Advertisement

ವಿಚಿತ್ರ ಹಸಿವು-ಅವ್ಯಕ್ತ ಸೆಳೆತ: ಸಿದ್ಧೇಶ್ವರ ಶ್ರೀಗಳು ನಡೆದಾಡುವ ದೇವರಾದದ್ದು ಹೇಗೆ?

01:06 PM Jan 04, 2023 | Team Udayavani |

*ದಾಕ್ಷಾಯಣಿ ಬಿರಾದಾರ (ಶಮಾ), ಸಾಹಿತಿ,
ಬಿ.ಎಂ. ಪಾಟೀಲ ಪಬ್ಲಿಕ್‌ ಸ್ಕೂಲ್‌, ವಿಜಯಪುರ
ಜಾಗತಿಕ ಮಟ್ಟದಲ್ಲಿ ವಿಜಯಪುರ ಜಿಲ್ಲೆಗೆ ತನ್ನದೇ ಆದ ಹೆಜ್ಜೆ ಗುರುತುಗಳಿವೆ. ಜಗಜ್ಯೋತಿ ಬಸವಣ್ಣ, ಭಾಸ್ಕರಾಚಾರ್ಯ, ಅಂತಹದೇ ಮತ್ತೂಂದು ಹೆಜ್ಜೆಯನ್ನಿಟ್ಟವರು ನಡೆದಾಡುವ ದೇವ ರೆಂದೇ ಖ್ಯಾತರಾಗಿದ ಸಿದ್ದೇಶ್ವರ ಸ್ವಾಮೀಜಿಯವರು. ಇವರ ಬಗ್ಗೆ ಹೇಳುವುದೆಂದರೆ ಸಮುದ್ರದ ನೀರನ್ನು ಬೊಗಸೆಯಲ್ಲಿ ತುಂಬಿದಂತೆ. ಸಮುದ್ರದ ಆಳ, ಗಾಳಿಯ ಸಂಚಲನ, ಸೂರ್ಯನ ಪ್ರಕಾಶವೇ ವ್ಯಕ್ತಿತ್ವವಾಗಿ ರೂಪುಗೊಂಡ ಶ್ರೀಗಳ ವಿಚಾರವನ್ನು ಕೆಲವೇ ಶಬ್ದಗಳಿಂದ ಅಳೆಯಲಾಗದು. ಸೈದ್ಧಾಂ ತಿಕ, ಆಧ್ಯಾತ್ಮಿಕ ವೈಚಾರಿಕ, ತಾತ್ವಿಕ-ಗುಣಾತ್ಮಕ ವಿಚಾರಗಳೇ ಶ್ರೀಗಳಾಗಿದ್ದರು.

Advertisement

ಜಾಗತಿಕ ನೆಲೆಯಲ್ಲಿ ಗುರು ಪರಂಪರೆಗೆ ಒಂದು ಇತಿಹಾಸವಿದೆ. ಪ್ಲೆಟೋ, ಅರಿಸ್ಟಾಟಲ್‌, ಸಾಕ್ರೆಟಿಸ್‌ ಹೇಗೋ ಹಾಗೆ ಭಾರತೀಯ ಪರಂಪರೆಯಲ್ಲಿ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ವಿಜಯಪುರದ ಇತಿ ಹಾಸಕ್ಕೆ ಬಂದರೆ ಶ್ರೀ ಶಿವಾನಂದ ಸ್ವಾಮೀಜಿ, ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮೀಜಿ, ಅವರ ಮಾನಸಪುತ್ರ ಸಿದ್ದೇಶ್ವರ ಸ್ವಾಮೀಜಿಯವರು.

