Advertisement

ಮತ್ತೆ ಹೋರಾಟ: ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ, ಕೇಂದ್ರದ ಅಧಿಸೂಚನೆಗೆ ಆಕ್ಷೇಪ

12:29 AM Jul 19, 2022 | Team Udayavani |

ಬೆಂಗಳೂರು: ಪಶ್ಚಿಮ ಘಟ್ಟ ಸೂಕ್ಷ್ಮ ವಲಯದ ಬಗ್ಗೆ ಕೇಂದ್ರ ಪರಿಸರ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯ ವಿರುದ್ಧ ಕಾನೂನು ಹೋರಾಟ ನಡೆಸಲು ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಸಚಿವರು ಹಾಗೂ ಶಾಸಕರು ನಿರ್ಧರಿಸಿದ್ದಾರೆ. ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೇಂದ್ರದ ಬಳಿಗೆ ನಿಯೋಗ ಕೊಂಡೊಯ್ಯಲು ತೀರ್ಮಾನಿಸಿದ್ದಾರೆ.

Advertisement

ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಧಿಸೂಚನೆಯ ವಿರುದ್ಧ ಮಲೆನಾಡು ಮತ್ತು ಕರಾವಳಿ ಭಾಗದ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಪರಿಸರ ಸಚಿವಾಲಯದ ಅಧಿಸೂಚನೆ ಕುರಿತು ಒಕ್ಕೊರಲಿನ ವಿರೋಧ ವ್ಯಕ್ತವಾಗಿದೆ. ಸಿಎಂ ಬೊಮ್ಮಾಯಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದಾರೆ ಎಂದು ಸಭೆಯ ಬಳಿಕ ಆರಗ ಜ್ಞಾನೇಂದ್ರ ತಿಳಿಸಿದರು. ಅಧಿಸೂಚನೆಯ ವಿರುದ್ಧ ಕಾನೂನು ಹೋರಾಟ ನಡೆಸುವ ಜತೆಗೆ ಜನಾಭಿ ಪ್ರಾಯ ಸಂಗ್ರಹಕ್ಕೆ ನಿರ್ಧರಿಸಲಾಗಿದೆ ಎಂದರು.

ಕೇಂದ್ರಕ್ಕೆ ನಿಯೋಗ
ಸಿಎಂ ನೇತೃತ್ವದಲ್ಲಿ ಅಧಿಸೂಚನೆ ವಿರುದ್ಧ ಪರಿಸರ ಸಚಿವರ ಬಳಿಗೆ ಸಂಸದರು ಮತ್ತು ಶಾಸಕರನ್ನು ಒಳಗೊಂಡ ನಿಯೋಗ ತೆರಳಲಿದೆ. ವರದಿಯ ಬಗ್ಗೆ ಈ ಹಿಂದೆ ವ್ಯಕ್ತವಾದ ಯಾವುದೇ ಆಕ್ಷೇಪಣೆಗಳನ್ನು ಕೇಂದ್ರ ಸರಕಾರ ಪರಿಗಣಿಸಿಲ್ಲ ಎಂದ ಸಚಿವ ಆರಗ, ಸರಿಯಾದ ಮತ್ತು ವೈಜ್ಞಾನಿಕ ಸರ್ವೇ ಕಾರ್ಯ ನಡೆದಿಲ್ಲ ಎಂದರು.

ಒಂದು ವೇಳೆ ಅಧಿಸೂಚನೆ ಅನುಷ್ಠಾನಗೊಂಡರೆ ಪಶ್ಚಿಮ ಘಟ್ಟ ಭಾಗದ ಗ್ರಾಮೀಣ ಜನತೆಯ ಬದುಕು ಅಸಹನೀಯವಾಗಲಿದೆ. ಹೀಗಾಗಿ ಅಧಿ ಸೂಚನೆಯನ್ನು ಶತಾಯಗತಾಯ ವಿರೋಧಿಸ ಲಾಗುತ್ತದೆ ಎಂದರು.

Advertisement

ಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಆನಂದ್‌ ಸಿಂಗ್‌, ಶಿವರಾಮ್‌ ಹೆಬ್ಟಾರ್‌, ಎಸ್‌. ಅಂಗಾರ ಹಾಗೂ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಶಾಸಕರು ಭಾಗವಹಿಸಿದ್ದರು.

ಜು. 27: ಹಾಸನ, ಜು. 28: ಕೊಡಗು,
ಜು. 29: ಚಿಕ್ಕಮಗಳೂರು ಬಂದ್‌
ಕೇಂದ್ರದ ಅಧಿಸೂಚನೆಯ ಅನುಷ್ಠಾನ ವಿರೋಧಿ ಸಿ ಜು. 27ರಂದು ಹಾಸನ, ಜು. 28ರಂದು ಕೊಡಗು ಹಾಗೂ ಜು. 29ರಂದು ಚಿಕ್ಕಮಗಳೂರು ಬಂದ್‌ ನಡೆಸಲು ನಿರ್ಧರಿಸಲಾಗಿದೆ.

ಸೋಮವಾರ ಚಿಕ್ಕಮಗಳೂರಿನಲ್ಲಿ ಈ ಮೂರು ಜಿಲ್ಲೆಗಳ ಕಾಫಿ ಬೆಳೆಗಾರರು ಮತ್ತು ಸಂಘಸಂಸ್ಥೆಗಳ ಮುಖಂಡರು ಸಭೆ ನಡೆಸಿ ನಿರ್ಣಯ ಕೈಗೊಂಡರು.

