Advertisement

“ದಿ ವಿಲನ್‌’ನಿರ್ದೇಶಕರ ಪರ ನಿಂತ ಸುದೀಪ್‌

09:00 PM Mar 09, 2018 | |

ಪ್ರೇಮ್‌ ನಿರ್ದೇಶನದ “ದಿ ವಿಲನ್‌’ ಚಿತ್ರೀಕರಣ ಇನ್ನೂ ನಡೆಯುತ್ತಲಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಚಿತ್ರೀಕರಣ ಮುಗಿಯಬೇಕಿತ್ತು. “ವಿಲನ್‌’ ಚಿತ್ರೀಕರಣ ಮುಗಿಯದೇ ಸುದೀಪ್‌ ಮತ್ತೂಂದು ಸಿನಿಮಾಕ್ಕೆ ಹೋಗುವಂತಿಲ್ಲ. ಜೊತೆಗೆ ಶಿವಣ್ಣ ಒಪ್ಪಿಕೊಂಡಿರುವ ಸಿನಿಮಾ ತಂಡದವರು ಕೂಡಾ “ವಿಲನ್‌’ ಮುಗಿಯುವುದಕ್ಕೆ ಕಾಯುತ್ತಿದ್ದಾರೆ. ಈ ಕಾರಣದಿಂದಲೇ ಗಾಂಧಿನಗರದಲ್ಲಿ ಒಂದಷ್ಟು ಮಂದಿ ಪ್ರೇಮ್‌ ಅವರ ಪ್ಲ್ಯಾನಿಂಗ್‌ ಸಮಸ್ಯೆಯಿಂದಾಗಿ “ವಿಲನ್‌’ ತಡವಾಗುತ್ತಿದೆ,

Advertisement

ಪ್ರೇಮ್‌ ಸರಿಯಾಗಿ ಪ್ಲ್ಯಾನ್‌ ಮಾಡಿ ಮಾಡಿದ್ದರೆ ಇಷ್ಟೊತ್ತಿಗೆ ಚಿತ್ರೀಕರಣ ಮುಗಿಸಬಹುದಿತ್ತು … ಹೀಗೆ ಪ್ರೇಮ್‌ ಮೇಲೆ ಆರೋಪ ಮಾಡುತ್ತಿದ್ದಾರೆ. ಆದರೆ, ನಟ ಸುದೀಪ್‌ ಪ್ರೇಮ್‌ ಪರ ನಿಂತಿದ್ದಾರೆ. “ದಿ ವಿಲನ್‌’ ತಡವಾಗಲು ಪ್ರೇಮ್‌ ಕಾರಣರಲ್ಲ, ಪ್ರೇಮ್‌ ಒಬ್ಬರನ್ನು ದೂರುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ. “ದಿ ವಿಲನ್‌’ ತಡವಾಗುತ್ತಿರುವ ವಿಷಯದ ಕುರಿತು ಟ್ವೀಟ್‌ ಮಾಡಿರುವ ಸುದೀಪ್‌, “ಪ್ರೇಮ್‌ ಯಾವತ್ತೂ ಪ್ಲ್ಯಾನಿಂಗ್‌ ಇಲ್ಲದೇ ಚಿತ್ರೀಕರಣ ಮಾಡುವವರಲ್ಲ.

ಅವರು ಸಿನಿಮಾವನ್ನು ತುಂಬಾನೇ ಪ್ರೀತಿಸುವ ನಿರ್ದೇಶಕ. ಸಿನಿಮಾ ತಡವಾಗುತ್ತಿದೆ ಎಂದರೆ ಅದಕ್ಕೆ ಕಾರಣ ಕೇವಲ ಪ್ರೇಮ್‌ ಒಬ್ಬರಲ್ಲ. ಕೆಲವು ವ್ಯಕ್ತಿಗಳಿಂದ ಹಾಗೂ ಸನ್ನಿವೇಶಗಳಿಂದಾಗಿ ಸಿನಿಮಾ ತಡವಾಗಿದೆ’ ಎಂದು ಟ್ವೀಟ್‌ ಮಾಡುವ ಮೂಲಕ ಪ್ರೇಮ್‌ ಅವರ ವಿರುದ್ಧ ಆರೋಪ ಮಾಡುವವರಿಗೆ ಸ್ಪಷ್ಟನೆ ನೀಡಿದ್ದಾರೆ. ಇನ್ನು, ತಮ್ಮಿಂದಾಗಿ ಸಿನಿಮಾ ತಡವಾಗುತ್ತಿದೆ ಎಂಬ ಆರೋಪದ ಕುರಿತು ಈ ಹಿಂದೆಯೇ ಪ್ರೇಮ್‌ ಸ್ಪಷ್ಟನೆ ಕೊಟ್ಟಿದ್ದರು.

“ಸಿನಿಮಾ ತಡವಾಗುತ್ತಿದೆ ಎಂದರೆ ಅದಕ್ಕೆ ಸಾಕಷ್ಟು ಕಾರಣಗಳಿವೆ. ಮುಖ್ಯವಾಗಿ ಇದು ಇಬ್ಬರು ಬಿಗ್‌ ಸ್ಟಾರ್‌ಗಳ ಸಿನಿಮಾ. ಇಬ್ಬರು ಸ್ಟಾರ್‌ಗಳ ಡೇಟ್ಸ್‌ ಅನ್ನು ಹೊಂದಿಸಬೇಕು. ಅದಕ್ಕಿಂತ ಹೆಚ್ಚಾಗಿ ತಡ ಅನ್ನುತ್ತಾರಲ್ಲ, ನನ್ನ ಯಾವುದೇ ಸಿನಿಮಾವಾದರೂ ಅದು ಒಂದು ವರ್ಷ ಆಗಿಯೇ ಆಗುತ್ತದೆ. ನನಗೆ ಮೂರು ತಿಂಗಳಿಗೆ ಸಿನಿಮಾ ಮಾಡಿ ಮುಗಿಸಿ ಗೊತ್ತಿಲ್ಲ.

ನಾನು ಆ ತರಹ ಮಾಡಿಲ್ಲ, ಮಾಡೋದು ಇಲ್ಲ. ಆ ತರಹ ಮೂರು ತಿಂಗಳಿಗೆ ಸಿನಿಮಾ ಮಾಡೋದಿದ್ದರೆ ಇಷ್ಟೊತಿಗೆ 50 ಸಿನಿಮಾ ಮಾಡಿ, ದುಡ್ಡು ಮಾಡಿಕೊಂಡು ಆರಾಮವಾಗಿ ಮನೆಯಲ್ಲಿರಬಹುದಿತ್ತು. ನಾನು ಪ್ಯಾಶನೇಟ್‌ ಆಗಿ ಸಿನಿಮಾ ಮಾಡುತ್ತೇನೆ. ಯಾವುದೋ ಒಂದು ಮನೆಯಲ್ಲಿ ಚಿತ್ರೀಕರಣ ಮುಗಿಸಿಬಿಡಲು ನನ್ನದು ಫ್ಯಾಮಿಲಿ ಸೆಂಟಿಮೆಂಟ್‌ ಸಿನಿಮಾವಲ್ಲ’ ಎಂದಿದ್ದರು ಪ್ರೇಮ್‌. 

Advertisement
Advertisement

Udayavani is now on Telegram. Click here to join our channel and stay updated with the latest news.

Next