ವಿಚಿತ್ರ ಹಸಿವು-ಅವ್ಯಕ್ತ ಸೆಳೆತ: ಸಿದಗೊಂಡ ಅವರು ಪ್ರಾಥಮಿಕ ಶಿಕ್ಷಣ ಮುಗಿದಾಗ 14 ವರ್ಷ. ಅದೇ ವೇಳೆಗೆ ಮಲ್ಲಿಕಾರ್ಜುನ ಸ್ವಾಮಿಗಳು ವಿಜಯಪುರಕ್ಕೆ ಬಂದು ಕರಡಿ ಯವರ ತೋಟದಲ್ಲಿ ದ್ದರು. ಶಿವಾನುಭವ ಮಂಟಪದಲ್ಲಿ ಪ್ರವಚನ ಹೇಳುತ್ತಿದ್ದರು. ಸಮುದ್ರ ಸೇರಲು ನದಿ ತವಕಿಸು ವಂತೆ ಸಿದಗೊಂಡನ ಮನದಲ್ಲಿ ಯಾವುದೋ ಒಂದು ಅವ್ಯಕ್ತ ಸೆಳೆತ ಉಕ್ಕತೊಡಗಿತು. ದೀಪಾವಳಿಯ ಹಬ್ಬದ ಬೆಳಕಿನೊಂದಿಗೆ ಹುಟ್ಟಿದ ಮಗನಿಗೆ ಯುಗಾದಿಯ ಪಾಡ್ಯದಂದು ವಿಚಿತ್ರ ಹಸಿವಾಯಿತು. ಅದು ಯಾವ ಹಸಿವು, ಯಾವ ತಳಮಳ ಅವನಿಗೂ ಗೊತ್ತಿಲ್ಲ. ಅವ್ವಾ ಹಸಿವು ಊಟಕ್ಕೆ ಕೊಡು ಎಂದ. ತಾಯಿಗೋ ಆಶ್ಚರ್ಯ. ಮಗ ಎಂದೂ ಹಸಿವೆ ಎಂದು ಊಟಕ್ಕಾಗಿ ಪೀಡಿಸಿದವಲ್ಲ. ಆಕೆಗೆ ಚಿಂತೆ. ಇನ್ನೂ ಸ್ವಾಮಿಗಳು ಬಂದಿಲ್ಲ. ಜಂಗಮರ ಊಟವಾದ ಮೇಲೆ ಮನೆಯವರೆಲ್ಲ ಊಟ ಮಾಡುವ ಪರಿ ಪಾಠವಿದ್ದ ಕಾಲವದು. ಆಕೆ ಗಂಡನನ್ನು ಕರೆದು ಬೇಗ ಹೋಗಿ ಈರಯ್ಯ ಸ್ವಾಮಿಗೋಳ್ನ ಕರ ಕೊಂಡು ಬರ್ರಿ ಮಗಾ ಊಟನ್ನಾ ಕತ್ತಾನ ಎಂದು ಹೇಳಿ ಕಳಿಸಿದರು. ಸಿದಗೊಂಡನನ್ನು ಕರೆದು ಊರದೇವರಿಗೆ ನೈವೇದ್ಯ ಹಿಡಕೊಂಡು ಬಾ ಅಂತ ಕಳಿಸಿದಳು. ದೇವರಿಗೆ ಹೋಗಿ ಬಂದ ಸಿದಗೊಂಡ ಮತ್ತೆ ಹಸಿವು ಎಂದ. ತಾಯಿ ಸ್ವಾಮಿಗಳು ಇನ್ನೂ ಬಂದಿಲ್ಲ ತಡೀಯಪ್ಪಾ ಅಂತ ಚಡಪಡಿಸುತ್ತ ಹೋಳಿಗೆ ಮಾಡತೊಡಗಿದಳು.

ಬಿಟ್ಟು ಹೋದೆಯಾದರೆ ಬೆಟ್ಟವಾಗುತ್ತದೆ: ಹುಡುಗ ಕರಡಿಯವರ ತೋಟದಲ್ಲಿದ್ದ ಮಲ್ಲಿಕಾರ್ಜುನ ಸ್ವಾಮಿಗಳನ್ನು ಭೇಟಿಯಾದ. ಪರಮಹಂಸರನ್ನು ಅರಸುತ್ತ ಬಂದ ನರೇಂದ್ರನಂತೆ ಹುಡುಗ ತುಂಬಾ ಹಸಿದಿದ್ದ, ತಳಮಳಗೊಂಡಿದ್ದ. ಮನದಲ್ಲಿ ತಳಮಳಿಸಿದ ಅವ್ಯಕ್ತ ಶಕ್ತಿಗೆ ಸ್ವರೂಪ ಸಿಗುವುದೆಲ್ಲೆಂದು ಕಾತರಿಸಿದ್ದ. ಎರಡು ದಿನ ಕಳೆಯಿತು. ಮಗನನ್ನು ಹುಡುಕುತ್ತ ಓಗೆಪ್ಪ ಬಿಜ್ಜರಗಿ ಬಸಪ್ಪನವರ ಮನೆಗೆ ಬಂದ. ಇಬ್ಬರೂ ಕೂಡಿ ಕರಡಿ  ಯವರ ತೋಟದಲ್ಲಿದ್ದ ಸ್ವಾಮೀಜಿಯವರಲ್ಲಿಗೆ ಬಂದರು.

