Advertisement

ಬೆಂಗಳೂರು: ಕೃಷಿಯಲ್ಲಿ ಲಾಭ ಮರೀಚಿಕೆಯಾಗಿದೆ. ಹಾಗಾಗಿ ರೈತರು ತಮ್ಮ ಮಕ್ಕಳನ್ನು ಪಟ್ಟಣದಲ್ಲಿ ಓದಿಸಿ ಡಾಕ್ಟರ್‌ ಅಥವಾ ಎಂಜಿನಿಯರ್‌ ಮಾಡುತ್ತಿರುವುದು ಇತ್ತೀಚೆಗೆ ಸಾಮಾನ್ಯ. ಆದರೆ ಇಲ್ಲೊಬ್ಬ ತಾಯಿ ಪಟ್ಟಣದಲ್ಲಿದ್ದ ಮಗನನ್ನು ಹಳ್ಳಿಗೆ ಕರೆಸಿಕೊಂಡು ತಮ್ಮದೇ ಜಮೀನಿನಲ್ಲಿ ಕೆಲಸ ನೀಡಿದ್ದಾರೆ. ಅಷ್ಟೇ ಅಲ್ಲ ಪಟ್ಟಣದಲ್ಲಿ ಅವನು ಪಡೆಯುತ್ತಿದ್ದುದಕ್ಕಿಂತ ಹೆಚ್ಚು-

Advertisement

ಕಡಿಮೆ ದುಪ್ಪಟ್ಟು ಸಂಬಳ ನೀಡುತ್ತಿದ್ದಾಳೆ! :

ಹೌದು, ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬಂಟರತಳಾಲು ಗ್ರಾಮದ ಎಂ. ಕವಿತಾ ಕೃಷಿಯಲ್ಲಿ ಹಲವು ಪ್ರಯೋಗಗಳ ಮೂಲಕ ವಿನೂತನ ಸಾಧನೆ ಮಾಡಿದ್ದಾರೆ. ಅಲ್ಲದೆ 20 ಸಾವಿರ ರೂ. ಸಂಬಳಕ್ಕೆ ಪಟ್ಟಣ ದಲ್ಲಿ ದುಡಿಯುತ್ತಿದ್ದ ಪದವೀಧರ ಮಗನ ಕೆಲಸ ಬಿಡಿಸಿ, ತನ್ನ ಜಮೀನಿನಲ್ಲೇ ದುಡಿಮೆಗೆ ಹಚ್ಚಿ, ತಿಂಗಳಿಗೆ 35 ಸಾವಿರ ರೂ. ಸಂಬಳ ಪಾವತಿಸುತ್ತಿದ್ದಾರೆ.

ಇದು ಸಾಧ್ಯವಾದದ್ದು ಕವಿತಾ ಕೃಷಿಯಲ್ಲಿ ಅನುಸರಿಸಿದ ವಿನೂತನ ವಿಧಾನಗಳಿಂದ. ಸಮಗ್ರ ಕೃಷಿ ಪದ್ಧತಿ ಅನುಸರಿಸುತ್ತಿರುವ ಅವರು ಕೋಳಿ ಸಾಕಾಣಿಕೆಯನ್ನೂ ಮಾಡು ತ್ತಿದ್ದಾರೆ. ಆದರೆ ಅವುಗಳ ಮಾರಾಟ ವಿಧಾನ ವಿಭಿನ್ನವಾಗಿದೆ. ಸುತ್ತಲಿನ ಹೊಟೇಲ್‌, ಸಂಘ- ಸಂಸ್ಥೆ, ಕಚೇರಿಗಳಿಂದ ಆರ್ಡರ್‌ ಪಡೆಯುವ ಕವಿತಾ, ತಾವು ಸಾಕಿದ ಕೋಳಿ ಗಳಿಂದ ತರಹೇವಾರಿ ಅಡುಗೆ ತಯಾರಿಸಿ ಪೂರೈಸುತ್ತಾರೆ. ಇದರಿಂದ ದುಪ್ಪಟ್ಟು ಆದಾಯ ಬರುತ್ತಿದೆ. ಮಾರಾಟ ಮಾಡಿದರೆ ಒಂದು ಕೋಳಿಗೆ 450-500 ರೂ. ಮಾತ್ರ ಸಿಗುತ್ತದೆ ಎನ್ನುತ್ತಾರೆ ಕವಿತಾ.

