ತುಮಕೂರು: ಇತಿಹಾಸ ಪ್ರಸಿದ್ಧ ಸಿದ್ಧಗಂಗಾ ಮಠ, ಕಂಚುಗಲ್ ಬಂಡೆ ಮಠ, ದೇವನಹಳ್ಳಿ ತಾಲೂಕಿನ ವಿಜಯಪುರದ ಬಸವ ಕಲ್ಯಾಣ ಮಠಕ್ಕೆ ವಟುಗಳ ಪಟ್ಟಾಧಿಕಾರ ಮಹೋತ್ಸವ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮೀಜಿಗಳ ನೇತೃತ್ವದಲ್ಲಿ ಭಾನುವಾರ ಸಿದ್ಧಗಂಗಾ ಮಠದಲ್ಲಿ ನಡೆಯಿತು.
ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ಇಷ್ಟಲಿಂಗ ಪೂಜೆ ನೆರವೇರಿಸಿದ ಬಳಿಕ ಶ್ರೀ ಶಿವಕುಮಾರ ಸ್ವಾಮೀಜಿಯವರ ಇಚ್ಛೆಯಂತೆ ಉತ್ತರಾಧಿಕಾರಿ ಪಟ್ಟಾಭಿಷೇಕ ನಡೆಸಿದರು.
ಅಭಿದಾನ ಘೋಷಣೆ: ಸಿದ್ಧಗಂಗಾ ಮಠದ ಉತ್ತರಾಧಿಕಾರಿಗಳಾಗಿರುವ ಬೆಂಗಳೂರು ಗ್ರಾ.ಜಿಲ್ಲೆ ನೆಲಮಂಗಲ ತಾಲೂಕಿನ ಮೈಲಹಳ್ಳಿ ಮನೋಜ್ಕುಮಾರ್ ಅವರಿಗೆ ಶ್ರೀ ಶಿವ ಸಿದ್ದೇಶ್ವರ ಸ್ವಾಮೀಜಿ, ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕಂಚುಗಲ್ ಬಂಡೇಮಠದ ಉತ್ತರಾಧಿಕಾರಿ ಕೆ.ಎಂ.ಹರ್ಷಾ ಅವರಿಗೆ ಶ್ರೀ ಮಹಾಲಿಂಗ ಸ್ವಾಮೀಜಿ, ವಿಜಯಪುರ ಬಸವಕಲ್ಯಾಣ ಮಠದ ಉತ್ತರಾಧಿಕಾರಿ ಗೌರಿಕುಮಾರ್ರಿಗೆ ಶ್ರೀ ಸದಾಶಿವ ಸ್ವಾಮೀಜಿ ಎಂದು ನೂತನ ಅಭಿದಾನ ಘೋಷಣೆ ಮಾಡಲಾಯಿತು.
ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಶಿವಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ನಾನು ಪೂಜ್ಯರ ಉತ್ತರಾಧಿಕಾರಿಯಾದ ಕ್ಷಣ ಇವತ್ತಿಗೂ ವಿಸ್ಮಯ. ಪೂಜ್ಯರು ನನ್ನಲ್ಲಿ ಯಾವ ಗುಣ ಗುರುತಿಸಿದರೋ ಗೊತ್ತಿಲ್ಲ. ಗುರುಕೃಪೆಯಿಂದ ನಾನು ಮಠದ ಉತ್ತರಾಧಿಕಾರಿಯಾದೆ ಎಂದರು.
ಸಿದ್ದಲಿಂಗಶ್ರೀ ಭಾವುಕ: ಪೂಜ್ಯರು ಅಂದು ನಮ್ಮನ್ನು ಅಲ್ಪಾಯುಷಿಗಳು ಎಂದು ಹೇಳುತ್ತಿದ್ದರು. ಜತೆಗೆ ಉತ್ತರಾಧಿಕಾರಿ ನೇಮಕ ಮಾಡುವಂತೆಯೂ ಸೂಚನೆ ನೀಡಿದ್ದರು ಎಂದು ಹೇಳುವ ಮೂಲಕ ಶ್ರೀ ಸಿದ್ದಲಿಂಗ ಶ್ರೀ ಭಾವುಕರಾದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹಿರೇಮಠಾಧ್ಯಕ್ಷರಾದ ಡಾ.ಶಿವಕುಮಾರ ಸ್ವಾಮೀಜಿ, ಮುಮ್ಮಡಿ ನಿರ್ವಾಣ ಸ್ವಾಮೀಜಿ, ಮಹದೇವ ಸ್ವಾಮೀಜಿ, ಮೂರು ಮಠದ ನೂತನ ಉತ್ತರಾಧಿಕಾರಿಗಳು, ಸಂಸದ ಜಿ.ಎಸ್.ಬಸವರಾಜು, ಮಾಜಿ ಸಚಿವ ಸೊಗಡು ಶಿವಣ್ಣ, ಡಾ.ಎಂ.ಆರ್.ಹುಲಿನಾಯ್ಕರ್ ಮತ್ತಿತರರು ಭಾಗವಹಿಸಿದ್ದರು.