ಮಾಗಡಿ : ಪ್ರಸಕ್ತ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ವಿರುದ್ಧ ಹೀನಾಯ ಸೋಲನುಭವಿಸಿದ ಎಚ್.ಸಿ.ಬಾಲಕೃಷ್ಣ,
ಚುನಾವಣಾ ಫಲಿತಾಂಶದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಹಾಯ್ ಬಾಯ್ ಎನ್ನುತ್ತಿರುವಾಗ ಸ್ಥಳೀಯವಾಗಿ ತಾವೂ ಕೂಡ ಜೆಡಿಎಸ್ ಕಾರ್ಯಕರ್ತರು, ಮುಖಂಡರೊಂದಿಗೆ ಹಾಯ್ ಬಾಯ್ ಎನುತ್ತೇವೆ ಎಂದು ಮಾಜಿ ಶಾಸಕ ಎಚ್ .ಸಿ.ಬಾಲಕೃಷ್ಣ ಹೇಳಿದರು.
ಪಟ್ಟಣದ ಸೋಮೇಶ್ವರ ಬಡಾವಣೆಯಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮದು ಸರ್ಕಾರವಿದ್ದು, ಜೆಡಿಎಸ್ಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಚಿವರಾಗಿರುವುದರಿಂದ ತಾವು ಸಹ ಕ್ಷೇತ್ರಕ್ಕೆ ಅನುದಾನ ತಂದು ಅಭಿವೃದ್ಧಿಪಡಿಸುತ್ತೇವೆ.
ನಾನು ಚುನಾವಣೆಯಲ್ಲಿ ಪ್ರತಿ ಸಾರಿ ಗೆದ್ದಾಗಲೆಲ್ಲ ನಮ್ಮ ಪಕ್ಷ ವಿರೋಧ ಪಕ್ಷದಲ್ಲಿರುತ್ತಿತ್ತು. ಈಗ ಕ್ಷೇತ್ರ ಪ್ರತಿನಿಧಿಸುವ
ಶಾಸಕರ ಪಲ್ಷವೇ ಅಧಿಕಾರದಲ್ಲಿದ್ದು, ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರಬಹುದು ಎಂದರು.
ಹಾಲಿ ಶಾಸಕರು ಚುನಾವಣಾ ಪೂರ್ವದಲ್ಲಿ ಕ್ಷೇತ್ರಕ್ಕೆ ಕೈಗಾರಿಕೆ, ಗಾರ್ಮೆಂಟ್ ತರುತ್ತೇನೆ. 25 ಸಾವಿರ ಮಳೆಯರಿಗೆ ಟೈಲರಿಂಗ್ ತರಬೇತಿ ಕೊಡಿಸುತ್ತೇನೆ ಎಂದು ಹೇಳಿಕೊಂಡಿದ್ದರಿಂದ ಹೆಚ್ಚಿನ ಮತದಾರರು ಅವರನ್ನು ಬೆಂಬಲಿಸಿದ್ದಾರೆ. ಒಂದು ವೇಳೆ ಜೆಡಿಎಸ್ ಪೂರ್ಣ ಬಹುಮತದಿಂದ ಸರ್ಕಾರ ರಚಿಸಿದ್ದರೆ, ತಾವೂ ಸರ್ಕಾರಿ ಕಾರ್ಯಕ್ರಮ, ಅಭಿವೃದ್ಧಿ ವಿಚಾರಗಳಲ್ಲಿ ಭಾಗಿಯಾಗುತ್ತಿರಲಿಲ್ಲ. ಆದರೆ ಸಮ್ಮಿಶ್ರ ಸರ್ಕಾರವಿರುವುದರಿಂದ ಕ್ಷೇತ್ರದಲ್ಲಿ ಅನಾವಶ್ಯಕ ಗೊಂದಲ ಸೃಷ್ಟಿಸುವುದು ಬೇಡ.
ಜೂ.15 ರಂದು ಸಭೆ : 2019ರ ಲೋಕಸಭಾ ಚುನಾವಣೆಗೆ ಸಿದ್ಧತೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಹೇಗೆ ಸಂಘಟಿಸಬೇಕೆಂಬ ವಿಚಾರವಾಗಿ ಜೂ.15 ರಂದು ಕಾರ್ಯಕರ್ತರ ಸಭೆ ಕರೆಯಲಾಗಿದೆ. ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯರಾದ ಎಚ್.ಎಂ.ರೇವಣ್ಣ, ಸಿ.ಎಂ. ಲಿಂಗಪ್ಪ, ಎಸ್.ರವಿ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ ಮಾಜಿ ಶಾಸಕರು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ನಾಗರತ್ನಮ್ಮ ಚಂದ್ರೇಗೌಡ, ತಾಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಚ್.ಶಿವರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯಕ್, ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ಎಂ.ಕೆ. ಧನಂಜಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿಗಳೂರು ಗಂಗಾಧರ್, ತೋ.ಗಿರೀಶ್, ಕಮಲಮ್ಮ, ಕಲ್ಪನಾ ಶಿವಣ್ಣ, ಬೆಸ್ಕಾಂ ನಿರ್ದೇಶಕ ಬಿ.ಜಯರಾಂ, ಇನಾಮತ್ ಉಲ್ಲಾಖಾನ್, ನಾಗರತ್ನ, ಸಿ.ಜಯರಾಂ, ಕಾಗಿಮಡು ಜಗದೀಶ್, ಉದ್ದೀಶ್, ಸೀಗೇಕುಪ್ಪೆ ಶಿವಣ್ಣ, ಸುಮಾ ರಮೇಶ್, ಬಿ.ಟಿ.ವೆಂಕಟೇಶ್, ಏಸಪ್ಪನಪಾಳ್ಯದ ಗಂಗಣ್ಣ, ಪುರಸಭಾ ಮಾಜಿ ಅಧ್ಯಕ್ಷ ಪುರುಷೋತ್ತಮ್ ಇದ್ದರು.
ಎ.ಮಂಜು ಅವರು ಚುನಾವಣಾ ಪೂರ್ವದಲ್ಲಿ ಹೇಮಾವತಿ ಜಲಾಶಯದಿಂದ ಕಲ್ಯಾಕ್ಕೆ ಇನ್ನು ಮೂರು ತಿಂಗಳೊಳಗಾಗಿ ನೀರು ತರುವುದಾಗಿ ಭರವಸೆ ನೀಡಿ ಮತಗಳಿಸಿದ್ದಾರೆ. ಅವರು ಹಾಸನದ ನಾಯಕರನ್ನು ಒಪ್ಪಿಸಿ ನೀರು ತರುವುದಾದರೆ ಅಭಿವೃದ್ಧಿ ವಿಚಾರದಲ್ಲಿ ಅವರೊಂದಿಗೆ ಕೈಜೋಡಿಸುತ್ತೇನೆ.
ಎಚ್.ಸಿ.ಬಾಲಕೃಷ್ಣ,, ಮಾಜಿ ಶಾಸಕ