ಮಾಂಸಾಹಾರಿ ಅಡುಗೆ :

Advertisement

“ನಾನು ಆಗಷ್ಟೇ ಹೈನುಗಾರಿಕೆ ಆರಂಭಿಸಿದೆ. ಅದರಿಂದ ತಾಲೂಕು ಮಟ್ಟದಲ್ಲಿ ಆತ್ಮ ಯೋಜನೆ ಅಡಿ 10 ಸಾವಿರ ನಗದು ಪ್ರಶಸ್ತಿ ಬಂದಿತ್ತು. ಆ ಹಣದಿಂದ 5 ಹುಂಜ, 15 ಕೋಳಿ ಖರೀದಿಸಿದೆ. ಅದರಿಂದ ಒಂದು ವರ್ಷದಲ್ಲಿ 180 ಕೋಳಿಗಳಾದವು. ಆ ಕೋಳಿಗಳು ಮತ್ತು ಮೊಟ್ಟೆಗಳನ್ನು ಮಾರಾಟ ಮಾಡಲಿಲ್ಲ. ಬದಲಿಗೆ ಹೊಸ ರೀತಿ ಮೌಲ್ಯವರ್ಧನೆ ಮಾಡಿದೆ. ಹೇಗೆಂದರೆ ಸುತ್ತಲಿನ ಕಚೇರಿಗಳು, ಫ್ಯಾಕ್ಟರಿಗಳಿಗೆ, ಹೊಟೇಲ್‌ಗ‌ಳಿಗೆ ಕ್ಯಾಟರಿಂಗ್‌ ಶುರು ಮಾಡಿದೆ. ಪ್ರತೀ ರವಿವಾರ, ಮಂಗಳವಾರ ಮಾಂಸಾಹಾರಿ ಅಡುಗೆ ತಯಾರಿಸಿ ಪೂರೈಸುತ್ತೇನೆ. ಅಕ್ಕಿರೊಟ್ಟಿ, ರಾಗಿರೊಟ್ಟಿಗಳನ್ನೂ ಮಾಡುತ್ತೇನೆ’ ಎಂದು ಕವಿತಾ ತಮ್ಮ ಯಶೋಗಾಥೆಯನ್ನು ವಿವರಿಸುತ್ತಾರೆ.

ಒಂದು ಹಸುವಿನಿಂದ ಆರಂಭ:

ಕವಿತಾ ಓದಿದ್ದು ಎಸೆಸೆಲ್ಸಿ. ಕೆಲವು ದಶಕಗಳ ಹಿಂದೆ ಅವರ ಮಾವ 4 ಎಕರೆ ಜಮೀನನ್ನು ಹಸ್ತಾಂತರಿಸಿದಾಗ ಆ ಜಮೀನು ಅಕ್ಷರಶಃ ಬಂಡೆಯಾಗಿತ್ತು. ಅದನ್ನು ಹದ ಮಾಡಿ ಸತತ ನಾಲ್ಕು ವರ್ಷ ನಷ್ಟ ಅನುಭವಿಸಿದರು. ವೈನ್‌ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಪತಿಯೂ ಕೆಲಸ ಬಿಟ್ಟು ಕೃಷಿಗೆ ನಿಂತಿದ್ದರು. ಒಂದೆಡೆ ಕೈಹಿಡಿಯದ ಕೃಷಿ; ಮತ್ತೂಂದೆಡೆ ಗಳಿಕೆಯೂ ಇಲ್ಲ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. “ಇದೆಲ್ಲದರ ಮಧ್ಯೆ 30 ಸಾವಿರ ಸಾಲ ಮಾಡಿ, ಒಂದು ಹಸು ಖರೀದಿಸಿದೆ. ಅಲ್ಲಿಂದ ಆರಂಭವಾಯಿತು ನಿಜವಾದ ಕೃಷಿ ಪಯಣ. ವರ್ಷದಲ್ಲೇ ಹಸುಗಳ ಸಂಖ್ಯೆ ಹೆಚ್ಚಿತು. ಕೋಳಿಗಳು ಬಂದವು. ಜಮೀನಿನಲ್ಲಿ ಬೆಳೆ ಕೂಡ ಬರಲು ಆರಂಭಿಸಿತು. ಇಂದು 9 ಎಕರೆ ಜಮೀನಿದೆ. ಭತ್ತ, ರಾಗಿ, ಜೋಳ, ದ್ವಿದಳ ಧಾನ್ಯ, ಅಡಿಕೆ, ತೆಂಗು, ದಾಳಿಂಬೆ, ಬಾಳೆ, ಚಕ್ಕೋತ ಮತ್ತಿತರ ಬೆಳೆ ಬೆಳೆಯುತ್ತಿದ್ದು, ಹೂವಿನ ಬೆಳೆ, ಬದುವಿನಲ್ಲಿ ಸಿಲ್ವರ್‌ ಓಕ್‌, ಬೇವು, ರಕ್ತಚಂದನ, ಹೊಂಗೆ ಮರಗಳು ಬೆಳೆದುನಿಂತಿವೆ. ಕುರಿ ಸಾಕಾಣಿಕೆ ಕೂಡ ಮಾಡುತ್ತಿದ್ದೇನೆ’ ಎನ್ನುತ್ತಾರೆ ಕವಿತಾ.