ಓಗೆಪ್ಪನವರ ಮುಖದ ಮೇಲಿನ ಚಿಂತೆಯ ಗೆರೆಗಳನ್ನು ಓದಿದವರಂತೆ ಸ್ವಾಮೀಜಿ “ಹುಡುಗ ಬಂದು ಮೂರು ದಿನ ಆತು, ಸರಿಯಾಗಿ ಊಟಾನೂ ಮಾಡಿಲ್ಲ. ಈತನಿಗೆ ಸನ್ಯಾಸದ ಎಲ್ಲ ಲಕ್ಷಣಗಳಿವೆ’ ಎಂದರು.

Advertisement

ಸಿದಗೊಂಡ ಸಿದ್ದೇಶ್ವರನಾದ: ಓಗೆಪ್ಪನವರಿಗೆ ಹಿಂದಿನ ಘಟನೆಯೊಂದು ಮನಪಟಲದಲ್ಲಿ ಸುಳಿದುಹೋಯ್ತು. ರೋಣದ ಹತ್ತಿರದ ಬ್ರಹ್ಮಾನಂದ ಸ್ವಾಮಿಗಳು ಒಂದು ತಿಂಗಳು ಕಾಲ ಬಿಜ್ಜರಗಿಯಲ್ಲಿ ಪ್ರವಚನ ಹೇಳುತ್ತಿದ್ದರು. ಊರಲ್ಲಿ ಕೆಲವರು ಅವರಿಂದ ಲಿಂಗ ದೀಕ್ಷೆ ಪಡೆದುಕೊಂಡರು. ಪುಟ್ಟ ಬಾಲಕನಾಗಿದ್ದ ಸಿದಗೊಂಡ ಬ್ರಹ್ಮಾನಂದರಲ್ಲಿಗೆ ಬಂದು ನನಗೆ ಸನ್ಯಾಸ ದೀಕ್ಷೆ ಕೊಡಿ ಎಂದು ಕೇಳಿದ್ದನಂತೆ. ಸ್ವಾಮೀಜಿಗೆ ವಿಸ್ಮಯವಾಗಿ ಕೂಡಲೇ ಓಗೆಪ್ಪನವರನ್ನು ಕರೆಸಿ ವಿಚಾರ ತಿಳಿಸಿದರಂತೆ. ಓಗೆಪ್ಪ ಗಟ್ಟಿಗರು. ಈ ವಿಚಾರವಾಗಿ ಯಾವುದೋ ಒಂದು ಅಳುಕು ಅವರ ಮನದಲ್ಲಿ ಇದ್ದೇ ಇತ್ತು ಶುದ್ಧೋದನನಂತೆ. ಅವನು ಬೇಡಿದರೆ ಕೊಟ್ಟು ಬಿಡಿ ದೇವರಿಚ್ಛೆಯಿದ್ದಂತಾಗಲಿ ಎಂದಿದ್ದರಂತೆ.

ಈಗ ಅದು ನೆನಪಾಯಿತು. ಅವರ ವಿಚಾರಲಹರಿಯನ್ನು ತುಂಡರಿಸುವಂತೆ ಮಲ್ಲಿಕಾರ್ಜುನ ಸ್ವಾಮಿಗಳು, ನೀವು ನಿಮ್ಮ ಮಗನನ್ನು ಕರೆದುಕೊಂಡು ಹೋಗಿ ಎಂದು ಅಲ್ಲೆ ನಿಂತಿದ್ದ ಬಾಲಕನನ್ನು ಕರೆದು ನಿನ್ನ ತಂದೆಯ ಜತೆ ಹೋಗು ಎಂದರು.ಹುಡುಗ ಮಾತನಾಡಲಿಲ್ಲ, ನೆಲ ನೋಡುತ್ತ ನಿಂತುಕೊಂಡ. ಅವನ ಇಂಗಿತವನ್ನರಿತ ಸ್ವಾಮಿಗಳು, ನೋಡು ಮಗಾ ಈಗ ಹೋಗಿ ಎರಡು ದಿನ ಬಿಟ್ಟು ಬಾ ಎಂದು ಹೇಳಿದರು. ಎರಡು ದಿನದ ಮಟ್ಟಿಗೆ ಹುಡುಗ ತಂದೆಯೊಂದಿಗೆ ಬಿಜ್ಜರಗಿಗೆ ಬಂದ. ಮಲ್ಲಿಕಾರ್ಜುನ ಸ್ವಾಮಿಗಳ ಮಾರ್ಗದರ್ಶನದ ಮೇರೆಗೆ ಚಡ ಚಣದ ಹೈಸ್ಕೂಲಿಗೆ ಸೇರಿಸಿದರು. ಸಂಗಮೇಶ್ವರ ಗುಡಿಯಲ್ಲಿ ಇರುತ್ತಿದ್ದ. ಆಗಾಗ ನೀವರಗಿ ಗುಡಿಗೆ ಹೋಗುತ್ತಿದ್ದ. ಹೀಗೆ ಒಮ್ಮೆ ಗುಡಿಗೆ ಹೋದಾಗ ಮಳೆ ಜೋರಾಗಿ ಸುರಿಯಲಾರಂಭಿಸಿತು. ನೀರು ಗುಡಿಯನ್ನು ಸುತ್ತುವರೆಯಿತು. ಹುಡುಗ ಹೊರ ಬರಲಿಲ್ಲ. ಅನೇಕ ಶರಣರು ಅಲ್ಲಿ ಬಂದು ಸೇರಿದರು. ಹುಡುಗನಿಗೆ ಬಿಳಿ ಬಟ್ಟೆ ಉಡಿಸಿದರು. ಸಿದಗೊಂಡ ಸಿದ್ದೇಶ್ವರ ಸ್ವಾಮೀಜಿಯಾದ.

