Advertisement

ಅಧಿಕಾರಶಾಹಿ ಸುಧಾರಣೆಗೆ ಕಠಿನ ಕ್ರಮ; ಅಧಿಕಾರಿಗಳ ವಜಾ

11:10 PM Jun 16, 2019 | ಸಂಪಾದಕೀಯ |

ಕೇಂದ್ರ ಸರಕಾರ ಇತ್ತೀಚೆಗೆ ಭ್ರಷ್ಟಾಚಾರ ಮತ್ತು ದುರ್ವರ್ತನೆಯ ಆರೋಪ ಹೊತ್ತಿದ್ದ 12 ಉನ್ನತ ಸರಕಾರಿ ಅಧಿಕಾರಿಗಳನ್ನು ವಜಾಗೊಳಿಸಿದೆ. ಇದು ಭ್ರಷ್ಟಾಚಾರದ ವಿರುದ್ಧ ಸಾರಿರುವ ಯುದ್ಧದ ಆರಂಭ ಮಾತ್ರ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿನ ಕ್ರಮಗಳನ್ನು ನಿರೀಕ್ಷಿಸಬಹುದು. ಈಗಾಗಲೇ ಎಲ್ಲ ಇಲಾಖೆ ಮತ್ತು ಸಚಿವಾಲಯಗಳಲ್ಲೂ ಭ್ರಷ್ಟ ಮತ್ತು ಅದಕ್ಷ ಅಧಿಕಾರಿಗಳ ದತ್ತಾಂಶ ಸಂಗ್ರಹ ಕಾರ್ಯ ಶುರುವಾಗಿದೆ. ಸುಮಾರು 20 ಐಎಎಸ್‌ ಮತ್ತು ಐಎಎಸ್‌ ಅಧಿಕಾರಿಗಳು ಸರಕಾರದ ಕಣ್ಗಾವಲಿನಲ್ಲಿದ್ದಾರೆ.

Advertisement

2015ರಿಂದೀಚೆಗೆ 17 ಐಎಎಸ್‌ ಅಧಿಕಾರಿಗಳು ಮತ್ತು ಮೂವರು ಐಪಿಎಸ್‌ ಅಧಿಕಾರಿಗಳ ವಿರುದ್ಧ ತನಿಖೆಗೆ ಕೇಂದ್ರ ಸರಕಾರ ಅನುಮತಿ ನೀಡಿದೆ. ಸರಕಾರದ ಈ ಎಲ್ಲ ಕ್ರಮಗಳು ಅಧಿಕಾರಶಾಹಿಯ ಉನ್ನತ ಮಟ್ಟದ ಭ್ರಷ್ಟಾಚಾರವನ್ನು ಸಹಿಸಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದೆ.

ಭಾರತದ ಅಧಿಕಾರಶಾಹಿಯ ಕುರಿತು ಜಗತ್ತಿಗೆ ಉತ್ತಮ ಅಭಿಪ್ರಾಯವಿಲ್ಲ. ಭ್ರಷ್ಟಾ ಚಾರದಲ್ಲಿ ಭಾರತ 79ನೇ ಸ್ಥಾನದಲ್ಲಿದ್ದು, ಇದಕ್ಕೆ ಮುಖ್ಯ ಕಾರಣ ಅಧಿಕಾರ ಶಾಹಿಯ ಅದಕ್ಷತೆ. ಕೆಂಪು ಪಟ್ಟಿ ಮತ್ತು ಅಧಿಕಾರಿಗಳ ಅದಕ್ಷತೆಯನ್ನು ನೋಡಿಯೇ ವಿದೇಶಿ ಹೂಡಿಕೆದಾರರು ಭಾರತಕ್ಕೆ ಬರಲು ಹಿಂದೇಟು ಹಾಕುತ್ತಿ ದ್ದರು. ಈಗ ಪರಿಸ್ಥಿತಿಯಲ್ಲಿ ತುಸು ಸುಧಾರಣೆಯಾಗಿದ್ದರೂ ಇನ್ನೂ ಅಧಿಕಾರ ಶಾಹಿಗೆ ಅಂಟಿರುವ ಕಳಂಕ ಪೂರ್ತಿಯಾಗಿ ನಿವಾರಣೆಯಾಗಿಲ್ಲ.ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ವಿದೇಶಿ ಹೂಡಿಕೆ ಅನಿವಾರ್ಯ. ಇದು ಸಾಧ್ಯವಾಗ ಬೇಕಾದರೆ ಹೂಡಿಕೆಗೆ ಪೂರಕವಾಗಿರುವ ವಾತಾವರಣವಿರಬೇಕು. ಈ ಹಿನ್ನೆಲೆ ಯಲ್ಲಿ ಕೇಂದ್ರ ಸರಕಾರ ಅಧಿಕಾರಿಗಳ ವಿರುದ್ಧ ಕೈಗೊಂಡಿರುವ ಕ್ರಮಕ್ಕೆ ಹೆಚ್ಚಿನ ಮಹತ್ವವಿದೆ.

