Advertisement

ಪಾಲಿಕೆಗೆ ಸವಾಲಾದ ಬೀದಿನಾಯಿ ಕಾಟ

10:21 AM Sep 10, 2018 | Team Udayavani |

ಮಹಾನಗರ: ನಗರ ವಿಸ್ತರಣೆಗೊಂಡು ಬೆಳವಣಿಗೆಯಾಗುತ್ತಿದ್ದಂತೆ, ನಗರವಾಸಿಗಳಿಂದ ಬೀದಿನಾಯಿಗಳ ಉಪಟಳದ ಬಗ್ಗೆ ಬರುತ್ತಿರುವ ದೂರುಗಳ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಕಾಟ ಎಷ್ಟೊಂದು ಗಂಭೀರತೆ ಪಡೆದುಕೊಂಡಿದೆ ಅಂದರೆ, ಪ್ರತಿದಿನವೂ ಮಹಾನಗರ ಪಾಲಿಕೆಯಲ್ಲಿ ಸರಾಸರಿ ಎರಡು ದೂರುಗಳು ದಾಖಲಾಗುತ್ತಿವೆ.

Advertisement

ಬೀದಿನಾಯಿಗಳ ಸಮಸ್ಯೆಗೆ ಸಂಬಂಧಿಸಿದಂತೆ ಆಗಸ್ಟ್‌ ತಿಂಗಳೊಂದರಲ್ಲಿಯೇ ಪಾಲಿಕೆಗೆ ಬರೋಬ್ಬರಿ 82 ದೂರುಗಳು ಬಂದಿವೆ. ನಗರದ ಅನೇಕ ಕಡೆಗಳಲ್ಲಿ ಹಗಲು- ರಾತ್ರಿ ಎನ್ನದೆ ಬೀದಿ ನಾಯಿಗಳು, ವಾಹನ ಸವಾರರು ಸೇರಿದಂತೆ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಮಂದಿಯಲ್ಲಿ ಭೀತಿಯುಂಟು ಮಾಡುತ್ತಿವೆ. ಆದರೆ, ಈ ರೀತಿ ಜನರಿಗೆ ಕಾಟ ನೀಡುತ್ತಿರುವ ಬೀದಿನಾಯಿಗಳನ್ನು ಹಿಡಿಯುವುದು ಅಥವಾ ಅವುಗಳ ನಿಯಂತ್ರಣ ಪಾಲಿಕೆಗೂ ಸವಾಲಾಗಿದೆ.