ಸಂಕೀರ್ಣತೆಯಿಂದ ಸರಳತೆ ಕಡೆಗೆ: ಸಿದ್ದೇಶ್ವರ ಸ್ವಾಮೀಜಿಯವರ ವಿಚಾರಗಳು ಒಂದೇ ಧರ್ಮಕ್ಕೆ ಅಂಟಿಕೊಳ್ಳದೇ ಮಾನವೀಯ ಸಿದ್ಧಾಂತದ ಕಡೆಗೆ ಚಾಚಿಕೊಂಡಿವೆ. ಅವು ಧರ್ಮಾತೀತ, ಜಾತ್ಯತೀತ, ಲಿಂಗಾತೀತವಾದವುಗಳು. ಅವರ ವಿಚಾರಗಳು ಸತ್ಯ ಶೋಧನೆ, ಮಾನವೀಯತೆ, ಪರಿಸರ ಕಾಳಜಿ, ಇಂದಿನ ಮಕ್ಕಳ ಭವಿತವ್ಯದ ಚಿಂತನೆಗಳನ್ನೊಳಗೊಂಡ ವೈಚಾರಿಕ ವೇದಾಂತಗಳಾಗಿವೆ. ಅವರು ನೀಡಿದ ಪ್ರವಚನ ಗಳಲ್ಲಿ ಬಂದು ಹೋಗದಿರುವ ವಿಷಯಗಳಿಲ್ಲ. ಸಂಸಾರದ ಚೌಕಟ್ಟಿಗೆ ಒಳಪಡದಿದ್ದರೂ ಬದುಕಿನಲ್ಲಿ ಬರುವ ಅಗ್ನಿದಿವ್ಯ ಗಳನ್ನು, ಸೂಕ್ಷ್ಮ ಸಂಬಂಧಗಳ ಪರಿಕಲ್ಪನೆಯನ್ನು ಪರಾಮರ್ಶಿಸಿ ಪರಿಹಾರ ನೀಡುವ ಅವರ ಪರಿ ಅಪೂರ್ವ ವಾದದ್ದು. ತಾವು ಯೋಗಿಯಾದರೂ ಇತರರಿಗೆ ತ್ಯಾಗ ಯೋಗ ಸಮನ್ವಯ ದೃಷ್ಟಿಯಿಂದ ಸಂಸಾರದಲ್ಲಿಯೇ ಪರಮಾರ್ಥ ಕಾಣುವ ತಿಳಿಸಿ ಕೊಟ್ಟವರು. ತಮ್ಮ ಪ್ರವಚನಗಳಲ್ಲಿ ಕ್ಲಿಷ್ಟಕರ ಸಂಗತಿಗಳನ್ನು ಸರಳಗೊಳಿಸಿ, ಬದುಕನ್ನು ಸಂಕೀರ್ಣತೆಯಿಂದ ಸರಳತೆಯ ಕಡೆಗೆ ಕೊಂಡೊಯ್ಯುವ ಮಾರ್ಗದರ್ಶಿಯಾದವರು. ಅನೇಕರ ಮನ ಪರಿವರ್ತನೆಗೆ ಕಾರಣರಾದವರು. ನಡೆದಾಡುವ ದೇವರಾದವರು.

Advertisement

Udayavani is now on Telegram. Click here to join our channel and stay updated with the latest news.

Next