Advertisement

ಕೋವಿಡ್‌ ನಿಯಂತ್ರಿಸಲು ಶ್ರಮಿಸಿ: ಡಿಸಿ

06:04 PM Jan 22, 2022 | Shwetha M |

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದೆ. ಜಿಲ್ಲೆಯ ಜನರಲ್ಲಿ ಸೋಂಕು ಹರಡುವಿಕೆ ತಡೆಯಲು ಅಧಿಕಾರಿ-ಸಿಬ್ಬಂದಿ ಈಗ ಮಾಡುತ್ತಿರುವ ಚುರುಕಿನ ಕೆಲಸದಲ್ಲಿ ಇನ್ನಷ್ಟು ಪರಿಶ್ರಮದ ಅಗತ್ಯವಿದೆ ಎಂದು ಜಿಲ್ಲಾಧಿ ಸುನೀಲಕುಮಾರ ಹೇಳಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ತಮ್ಮ ನಿತ್ಯದ ಕಚೇರಿ ಕೆಲಸದ ಜೊತೆಗೆ ಕೋವಿಡ್‌ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದರಿಂದ ಜಿಲ್ಲೆಯಲ್ಲಿ ಕೋವಿಡ್‌ ಮೂರನೇ ಅಲೆಯ ಸೋಂಕು ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಸಾಧ್ಯವಾಗಲಿದೆ ಎಂದರು.

ಇದಕ್ಕಾಗಿ ನೇಮಿಸಲಾದ ಅಧಿಕಾರಿಗಳು ಸೋಂಕಿತರ ಹಾಗೂ ಶಂಕಿತರ ಸಮರ್ಪಕ ಅಗತ್ಯ ಮಾಹಿತಿ ಕ್ರೋಢೀಕರಣ ಸೇರಿದಂತೆ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿ ಸರ್ಕಾರ ನೀಡಿರುವ ತಂತ್ರಜ್ಞಾನದಲ್ಲಿ ದಾಖಲಿಸಬೇಕು. ಕೋವಿಡ್‌ ಪೋರ್ಟಲ್‌, ಆ್ಯಪ್‌ ಹಾಗೂ ಸರ್ಕಾರದ ನೂತನ ತಂತ್ರಾಂಶದಲ್ಲಿ ಸಮರ್ಪಕವಾಗಿ ದಾಖಲಿಸುವ ಕುರಿತು ಕೂಡಲೇ ಅವಶ್ಯಕ ಕ್ರಮ ಕೈಗೊಳ್ಳಬೇಕು ಎಂದು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್‌ ನಿಯಂತ್ರಣಕ್ಕೆ ನೇಮಿಸಲಾದ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಲಸಿಕಾಕರಣ ಕಾರ್ಯದಲ್ಲಿ ತೋರಿದ ಬದ್ಧತೆಯನ್ನು ಇಲ್ಲಿಯೂ ತೋರುವ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಬೇಜವಾಬ್ದಾರಿ ವಹಿಸಬಾರದು ಎಂದು ಸೂಚಿಸಿದರು.

ತಳಮಟ್ಟದಲ್ಲಿ ಸೇವೆ ನೀಡುತ್ತಿರುವ ಗಂಟಲು ದ್ರವ ಮಾದರಿ ಸಂಗ್ರಹದಂಥ ತಂತ್ರಜ್ಞರ ಪಾತ್ರವೂ ಇಲ್ಲಿ ಬಹಳ ಮುಖ್ಯ. ಸೋಂಕಿತರ ಕುರಿತು ಸಮರ್ಪಕ ವಿಳಾಸ, ಮೊಬೈಲ್‌ ಸಂಖ್ಯೆ ಸಂಗ್ರಹಿಸಿಕೊಳ್ಳಬೇಕು. ಸಂಪರ್ಕಿತರ ಪತ್ತೆ, ಕ್ವಾರಂಟೈನ್‌ ನಿಗಾ ಆ್ಯಪ್‌ ನಿರ್ವಹಣೆ ವಿಷಯದಲ್ಲಿ ಪಿಡಿಒ, ಬಿಲ್‌ ಕಲೆಕ್ಟರ್‌ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಬಹಳ ಜಾಗರೂಕತೆ-ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಅದರಂತೆ ಕಾಂಟಾಕ್ಟ್ ಟ್ರೇಸಿಂಗ್‌ ಆ್ಯಪ್‌ ಕುರಿತು ಬಿಎಲ್‌ಒಗಳು ಅತ್ಯಂತ ಸಮರ್ಪಕ ಸೇವೆ ನೀಡಬೇಕು. ಕ್ವಾರಂಟೈನ್‌ ನಿಗಾ ಆ್ಯಪ್‌ ಬಗ್ಗೆ ಪಿಡಿಒ, ಬಿಲ್‌ ಕಲೆಕ್ಟರ್‌ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಪರಿಣಾಮಕಾರಿ ಕಾರ್ಯನಿರ್ವಹಿಸಬೇಕು ಎಂದರು.

Advertisement

ಕ್ವಾರಂಟೈನ್‌ ಇರುವ ರೋಗಿಗಳ ಬಗ್ಗೆ ಹೆಚ್ಚಿನ ನಿಗಾವಹಿಸುವ ಜೊತೆಗೆ ಕಾಲ ಕಾಲಕ್ಕೆ ಸರಿಯಾದ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು. ಸಂಪರ್ಕದಲ್ಲಿರುವ ವ್ಯಕ್ತಿಗಳ ಬಗ್ಗೆಯೂ ನಿಗಾವಹಿಸಿ, ಸೋಂಕಿನ ಲಕ್ಷಣ ಕಂಡುಬಂದರೆ ಕೂಡಲೇ ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಕಾಂಟಾಕ್ಟ್ ಟ್ರೇಸಿಂಗ್‌ ಬಗ್ಗೆ ಅಧಿಕಾರಿಗಳು ಇನ್ನೂ ಹೆಚ್ಚಿನ ಗಮನ ವಹಿಸಿ, ಆ್ಯಪ್‌ ಬಳಕೆಯಲ್ಲೂ ಅನಗತ್ಯ ಗೊಂದಲಕ್ಕೊಳಗಾಗಬಾರದು. ಈ ವಿಷಯದಲ್ಲಿ ಅಗತ್ಯವಿದ್ದರೆ ಸಿಬ್ಬಂದಿಗಳಿಗೆ ಸೂಕ್ತ ಮಾಹಿತಿ ಹಾಗೂ ತರಬೇತಿ ಒದಗಿಸಿ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಮಾತನಾಡಿ, ನಗರ ಪ್ರದೇಶದಲ್ಲಿ ಕಾರ್ಯ ಪರಿಣಾಮಕಾರಿಯಾಗಿ ಕಂಡು ಬರುತ್ತಿದ್ದು ಗ್ರಾಮೀಣ ಮಟ್ಟದಲ್ಲೂ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಸೂಚಿಸಿದರು.
ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ರಾಜಕುಮಾರ ಯರಗಲ ಸೇರಿದಂತೆ ತಹಶೀಲ್ದಾರರು, ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next