2012ರ ಜಾನುವಾರು ಗಣತಿಯ ಪ್ರಕಾರ ಮಂಗಳೂರು ನಗರದಲ್ಲಿ ಒಟ್ಟಾರೆ 26,534 ನಾಯಿಗಳಿವೆ. ಇವುಗಳಲ್ಲಿ 6,079 ಬೀದಿನಾಯಿಗಳಿವೆ. ಐದು ವರ್ಷಗಳಿಗೊಮ್ಮೆ ದೇಶದೆಲ್ಲೆಡೆ ಜಾನುವಾರು ಗಣತಿ ನಡೆಯುತ್ತಿದ್ದು, ಮುಂದಿನ ಗಣತಿ ಮುಂದಿನ ತಿಂಗಳು ಪ್ರಾರಂಭವಾಗಲಿದೆ. ಹೀಗಿರುವಾಗ, ಈ ಹಿಂದಿನ ಪ್ರಾಣಿಗಳ ಗಣತಿಗೆ ಹೋಲಿಸಿದರೆ, ಈಗ ನಗರದಲ್ಲಿ ಬೀದಿನಾಯಿಗಳ ಸಂಖ್ಯೆ ಎಷ್ಟು ಜಾಸ್ತಿ ಯಾಗಿದೆ ಎನ್ನುವುದರ ನಿಖರ ಮಾಹಿತಿಯೂ ಪಾಲಿಕೆ ಬಳಿಯಿಲ್ಲ. ಇನ್ನು, 2014ರಿಂದ 2018 ಜುಲೈವರೆಗೆ 11,082 ನಾಯಿಗಳಿಗೆ ಪಾಲಿಕೆ ಕಡೆಯಿಂದ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಟೋಲ್‌ಫ್ರೀ ಸಂಖ್ಯೆಗೆ ಕರೆ ಮಾಡಿದರೆ ಎನಿಮಲ್‌ ಕೇರ್‌ನವರು ನಾಯಿಗಳನ್ನು ಹಿಡಿದು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಿ, ರೇಬೀಸ್‌ ಚುಚ್ಚುಮದ್ದು, ಜಂತು ಹುಳದ ಮಾತ್ರೆ ನೀಡುತ್ತಾರೆ. ಆ ಸಮಯದಲ್ಲಿ ನಾಯಿಯಲ್ಲಿರುವ ಹಾರ್ಮೋನ್‌ ಅಂಶ ಕಡಿಮೆಯಾಗುತ್ತದೆ. ಸುಮಾರು ಎರಡು ವಾರದ ಬಳಿಕ ನಾಯಿ ತಂದ ಜಾಗದಲ್ಲಿಯೇ ಬಿಡಲಾಗುತ್ತದೆ. ಮತ್ತೂ ನಾಯಿ ಕಚ್ಚಿದರೆ ಅದಕ್ಕೆ ಕಾರಣವೇನು ಎಂಬ ಬಗ್ಗೆ ತಿಳಿಯುವ ಪ್ರಯತ್ನ ನಡೆಸಿ, ಎನಿಮಲ್‌ ಕೇರ್‌ನ ಬೇರೆ ನಾಯಿಗಳ ಜತೆ ಬೆರೆಯಲು ಅವಕಾಶ ಕಲ್ಪಿಸಲಾಗುತ್ತದೆ.

ನಾಯಿ ಕೊಂದರೆ ಕ್ರಿಮಿನಲ್‌ ಕೇಸ್‌
ಬೀದಿ ನಾಯಿ ಉಪಟಳ ಜಾಸ್ತಿ ಇದೆ ಎಂದು ಬೀದಿ ನಾಯಿಗಳನ್ನು ಕೊಂದರೆ ಅದು ಶಿಕ್ಷಾರ್ಹ ಅಪರಾಧ. ಅಪರಾಧ ದೃಢಪಟ್ಟರೆ ಕಾನೂನಿನ ಪ್ರಕಾರ ಅವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಅವಕಾಶವಿದೆ. ಸದ್ಯದ ನಿಯಮದ ಪ್ರಕಾರ ಆರೋಪ ಆಧಾರದ ಮೇಲೆ ಶಿಕ್ಷೆ ಪ್ರಮಾಣ ನಿಗದಿಯಾಗುತ್ತದೆ. ಬೀದಿ ನಾಯಿಗಳಿಗೆ ಗುಣಪಡಿಸಲಾಗದ ಕಾಯಿಲೆಗಳಿದ್ದರೆ. ತೀವ್ರವಾಗಿ ಗಾಯಗೊಂಡರೆ, ಇದನ್ನು ತಜ್ಞ ವೈದ್ಯರು ಖಚಿತಪಡಿಸಿದರೆ ಅಂತಹವುಗಳನ್ನು ಪ್ರಾಣಿಗಳ ಸಂತಾನಶಕ್ತಿ ನಿಯಂತ್ರಣ ನಿಯಮ-2001ರ ಅನ್ವಯ ದಯಾ ಮರಣಕ್ಕೆ ಒಳಪಡಿಸಬಹುದು.

Advertisement

ನಾಯಿಗಳ ಉಪಟಳ ಹೆಚ್ಚು
ನಗರದ ಕೊಟ್ಟಾರ ಚೌಕಿ, ಮೇರಿಹಿಲ್‌, ಬಿಜೈ, ದೇರೆಬೈಲ್‌, ಉರ್ವಸ್ಟೋರ್‌, ಯೆಯ್ನಾಡಿ, ಲ್ಯಾಂಡ್‌ ಲಿಂಕ್ಸ್‌, ಬೋಂದೆಲ್‌ ಸೇರಿದಂತೆ ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿ ಬೀದಿನಾಯಿಗಳ ಕಾಟ ಹೆಚ್ಚಿವೆ.

