದ ಕಬ್ಬು ಬೆಳೆ

11:34 AM May 19, 2022 | Team Udayavani |

ಧಾರವಾಡ: ಕೂರಿಗೆ ಪೂಜೆ ಮಾಡುವಂತಿಲ್ಲ, ಭತ್ತದ ಕಣಜವಂತೂ ಮೊದಲೇ ಇಲ್ಲ. ಹಂಗಾಮು ಹದ ನೋಡುವ ಮುದವೂ ಇಲ್ಲ. ಕಾರಣ ಕಣ್ಣು ಹಾಯಿಸಿದಷ್ಟು ದೂರಕ್ಕೆ ಹಚ್ಚ ಹಸಿರಿನ ಕಬ್ಬಿನ ಗದ್ದೆಗಳು, ಸಮಯಕ್ಕೆ ಸರಿಯಾಗಿ ಬೀಳುತ್ತಿರುವ ಮುಂಗಾರು ಪೂರ್ವ ಮಳೆಗಳು, 10 ನಾಜೆಲ್‌ಗ‌ಳಲ್ಲಿ ಒಟ್ಟಿಗೆ ಚಿಮ್ಮುತ್ತಿರುವ ಬೋರ್‌ವೆಲ್‌ಗ‌ಳು. ಒಟ್ಟಲ್ಲಿ ಭತ್ತ ಹೋಗಿ ಕಬ್ಬು ಬಂತು ಡುಂ ಡುಂಮಕ್‌.

Advertisement

ಹೌದು. ಅಪ್ಪಟ ದೇಸಿ ಭತ್ತ ಬೆಳೆಯುತ್ತಿದ್ದ ಧಾರವಾಡದ ಸೀಮೆ ಇದೀಗ ತಮ್ಮ ಮೂಲ ಕೃಷಿ ಸ್ವರೂಪವನ್ನೇ ಬದಲಾಯಿಸಿಕೊಂಡು ಮುನ್ನಡೆಯುತ್ತಿದ್ದು, ಭತ್ತದಿಂದ ಸೋಯಾ ಅವರೆ ಬೆನ್ನು ಬಿದ್ದು ಸಾಕಾಗಿ, ಇದೀಗ ಕಬ್ಬು ಬೆಳೆಗೆ ಮಂಡಿಯೂರಿದ್ದು, ಈ ವರ್ಷ ಜಿಲ್ಲೆಯಲ್ಲಿ ಅತೀ ಹೆಚ್ಚು ಕಬ್ಬು ಉತ್ಪಾದನೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಹತ್ತಿ, ಭತ್ತ, ಹೆಸರು, ಶೇಂಗಾ, ಉದ್ದು, ಸೋಯಾ, ಮೆಕ್ಕೆಜೋಳ ಹೀಗೆ ಆಹಾರಧಾನ್ಯಗಳನ್ನೇ ಹುಲುಸಾಗಿ ಬೆಳೆಯುತ್ತಿದ್ದ ಧಾರವಾಡ ಜಿಲ್ಲೆಯ ಅಂದಾಜು 2.70ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಶೇ.40 ಅಂದರೆ ಒಂದು ಲಕ್ಷ ಹೆಕ್ಟೇರ್‌ ಪ್ರದೇಶವನ್ನು ಕಬ್ಬು ಬೆಳೆಯೊಂದೇ ಆವರಿಸಿದೆ. 2021ರಲ್ಲಿ 75 ಸಾವಿರ ಹೆಕ್ಟೆರ್‌ ಇದ್ದ ಕಬ್ಬು ಈ ವರ್ಷ 28 ಸಾವಿರ ಹೆಕ್ಟೆರ್‌ನಷ್ಟು ಅಧಿಕವಾಗಿದ್ದು, ಈ ವರ್ಷದಿಂದ ಧಾರವಾಡ ಜಿಲ್ಲೆ ಭತ್ತ, ಹತ್ತಿ ಜಿಲ್ಲೆ ಎಂಬ ಹಣೆಪಟ್ಟಿ ಕಳೆದುಕೊಳ್ಳುವುದು ಪಕ್ಕಾ ಆಗಿದೆ.

ಸರ್ಕಾರಿ ಲೆಕ್ಕದಲ್ಲಿ ಕಬ್ಬು ಇನ್ನು 12 ಸಾವಿರ ಹೆಕ್ಟೆರ್‌ ನಷ್ಟೇ ಇದ್ದರೂ ಭತ್ತದ ಜಾಗವನ್ನು ಸಂಪೂರ್ಣವಾಗಿ ನುಂಗಿ ಹಾಕಿದೆ. ಧಾರವಾಡ, ಕಲಘಟಗಿ, ಹುಬ್ಬಳ್ಳಿ, ಕುಂದಗೋಳ ಮತ್ತು ಅಳ್ನಾವರ ತಾಲೂಕು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ವರ್ಷದಿಂದ ವರ್ಷಕ್ಕೆ ಹೆಚ್ಚು ಭೂಮಿಯಲ್ಲಿ ವಿಸ್ತಾರಗೊಳ್ಳುತ್ತಿದೆ.