ಹಾಗೆಂದು ಎಲ್ಲ ಅಧಿಕಾರಿಗಳು ಭ್ರಷ್ಟರು ಎಂದು ಹೇಳುವುದು ಸರಿಯಲ್ಲ. ಕೆಲವೇ ಅಧಿಕಾರಿಗಳಿಂದಾಗಿ ಇಡೀ ಅಧಿಕಾರಶಾಹಿಗೆ ಕೆಟ್ಟ ಹೆಸರು ಬಂದಿದೆ. ದೇಶದಲ್ಲಿ ಸುಮಾರು 48 ಲಕ್ಷ ಸರಕಾರಿ ನೌಕರರಿದ್ದು,ಈ ಪೈಕಿ ಉನ್ನತ ಅಧಿಕಾರಿಗಳ ಸಂಖ್ಯೆ ಬರೀ ಶೇ. 1 ಮಾತ್ರ. ಆದರೆ ಈ ಶೇ.1 ಅಧಿಕಾರಿಗಳೇ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಅವರು ಪ್ರಾಮಾಣಿಕರೂ ದಕ್ಷರೂ ಆಗಿರಬೇಕಾದುದು ಅಪೇಕ್ಷಣೀಯ.

ಇದೇ ವೇಳೆ ಅಧಿಕಾರಿಗಳು ಅಪ್ರಾಮಾಣಿಕರಾಗಲು ಏನು ಕಾರಣ ಎನ್ನುವುದರ ಕುರಿತು ಕೂಡಾ ಚಿಂತನೆ ನಡೆಸಬೇಕಾದ ಅಗತ್ಯವಿದೆ. ಐಎಎಸ್‌, ಐಪಿಎಸ್‌ ತೇರ್ಗಡೆಯಾಗುವುದೇನೂ ಸುಲಭದ ಕೆಲಸವಲ್ಲ. ಐಎಎಂ, ಐಐಟಿ, ಎನ್‌ಐಐಟಿಯಂಥ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಲಿತು ಬರುವ, ಲೋಕಸೇವಾ ಆಯೋಗದ ಕ್ಲಿಷ್ಟಕರ ಪರೀಕ್ಷೆಯನ್ನು ತೇರ್ಗಡೆಯಾಗಿ ಬರುವವರು ವೃತ್ತಿಗೆ ಸೇರಿದ ಬಳಿಕ ಅಪ್ರಾಮಾಣಿಕರೂ, ಭ್ರಷ್ಟರೂ ಆಗುವುದು ಹೇಗೆ ಎನ್ನುವುದು ಕೂಡಾ ಅಧ್ಯಯನ ಯೋಗ್ಯ ವಿಷಯವೇ. ಅಧಿಕಾರಿಗಳ ನೇಮಕಾತಿ ವ್ಯವಸ್ಥೆಯೇ ಭ್ರಷ್ಟಾಚಾರದಿಂದ ತುಂಬಿದೆ ಎಂದು ಹೇಳುತ್ತಿದೆ ಒಂದು ವರದಿ.

Advertisement

ಕೇಂದ್ರ ಲೋಕಸೇವಾ ಆಯೋಗದ ಮೇಲೆಯೇ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದ ಆರೋಪವಿದ್ದು, ಈ ಈ ಕುರಿತು ಕೂಡಾ ಸರಕಾರ ಗಮನ ಹರಿ ಸುವುದು ಅಗತ್ಯ. ನೇಮಕಾತಿ ವ್ಯವಸ್ಥೆಯೇ ಭ್ರಷ್ಟವಾಗಿದ್ದಾರೆ ಅದರ ಮೂಲಕ ಆಯ್ಕೆಯಾಗಿ ಬಂದವರಿಂದ ಎಷ್ಟು ಪ್ರಾಮಾಣಿಕತೆ ನಿರೀಕ್ಷಿಸಬಹುದು?

