Advertisement

ಸೀತಾಫಲದ ಸಿಹಿ ಹಂಚುತ್ತಿವೆ ಚಿತ್ತಾಪುರದ ಗುಡ್ಡಗಳು

08:36 PM Sep 21, 2021 | Team Udayavani |

ವಾಡಿ (ಚಿತ್ತಾಪುರ): ಸೀತಾಫಲ ಹಣ್ಣಿನ ಹೆಸರು ಕೇಳಿದರೆ ಸಾಕು ನಾಲಿಗೆ ಒದ್ದೆಯಾಗಿ ತುಟಿಗಳು ರುಚಿಯೇರುತ್ತವೆ. ಮೈತುಂಬಾ ಕಣ್ಣು ಹೊದ್ದು ಹೃದಯದೊಳಗೆ ಸಿಹಿ ಬೆಣ್ಣೆ ಅಡಗಿಸಿಟ್ಟುಕೊಂಡ ಈ ಹಣ್ಣು ಮೂಲತಃ ವೆಸ್ಟ್ ಇಂಡೀಸ್ ದ್ವೀಪಗಳಲ್ಲಿ ಇದರ ಬೇರುಗಳು ಕಂಡು ಬರುತ್ತವೆ. ರಾಜ್ಯದ ಅರಣ್ಯ ಇಲಾಖೆಯೂ ಕೂಡ ಅದರ ಬೀಜಗಳನ್ನು ಗುಡ್ಡಗಾಡು ಪ್ರದೇಶದಲ್ಲಿ ಹರಡುವ ಮೂಲಕ ಸೀತಾಫಲದ ಕೃಷಿ ಕೈಗೊಂಡಿದ್ದರಿಂದ ನಮ್ಮಲ್ಲಿ ಕಡಿಮೆ ದರದಲ್ಲಿ ರುಚಿಯಾದ ಹಣ್ಣುಗಳು ನಮ್ಮ ಕೈಗೆಟಕುತ್ತಿವೆ.

Advertisement

ಚಿತ್ತಾಪುರ ತಾಲೂಕಿನ ಗುಡ್ಡಗಾಡು ಪ್ರದೇಶಗಳಲ್ಲೂ ಸೀತಾಫಲ ಹಣ್ಣಿನ ಕೃಷಿ ಸಾಗಿದ್ದು, ಯಾಗಾಪುರ, ಶಿವನಗರ ತಾಂಡಾ, ಬೆಳಗೇರಾ, ದಂಡಗುಂಡ, ಅಣ್ಣಿಕೇರಾ ಹಾಗೂ ಲಾಡ್ಲಾಪುರ ಗ್ರಾಮಗಳಲ್ಲಿ ಈ ಹಣ್ಣುಗಳು ಅರಳುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಗುಡ್ಡ ಬೆಟ್ಟಗಳಿಂದ ಕೂಡಿರುವ ಈ ಅರಣ್ಯ ಪರಿಸರದಲ್ಲಿ ಸೀತಾಫಲದ ಸಾವಿರಾರು ಗಿಡಗಳನ್ನು ಕಾಣಬಹುದಾಗಿದೆ. ಕಲ್ಲು ಬಂಡೆಗಳ ಕಾವಲಿನಲ್ಲಿ ಕಾಲು ದಾರಿ ಸೀಳಿ ಸಾಗಿದರೆ ಸಿಹಿಯಾದ ಹಣ್ಣುಗಳು ನಿಮ್ಮ ಕೈಗಳಿಗೆ ತಾಕುತ್ತವೆ. ಗುಡ್ಡಗಳೇ ಇಲ್ಲಿ ಸಿಹಿ ಹಂಚಲು ಸಾಲುಗಟ್ಟಿ ನಿಂತಿವೆಯಾ ಎಂಬ ಭಾವ ಮೂಡುತ್ತದೆ.

ಇದನ್ನೂ ಓದಿ : ಹಿಂದೂವಿರೋಧಿ ಬೊಮ್ಮಾಯಿಯವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ: ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ

