Advertisement

ದಕ್ಷಿಣ ಕನ್ನಡ : 60 ಅಭ್ಯರ್ಥಿಗಳ ಭವಿಷ್ಯ ಭದ್ರತಾ ಕೊಠಡಿಯಲ್ಲಿ ಭದ್ರ

12:11 AM May 12, 2023 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ 1860 ಮತಗಟ್ಟೆಗಳಿಂದ ವಿದ್ಯುನ್ಮಾನ ಮತಯಂತ್ರಗಳು ಹಾಗೂ ವಿವಿಪ್ಯಾಟ್‌ ಯಂತ್ರಗಳನ್ನು ಎನ್‌ಐಟಿಕೆಯ ಭದ್ರತಾ ಕೊಠಡಿ ಗಳಲ್ಲಿ ಭದ್ರತಾ ಸಿಬಂದಿ ಸರ್ಪಗಾವಲಿನಲ್ಲಿ ಇಡಲಾಗಿದೆ.

Advertisement

ಮೇ 13ರಂದು ಮತ ಎಣಿಕೆ ನಡೆಯಲಿದ್ದು, ಅಲ್ಲಿಯವರೆಗೆ ಜಿಲ್ಲೆಯ 8 ಕ್ಷೇತ್ರಗಳ ಒಟ್ಟು 60 ಅಭ್ಯರ್ಥಿಗಳ ಭವಿಷ್ಯ ಭದ್ರಗೊಂಡಿರುವ ಇವಿಎಂಗಳು, ಮತಪತ್ರ, ಅಂಚೆ ಮತಪತ್ರಗಳನ್ನು ಒಳಗೊಂಡ ಮತ ಪೆಟ್ಟಿಗೆಗಳು, ವಿವಿ ಪ್ಯಾಟ್‌ಗಳು ಹಾಗೂ ಚುನಾವಣ ದಾಖಲೆಗಳನ್ನು ಎನ್‌ಐಟಿಕೆಯ ಭದ್ರತಾ ಕೊಠಡಿಗಳಲ್ಲಿ ಸಿಸಿಟಿವಿ ಕಣ್ಗಾವಲಿನಲ್ಲಿರಲಿದೆ. ಭದ್ರತಾ ಕೊಠಡಿಗಳಿಗೆ ಮೊಹರು ಮಾಡಲಾಗಿದ್ದು, ಕೊಠಡಿಯ ಹೊರಗಡೆ ಅರೆಸೇನಾಪಡೆಯ ಭದ್ರತೆ ಒದಗಿಸಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತಲೂ ಪೊಲೀಸ್‌, ಅರೆಸೇನಾ ಪಡೆ, ಕ್ಷಿಪ್ರ ಕಾರ್ಯಾಚರಣೆ ಪಡೆಯ ಸಿಬಂದಿ ಒಳಗೊಂಡ ಬಿಗಿ ಭದ್ರತೆಯನ್ನು ನೀಡಲಾಗಿದೆ.

ಮತ ಎಣಿಕೆಗೆ ಸಿದ್ಧತೆ
ಬುಧವಾರ ಸಂಜೆ ಮತದಾನ ಮುಕ್ತಾಯ ಗೊಂಡಿದ್ದರೂ ಗ್ರಾಮೀಣ ಮತಗಟ್ಟೆಗಳಲ್ಲಿ ಮಳೆ ಯಿಂದಾಗಿ ಕೆಲವೆಡೆ ಮತದಾನ ವಿಳಂಬಗೊಂಡಿತ್ತು. ಬಳಿಕ ಮೊಹರು ಮಾಡಿ ಆಯಾ ಕ್ಷೇತ್ರಗಳ ನಿಗದಿತ ಮಸ್ಟರಿಂಗ್‌ ಕೇಂದ್ರಗಳಿಗೆ ತಂದು ಅಲ್ಲಿ ಕ್ಷೇತ್ರ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಡಿಮಸ್ಟ ರಿಂಗ್‌ ಪ್ರಕ್ರಿಯೆ ನಡೆಸಿ, ಇವಿಎಂ, ವಿವಿಪ್ಯಾಟ್‌ಗಳನ್ನು ಬಿಗಿ ಭದ್ರತೆಯೊಂದಿಗೆ ತಡರಾತ್ರಿಯೇ ಕೇಂದ್ರೀಯ ಅರೆಸೇನಾ ಪಡೆಯ ಗಸ್ತಿನೊಂದಿಗೆ ವಾಹನಗಳಲ್ಲಿ ಎನ್‌ಐಟಿಕೆ ಸ್ಟ್ರಾಂಗ್‌ ರೂಂಗೆ ರವಾನಿಸಲಾಗಿತ್ತು. ಈ ವಾಹಗಳನ್ನು ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ಅಥವಾ ಏಜೆಂಟರು ಪ್ರತಿಯೊಂದು ಚುನಾವಣಾ ಕ್ಷೇತ್ರದಿಂದ ಮತ ಎಣಿಕೆ ಕೇಂದ್ರದವರೆಗೆ ಹಿಂಬಾಲಿಸಲು ಅವಕಾಶ ನೀಡಲಾಗಿತ್ತು. ಭದ್ರತಾ ಕೊಠಡಿಯಲ್ಲಿ ಇಟ್ಟು ಮೊಹರು ಮಾಡುವಾಗ ಅಭ್ಯರ್ಥಿಗಳು / ಏಜೆಂಟರು ಹಾಜರಿದ್ದು, ಭದ್ರತಾ ಕೊಠಡಿಯ ಬೀಗಕ್ಕೆ ತಮ್ಮ ಮೊಹರು/ ಸಹಿಯನ್ನು ಹಾಕುವ ಅವಕಾಶವನ್ನೂ ಕಲ್ಪಿಸಲಾಗಿತ್ತು.