ತಪ್ಪು ಜಾಗಕ್ಕೆ ತಪ್ಪು ಅಧಿಕಾರಿಗಳ ನೇಮಕಾತಿ ಅಧಿಕಾರಶಾಹಿಯನ್ನು ಕಾಡುತ್ತಿರುವ ಇನ್ನೊಂದು ಸಮಸ್ಯೆ. ಅಧಿಕಾರಿಗಳನ್ನು ಅವರು ಪರಿಣತಿ ಹೊಂದಿರುವ ಅಥವಾ ಅವರಿಗೆ ಆಸಕ್ತಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡುವ ಕ್ರಮ ನಮ್ಮಲ್ಲಿಲ್ಲ. ಬಹುತೇಕ ನೇಮಕಾತಿಗಳು ಸರಕಾರದ ಮೂಗಿನ ನೇರಕ್ಕೆ ನಡೆಯುತ್ತವೆ. ತಾಂತ್ರಿಕ ಪದವಿಯನ್ನು ಹೊಂದಿರುವ ವ್ಯಕ್ತಿ ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಗೆ ಮುಖ್ಯಸ್ಥನಾಗುವುದು, ಕಲಾಪದವಿ ಹೊಂದಿರುವ ವ್ಯಕ್ತಿಯನ್ನು ಹಣಕಾಸಿನ ವ್ಯವಹಾರಗಳನ್ನು ನಿಭಾಯಿಸುವ ಹುದ್ದೆಗಳಿಗೆ ಕಳುಹಿಸುವುದೆಲ್ಲ ಇಲ್ಲಿ ಮಾಮೂಲು.ಹೀಗೆ ತಮಗೆ ಒಗ್ಗದ ಹುದ್ದೆಯಲ್ಲಿರು ವವರು ಹುದ್ದೆಗೆ ಹೇಗೆ ನ್ಯಾಯ ಸಲ್ಲಿಸಿಯಾರು? ಸರಿಯಾದ ಹುದ್ದೆಗೆ ಸರಿಯಾದ ವ್ಯಕ್ತಿಯನ್ನು ಆರಿಸುವುದು ಕೂಡಾ ವ್ಯವಸ್ಥೆಯಲ್ಲಿ ದಕ್ಷತೆಯನ್ನು ತುಂಬಲು ಅಗತ್ಯವಾಗಿರುವ ಮಾನದಂಡ. ಮಾನವ ಸಂಪನ್ಮೂಲವನ್ನು ಸಮರ್ಪಕ ರೀತಿಯಲ್ಲಿ ಉಪಯೋಗಿಸುವುದು ಕೂಡಾ ಒಂದು ಕಲೆ.

ಉನ್ನತ ಹುದ್ದೆಯನ್ನು ಭರ್ತಿಗೊಳಿಸುವ ಪದ್ಧತಿಯಲ್ಲಿ ಆಮೂಲಾಗ್ರವಾದ ಬದ ಲಾವಣೆ ತರಲು ಇದು ಸಕಾಲ. ಇದರ ಜತೆಗೆ ಕೆಳಗಿನ ಹಂತದ ನೌಕರರ ದಕ್ಷತೆ ಯನ್ನು ಹೆಚ್ಚಿಸಲು ಕಠಿನ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಶಾಲಾ -ಕಾಲೇಜು ಹಂತಗಳಲ್ಲಿಯೇ ಸಾರ್ವಜನಿಕ ಸೇವೆಗೆ ಬರಲು ಇಚ್ಚಿಸುವವರನ್ನು ಗುರುತಿಸಿ ವಿಶೇಷ ತರಬಎಈತಿ ನೀಡುವಂಥ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವುದು ಸಮರ್ಥ ಅಧಿಕಾರಶಾಹಿಯನ್ನು ಹೊಂದಲು ಇರುವ ಇನ್ನೊಂದು ಮಾರ್ಗ.

Advertisement

Udayavani is now on Telegram. Click here to join our channel and stay updated with the latest news.

Next