ಟೋಲ್‌ ಫ್ರೀ ಸಂಖ್ಯೆಗೆ ಕರೆ ಮಾಡಿ
ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಉಪಟಳದ ಬಗ್ಗೆ ಟೋಲ್‌ ಫ್ರೀ ಸಂಖ್ಯೆ: 0824 2220306 ಕರೆ ಮಾಡಬಹುದು. ಕರೆ ಮಾಡಿದರೆ ಮೂರು ದಿನಗಳೊಳಗೆ ಎನಿಮಲ್‌ ಕೇರ್‌ ಸಂಸ್ಥೆ ಯ ಸಿಬಂದಿ ಆ ಪ್ರದೇಶಕ್ಕೆ ಬಂದು ನಾಯಿಗಳನ್ನು ಕೊಂಡೊಯ್ಯುತ್ತಾರೆ. ಒಂದು ವೇಳೆ ನಾಯಿ ಕಚ್ಚಿದರೆ ಅಥವಾ ಸಮಸ್ಯೆ ಉಲ್ಬಣವಿದ್ದರೆ ಕೂಡಲೇ ಆ ಪ್ರದೇಶಕ್ಕೆ ಎನಿಮಲ್‌ ಕೇರ್‌ ತಂಡ ತೆರಳುತ್ತದೆ. ಕಾರ್ಪೊರೇಷನ್‌ ಅಂತರ್ಜಾಲ ತಾಣದಲ್ಲಿ ಜನಹಿತ ಎಂಬ ಲಿಂಕ್‌ ನಲ್ಲಿಯೂ ದೂರು ದಾಖಲಿಸಬಹುದು.

ಬೀದಿನಾಯಿ: ಮುನ್ನೆಚ್ಚರಿಕೆ ವಹಿಸಿ
„ . ಕಲ್ಲು ಹೊಡೆಯಬೇಡಿ.
„ . ಬಳಿಗೆ ತೆರಳಿ ಆಟವಾಡಬೇಡಿ.
„ . ಬೀದಿನಾಯಿ ಎದುರು ಓಡಬೇಡಿ, ಆ ಸಮಯದಲ್ಲಿ ನಮ್ಮನ್ನು ಅಟ್ಟಿಸುವ ಸಾಧ್ಯತೆ ಹೆಚ್ಚು.
„ . ವಾಹನಗಳನ್ನು ಅಟ್ಟಿಸಿದರೆ ವಾಹನ ನಿಧಾನ ಮಾಡಿ ಕಚ್ಚದಂತೆ ಎಚ್ಚರ ವಹಿಸಿ.
„. ಮಕ್ಕಳು ಆಹಾರ ತಿನ್ನಿಸದಂತೆ ಹೆತ್ತವರು ಗಮನ ನೀಡಿ.
.  ಮರಿಗಳೊಂದಿಗೆ ಇರುವಾಗ ಬಳಿ ಹೋಗಬೇಡಿ

ದೂರು ಬಂದ ತತ್‌ಕ್ಷಣ ಕ್ರಮ
ಬೀದಿನಾಯಿಗಳ ಸಮಸ್ಯೆಗಳ ಬಗ್ಗೆ ಪಾಲಿಕೆ ಕರೆ ಬಂದರೆ ಕೂಡಲೇ ಎನಿಮಲ್‌ ಕೇರ್‌ ಅಧಿಕಾರಿಗಳಿಗೆ ತಿಳಿಸುತ್ತೇವೆ. ಸಮಸ್ಯೆಯನ್ನು ಅರಿತು ಕೂಡಲೇ ಆ ಪ್ರದೇಶಕ್ಕೆ ತಂಡ ತೆರಳಿ ಬೀದಿ ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ನಗರದಲ್ಲಿ ಸದ್ಯ 6,079 ಬೀದಿನಾಯಿಗಳಿವೆ.
 - ಡಾ| ಕಮಲಮ್ಮ, ಪಶುವೈದ್ಯಾಧಿಕಾರಿ, ಪಾಲಿಕೆ

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next