ಕಬ್ಬು ಹೆಚ್ಚಲು ಕಾರಣ? ಧಾರವಾಡ ಜಿಲ್ಲೆಯ ಪೈಕಿ ಅತ್ಯಧಿಕ ಕಬ್ಬು ಬೆಳೆಯುವುದು ಕಲಘಟಗಿ ಮತ್ತು ಅಳ್ನಾವರ ತಾಲೂಕುಗಳು. ಉತ್ತರ ಕನ್ನಡ ಜಿಲ್ಲೆಯ ಗಡಿಗಂಟಿಕೊಂಡಿರುವ ಹಳಿಯಾಳದಲ್ಲಿ ಪ್ಯಾರಿ ಶುಗರ್ ಕಂಪನಿ ಸ್ಥಾಪನೆಯಾಗಿದ್ದರಿಂದ ಇಲ್ಲಿ ತಕ್ಕಮಟ್ಟಿಗೆ ಜನ ಕಬ್ಬು ಬಿತ್ತನೆ ಮಾಡಿದರು. ಆದರೆ ಕಳೆದ ಮೂರು ವರ್ಷಗಳಿಂದ ಬೆಳಗಾವಿ ಜಿಲ್ಲೆಯ ಪ್ರಮುಖ ಸಕ್ಕರೆ ಕಾರ್ಖಾನೆಗಳಿಗೂ ಧಾರವಾಡದಿಂದ ಕಬ್ಬು ಸಾಗಾಣಿಕೆಯಾಗುತ್ತಿದ್ದು, ಇದೀಗ ಮುಂಡಗೋಡದಲ್ಲಿ ಮತ್ತೂಂದು ಸಕ್ಕರೆ ಕಾರ್ಖಾನೆ ನಿರ್ಮಾಣವಾಗುತ್ತಿದ್ದು, ಕಬ್ಬು ಬೆಳೆ ಮತ್ತಷ್ಟು ಪ್ರದೇಶ ವ್ಯಾಪಿಸಿಕೊಂಡಿದೆ. ನೇರವಾಗಿ ಹಣ ರೈತರ ಖಾತೆಗೆ ಬರುತ್ತಿರುವುದರಿಂದ ಕಬ್ಬು ಬೆಳೆಗೆ ರೈತರು ಹೆಚ್ಚು ಒಲವು ತೋರುತ್ತಿದ್ದಾರೆ.

Advertisement

ಸಾಂಪ್ರದಾಯಿಕ ಬೆಳೆಗಳಿಗೆ ಬೈ ಬೈ: ಧಾರವಾಡ ಜಿಲ್ಲೆ ಬರಿ ಹತ್ತು ವರ್ಷಗಳ ಹಿಂದಷ್ಟೇ ಭತ್ತ, ಹತ್ತಿ, ಹೆಸರು, ಶೇಂಗಾ, ಮೆಣಸಿನಕಾಯಿ ಮತ್ತು ಇತರೆ ಆಹಾರ ಬೆಳೆಗಳನ್ನು ಯಥೇಚ್ಚ ಪ್ರಮಾಣದಲ್ಲಿ ಬೆಳೆದು ಮುಂಚೂಣಿಯಲ್ಲಿತ್ತು. ಅದು ಅಲ್ಲದೇ ಖರ್ಚು ಕಡಿಮೆ, ಕೆಲಸ ಕಡಿಮೆ ಮತ್ತು ನೇರವಾಗಿ ಹಣ ರೈತರ ಖಾತೆಗಳಿಗೆ ಬರುತ್ತಿರುವುದರಿಂದ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಅದೂ ಅಲ್ಲದೇ ಭತ್ತ, ಹತ್ತಿ ಸೇರಿದಂತೆ ಸಾಂಪ್ರದಾಯಿಕ ಬೆಳೆಗಳ ಖರ್ಚು ಹೆಚ್ಚಾಗುತ್ತಿದೆ. ಉಳುಮೆ, ಕೂಲಿಯಾಳುಗಳ ಕೊರತೆ, ರಸಗೊಬ್ಬರ, ಕ್ರಿಮಿನಾಶಕಗಳ ಬಳಕೆ ಅತ್ಯಧಿಕ ಹಣ ಖರ್ಚು ಮಾಡಿದರೂ ಲಾಭ ಪ್ರಮಾಣ ಕಡಿಮೆಯಾಗುತ್ತಿದೆ. ಅಷ್ಟೇಯಲ್ಲ ಹವಾಮಾನ ವೈಪರಿತ್ಯದಿಂದ ಬೆಳೆಗಳ ರಕ್ಷಣೆ ಕಷ್ಟವಾಗುತ್ತಿದ್ದು, ಹೀಗಾಗಿ ಅರೆಮಲೆನಾಡಿನ ರೈತರೆಲ್ಲರೂ ಕಬ್ಬು ಬೆಳೆ ಮೊರೆ ಹೋಗುತ್ತಿದ್ದಾರೆ.