ಮಳೆಗಾಲದಲ್ಲಿ ಹಸಿರು ಹೊದ್ದು ನಿಂತ ಇಲ್ಲಿನ ಗುಡ್ಡಗಳು ಅಕ್ಷರಶಃ ಮಲೆನಾಡ ನೋಟ ಬೀರುತ್ತವೆ. ಗುಡ್ಡದೂರಿನ ಜನರೇ ವರ್ಷಕ್ಕೊಮ್ಮೆ ಹಣ್ಣಿನ ವ್ಯಾಪಾರಿಗಳಾಗಿ ಪರಿವರ್ತನೆಯಾಗುತ್ತಾರೆ. ಸೀತಾಫಲದ ಅರಣ್ಯ ಬನವನ್ನು ಆಸಕ್ತರು ಗುತ್ತಿಗೆ ಪಡೆದು ಗಿಡಗಳ ಹಕ್ಕು ತಮ್ಮದಾಗಿಸಿಕೊಳ್ಳುತ್ತಾರೆ. ಹಣ್ಣುಗಳನ್ನು ಕೊಯ್ದು ಪಟ್ಟಣ ಪ್ರದೇಶಗಳಿಗೆ ಸಾಗಿಸುತ್ತಾರೆ. ವಿವಿಧ ತಾಂಡಾಗಳ ಲಂಬಾಣಿ ಸಮುದಾಯದ ಮಹಿಳೆಯರೇ ಹೆಚ್ಚಾಗಿ ಸೀತಾಫಲ ಮಾರಾಟಕ್ಕೆ ಮುಂದಾಗುತ್ತಾರೆ. ಬೆಳ್ಳಂಬೆಳಗ್ಗೆ ಗುಡ್ಡದತ್ತ ನಡೆದು ಹಣ್ಣಾದ ಫಲಗಳನ್ನು ಬುಟ್ಟಿಗೆ ಹಾಕುತ್ತಾರೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ಎರಡು ತಿಂಗಳು ಮಾತ್ರ ಮಾರುಕಟ್ಟೆಗಳಲ್ಲಿ ಸೀತಾಫಲದ ದರ್ಬಾರ್ ನಡೆಯುತ್ತದೆ.

ಸೀತಫಲದಲ್ಲಿ ಔಷಧೀಯ ಗುಣ:
ಪ್ರತಿಯೊಂದು ಹಣ್ಣು ಮತ್ತು ಸಸ್ಯ ಪ್ರಬೇಧಗಳಲ್ಲಿ ಔಷಧೀಯ ಗುಣವಿರುತ್ತದೆ. ಅಂತೆಯೇ ಈ ಸೀತಫಲವೂ ವಿಶೇಷ ಔಷಧೀಯ ಗುಣ ಹೊಂದಿದೆ. ಇದರ ತೊಗಟೆ ಜಜ್ಜಿ ಬಿಸಿ ನೀರಿನಲ್ಲಿ ಬತ್ತಿಸಿ ಜೇನು ತುಪ್ಪದೊಂದಿಗೆ ಸೇವಿಸಿದರೆ ಜ್ವರ, ಕೆಮ್ಮು, ಉಬ್ಬಸ ಗುಣವಾಗುತ್ತದೆ ಎನ್ನಲಾಗಿದೆ. ಸಿತಾಫಲದ ಎಲೆಗಳನ್ನು ನುಣ್ಣಗೆ ಅರೆದು ಹುಣ್ಣು, ಗಾಯಗಳು, ಕುರು, ಗಡ್ಡೆ (ಗ್ರಂಥಿ)ಗಳಿಗೆ ಹಚ್ಚಿದರೆ ವಾಸಿಯಾಗುತ್ತವೆ. ಪಚನಕ್ರೀಯೆ ಹೆಚ್ಚಿಸಲು ಈ ಹಣ್ಣು ಉಪಕಾರಿಯಾಗಿದೆ. ಇದರ ಬೀಜ ಮತ್ತು ಎಲೆಗಳು ಕೀಟನಿರೋಧಕ ಗುಣಗಳನ್ನು ಹೊಂದಿವೆ. ಅತ್ಯಂತ ರುಚಿಯಾದ ಮತ್ತು ಆರೋಗ್ಯಕರವಾದ ಈ ಹಣ್ಣು ಅಡಿಯಿಂದ ಮುಡಿಯವರೆಗೂ ಯಾವೂದೇ ಸಮಸ್ಯೆಯಿದ್ದರೂ ಸೀತಾಫಲ ಅದನ್ನು ಹೋಗಲಾಡಿಸುತ್ತದೆ. ಶೇ.70 ರಷ್ಟು ತೇವಾಂಶವನ್ನು ಹೊಂದಿರುವ ಹೈಡ್ರೇಟಿಂಗ್ ಹಣ್ಣುಗಳಾಗಿದ್ದು, 100 ಗ್ರಾಂ. ಸೀತಾಫಲದಲ್ಲಿ 80-100 ಕ್ಯಾಲೊರಿ ಪೌಷ್ಠಿಕಾಂಶ ಇರುತ್ತದೆ. ಪ್ರೋಟೀನ್, ಕೊಬ್ಬು ಮತ್ತು ಕಬ್ಬಿಣದ ಪ್ರಮಾಣವು ಹೆಚ್ಚಿದೆ ಎಂಬುದು ಆಯೂರ್ವೇದ ವೈದ್ಯರ ಅಭಿಪ್ರಾಯವಾಗಿದೆ.

Advertisement

– ಮಡಿವಾಳಪ್ಪ ಹೇರೂರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next