ಗುಡಿಬಂಡೆ: ಚುನಾವಣೆ ಮುಗಿದು ಮತ್ತೂಂದು ಚುನಾವಣೆ ಬರುತ್ತಿದ್ದರು ತಾಲೂಕಿನಲ್ಲಿ ಎಪಿಎಂಸಿ ಮಾರುಕಟ್ಟೆ ತೆರೆಯಲು ಜನ ಪ್ರತಿನಿಧಿಗಳ ಹಾಗೂ ಅಧಿಕಾರಿಗಳು ಬೇಜಾವಾಬ್ದಾರಿ ತನ ತೋರುತ್ತಿರುವುದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2007 ರಲ್ಲಿಯೇ ಬಾಗೇಪಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾರಂಭವಾಗಿದ್ದು, ಆ ಸಮಯದಲ್ಲಿಯೇ ಗುಡಿಬಂಡೆ ತಾಲೂಕಿನಲ್ಲಿ ಉಪ ಮಾರುಕಟ್ಟೆಯನ್ನು ಪ್ರಾರಂಭಿಸಲು ಘೋಷಣೆ ಮಾಡಲಾಗಿತ್ತು ಎಂದು ಎಪಿಎಂಸಿ ಅಧಿಕಾರಿಗಳೇ ಹೇಳುತ್ತಿದ್ದಾರೆ. ಅಂದಿನಿಂದಲೂ ಉಪಮಾರುಕಟ್ಟೆ ಪ್ರಾರಂಭಿಸಲು ಎಪಿಎಂಸಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ನಡುವೆ ಸೂಕ್ತ ಜಾಗ ಕೋರಿ ಹಗ್ಗ ಜಗ್ಗಾಟಗಳೇ ನಡೆದು ಹೋಗಿ, ಕಂದಾಯ ಇಲಾಖೆ ಜಾಗ ಗುರುತಿಸಿ ಕೊಟ್ಟರು, ಈಗ ಎಪಿಎಂಸಿ ಅಧಿಕಾರಿಗಳು ಮಾತ್ರ ಮಾರುಕಟ್ಟೆ ಸ್ಥಾಪಿಸಲು ಬೇಜಾಬ್ದಾರಿ ತನ ತೋರುತ್ತಿರುವುದು ದುರಂತ.
ತರಕಾರಿ ಮಾರುಕಟ್ಟೆಗೆ ಸಾಗಲು ನಿತ್ಯವು ಪರದಾಟ: ತಾಲೂಕಿನಿಂದ ರೈತರು ಪ್ರತಿ ದಿನ ಬೆಳೆಗಳನ್ನು ಸಾಗಿಸಲು ಹತ್ತಿರದ 20 ಕಿಮೀ ದೂರದಲ್ಲಿರುವ ಬಾಗೇಪಲ್ಲಿ ಎಪಿಎಂಸಿ ಹೊರತು ಪಡಿಸಿ, ಗೌರೀಬಿದನೂರು, ಚಿಕ್ಕಬಳ್ಳಾಪುರ, ಹಿಂದೂಪುರ ಮಾರುಕಟ್ಟೆಗಳಿಗೆ ಹೋಗಲು ಸುಮಾರು 35 ರಿಂದ 45 ಕಿ.ಮೀ ಬೆಳೆಗಳನ್ನು ಬಾಡಿಗೆ ವಾಹನದಲ್ಲಿ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಬರಬೇಕಾದ ಪರಿಸ್ಥಿತಿಯಲ್ಲಿ ರೈತರು ಇದ್ದು, ಅಲ್ಲಿಗೆ ಹೋಗಿ ಮಾರಾಟ ಮಾಡಿದ ನಂತರ ಕೆಲವೊಮ್ಮೆ ಸಾಗಾಣಿಕೆ ವೆಚ್ಚವೂ ಸಹ ಬಾರದೇ ದುಬಾರಿ ವೆಚ್ಚ ಭರಿಸುವ ಸ್ಥಿತಿ ಇದೆ.
ಜಾಗ ಗುರುತಿಸಿ ಮಂಜೂರಾತಿಗೆ ಸಲ್ಲಿಕೆ: 2017ರಲ್ಲಿ ಗುಡಿಬಂಡೆ ತಾಲೂಕಿನ, ಪಲ್ಲೆಗಾರಹಳ್ಳಿ ಗ್ರಾಮದ ಸರ್ವೆ ನಂ. 8/1ಬಿ ರಲ್ಲಿ 14.05 ಎಕರೆ ಜಮೀನು ಮಂಜೂರಾತಿ ತೀರ್ಮಾನಿಸಿ ಅದರಂತೆ ತಹಶೀಲ್ದಾರ್ ರಿಗೆ ಜಮೀನು ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮನವಿ ಸಲ್ಲಿಸಲಾಗಿದೆ.