“ನಾನು ಹುಣಸೂರಿನಲ್ಲಿ ಸಂಬಂಧಿಕರ ವೈನ್‌ಶಾಪ್‌ನಲ್ಲಿ ಕ್ಯಾಶಿಯರ್‌ ಆಗಿ ಕೆಲಸ ಮಾಡುತ್ತಿದ್ದೆ. ಈಗ ಅಮ್ಮನೊಂದಿಗೇ ವ್ಯವಸಾಯದಲ್ಲಿ ನೆರವಾಗುತ್ತಿದ್ದೇನೆ. ಅಲ್ಲಿಗಿಂತ ಇಲ್ಲಿ ಹೆಚ್ಚು ಆದಾಯ ಗಳಿಸುತ್ತಿದ್ದೇನೆ. ಕೆಲಸ ನನಗೆ ತೃಪ್ತಿಯೂ ತಂದಿದೆ’ ಎಂದು ಕವಿತಾ ಅವರ ಮಗ ಅಕ್ಷಯ್‌ ತಿಳಿಸಿದ್ದಾರೆ. ಕವಿತಾರ ಸಾಧನೆ ಗುರುತಿಸಿ, ಗುರುವಾರ ಕೃಷಿ ಮೇಳದಲ್ಲಿ ಕೆನರಾಬ್ಯಾಂಕ್‌ ರಾಜ್ಯಮಟ್ಟದ “ಅತ್ಯುತ್ತಮ ರೈತ ಮಹಿಳೆ’ ಪ್ರಶಸ್ತಿ ನೀಡಿ ಗೌರವಿಸಿತು.

ಜಮೀನಿನಲ್ಲಿ ಕೃಷಿ ಹೊಂಡ :

ಮಾಡಿ ಅಲ್ಲಿ ಮೀನು ಸಾಕಾಣಿಕೆ ಮಾಡುತ್ತೇನೆ. ಅದರಿಂದ ಮೀನು ಊಟ ತಯಾರಿಸಿ ಪೂರೈಸಬಹುದಾಗಿದೆ. ಮಗನಿಗೆ ಪಟ್ಟಣದಲ್ಲಿ ತಿಂಗಳಿಗೆ 20 ಸಾವಿರ ಸಂಬಳ ಬರುತ್ತಿತ್ತು. ಅದನ್ನು ಬಿಡಿಸಿ ನಾನೇ  ಅವನಿಗೆ ಈಗ ತಿಂಗಳಿಗೆ 35 ಸಾವಿರ ಸಂಬಳ ಕೊಡುತ್ತೇನೆ. ಇವನ ಜತೆಗೆ ಇನ್ನೂ ಇಬ್ಬರು ನನ್ನೊಂದಿಗೆ ಕೆಲಸ ಮಾಡುತ್ತಿದ್ದು, ಅವರಿಗೂ ಸಂಬಳ ನೀಡುತ್ತಿದ್ದೇನೆ. ಕವಿತಾ 

 

- ವಿಜಯಕುಮಾರ ಚಂದರಗಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next