Advertisement

ಪದವಿ ದಾಖಲಾತಿಗೆ ವಿದ್ಯಾರ್ಥಿಗಳ ಅಮಿತ ಉತ್ಸಾಹ!

12:14 AM Aug 25, 2020 | mahesh |

ಬೆಂಗಳೂರು: ಕೋವಿಡ್ ಪರಿಸ್ಥಿತಿಯನ್ನು ಮೆಟ್ಟಿನಿಂತು 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರಕಾರಿ ಪದವಿ ಕಾಲೇಜುಗಳಲ್ಲಿ ದಾಖಲಾತಿ ಪಡೆದಿದ್ದಾರೆ. ಅದರಲ್ಲೂ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲೇ ಹೆಚ್ಚು ಪ್ರವೇಶ ದಾಖಲಾಗಿದೆ.

Advertisement

ಲಾಕ್‌ಡೌನ್‌, ಕೋವಿಡ್ ಸ್ಥಿತಿ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟುಮಾಡಬಾರದು ಎಂಬ ಉದ್ದೇಶದಿಂದ ಇದೇ ಮೊದಲ ಬಾರಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು. ಮೊಬೈಲ್‌ ಮೂಲಕವೂ ಅರ್ಜಿ ಸಲ್ಲಿಸಬಹುದಾದ ಸರಳ ವ್ಯವಸ್ಥೆ ರೂಪಿಸಿದ್ದರಿಂದ ವಿದ್ಯಾರ್ಥಿಗಳು ಮನೆ ಯಿಂದಲೇ ಕಾಲೇಜು ಸೀಟು ಪಡೆದಿದ್ದಾರೆ.

ಈಗಾಗಲೇ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಕಾಲೇಜು ಶಿಕ್ಷಣ ಇಲಾಖೆ ಪೂರ್ಣಗೊಳಿಸಿದೆ. ಮೊದಲ ಸುತ್ತಿನಲ್ಲಿ ರಾಜ್ಯದ 410ಕ್ಕೂ ಅಧಿಕ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 19 ಸಾವಿರಕ್ಕೂ ಅಧಿಕ ವಿದ್ಯಾರ್ಥಿ ಗಳಿಗೆ ಸೀಟು ಹಂಚಿಕೆಯಾಗಿವೆ. ಅದರಲ್ಲಿ ಸುಮಾರು 15 ಸಾವಿರ ವಿದ್ಯಾರ್ಥಿಗಳು ತಮಗೆ ಬೇಕಾದ ಕಾಲೇಜಿನಲ್ಲಿ ಸೀಟು ಪಡೆದು, ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳ ಅಂಕ ಮತ್ತು ಮೀಸಲಾತಿಗೆ ಅನುಗುಣವಾಗಿ ಸೀಟು ಹಂಚಿಕೆ ಮಾಡಲಾಗಿದೆ. ಎಲ್ಲ ಸುತ್ತುಗಳಲ್ಲೂ ಇದೇ ಪ್ರಕ್ರಿಯೆ ಮುಂದುವರಿಯಲಿದೆ. ವಿದ್ಯಾರ್ಥಿಗಳು ತಮಗೆ ಮೊದಲ ಸುತ್ತಿನಲ್ಲಿ ಸೀಟು ಸಿಕ್ಕಿದೆಯೇ ಇಲ್ಲವೇ ಎಂಬುದನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದರೂ ದಾಖಲಾತಿ ಸಂದರ್ಭ ಕಾಲೇಜಿಗೆ ಹೋಗಿ ಮೂಲ ದಾಖಲೆ ಒದಗಿಸ ಬೇಕು. ಮೂಲ ದಾಖಲೆ ನೀಡದಿದ್ದಲ್ಲಿ, ದಾಖಲಾತಿ ಪೂರ್ಣ ಗೊಳಿಸುವುದಿಲ್ಲ. ಒಂದು ಕಾಲೇಜಿನಲ್ಲಿ ದಾಖಲಾತಿ ಪಡೆದ ಅನಂತರ ಬೇರೆ ಕಾಲೇಜುಗಳಿಗೆ ಸಲ್ಲಿಸಿರುವ ಅರ್ಜಿ ತಾನಾಗಿಯೇ ಡಿಲೀಟ್‌ ಆಗಲಿದೆ. ಮೊದಲ ಸುತ್ತಿನಲ್ಲಿ ಸೀಟು ಸಿಗದ ವಿದ್ಯಾರ್ಥಿಗಳಿಗೆ ಮುಂದಿನ ಸುತ್ತುಗಳಲ್ಲಿ ಸೀಟು ಲಭ್ಯವಾಗಲಿದೆ. ಎಲ್ಲ ವಿದ್ಯಾರ್ಥಿಯ ಸಂಪೂರ್ಣ ಮಾಹಿತಿಯನ್ನು ಆನ್‌ಲೈನ್‌ ವ್ಯವಸ್ಥೆಯಲ್ಲೇ ಸುರಕ್ಷಿತವಾಗಿ ಕ್ರೋಢೀಕರಿಸುತ್ತಿದ್ದೇವೆ ಎಂದು ವಿವರಿಸಿದ್ದಾರೆ.