ಮತ ಎಣಿಕೆಗೆ ಸಂಬಂಧಿಸಿದ ಅಗತ್ಯ ಸಿದ್ಧತೆಗಳನ್ನು ದ.ಕ. ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯೂ ಆಗಿರುವ ರವಿಕುಮಾರ್‌ ಎಂ.ಆರ್‌. ನೇತೃತ್ವದಲ್ಲಿ ನಿರ್ವಹಿಸಲಾಗಿದೆ.

ಮತಯಂತ್ರ ಸ್ಟ್ರಾಂಗ್‌ ರೂಂನಲ್ಲಿ ಭದ್ರ
ಉಡುಪಿ: ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಡಿ-ಮಸ್ಟರಿಂಗ್‌ ಕೇಂದ್ರಗಳಿಂದ ಮತಯಂತ್ರಗಳನ್ನು ಬ್ರಹ್ಮಗಿರಿಯ ಸೈಂಟ್‌ ಸಿಸಿಲೀಸ್‌ ಕಾಲೇಜಿನಲ್ಲಿರುವ ಸ್ಟ್ರಾಂಗ್‌ ರೂಮ್‌ಗೆ ತಂದು ಸುಭದ್ರವಾಗಿಡಲಾಗಿದೆ.

Advertisement

ಎಲೆಕ್ಟ್ರಾನಿಕ್‌ ಮತಯಂತ್ರಗಳಿಗೆ ಮೂರು ಹಂತಗಳಲ್ಲಿ ಪೊಲೀಸ್‌ ಬಿಗಿ ಭದ್ರತೆ ಒದಗಿಸಲಾಗಿದೆ. ಸಿಆರ್‌ಪಿಎಫ್, ಕೆಎಸ್‌ಆರ್‌ಪಿ, ಡಿಎಆರ್‌ ಪೊಲೀಸ್‌ ಸಿಬಂದಿ 3 ಪಾಳಿಗಳಲ್ಲಿ ಪಹರೆ ಕಾಯುತ್ತಿದ್ದಾರೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಇದೇ ಕಾಲೇಜಿನ ಆವರಣದಲ್ಲಿ ಮೇ 13ರಂದು ಬೆಳಗ್ಗೆ 8ರಿಂದ ಚುನಾವಣೆ ವೀಕ್ಷಕರು, 5 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಹಾಗೂ ಏಜೆಂಟರ ಸಮ್ಮುಖದಲ್ಲಿ , ಐವರು ಚುನಾವಣಾಧಿಕಾರಿ ಹಾಗೂ ಐವರು ಸಹಾಯಕ ಚುನಾವಣಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನಡೆಯಲಿದೆ. ಪ್ರತೀ ವಿಧಾನಸಭಾ ಕ್ಷೇತ್ರವಾರು 4 ಟೇಬಲ್‌ಗ‌ಳಂತೆ ಅಂಚೆ ಮತಪತ್ರ ಎಣಿಕೆ ನಡೆಯಲಿದೆ. ಮತ ಎಣಿಕೆಗಾಗಿ 375 ಎತ ಎಣಿಕೆ ಅಧಿಕಾರಿ ಹಾಗೂ ಸಿಬಂದಿಯನ್ನು ನೇಮಿಸಲಾಗಿದೆ.

ಮದ್ಯ ಸಾಗಾಟ, ಮಾರಾಟ ನಿಷೇಧ
ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಉದ್ದೇಶದಿಂದ ಮೇ 12ರ ಮಧ್ಯರಾತ್ರಿ 12ರಿಂದ ಮೇ 13ರ ಮಧ್ಯರಾತ್ರಿ 12ರ ವರೆಗೆ ಮದ್ಯ ಸಾಗಾಟ, ಮಾರಾಟವನ್ನು ನಿಷೇಧಿಸಲಾಗಿದೆ. ಮೇ 13ರ ಮತ ಎಣಿಕೆಯಂದು ಬೆಳಗ್ಗೆ 5ರಿಂದ ಮಧ್ಯರಾತ್ರಿ 12ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next