ರಸಗೊಬ್ಬರ ಪೂರೈಕೆಯೂ ಓಕೆ

ಇನ್ನು ಜಿಲ್ಲೆಗೆ ಏ.2022ರಿಂದ ಸೆಪ್ಟೆಂಬರ್‌ ವರೆಗೂ ಒಟ್ಟು 60164 ಮೆ.ಟನ್‌ನಷ್ಟು ರಾಸಾಯನಿಕ ಗೊಬ್ಬರದ ಅಗತ್ಯವಿದ್ದು, 20536 ಮೆ.ಟನ್‌ ಸದ್ಯಕ್ಕೆ ಲಭ್ಯವಿದೆ. ಉಳಿದದ್ದು ಆಯಾ ತಿಂಗಳ ಬೇಡಿಕೆಯ ಅನುಪಾತದಲ್ಲಿ ಪೂರೈಕೆಯಾಗಲಿದೆ.

„ ಯೂರಿಯಾ- 23936 ಮೆ.ಟನ್‌. (10587 ಮೆ.ಟನ್‌ ಸದ್ಯ ಲಭ್ಯ)

„ ಡಿಎಪಿ-18631 ಮೆ.ಟನ್‌.(3994 ಸದ್ಯ ಲಭ್ಯ )

„ ಎಂಒಪಿ ಬೇಡಿಕೆ-2777ಮೆ.ಟನ್‌ (708 ಸದ್ಯ ಲಭ್ಯ)

„ ಕಾಂಪ್ಲೆಕ್ಸ್‌-ಬೇಡಿಕೆ-14095 ಮೆ.ಟನ್‌. (4888 ಸದ್ಯ ಲಭ್ಯ)

„ ಎಸ್‌ಎಚ್‌ಪಿ -ಬೇಡಿಕೆ 743 ಮೆ ಟನ್‌.  (357 ಸದ್ಯ ಲಭ್ಯ)

„ 14 ರೈತ ಸಂಪರ್ಕ ಕೇಂದ್ರದಲ್ಲಿ ಬೀಜ, ಗೊಬ್ಬರ ಲಭ್ಯ.

„ 14ಹೆಚ್ಚು ವಿತರಣೆ ಕೇಂದ್ರ ಸ್ಥಾಪಿಸಲಾಗಿದೆ.

„ ಪೂರ್ವ ಮುಂಗಾರು ಮಾ-ಮೇ 2022ರ ಅಂತ್ಯಕ್ಕೆ 120 ಎಂ.ಎಂ. ವಾಡಿಕೆ ಮಳೆ ಆಗಬೇಕು.

„ ಮೇ 18, 2022ರವರೆಗೂ 160.70 ಎಂ.ಎಂ. ಆಗಿದೆ.

2022ರ ಮುಂಗಾರಿಗೆ ಸಿದ್ಧತೆ  

2022ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 2,73,602 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿಯಿದ್ದು, ಹತ್ತಿ-70123 ಹೆಕ್ಟೇರ್‌, ಹೆಸರು-52,900 ಹೆಕ್ಟೇರ್‌, ಮೆಕ್ಕೆಜೋಳ-49,796 ಹೆಕ್ಟೇರ್‌, ಸೋಯಾ-38, 654 ಹೆಕ್ಟೇರ್‌, ಶೇಂಗಾ-26308 ಹೆಕ್ಟೇರ್‌, ಭತ್ತ-2484, ಕಬ್ಬು- 1,08765 ಹೆಕ್ಟೇರ್‌ ಹಾಗೂ ಉದ್ದು-8700 ಹೆಕ್ಟೇರ್‌ನಲ್ಲಿ ಬಿತ್ತನೆಯಾಗುವ ಅಂದಾಜಿದೆ.

ಜಿಲ್ಲೆಯಲ್ಲಿ ರೈತರಿಗೆ ಮುಂಗಾರು ಹಂಗಾಮಿಗೆ ಅಗತ್ಯವಾದ ಬೀಜ, ಗೊಬ್ಬರದ ಲಭ್ಯತೆ ಇದೆ. ಭತ್ತಕ್ಕೆ ಪರ್ಯಾಯವಾಗಿ ಕಬ್ಬು ಬೆಳೆ ಕೆಲವು ತಾಲೂಕಿನಲ್ಲಿ ಹೆಚ್ಚುತ್ತ ಸಾಗಿದ್ದು ಸತ್ಯ. ಅದು ರೈತರ ಆಯ್ಕೆಯಾಗಿದೆ. –ರಾಜಶೇಖರ್‌, ಜೆ.ಡಿ.ಕೃಷಿ, ಧಾರವಾಡ ಜಿಲ್ಲೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next