Advertisement

ವಾಣಿಜ್ಯ ವಿಭಾಗವೇ ವಿದ್ಯಾರ್ಥಿಗಳ ಆಯ್ಕೆ
ರಾಜ್ಯದ ಬಹುತೇಕ ಜಿಲ್ಲೆಗಳ ಸರಕಾರಿ ಪದವಿ ಕಾಲೇ ಜುಗಳ ವಾಣಿಜ್ಯ ವಿಭಾಗದ ಸೀಟುಗಳು ಭರ್ತಿಯಾಗುತ್ತಿವೆ. ಬಿ.ಕಾಂ., ಬಿಬಿಎಂ ಮತ್ತು ಬಿಬಿಎ ಮೊದಲಾದ ವಾಣಿಜ್ಯ ವಿಭಾಗದ ಕೋರ್ಸ್‌ಗಳಿಗೆ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಹಾಗೆಯೇ ವಿಜ್ಞಾನ ವಿಭಾಗದ ಬಿಸಿಎ, ಬಿ.ಎಸ್‌ಸಿ ಮತ್ತು ಕಂಪ್ಯೂಟರ್‌ ಸೈನ್ಸ್‌ ಕೋರ್ಸ್‌ಗಳಿಗೂ ಬೇಡಿಕೆ ಹೆಚ್ಚಿದೆ. ಕೆಲವು ಜಿಲ್ಲೆಗಳಲ್ಲಿ ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಹೆಚ್ಚುವರಿ ಕಾಂಬಿನೇಷನ್‌ ಅಥವಾ ವಿಭಾಗ ತೆರೆಯಲು ಮತ್ತು ಇನ್‌ಟೇಕ್‌ ಪ್ರಮಾಣ ಹೆಚ್ಚಿಸಲು ಅವಕಾಶ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೊದಲ ಹಂತದ ಸೀಟು ಹಂಚಿಕೆ ಕಾರ್ಯ ಪೂರ್ಣ ಗೊಂಡ ಬಳಿಕ ಪ್ರಸ್ತಾವನೆ ಪರಿಶೀಲಿಸಿ, ಅಲ್ಲಿರುವ ಮೂಲ ಸೌಕರ್ಯ, ಬೋಧನ ಸಾಮರ್ಥ್ಯ ಇತ್ಯಾದಿ ಅವಲೋಕಿಸಿ ಅನುಮತಿ ನೀಡಲಾಗುತ್ತದೆಂದು ಇಲಾಖೆ ತಿಳಿಸಿದೆ.

ಕಳೆಗುಂದುತ್ತಿರುವ ಕಲಾ ವಿಭಾಗ
ಕಳೆದ ನಾಲ್ಕೆ „ದು ವರ್ಷಗಳಿಂದ ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಕಲಾ ವಿಭಾಗದ ದಾಖಲಾತಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ಪಿಯುಸಿಯಲ್ಲಿ ವಾಣಿಜ್ಯ ವಿಭಾಗ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಪದವಿಯಲ್ಲೂ ಕಲಾ ವಿಭಾಗದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇವೆಲ್ಲ ಕಾರಣಗಳಿಂದ ಈ ವರ್ಷದ ಪದವಿ ಪ್ರವೇಶದಲ್ಲಿ ಕಲಾ ವಿಭಾಗಕ್ಕೆ ಪ್ರವೇಶ ಕಡಿಮೆಯಿದೆ. ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿ ಕಲಾವಿಭಾಗದ ದಾಖಲಾತಿ ಚೆನ್ನಾಗಿದೆ. ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಕಲಾ ವಿಭಾಗದ ಕಾಂಬಿನೇಷನ್‌ ಕೂಡ ರದ್ದು ಮಾಡಿದ್ದಾರೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಪದವಿ ಕಾಲೇಜಿನ ಪ್ರವೇಶ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಾಖಲಾತಿ ಪ್ರಮಾಣ ಹೆಚ್ಚಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಅರ್ಜಿ ಸಲ್ಲಿಸಲು ಆನ್‌ಲೈನ್‌ ವ್ಯವಸ್ಥೆಯ ಜತೆಗೆ ಆಫ್ಲೈನ್‌ ವ್ಯವಸ್ಥೆ ಇದೆ. ಇನ್ನಷ್ಟು ಕಾಲಾವಕಾಶವನ್ನೂ ಒದಗಿಸಲಿದ್ದೇವೆ.
-ಪಿ. ಪ್ರದೀಪ್‌, ಆಯುಕ್ತರು ಕಾಲೇಜು ಶಿಕ್ಷಣ ಇಲಾಖೆ

ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next