ಈ 3 ಜಿಲ್ಲೆಗಳಲ್ಲಿ ಬಂದ್‌ ಜತೆಗೆ ಪ್ರತೀ ಗ್ರಾ.ಪಂ.ನಿಂದ ವರದಿ ಅನುಷ್ಠಾನಕ್ಕೆ ಆಕ್ಷೇಪ, ಮನವಿ ಸಲ್ಲಿಸಬೇಕು. ಶಾಸಕರು- ಸಂಸದರ ಸಭೆ ನಡೆಸಬೇಕು. ಸಿಎಂ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಲು, ಕೇಂದ್ರ ಪರಿಸರ ಸಚಿವ ರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಚಿಕ್ಕಮಗ ಳೂರು, ಹಾಸನ, ಕೊಡಗಿನ ಕಾಫಿ ಬೆಳೆಗಾರರು, ಪಕ್ಷಗಳು, ಸಂಘಟನೆಗಳ ಮುಖಂಡರು ಇದ್ದರು.

ಕೇಂದ್ರ ಸರಕಾರದ ಆದೇಶವೇನು?
ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯವು ಜು. 10ರಂದು ಪರಿಸರ ಸೂಕ್ಷ್ಮ ವಲಯ (ಇಎಸ್‌ಎ) ಕುರಿತಾಗಿ ಹೊಸ ಕರಡು ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌, ಗೋವಾ ಮತ್ತು ತಮಿಳುನಾಡು ರಾಜ್ಯಗಳ 46,832 ಚದರ ಕಿ.ಮೀ. ಭೂಭಾಗವನ್ನು ಇಎಸ್‌ಎ ಅಡಿಗೆ ತರುವ ಬಗ್ಗೆ ಉಲ್ಲೇಖವಿದೆ. ಇದರಲ್ಲಿ 20,668 ಚದರ ಕಿ.ಮೀ. ಪ್ರದೇಶ ಕರ್ನಾಟಕದ್ದು. ಆದರೆ ಈ ಕರಡು ಅಧಿಸೂಚನೆಯಿಂದ ಕೇರಳವನ್ನು ಹೊರಗಿಡಲಾಗಿದೆ. ಕೇರಳ ಸರಕಾರವೇ ಈ ಬಗ್ಗೆ ಸಮೀಕ್ಷೆ ನಡೆಸುವುದಾಗಿ ಹೇಳಿದ್ದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.

ವರದಿ ಅನುಷ್ಠಾನಕ್ಕೆ
ವಿರೋಧವೇಕೆ ?
ಕೇಂದ್ರದ ಅಧಿಸೂಚನೆ ಜಾರಿಯಿಂದ ಕರಾ ವಳಿ, ಮಲೆನಾಡು ಭಾಗದ ಕಾಡಿನಲ್ಲಿ ವಾಸವಾಗಿ ರುವ ಜನರನ್ನು ಒಕ್ಕಲೆಬ್ಬಿಸಲಾಗುತ್ತದೆ. ಶತಮಾನ ಗಳಿಂದ ರೈತರು ಅರಣ್ಯ ಇಲಾಖೆ ವ್ಯಾಪ್ತಿಯ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ವರದಿ ಜಾರಿಯಾದರೆ ಅವರು ಜಮೀನು ಕಳೆದುಕೊಳ್ಳುತ್ತಾರೆ. ಈ ಭಾಗದ ಹಳ್ಳಿಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಇರು
ವುದಿಲ್ಲ. ರಸ್ತೆ ನಿರ್ಮಾಣ, ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ, ಕುಡಿಯುವ ನೀರಿಗಾಗಿ ಬೋರ್‌ವೆಲ್‌ ನಿರ್ಮಿಸುವುದರ ಸಹಿತ ಯಾವುದೇ ಚಟುವಟಿಕೆಗೆ ಅವಕಾಶ ದೊರೆಯ ದಂತಾಗುತ್ತದೆ ಎನ್ನುವುದು ಅಧಿಸೂಚನೆಯನ್ನು ವಿರೋಧಿಸುತ್ತಿರುವವರ ವಾದ.

ಜಾರಿಯ ಪರವಾದ ವಾದವೇನು?
ಪಶ್ಚಿಮ ಘಟ್ಟದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಜೀವಸಂಕುಲಕ್ಕೆ ಹಾನಿ ಮಾಡಲಾಗುತ್ತಿದೆ. ಅಕ್ರಮ ಗಣಿಗಾರಿಕೆ, ರೆಸಾರ್ಟ್‌ ನಿರ್ಮಾಣ, ಟಿಂಬರ್‌ ಲಾಬಿ, ಪ್ಲಾಂಟೇಷನ್‌ಗಳಿಂದ ಪ. ಘಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗು ತ್ತಿದ್ದು, ಇದನ್ನು ತಡೆಯದಿದ್ದರೆ ಪರಿಸರದ ಮೇಲೆ ಇನ್ನಷ್ಟು ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಕೇಂದ್ರ ಸರಕಾರವು ಬಗರ್‌ಹುಕುಂ ಸಾಗುವಳಿ ದಾರರಿಗೆ 4.38 ಎಕರೆ ಜಮೀನು ನೀಡುವ ಭರವಸೆ ನೀಡಿದ್ದು, ಫಾರ್ಮ್ ನಂ. 50, 53ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ದೊರೆಯದವರಿಗೆ ಫಾರ್ಮ್ ನಂ.57ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದೆ. ಹೀಗಾಗಿ ವರದಿ ಜಾರಿಯಿಂದ ಜನಸಾಮಾನ್ಯರಿಗೆ ಸಮಸ್ಯೆ ಇಲ್ಲ ಎನ್ನುವುದು ವರದಿಯ ಪರ ಇರುವವರ ವಾದ.

Advertisement

Udayavani is now on Telegram. Click here to join our channel and stay updated with the latest news.

Next