Advertisement

ವಿದ್ಯಾರ್ಥಿಗಳ ನೆಂಟ ಸಾಹಿತ್ಯ ಸಂಗಾತಿ

10:59 AM Jul 19, 2018 | |

ಬೆಂಗಳೂರು: ಹಳಗನ್ನಡದಿಂದ ನವ್ಯದವರೆಗಿನ ಕನ್ನಡ ಸಾಹಿತ್ಯ, ಸಂಸ್ಕೃತಿ ಲೋಕದ ಸಮಗ್ರ ಪರಿಚಯ ಮಾಡಿಕೊಡುವ ಅಪೂರ್ವ ಕೃತಿಯೊಂದು ಕನ್ನಡಿಗರ ಮನಗೆದ್ದಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಹೊರತಂದಿರುವ “ಕನ್ನಡ ಸಾಹಿತ್ಯ ಸಂಗಾತಿ’ ಪುಸ್ತಕ, ಪರೀಕ್ಷಾರ್ಥಿಗಳ ಪಾಲಿಗಂತೂ ನೆಂಟನಾಗಿದೆ. ಕನ್ನಡ ಶಾಸನಗಳಿಂದ ಹಿಡಿದು ಆಧುನಿಕ ಸಾಹಿತ್ಯದವರೆಗಿನ ಮುಖ್ಯ ವಿಷಯಗಳು ಇದರಲ್ಲಿದೆ.

Advertisement

ಶಾಸನಗಳು, ಪ್ರಾಚೀನ, ಮಧ್ಯಕಾಲಿನ, ಆಧುನಿಕ ಕವಿಗಳು, ವಿವಿಧ ಸಾಹಿತ್ಯ ಪ್ರಕಾರಗಳ ಪ್ರಮುಖ ಬರಹಗಾರರು, ಕೃತಿಗಳು, ಕನ್ನಡ ಸಾಹಿತ್ಯದಲ್ಲಿ ಪ್ರಸ್ತಾಪಿತವಾದ ವಿಶಿಷ್ಟ ಪರಿಕಲ್ಪನೆಗಳು, ಪ್ರಸಿದ್ಧ ಸ್ಥಳಗಳು ಹೀಗೆ ಅನೇಕ ವಿಷಯಗಳ ಸಂಕ್ಷಿಪ್ತ ಮಾಹಿತಿ ಈ ಕೃತಿಯಲ್ಲಿರುವುದು ವಿಶೇಷ.
 
ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರು, ಜ್ಞಾನಪೀಠ, ಪಂಪ, ಅತ್ತಿಮಬ್ಬೆ, ಕೇಂದ್ರ ಸಾಹಿತ್ಯ ಅಕಾಡೆಮಿ ಮುಂತಾದ ಪ್ರಶಸ್ತಿ ಪುರಸ್ಕೃತರು ಮತ್ತು ಅವರ ಕೃತಿಗಳ ಕುರಿತ ವಿವರವನ್ನು ಅಕಾರಾದಿಯಾಗಿ ನೀಡಲಾಗಿದೆ. ಜತೆಗೆ
ಸಾಹಿತಿಗಳಿಗೆ ಸಂದ ವಿವಿಧ ಪ್ರಶಸ್ತಿ ಮತ್ತು ಇತರ ವಿವರಗಳನ್ನೂ ನೀಡಲಾಗಿದೆ.

ಯಾರಿಂದ ಬಹುಬೇಡಿಕೆ?: ಕೆಎಎಸ್‌ ಹಾಗೂ ಐಎಎಸ್‌  ಪರೀಕ್ಷಾರ್ಥಿಗಳಿಗೆ ಈ ಕೃತಿ ಬಹುಪಯೋಗಿ ಯಾಗಿದೆ. ಇವರೇ ಈ ಕೃತಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದ್ದಾರೆ. ಸಾಹಿತ್ಯದ ವಿದ್ಯಾರ್ಥಿಗಳು, ನೆಟ್‌, ಸ್ಲೇಟ್‌ ಪರೀಕ್ಷೆಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಂದ ಈ ಕೃತಿಗೆ ಬಹುಬೇಡಿಕೆ ಇದೆ.

2017ರಲ್ಲಿ ಪ್ರಥಮ ಮುದ್ರಣವಾದ ಈ ಕೃತಿಯ ಉತ್ತಮ ಮಾರಾಟ ಕಾಣುತ್ತಿದೆ ಎನ್ನುತ್ತಾರೆ ಅಕಾಡೆಮಿಯ ಮಾರಾಟ ವಿಭಾಗದ ಹರೀಶ್‌ಕುಮಾರ್‌. ಸದ್ಯ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಮಾರಾಟ ಮಳಿಗೆಗಳಲ್ಲಿ ಶೇ.15ರಷ್ಟು ರಿಯಾಯಿತಿ ದರದಲ್ಲಿ ಲಭ್ಯವಿದೆ ಎಂದು ಹೇಳುತ್ತಾರೆ.

ಭಾಷೆ ಸಮೃದ್ಧಗೊಳ್ಳಲು ಸೃಜನಶೀಲ ಸಾಹಿತ್ಯದಂತೆಯೇ ಶಾಸ್ತ್ರ ಸಾಹಿತ್ಯವೂ ಬೆಳೆಯಬೇಕಾಗಿರುತ್ತದೆ. ಈ ಸಾಹಿತ್ಯಗಳ ಬಳಕೆ ಸುಲಭವಾಗಲು, ಪರಿಣಾಮಕಾರಿಯಾಗಲು ವಿಶೇಷವಾದ ಸಾಧನ ಸಾಹಿತ್ಯವೂ ಅಗತ್ಯವೆಂಬುದನ್ನು ಮನಗಂಡು ಈ ಕೃತಿ ಹೊರತರಲಾಗಿದೆ.
  ಬರಗೂರು ರಾಮಚಂದ್ರಪ್ಪ, ಕನ್ನಡ ಸಾಹಿತ್ಯ ಸಂಗಾತಿ, ಯೋಜನಾ ಸಂಪಾದಕರು

Advertisement

 ಶ್ರುತಿ ಮಲೆನಾಡತಿ

Advertisement

Udayavani is now on Telegram. Click here to join our channel and stay updated with the latest news.

Next