Related Articles
ಸರ್ಕಾರಕ್ಕೆ ಶುಲ್ಕ ಪಾವತಿಸಿದರೆ ಮಂಜೂರು: ಎಪಿಎಂಸಿ ಸಮಿತಿ ಕೋರಿಕೆಯಂತೆ ಜಮೀನು ಮಂಜೂರು ಮಾಡಲು ತಹಶೀಲ್ದಾರ್ ಗುಡಿಬಂಡೆ ರವರು ಜಮೀನು ಮಂಜೂರು ಮಾಡಲು ಸರ್ಕಾರ ವಿಧಿಸುವ ಮೊತ್ತ ಪಾವತಿಸಲು, ಕೋರಿಕೆದಾರರು ಒದಗಿಸುವ ಸೌಲಭ್ಯಗಳ ಬಗ್ಗೆ ನೀಲಿನಕಾಶೆ, ಯೋಜನಾ ಮತ್ತು ಅಂದಾಜು ಪಟ್ಟಿ ನೀಡುವಂತೆ 2018ರಲ್ಲಿ ರಂದು ಪತ್ರ ನೀಡಿದ್ದಾರೆ, ಕಂದಾಯ ಅಧಿಕಾರಿಗಳು ಷರತ್ತುಗಳು ವಿಧಿಸಿದ್ದೇ ತಡ, ಜಮೀನು ಮಂಜೂರಾತಿ ವಿಚಾರ ಅಲ್ಲಿಗೆ ಕೈ ಬಿಟ್ಟು, ಶಾಸಕರು ಇತರೆ ಮುಖಂಡರು ಪ್ರಸ್ತಾಪಿಸಿದಾಗ ಅರ್ಜಿ ಸಲ್ಲಿಸುವಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ವಹಿಸಿದ್ದಾರೆ.
ಚುನಾವಣೆ ವೇಳೆ ಮಾತ್ರ ಅಭಿವೃದ್ಧಿ ಘೋಷಣೆ : ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ಜನ ಪ್ರತಿನಿಧಿಗಳು ರೈತರನ್ನು ಓಲೈಕೆ ಮಾಡಲು ಶೀಘ್ರದಲ್ಲೇ ಗುಡಿಬಂಡೆ ತಾಲೂಕಿನಲ್ಲಿ ಎಪಿಎಂಸಿ ಮಾರುಕಟ್ಟೆ ಸ್ಥಾಪನೆ ಮಾಡುತ್ತೇವೆ ಎಂದು ಭರವಸೆಗಳನ್ನು ಕೊಡುತ್ತಾ ಕಾಲಹರಣ ಮಾಡುತ್ತಿದ್ದಾರೆಯೇ ಹೊರತು ಅದನ್ನು ಜಾರಿಗೆ ತರಲು ಮಾತ್ರ ಪ್ರಯತ್ನ ಪಡೆದ ಕಾರಣ, ರಾಜಕಾರಣಿಗಳ ಬೇಜವಾಬ್ದಾರಿ ತನಕ್ಕೆ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಗುಡಿಬಂಡೆ ತಾಲೂಕಿನಲ್ಲಿ ಪ್ರಮುಖವಾಗಿ ಕೃಷಿಯೇ ಅದಾಯ ಮೂಲವಾಗಿದ್ದು, ಇಲ್ಲಿ ಸ್ಥಳಿಯವಾಗಿ ಮಾರುಕಟ್ಟೆ ಇಲ್ಲದೆ, ಬೇರೆಡೆಗೆ ಸಾಗಾಣಿಕೆ ಮಾಡಬೇಕಾದ ಪರಿಸ್ಥಿತಿ ಇರುವುದರಿಂದ, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಮಾರುಕಟ್ಟೆ ಪ್ರಾರಂಭಿಸಬೇಕು. ●ಮಧು.ವೈ. ಪಿ.ಎಸ್.ಎಸ್.ಮುಖಂಡ, ಹಳೇ ಯರ್ರಹಳ್ಳಿ
ತಾಲೂಕಿನಲ್ಲಿ ಕೃಷಿ, ತೋಟಗಾರಿಕೆ ಬೆಳೆಗಳನ್ನು ಮಾರಾಟ ಮಾಡಲು ಮಾರುಕಟ್ಟೆ ಇಲ್ಲದ ಕಾರಣ ಬೇರೆಡೆಗೆ ಹೋಗಿ ಮಾರಾಟ ಮಾಡಬೇಕಾಗಿದ್ದು, ಇದರಿಂದ ಬರುವ ಆದಾಯವೂ ಕಡಿಮೆಯಾಗಿ, ರೈತರು ಸಾಲದ ಸುಳಿಗೆ ಸಿಲುಕುವಂತಾಗಿದೆ. ಶೀಘ್ರದಲ್ಲೇ ತಾಲೂಕಿನಲ್ಲಿ ಮಾರುಕಟ್ಟೆ ಸ್ಥಾಪನೆ ಮಾಡಲು ಕ್ರಮ ವಹಿಸಬೇಕು. -ಪಿ.ಆರ್.ಸುದೀಪ್, ರೈತ, ಪೋಲಂಪಲ್ಲಿ
- ನವೀನ್ಕುಮಾರ್